SSLC ಹಾಗೂ ದ್ವಿತೀಯ ಪಿಯು ಪರೀಕ್ಷೆಗೆ ದಿನಗಣನೆ ಶುರುವಾಗಿದೆ. ಈಗಾಗಲೇ ಪರೀಕ್ಷಾ ಸಿದ್ಧತೆ ಶುರುವಾಗಿದೆ. ಈ ಬಾರಿಯೂ ವೆಬ್ ಕಾಸ್ಟಿಂಗ್ ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಮಕ್ಕಳ ಭವಿಷ್ಯದ ಮುಖ್ಯ ಘಟ್ಟವಾಗಿರುವ SSLC ಹಾಗೂ ದ್ವಿತೀಯ ಪಿಯು ಪರೀಕ್ಷೆಗಳು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪರೀಕ್ಷಾ ಮಂಡಳಿ ಸಿದ್ಧತೆ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿದ್ರು.
ಈ ಬಾರಿ ದ್ವಿತೀಯು ಪಿಯು ಪರೀಕ್ಷೆ-1 ಫೆಬ್ರವರಿ 28 ರಿಂದ ಆರಂಭವಾಗಲಿದ್ದು, ಮಾರ್ಚ್ 17ರವರೆಗೆ ನಡೆಯಲಿವೆ. ಒಟ್ಟು 7 ಲಕ್ಷದ 10 ಸಾವಿರದ 363 ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೊಂದಾಯಿಸಿಕೊಂಡಿದ್ದಾರೆ. 1,217 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಅದೇ ರೀತಿ SSLC ಪರೀಕ್ಷೆ ಮಾರ್ಚ್ 18ರಿಂದ ಆರಂಭವಾಗಿ ಏಪ್ರಿಲ್ 2ರವರೆಗೆ ನಡೆಯಲಿದೆ. ಒಟ್ಟು 9 ಲಕ್ಷದ 2 ಸಾವಿರದ 889 ವಿದ್ಯಾರ್ಥಿಗಳು ನೊಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 2,871 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧವಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

SSLC ಪರೀಕ್ಷೆ 1ರ ವೇಳಾಪಟ್ಟಿ ಮಾರ್ಚ್ 18ರಂದು ಪ್ರಥಮ ಭಾಷೆ, ಮಾರ್ಚ್ 23 ರಂದು ವಿಜ್ಞಾನ, ಮಾರ್ಚ್ 25ರಂದು ದ್ವೀತಿಯ ಭಾಷೆ, ಮಾರ್ಚ್ 28ರಂದು ಗಣಿತ, ಮಾರ್ಚ್ 30ರಂದು ತೃತೀಯ ಭಾಷೆ ಹಾಗೂ ಏಪ್ರಿಲ್ 02 ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ. ಇನ್ನು SSLC ಪರೀಕ್ಷೆ 2 ವೇಳಾಪಟ್ಟಿ ಮೇ 18ರಂದು ಪ್ರಥಮ ಭಾಷೆ, ಮೇ 19ರಂದು ವಿಜ್ಞಾನ, ಮೇ 20 ರಂದು ದ್ವೀತಿಯ ಭಾಷೆ, ಮೇ 21ರಂದು ಗಣಿತ, ಮೇ 22 ರಂದು ತೃತೀಯ ಭಾಷೆ, ಮೇ 23 ರಂದು ಸಮಾಜ ವಿಜ್ಞಾನ ನಡೆಯಲಿದೆ.
