ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿವನಸಮುದ್ರದ ಬಳಿ ನೀರು ಕುಡಿಯಲು ಹೋಗಿದ್ದ ಕಾಡಾನೆಯೊಂದು ಆಯತಪ್ಪಿ 20 ಅಡಿಯ ಪ್ರಪಾತಕ್ಕೆ ಬಿದ್ದಿತ್ತು. ಕಾಡಾನೆ ಮೇಲೆ ಬರಲು ಸಾಧ್ಯವಾಗದೆ ನರಳಾಡುವುದಕ್ಕೆ ಶುರು ಮಾಡಿತ್ತು. ಶನಿವಾರದಿಂದ 4 ದಿನಗಳ ಕಾಲ ಪ್ರಪಾತದಲ್ಲೇ ಒದ್ದಾಡುತ್ತಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಖಾಸಗಿ ವಿದ್ಯುತ್ ಉತ್ಪಾದನಾ ಘಟಕದವರು ಮಾಹಿತಿ ಕೊಟ್ಟರೂ ಮಾಧ್ಯಮಗಳಲ್ಲಿ ಪ್ರಸಾರ ಆದ ಬಳಿಕ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಕಾಡಾನೆಯನ್ನು ರಕ್ಷಣೆ ಮಾಡಲಾಗಿದೆ.

ಮಂಗಳವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಶುರುವಾದ ಕಾಡಾನೆ ರಕ್ಷಣಾ ಕಾರ್ಯಾಚರಣೆ, ಸಂಜೆ ವೇಳೆಗೆ ಮುಗಿದಿತ್ತು. ಮೂರು ಕ್ರೇನ್ ಬಳಸಿ ಆನೆಯನ್ನು ಮೇಲೆತ್ತಲಾಯ್ತು. ಸುಮಾರು ಎರಡು ಗಂಟೆಗಳ ಆನೆಯನ್ನು ಮೇಲೆತ್ತಲು ಅಧಿಕಾರಿಗಳು ಸರ್ಕಸ್ ಮಾಡಿದರೂ ಆನೆ ಮಾತ್ರ ಒಂದು ಕಡೆ ನಿಲ್ಲದೆ ಆ ಕಡೆ ಈ ಕಡೆ ಓಡಾಡುತ್ತಲೇ ಇತ್ತು. ಹೀಗಾಗಿ ಆನೆಯನ್ನು ಖೆಡ್ಡಾಗೆ ಬೀಳಿಸುವುದು ದೊಡ್ಡ ಸವಾಲಾಗಿತ್ತು. ಅಂತಿಮವಾಗಿ ಅರಣ್ಯ ಸಿಬ್ಬಂದಿ ಜೊತೆಗೆ ಅರವಳಿಕೆ ತಜ್ಞರು ಕೂಡಾ ಅಖಾಡಕ್ಕಿಳಿದ ಬಳಿಕ ಆನೆಯನ್ನು ಮೇಲೆತ್ತುವ ಕೆಲಸ ಸರಳವಾಯ್ತು.

ಆನೆಯನ್ನ ಜೀವಂತವಾಗಿ ಮೇಲೆತ್ತಲು ವೈದ್ಯರು ಅರವಳಿಕೆ ಮದ್ದು ನೀಡಿದ್ರು. ಕಾರ್ಯಾಚರಣೆ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದ ಡಾ. ರಮೇಶ್ ಹಾಗೂ ಡಾ. ಆದರ್ಶ್ ಟೀಂ ಆನೆ ಸೆರೆ ಹಿಡಿಯಲು ಆಪರೇಷನ್ ಶುರು ಮಾಡಿತ್ತು. ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೊದಲ ಡೋಸ್ ಅನಸ್ತೇಷಿಯಾ ಕೊಡಲಾಯ್ತು. ಅರವಳಿಕೆಯ ಇಂಜೆಕ್ಷನ್ ಬೆನ್ನಿಗೆ ಚುಚ್ಚಿಕೊಂಡ ಬಳಿಕ ಕಾಡಾನೆಯ ಆರ್ಭಟ ಮುಗಿಲು ಮುಟ್ಟಿತ್ತು. ಕಾಲುವೆಯಲ್ಲಿದ್ದ ಕಂಟೇನರನ್ನೇ ಉರುಳಿಸುವ ಸರ್ಕಸ್ ಮಾಡಿತ್ತು. ನದಿ ನೀರಲ್ಲಿ ನಿಂತು ಘೀಳಿಟ್ಟ ಒಂಟಿ ಸಲಗ, ಮೊದಲ ಡೋಸ್ ಯಾವುದೇ ಪರಿಣಾಮ ಬೀರಲಿಲ್ಲ. ಆ ಬಳಿಕ ಎರಡನೇ ಡೋಸ್ ಅನಸ್ತೇಷಿಯಾ ನೀಡಲಾಯ್ತು.

ಕಾಡಾನೆಗೆ ಸುಮಾರು ಅರ್ಧಗಂಟೆ ಅಂತರದಲ್ಲಿ ಎರಡನೇ ಅರವಳಿಕೆ ಮದ್ದು ನೀಡಲಾಯ್ತು.. ಆನೆಯ ