ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದರುವ ಕಾಂಗ್ರೆಸ್ ಪಕ್ಷದ ನಿಲುವು ತ್ರಿಭಾಷಾ ಸೂತ್ರದ ವಿಚಾರದಲ್ಲಿ ಏನು..? ಅನ್ನೋದನ್ನು ಮೊದಲು ಸ್ಪಷ್ಟಪಡಿಸಬೇಕಿದೆ. ಏಕೆಂದರೆ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನ ಉರ್ದು ಭಾಷೆಯಲ್ಲಿ ಮುದ್ರಿಸಿ ರಾಜ್ಯ ಸರ್ಕಾರ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಹಿಮೋಫಿಲಿಯಾ ರೋಗಿಗಳಿಗೆ ವ್ಯಾಕ್ಸಿನ್ ಮತ್ತು ಉಚಿತ ಅಂಬುಲೆನ್ಸ್ ಸೇವೆ ನೀಡುವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಉರ್ದು ಭಾಷೆಯಲ್ಲಿ ಮುದ್ರಿಸಲಾಗಿದೆ. ಇಂಗ್ಲಿಷ್, ಕನ್ನಡದ ಜತೆ ಉರ್ದುವಿನಲ್ಲೂ ಆಹ್ವಾನ ಪತ್ರಿಕೆ ಮುದ್ರಿಸಿದ್ದು, ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಸರ್ಕಾರಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಉರ್ದು ಭಾಷೆಯಲ್ಲಿ ಮುದ್ರಿಸಿರೋದಕ್ಕೆ ಸಚಿವ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಉರ್ದು ಒಂದು ಭಾಷೆ ತಾನೇ..? ಅದ್ರಲ್ಲೇನು ತಪ್ಪು..? ಎಂದಿದ್ದಾರೆ. ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆಗೆ ಕರವೇ ಅಧ್ಯಕ್ಷ ನಾರಾಯಣಗೌಡ ಸೇರಿದಂತೆ, ಕನ್ನಡ ಪರ ಸಂಘಟನೆಗಳು ಕಿಡಿಕಾರಿವೆ.

ಆರೋಗ್ಯ ಇಲಾಖೆಯ ಆಹ್ವಾನ ಪತ್ರಿಕೆಯಲ್ಲಿ ಉರ್ದು ಬಳಕೆ ವಿಚಾರವಾಗಿ ಕರವೇ ಅಧ್ಯಕ್ಷ ನಾರಾಯಣ ಗೌಡ ಸಚಿವ ದಿನೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ. ಆರೋಗ್ಯ ಇಲಾಖೆ ಉರ್ದು ಭಾಷೆ ಪ್ರಕಟಣೆ ಹೊರಡಿಸಿದ್ದೇಕೆ..? ನನಗೆ ಇದು ಅರ್ಥವಾಗುತ್ತಿಲ್ಲ. ಈ ಕುರಿತು ಸಚಿವ ದಿನೇಶ್ ಗುಂಡೂರಾವ್ ಸಮರ್ಥನೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ತಪ್ಪಾಗಿದೆ, ಸರಿಪಡಿಸಿಕೊಳ್ತೀನಿ ಎಂದು ಹೇಳಬೇಕಿತ್ತು. ಅದನ್ನು ಬಿಟ್ಟು ಪ್ರತಿಷ್ಠೆಯಾಗಿ ತೆಗೆದುಕೊಳ್ಳುವುದಾದರೆ, ನೀವು ಒಂದು ಕ್ಷಣ ಸಚಿವ ಸ್ಥಾನದಲ್ಲಿ ಇರಬೇಡಿ. ಈ ಹಿಂದೆ ಟಿವಿಯಲ್ಲಿ ಉರ್ದು ವಾರ್ತೆ ಬಂದಿದ್ದಕ್ಕೆ ಆಗ ಹೊತ್ತಿ ಉರಿದಿತ್ತು. ನೀವು ಇದನ್ನು ಮರೆತಿದ್ದೀರಿ ಎಂದೆನಿಸುತ್ತದೆ. ಈ ಹಿಂದೆ ನಿಮ್ಮ ತಂದೆ ಗುಂಡುರಾವ್ ತಮಿಳಿಗರು ಇರುವ ಜಾಗದಲ್ಲಿ ತಮಿಳಿನಲ್ಲಿ ಮಾತಾಡುತ್ತಿದ್ರು. ಆಗಿನ ಕಾಲವೇ ಬೇರೆ. ಈಗಿನ ಕಾಲ ಬೇರೆ. ಯಾವುದೇ ಭಾಷಿಕರೇ ಇರಲಿ, ಧರ್ಮದವರೇ ಇರಲಿ, ನಮ್ಮ ರಾಜ್ಯದಲ್ಲಿ ಕನ್ನಡದಲ್ಲಿ ವ್ಯವಹಾರ ಮಾಡಬೇಕು ಎಂದು ಹಕ್ಕೊತ್ತಾಯ ಮಾಡಿದ್ದಾರೆ.

