The Public Spot
ರಾಜ್ಯ

Police Constable; ವಯೋಮಿತಿ ಹೆಚ್ಚಿಸಿ.. ಪೊಲೀಸ್​ ನೇಮಕಾತಿ ಮಾಡಿ.. ಆಕಾಂಕ್ಷಿಗಳ ಆಗ್ರಹ..

ರಾಜ್ಯ ಸರ್ಕಾರ ಮೀಸಲಾತಿ ಹಾಗೂ ಒಳ ಮೀಸಲಾತಿ ಹಂಚಿಕೆ ವಿಚಾರವಾಗಿ ಪೊಲೀಸ್​ ಪೇದೆ ಸೇರಿದಂತೆ ಸಾಕಷ್ಟು ನೇಮಕಾತಿಗಳಿಗೆ ತಡೆ ನೀಡಿತ್ತು. ಅಷ್ಟು ಮಾತ್ರವಲ್ಲದೆ ಎಲ್ಲಾ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವಿನಿಯೋಗಿಸಿದ ಕಾರಣಕ್ಕೆ ಹಣಕಾಸು ಇಲಾಖೆಯೂ ಅನುಮತಿ ನೀಡುತ್ತಿರಲಿಲ್ಲ ಅನ್ನೋ ಮಾತುಗಳೂ ಇವೆ. ಇದೀಗ ಪೊಲೀಸ್​ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ತೇವೆ ಎಂದು ಸ್ವತಃ ಗೃಹ ಇಲಾಖೆ ಡಾ ಜಿ ಪರಮೇಶ್ವರ್​ ಹಾಗೂ ಡಿಜಿ ಐಜಿಪಿ ಡಾ ಎಂ.ಎ ಸಲೀಂ ಕೂಡ ಸುಳಿವು ನೀಡಿದ್ದಾರೆ. ಕೋಲಾರದ ಕೆಜಿಎಫ್‌ನಲ್ಲಿ ಮಾತನಾಡಿದ ಡಿಜಿ ಡಾ ಎಂ.ಎ ಸಲೀಂ, ರಾಜ್ಯದಲ್ಲಿ 3 ಸಾವಿರ ಹೊಸ ಪೊಲೀಸ್ ನೇಮಕಾತಿ ಆಗಲಿದೆ. ಇನ್ನು 3-4 ತಿಂಗಳಲ್ಲಿ ಹೊಸ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ.

ನೇಮಕಾತಿ ಆಗುತ್ತದೆ ಅನ್ನೋ ಖುಷಿ ಒಂದು ಕಡೆ ಆದರೆ ಕಳೆದ ಮೂರ್ನಾಲ್ಕು ವರ್ಷದಿಂದ ನೇಮಕಾತಿ ನಡೆಯದ ಕಾರಣಕ್ಕೆ ವಯೋಮಿತಿಯನ್ನು 33 ವರ್ಷಕ್ಕೆ ಹೆಚ್ಚಳ ಮಾಡ್ತೇವೆ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಹೇಳಿದ್ದರು. ಮೊದಲು ವಯೋಮಿತಿ ಹೆಚ್ಚಳ ಮಾಡಿ ಅಧಿಸೂಚನೆ ಹೊರಡಿಸಿ, ಆ ನಂತರ ನೇಮಕಾತಿ ಆದೇಶ ಹೊರಡಿಸಿ ಎಂದು ವಯೋಮಿತಿ ಮೀರುತ್ತಿರುವ ಆತಂಕದಲ್ಲಿರುವ ವಿದ್ಯಾರ್ಥಿಗಳು ಧಾರವಾಡದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಧಾರವಾಡದಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಪರೀಕ್ಷಾ ತಯಾರಿ ನಡೆಸುತ್ತಿದ್ದು, ಒಂದು ವೇಳೆ ಸರ್ಕಾರ ವಯೋಮಿತಿ ಹೆಚ್ಚಳ ಮಾಡದೆ ನೇಮಕಾತಿ ಅಧಿಸೂಚನೆ ಹೊರಬಿದ್ದರೆ ಏನು ಗತಿ..? ಅನ್ನೋ ಭೀತಿಯಲ್ಲಿದ್ದಾರೆ. ಈಗಾಗಲೇ ಐದಾರು ವರ್ಷದಿಂದ ತರಬೇತಿ ಪಡೆದು ನೇಮಕಾತಿಗೆ ಸಜ್ಜಾಗಿದ್ದೇವೆ. ನಮಗೊಮ್ಮೆ ಅವಕಾಶ ಕೊಡಿ ಎನ್ನುವುದು ಅವರ ಬೇಡಿಕೆ.

