ಆದಿಚುಂಚನಗಿರಿ ಶ್ರೀಗಳ ವಿರುದ್ಧ ಬಹಿರಂಗ ಸಭೆಯಲ್ಲಿ ಅಸಮಾಧಾನ ಹೊರ ಹಾಕಿದ್ದ ಕಾಂಗ್ರೆಸ್ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ನಿರ್ಮಲಾನಂದನಾಥ ಸ್ವಾಮೀಜಿಗಳು ಹೆಜ್ಜೆ ತಪ್ಪುತ್ತಿದ್ದಾರೆ, ಒಕ್ಕಲಿಗರ ಮಠ ದಾರಿ ತಪ್ಪುತ್ತಿದೆ ಎಂದಿದ್ದರು. ಶ್ರೀರಂಗಪಟ್ಟಣದಲ್ಲಿ ನಡೆದ BGS ಮಠದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಾಂಗ್ರೆಸ್ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲೇ ವಾಗ್ದಾಳಿ ಮಾಡಿದ್ದರು. ನಮ್ಮ ಬಾಲಗಂಗಾಧರನಾಥ ಸ್ವಾಮೀಗಳು ಒಂದು ಮಾರ್ಗವನ್ನ ಹಾಕಿ ಕೊಟ್ಟಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತಗೆದುಕೊಂಡು, ಎಲ್ಲರನ್ನು ಭಾವೈಕ್ಯತೆಯಿಂದ ಕಂಡು, ಬಡವ, ಶ್ರೀಮಂತ ಎನ್ನದೆ ಎಲ್ಲರನ್ನು ಒಂದೇ ತರ ನೋಡ್ತಾ ಹೆಜ್ಜೆ ಹಾಕ್ತಿದ್ರು ಎನ್ನುವ ಮೂಲಕ, ನಿರ್ಮಲಾನಂದ ಶ್ರೀಗಳ ಕಾರ್ಯ ವೈಖರಿಯನ್ನು ಟೀಕಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಬಾಲಗಂಗಾಧರನಾಥ ಶ್ರೀಗಳು ಹಾಕಿಕೊಟ್ಟಿದ್ದ ಮಾರ್ಗ ಅಳಿಸಿ ಹೋಗ್ತಿದೆ ಎನ್ನುವ ಮೂಲಕ ಶ್ರೀಮಠ ಹಾಗು ಶ್ರೀಮಠದ ಸ್ವಾಮೀಜಿ ವಿರುದ್ದ ಬೇಸರ ತೋರಿಸಿದ್ದರು. ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡರ ಹೇಳಿಕೆಗೆ ವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ಶ್ರೀ ಮಠದ ಬಗ್ಗೆ ಮಾತನಾಡುವಷ್ಟು ದೊಡ್ಡವರಾಗಿ ಬಿಟ್ವಿದ್ದೀವಿ ಎಂದು ಬೇಸರ ಹೊರಹಾಕಿದ್ದರು. ನಾನು ಕೂಡ ಒಮ್ಮೆ ಮಾತನಾಡಿ, ಆ ಬಳಿಕ ಸ್ವಾಮೀಜಿಗಳ ಎದುರೇ ಕ್ಷಮೆ ಕೇಳಿದ್ದೀನಿ. ಈ ರೀತಿ ಶ್ರೀಮಠ ಮತ್ತು ಶ್ರೀಗಳ ವಿರುದ್ದ ಮಾತನಾಡಬಾರದು ಎಂದು ತಿಳಿವಳಿಕೆ ಹೇಳಿದ್ದರು. ಆಗ ವೇದಿಕೆಯಲ್ಲೇ ಇದ್ದ ನಿರ್ಮಲಾನಂದನಾಥ ಶ್ರೀಗಳು ಮಾತ್ರ ಮೌನಕ್ಕೆ ಶರಣಾಗಿದ್ದರು.

