ಸಾಮಾನ್ಯವಾಗಿ ಗಣೇಶನ ಹಬ್ಬ ಬಂದರೆ ಸಾಕು ಎಲ್ಲರೂ ಗಣೇಶನ ಪೂಜೆ ಮಾಡ್ತಾರೆ. ಮನೆಯಲ್ಲಿ ಗಣೇಶನ ಪೂಜೆ ಮಾಡಿದರೂ ಕೂಡ ಊರಿನಲ್ಲಿ ಅಥವಾ ಏರಿಯಾದಲ್ಲಿ ಕೂರಿಸಿದ ಗಣೇಶನಿಗೆ ಪೂಜೆ ಸಲ್ಲಿಸುವುದು ವಾಡಿಕೆ. ಬೆಂಗಳೂರಿನಂತಹ ನಗರದಲ್ಲಿ ಬೇರೆ ಬೇರೆ ಏರಿಯಾಗಳಲ್ಲಿ ವಿಭಿನ್ನವಾದ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿದ್ದರೆ ಹೋಗಿ ನೋಡಿಕೊಂಡು ಬರ್ತಾರೆ. ಆದರೆ ಇಲ್ಲೊಂದು ಗಣೇಶ 20 ದಶಕಗಳಿಂದ ಪ್ರತಿಷ್ಠಾಪನೆ ಮಾಡಲಾಗ್ತಿದೆ. ಇಲ್ಲಿ ಏನೇ ಬೇಡಿಕೊಂಡರೂ ಇಷ್ಟಾರ್ಥ ಸಿದ್ಧಿ ಆಗುತ್ತೆ ಅನ್ನೋದು ನಂಬಿಕೆ.

ಹುಬ್ಬಳ್ಳಿಯಲ್ಲಿ ಸಿಂಧೂರ ಗಣಪನನ್ನು ನೋಡಲು ಜನಸಾಗರವೇ ಹರಿದು ಬರ್ತಿದೆ. ಸಿದ್ಧಿ ವಿನಾಯಕನ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಜನರು ಪ್ರಾರ್ಥನೆ ಮಾಡ್ತಿದ್ದಾರೆ. ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿರೋ ಗಣಪನಿಗೆ 199 ವರ್ಷಗಳ ಇತಿಹಾಸವಿದೆ. ಎರಡು ಶತಮಾನಗಳ ಹೊಸ್ತಿಲಲ್ಲಿರೋ ಸಿಂಧೂರ ಗಣಪನನ್ನು ಕುಲಕರ್ಣಿ ಮನೆತನದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮೊದಲು ಒಂದಿದ್ದ ಗಣಪ, ಈಗ ಏಳಕ್ಕೆ ಏರಿಕೆ ಆಗಿದೆ. ಬಾಲಗಂಗಾಧರ ತಿಲಕರು ಗಣೇಶೋತ್ಸವ ಆಚರಣೆ ಆರಂಭಿಸುವುದಕ್ಕೂ ಮುನ್ನವೇ ಇಲ್ಲಿ ಗಣೇಶೋತ್ಸವ ಆರಂಭ ಆಗಿತ್ತು ಅನ್ನೋದು ಇಲ್ಲಿನ ವಿಶೇಷ. ದೇಶದಲ್ಲಿಯೇ ಮೋಸ್ಟ್ ಪವರ್ ಫುಲ್ ಗಣೇಶ ಎನ್ನುವ ನಂಬಿಕೆ ಭಕ್ತರದ್ದು.

1827 ರಿಂದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗ್ತಿದೆ. ಪ್ರತಿ ವರ್ಷವೂ ಒಂದೇ ವರ್ಣ, ಒಂದೇ ಸೈಜ್ನ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ ಅನ್ನೋದು ಇಲ್ಲಿನ ಮತ್ತೊಂದು ವಿಶೇಷ. 21 ಇಂಚಿನ ಸಿಂಧೂರ ಗಣಪ ಇದರ ಮತ್ತೊಂದು ವಿಶೇಷವಾಗಿದೆ. ಬಹುತೇಕ ಗಣಪ ಮೂರ್ತಿಗಳು ಬಲಗೈಯಿಂದ ಆಶೀರ್ವಾದ ಮಾಡೋದು ಸಹಜ. ಆದರೆ ಈ ಗಣಪನ ಒಂದು ಕೈಯಲ್ಲಿ ಮುರಿದ ದಂತ ಹಾಗೂ ಮತ್ತೊಂದು ಕೈಯಲ್ಲಿ ಲಿಂಗವಿದೆ. ಹಿಂದಿನ ಕೈಗಳಲ್ಲಿ ಅಸ್ತ್ರಗಳಿವೆ.

ಕುಲಕರ್ಣಿ ಕುಟುಂಬಸ್ಥರು ಮನೆಯಲ್ಲಿಯೇ ಗಣೇಶನನ್ನು ಪ್ರತಿಷ್ಠಾಪನೆ ಮಾಡಿದರೂ ಕೂಡ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡ್ತಾರೆ. ಮೂರು ದಿನಗಳ ಕಾಲ 24 ತಾಸು ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಗಣೇಶ ಅಡಿಕೆ ಬೆಟ್ಟದಲ್ಲಿ ಆವಾಹನೆ ಆಗಿದ್ದಾನೆಂಬ ನಂಬಿಕೆ ಇದ್ದು, ಹರಕೆ ಹೊತ್ತು ಅಡಿಕೆ ಬೆಟ್ಟವನ್ನು ತೆಗೆದುಕೊಂಡು ಹೋಗುತ್ತಾರೆ ಭಕ್ತರು. ಅಡಿಕೆ ಬೆಟ್ಟಕ್ಕೆ ಪೂಜೆ ಸಲ್ಲಿಸಿದಲ್ಲಿ ಇಷ್ಟಾರ್ಥ ಸಿದ್ಧಿ ಎಂಬುದು ಇಲ್ಲಿನ ಭಕ್ತರ ನಂಬಿಕೆ ಆಗಿದೆ. ಮ
ಸಿಂಧೂರ ಲೇಪಿತ ಗಣೇಶನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರ್ತಿದೆ. ರಾಜ್ಯ ಮತ್ತು ದೇಶದ ವಿವಿಧ ಕಡೆಯಿಂದಲೂ ಸಿಂಧೂರ ಗಣಪನ ಪೂಜೆಗೆ ಭಕ್ತರು ಆಗಮಿಸುತ್ತಾರೆ. ಗಣೇಶ ವಿಸರ್ಜನೆಗೂ ಮುನ್ನ ಗಣೇಶನ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ ಮಾಡಲಾಗುತ್ತದೆ. ಬೇರೆ ಕಡೆಗಳಲ್ಲಿ ಕೂರಿಸಿದ ಗಣೇಶನ ದರ್ಶನ ಪಡೆದಿದ್ದರೂ ಸಿಂಧೂರ ಗಣೇಶನನ್ನು ವರ್ಷಕ್ಕೆ ಒಮ್ಮೆ ನೋಡಿ, ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಳ್ಳುವುದು ಒಂದು ರೀತಿಯಲ್ಲಿ ಸಂಪ್ರದಾಯ ಎನ್ನುವಂತಾಗಿದೆ.