ಧಾರವಾಡದಲ್ಲಿ ಜಮಾಯಿಸಿದ್ದ ಸಾವಿರಾರು ಆಕಾಂಕ್ಷಿಗಳು ನೇಮಕಾತಿ ಪ್ರಾರಂಭಿಸಿ, ವಯೋಮಿತಿ ಹೆಚ್ಚಿಸಿ ಎಂದು ಬೃಹತ್ ಪ್ರತಿಭಟನೆ ಮಾಡಿದ್ದಾರೆ. ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಕಾಂಕ್ಷಿಗಳು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ್ರು. ಧಾರವಾಡದ ಶ್ರೀನಗರ ವೃತ್ತದಿಂದ ಡಿಸಿ ಕಚೇರಿ ತನಕ ಬೃಹತ್ ಱಲಿ ಮಾಡಿದ ಆಕಾಂಕ್ಷಿಗಳು, ನೇಮಕಾತಿ ಶೀಘ್ರದಲ್ಲೇ ಮಾಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದ್ರು. ವಿದ್ಯಾರ್ಥಿಗಳು ಅರ್ಧ ಗಂಟೆಗೂ‌ ಹೆಚ್ಚು ಕಾಲ ಸರ್ಕಲ್‌ ಬಂದ್ ಮಾಡಿದ್ರಿಂದ ಧಾರವಾಡದ ಜುಬ್ಲಿ ಸರ್ಕಲ್​ನಲ್ಲಿ ಟ್ರಾಫಿಕ್​ ಜಾಮ್​ ಉಂಟಾಗಿತ್ತು.

ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಸುಮಾರು ಒಂದು ಕಿ.ಮೀ ವರೆಗೆ ವಾಹನಗಳ ಸಂಚಾರ ದಟ್ಟಣೆ ಉಂಟಾಗಿತ್ತು. ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಆಗಮಿಸಿ ವಿದ್ಯಾರ್ಥಿಗಳ ಮನವೊಲಿಕೆ ಮಾಡುವ ಕೆಲಸ ಮಾಡಿದ್ರು. ಆ ಬಳಿಕ ಧಾರವಾಡ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ವಿದ್ಯಾರ್ಥಿಗಳ ಬೇಡಿಕೆಯ ಪತ್ರ ರವಾನಿಸುವ ಕೆಲಸ ಮಾಡಿದ್ರು. ಒಟ್ಟಾರೆ ಎಸ್​ಸಿ ಎಸ್​ಟಿ ಮಾತ್ರವಲ್ಲ ಒಬಿಸಿ (OBC) ವಿದ್ಯಾರ್ಥಿಗಳಿಗೂ 33 ವರ್ಷ ವಯೋಮಿತಿ ಸಡಿಲಿಕೆ ಮಾಡ್ಬೇಕು ಅಂತಾ ಆಗ್ರಹ ಕೇಳಿ ಬಂದಿದೆ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರೂ ಕೂಡ ಆ ಮಾತನ್ನು ಹೇಳಿದ್ದರು. ಇದೀಗ ಕೊಟ್ಟ ಮಾತನ್ನು ಉಳಿಸಿಕೊಳ್ತಾರಾ ಅನ್ನೋದನ್ನು ಕಾದು ನೋಡ್ಬೇಕು. ನಾಲ್ಕಾರು ವರ್ಷಗಳಿಂದ ಓದುತ್ತ ಸಮಯ ಕಳೆದಿರುವ ಮಕ್ಕಳಿಗೆ ಒಂದು ಅವಕಾಶ ಕೊಡಬೇಕಿದೆ. ಅಲ್ಲವೇ..?

Related posts

ಪೋಕ್ಸೋ ಕೇಸ್‌ನಲ್ಲಿ ಮುರುಘಾ ಶ್ರೀಗಳು ಖುಲಾಸೆ.. ಯಾರು ಏನಂದ್ರು..?

Publicspot

BJP Protest Against Potholes; ರಸ್ತೆ ಗುಂಡಿ ಮುಚ್ಚದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ..

Publicspot

High Court News: ರಾಜ್ಯದಲ್ಲಿ ಮತ್ತೆ ರಸ್ತೆ ಇಳಿಯುತ್ತವೆ ಬೈಕ್​ ಟ್ಯಾಕ್ಸಿ..!?

Publicspot

ಕಾಂಗ್ರೆಸ್ ಶಾಸಕ H.Y ಮೇಟಿ ನಿಧನರಾಗಿದ್ದು, ಬಾಗಲಕೋಟೆಯಲ್ಲಿ ಅಂತಿಮ ವಿಧಿವಿಧಾನ..

Publicspot

RAIN DAMAGES IN KARNATAKA: ಕರ್ನಾಟಕದಲ್ಲಿ ಮಳೆ ಅಬ್ಬರದ ಎಫೆಕ್ಟ್‌ ಹೇಗಿದೆ..?

Publicspot

ಇವತ್ತೂ ನಾಳೆ ರಾಜ್ಯದಲ್ಲಿ ಮಳೆಯೋ ಮಳೆ.. ಕರಾವಳಿಗೆ ಮಾತ್ರ ರಜೆ..

Publicspot