ರಾಜ್ಯ ಸರ್ಕಾರವೇ ಮುಂದು ನಿಂತು ಹೀಗೆ ಉರ್ದು ಬಳಸಿದರೆ ಹೇಗೆ..? ಸಚಿವರು ಉರ್ದು ಬಳಸೋದು ತಪ್ಪೇನು ಅನ್ನೋದಾದ್ರೆ, ನೀವು ಅಧಿಕಾರದಲ್ಲಿ ಇರೋದು ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಶಾಸಕರು, ಸಚಿವರು ಆಗಿ ಮುಂದುವರಿಯಬೇಕು ಎನ್ನುವುದಾದರೆ ಕನ್ನಡ ಬಳಸಿ ಎಂದು ಸಚಿವ ದಿನೇಶ್ ಗುಂಡೂರಾವ್ ಗೆ ಕರವೇ ಅಧ್ಯಕ್ಷ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ. ಮುಸ್ಲಿಂ ಮತದಾರರನ್ನು ಓಲೈಕೆ ಮಾಡಲು ಹೊಸ ಪದ್ದತಿಗೆ ನಾಂದಿ ಹಾಡಿದ್ದಾರೆ ಅನ್ನೋ ಟೀಕೆ ವ್ಯಕ್ತವಾಗಿದೆ. ಆದರೆ ಕನ್ನಡದ ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಬಳಸಬೇಕು ಅನ್ನೋದು ಕೇಂದ್ರ ಸರ್ಕಾರದ ನಿಲುವು. ಆದರೆ ದಕ್ಷಿಣ ಭಾರತದ ರಾಜ್ಯಗಳು ಪ್ರಾದೇಶಿಕ ಭಾಷೆ ಜೊತೆಗೆ ಆಂಗ್ಲ ಭಾಷೆಯನ್ನು ಬಳಸುವುದಕ್ಕೆ ಒಪ್ಪಿಗೆ ಕೊಡ್ತಾರೆ. ಆದರೆ ಹಿಂದೆ ಭಾಷೆಯಲ್ಲಿ ಸಂವಹನ ಮಾಡಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಆದರೆ ಅಲ್ಪಸಂಖ್ಯಾತ ಮತಗಳಿಗಾಗಿ ಉರ್ದು ಭಾಷೆಯನ್ನು ಬಳಸಿದ್ದು, ಕನ್ನಡಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.
ಉರ್ದು ಕೂಡ ಒಂದು ಭಾಷೆ ಅಲ್ವಾ ಎಂ ದು ಆರೋಗ್ಯ ಸಚಿವರು ಸಮರ್ಥನೆ ಮಾಡಿಕೊಂಡಿದ್ದಾರೆ. ಪಕ್ಕದ ತಮಿಳುನಾಡಿನಲ್ಲಿ ಆಗಿದ್ದರೆ ಇಷ್ಟೊತ್ತಿಗೆ ಇಡೀ ರಾಜ್ಯವೇ ಹೊತ್ತಿ ಉರಿಯುವ ಸಂಭವವಿತ್ತು. ಆದರೆ ಕನ್ನಡಿಗರು ವಿಶಾಲ ಹೃದಯಿಗಳು, ಕನ್ನಡದ ಜೊತೆಗೆ ಉರ್ದು, ತಮಿಳು, ತೆಲುಗು, ಮಲಯಾಳಿ ಭಾಷೆ ಬಳಸಿದರೂ ಸುಮ್ಮನೆ ತಮ್ಮ ಪಾಡಿಗೆ ತಾವು ಇರುತ್ತಾರೆ ಅನ್ನೋದೇ ದುರಂತ ಸಂಗತಿ. ಯಾವ ಭಾಷಿಕರನ್ನೂ ದ್ವೇಷ ಮಾಡುವುದು ಬೇಡ, ಆದರೆ ತಮ್ಮ ಮತ ಬ್ಯಾಂಕ್ಗಾಗಿ ಈ ರೀತಿ ಓಲೈಕೆ ಮಾಡುವುದು ಸರಿಯಾದ ಕ್ರಮವಲ್ಲ ಅನ್ನೋದನ್ನು ಎಲ್ಲರೂ ಒಪ್ಪಬೇಕಿದೆ. ಉರ್ದು ಭಾಷೆಯಲ್ಲಿ ಕೊಟ್ಟರೆ ಅನುಕೂಲಕಾರಿ ಅನ್ನೋದನ್ನು ಒಪ್ಪಿಕೊಳ್ಳೋಣ, ಆದರೆ ಮುಸ್ಲಿಮರಿಗೆ ಕರ್ನಾಟಕದಲ್ಲಿ ಕನ್ನಡ ಅರ್ಥ ಆಗದಿರುವಾಗಲೇ ಸಂಘರ್ಷ, ಸಂಕಷ್ಟಕ್ಕೆ ಕಾರಣ ಆಗುತ್ತದೆ ಅಲ್ಲವೇ..? ಅಷ್ಟಕ್ಕೂ ತ್ರಿಭಾಷಾ ಸೂತ್ರದ ವಿಚಾರದಲ್ಲಿ ಕಾಂಗ್ರೆಸ್ ನಿಲುವೇನು..? ಹೈಕಮಾಂಡ್ ಓಲೈಸಲು ಹಿಂದಿ, ಉರ್ದುವನ್ನೂ ಸೇರಿಕೊಳ್ಳುತ್ತಾ..? ಎಂದು ಸ್ಪಷ್ಟಪಡಿಸಬೇಕಿದೆ.