ದ್ವಿತೀಯ ಪಿಯುಸಿ ವೇಳಾಪಟ್ಟಿ ಫೆಬ್ರವರಿ 28 ರಂದು ಕನ್ನಡ, ಅರೇಬಿಕ್, ಮಾರ್ಚ್ 2ರಂದು ಭೂಗೋಳ ಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ, ಮಾರ್ಚ್ 3ರಂದು ಇಂಗ್ಲಿಷ್, ಮಾರ್ಚ್ 4ರಂದು ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್, ಮಾರ್ಚ್ 5ರಂದು ಇತಿಹಾಸ, ಮಾರ್ಚ್ 6ರಂದು ಭೌತಶಾಸ್ತ್ರ, ಮಾರ್ಚ್ 7ರಂದು ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭ ಶಾಸ್ತ್ರ, ಮಾರ್ಚ್ 9ರಂದು ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ. ಮಾರ್ಚ್ 10ರಂದು ಅರ್ಥಶಾಸ್ತ್ರ. ಮಾರ್ಚ್ 11ರಂದು ತರ್ಕಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ, ಗೃಹ ವಿಜ್ಞಾನ. ಮಾರ್ಚ್ 12ರಂದು ಹಿಂದಿ, ಮಾರ್ಚ್ 13ರಂದು ರಾಜ್ಯಶಾಸ್ತ್ರ, ಮಾರ್ಚ್ 14ರಂದು ಲೆಕ್ಕಶಾಸ್ತ್ರ, ಗಣಿತ. ಮಾರ್ಚ್ 16ರಂದು ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ. ಮಾರ್ಚ್ 17ರಂದು ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ ಪರೀಕ್ಷೆ ನಡೆಯಲಿದೆ.
ಪರೀಕ್ಷೆ ವೇಳೆ ಯಾವುದೇ ರೀತಿ ಅಕ್ರಮ ಆಗದಂತೆ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ವೆಬ್ ಕಾಸ್ಟಿಂಗ್ ಅಳವಡಿಸಲಾಗಿದೆ. ಜೊತೆಗೆ ಈಗಾಗಲೇ ಉತ್ತಮ ಫಲಿತಾಂಶಕ್ಕಾಗಿ ಪ್ರತಿ ಜಿಲ್ಲೆಗಳಲ್ಲೂ ಡಿಡಿಪಿಐ, ಬಿಇಓಗಳು ಹಾಗೂ ಶಿಕ್ಷಕರು ಪ್ರತಿ ವಿದ್ಯಾರ್ಥಿಗಳ ಮೇಲೂ ವಿಶೇಷ ಗಮನ ಹರಿಸಿದ್ದು, ಈಗಾಗಲೇ ಮಾಡೆಲ್ ಪ್ರಶ್ನೆಪತ್ರಿಕೆಗಳನ್ನು ಸಹ ವಿದ್ಯಾರ್ಥಿಗಳಿಗೆ ನೀಡಿ ಅಭ್ಯಾಸ ಮಾಡಿಸಲಾಗಿದೆ. ಜೊತೆಗೆ ವಾಸಸ್ಥಳದಿಂದ ಪರೀಕ್ಷಾ ಕೇಂದ್ರಕ್ಕೆ ಬರುವ ಮಕ್ಕಳಿಗೆ ಪ್ರಯಾಣದಲ್ಲಿ ತೊಂದರೆಯಾಗದಂತೆ ಬಿಎಂಟಿಸಿ ಹಾಗೂ KSRTC ಬಸ್ನಲ್ಲಿ ಉಚಿತ ವ್ಯವಸ್ಥೆ ಮಾಡಲಾಗಿದೆ ಅಂತಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ. ಮಕ್ಕಳು ಪರೀಕ್ಷೆಗೆ ಹೆದರುವ ಅಗತ್ಯವಿಲ್ಲ. ಅದರ ಬದಲು ಓದಿರುವುದನ್ನು ಮನನ ಮಾಡಿಕೊಂಡು ದೃಢತೆಯಿಂದ ಪರೀಕ್ಷೆ ಬರೆದರೆ ಯಶಸ್ಸು ನಿಮ್ಮದಾಗಿಸಿಕೊಳ್ಳಬಹುದು. ಭಯ ಎದುರಾದರೆ ಯಶಸ್ಸವು ಸಿಗುವುದು ಕಷ್ಟವಾಗಲಿದೆ.


