ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 9ನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು, ಸಾಕಷ್ಟು ವಿಶೇಷತೆಗಳ ಜೊತೆಗೆ ಕಟ್ಟುನಿಟ್ಟಿನ ಲೆಕ್ಕಾಚಾರ ಮಾಡುತ್ತಿದ್ದಾರೆ. ಹೊಸದಾಗಿ ಟ್ಯಾಕ್ಸ್ ಕಾನೂನು ಜಾರಿ ಮಾಡುತ್ತಿದ್ದು, 2026ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಈ ಹೊಸ ಕಾನೂನು ಪ್ರಕಾರ ಸಣ್ಣಪುಟ್ಟ ತೆರಿಗೆ ವಂಚನೆ ಪ್ರಕರಣದಲ್ಲಿ ಕೇವಲ ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗ್ತಿದೆ.
ವಾಹನ ಅಪಘಾತದಲ್ಲಿ ಪಡೆಯುವ ಪರಿಹಾರದ ಹಣಕ್ಕೆ ಇನ್ನು ಮುಂದೆ ಯಾವುದೇ ರೀತಿಯ ತೆರಿಗೆ ಪಾವತಿ ಮಾಡುವ ಅವಶ್ಯಕತೆ ಇರುವುದಿಲ್ಲ. ವಿದೇಶದಲ್ಲಿ ಆಸ್ತಿ ಮಾಡಿರುವ ಶ್ರೀಮಂತ ಕುಳಗಳಿಗೆ ಕೇಂದ್ರ ಸರ್ಕಾರ 6 ತಿಂಗಳ ಕಾಲಾವಕಾಶ ನೀಡಿದ್ದು, ನಿಗದಿತ ಸಮಯದೊಳಗೆ ತಮ್ಮ ಆಸ್ತಿ ಘೋಷಣೆ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ. ಇನ್ನು ಆದಾಯ ಘೋಷಣೆ ಮಾಡಿಕೊಳ್ಳದಿದ್ದರೆ ಶೇಕಡ 100 ರಷ್ಟು ದಂಡ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.

ಭಾರತದಲ್ಲಿ 2047ರ ತನಕ ವಿದೇಶಿ ಕಂಪನಿಗಳಿಗೆ ತೆರಿಗೆ ಫ್ರೀ ಮಾಡಿರುವ ಕೇಂದ್ರ ಸರ್ಕಾರ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಮುಂದಾಗಿದೆ. ಕ್ಯಾನ್ಸರ್ ಸಂಬಂಧಿತ ಔಷಧಿಗಳ ಮೇಲಿನ ಸುಂಕವನ್ನು ತೆಗೆದು ಹಾಕಲಾಗಿದೆ. 17 ಔಷಧಿಗಳ ಮೇಲಿನ ಕಸ್ಟಮ್ಸ್ ಸುಂಕವನ್ನೂ ಕೈ ಬಿಡಲಾಗಿದೆ. ಸಿಗರೇಟ್ ದರ ಮತ್ತಷ್ಟು ಹೆಚ್ಚಳವಾಗಿದ್ದು, ಮದ್ಯ ಪ್ರಿಯರಿಗೂ ಕೇಂದ್ರ ಸರ್ಕಾರ ಬಜೆಟ್ ಶಾಕ್ ನೀಡಿದೆ. ಇನ್ನೂ ವೈಯಕ್ತಿಯ ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡದ ಕೇಂದ್ರ ಸರ್ಕಾರ ಯಥಾಸ್ಥಿತಿ ಕಾಯ್ದುಕೊಂಡಿದೆ.
ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸಲು ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಸ್ತಾಪ ಮಾಡಿದೆ. ಅಷ್ಟೇ ಅಲ್ಲದೆ ಪ್ರತಿ ಜಿಲ್ಲಾ ಕೇಂದ್ರದಲ್ಲೂ ಬಾಲಕಿಯರ ಹಾಸ್ಟೆಲ್ ಸ್ಥಾಪನೆ ಬಗ್ಗೆಯೂ ಘೋಷಣೆ ಮಾಡಿದೆ. ದೇಶದಲ್ಲಿ ಆಮದು ಇಳಿಕೆ ಮಾಡಿ ರಫ್ತು ವಹಿವಾಟು ಹೆಚ್ಚಿಸುವ ಉದ್ದೇಶದಿಂದ ಮೂರು ಕಡೆ ಕೆಮಿಕಲ್ ಪಾರ್ಕ್ ತೆರೆಯುವ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ NRI (ಅನಿವಾಸಿ ಭಾರತೀಯರು) ಸ್ಥಿರಾಸ್ತಿ ಮೇಲಿನ ತೆರಿಗೆ ಕಡಿತ ಮಾಡಲಾಗಿದೆ. ವಿದೇಶಿ ಪ್ರವಾಸದ ಮೇಲೆ TCS ಕಡಿತ ಮಾಡಲಾಗಿದೆ. ಇನ್ನು ಪ್ರಮುಖವಾಗಿ ಮನರೇಗಾ ಹೆಸರು ಬದಲಿಸಿದ್ದಕ್ಕೆ ಸಿಡಿದೆದ್ದಿದ್ದ ಕಾಂಗ್ರೆಸ್ ಕೋಪ ತಣಿಸಲು ಖಾದಿ ಉದ್ಯಮಕ್ಕೆ ಗಾಂಧಿ ಹೆಸರು ಇಡಲು ಯೋಜನೆ ತರಲಾಗ್ತಿದೆ.