ಆದಿಚುಂಚನಗಿರಿ ಶ್ರೀಗಳ ವಿರುದ್ಧ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಕ್ಷಮೆಯಾಚಿಸಿದ್ದಾರೆ. ಶ್ರೀ ನಿರ್ಮಲಾನಂದನಾಥ ಸ್ವಾಮಿಗಳ ಕ್ಷಮೆಯಾಚಿಸಿರುವ ಶಾಸಕರು, ನಾನು ಯಾವಾಗ ಮಾತನಾಡಿದ್ರೂ ಕಾಂಟ್ರವರ್ಸಿ ಆಗುತ್ತದೆ. ನಾನು ಮಠ ಸರಿಯಿಲ್ಲ ಅಂತ ಹೇಳಿಲ್ಲ. ಚುಂಚನಗಿರಿ ಸ್ವಾಮಿಗಳು ಎಲ್ಲರನ್ನು ವಿಶ್ವಾಸ ಇಟ್ಟುಕೊಂಡಿದ್ದರು. ಚುಂಚನಗಿರಿ ಶ್ರೀಗಳು ಬಿಟ್ಟು ಹೋದ ಸಂಸ್ಥೆ ಚೆನ್ನಾಗಿ ನಡೆಯಬೇಕು ಅನ್ನೋ ಭಾವನೆಯಲ್ಲಿ ನಾನು ಹೇಳಿದ್ದೆ ಅಷ್ಟೆ. ನಿರ್ಮಲಾನಂದನಾಥ ಸ್ವಾಮಿ ಬಗ್ಗೆ ಮಾತನಾಡುವ ದೊಡ್ಡ ವ್ಯಕ್ತಿ ನಾನಲ್ಲ. ಮಾತನಾಡುವ ಸಂದರ್ಭದಲ್ಲಿ ಸಣ್ಣ ಪದ ವ್ಯತ್ಯಾಸ ಆಗುತ್ತದೆ. ಒಕ್ಕಲಿಗರ ಸಂಘದ ಅನೇಕರು ಮಾತನಾಡಿದ್ದಾರೆ. ಅವರ ಮನಸ್ಸಿಗೆ ನೋವಾಗಿದ್ರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ನಿರ್ಮಲಾನಂದನಾಥ ಸ್ವಾಮಿ ಅವರ ಮನಸ್ಸಿಗೆ ನೋವಾಗುವ ರೀತಿ ನಾನು ನಡೆದುಕೊಂಡಿಲ್ಲ. ನನ್ನ ಮಾತಿನಿಂದ ನೋವಾಗಿದ್ರೆ ಕ್ಷಮೆಯಾಚಿಸುತ್ತೇನೆ. ನಮ್ಮ ಮಠವನ್ನು ಹೋರ ದೇಶದಲ್ಲಿ ಕಟ್ಟಿದ್ದಾರೆ. ನಾನು ಅವರ ಪರ ಇದ್ದೇವೆ. ಅವರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಇದನ್ನು ಮುಂದುವರಿಸಿಕೊಂಡು ಹೋಗುವುದು ಬೇಡ ಇಲ್ಲಿಗೆ ಬಿಟ್ಟು ಬಿಡಿ. ನಮ್ಮ ಮಠ ಹೆಚ್ಚು ಸಹಾಯ ಮಾಡಲಿ ಎಂದು ಹೇಳಿದ್ದು ಅಷ್ಟೆ. ಕೆಟ್ಟ ಯೋಚನೆಯಲ್ಲಿ ನಾನು ಮಾತನಾಡಿಲ್ಲ. ನಾನು ಯಾರ ವಿರುದ್ಧ ಮಾತನಾಡಿಲ್ಲ. ಮಾತಿನ ಬರದಲ್ಲಿ ಈ ರೀತಿ ಆಗಿದೆ ಅಷ್ಟೆ. ನಾನು ಯಾರ ಮನಸ್ಸಿಗೂ ನೋವುಂಟು ಮಾಡಬೇಕು ಅಂತ ಹೇಳಿಲ್ಲ. ಜನರ ಜೊತೆ ಇರುವುದೇ ನನ್ನ ವೃತ್ತಿ. ಮಠದ ಸದ್ಬಕ್ತ ಜನರು ಯಾರು ಕೂಡ ಅನ್ಯತಾ ಭಾವಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಭಾಷಣದಲ್ಲಿ ಹೇಳುವುದನ್ನು ಹೇಳಿದ ಬಳಿಕ ಒತ್ತಡದಿಂದ ಕ್ಷಮೆಯಾಚನೆ ಮಾಡಿದ್ರಾ..? ಅಥವಾ ಮನಪೂರ್ವಕವಾಗಿ ಕ್ಷಮೆ ಕೇಳಬ ಏಕು ಅಂತ ಅನ್ನಿಸಿ ಕ್ಷಮೆ ಕೇಳಿದ್ರಾ ಅನ್ನೋದು ಗೊತ್ತಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಶಾಸಕರ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗ್ತಿತ್ತು. ಇನ್ನೂ ಶ್ರೀಗಳು ದಾರಿ ತಪ್ಪಿದ್ದಾರೆ ಅನ್ನೋ ಪದ ಬಳಕೆ ಮಾಡಿದ್ದು ಯಾಕೆ..? ರಾಜಕೀಯವಾಗಿ ಬೆಂಬಲ ಸಿಗ್ತಿಲ್ಲ ಅನ್ನೋ ಕಾರಣಕ್ಕೆ ಹೇಳಿದ್ದಾ..? ಅಥವಾ ಬೇರೆ ಯಾವುದಾದರೂ ವಿಚಾರದಲ್ಲಿ ನಿರ್ಮಲಾನಂದ ಶ್ರೀಗಳ ಹೆಸರು ತಳುಕು ಹಾಕಿಕೊಂಡಿದ್ಯಾ..? ಅನ್ನೋ ಬಗ್ಗೆಯೂ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಯಾವುದೇ ಸ್ಪಷ್ಟನೆ ನೀಡುವ ಕೆಲಸ ಮಾಡಿಲ್ಲ. ಆದರೆ ಕ್ಷಮೆಯಾಚನೆ ಮಾಡಿ ಎಲ್ಲಾ ಕೌತುಕವನ್ನೂ ಹಾಗೆ ಉಳಿಸಿದ್ದಾರೆ.


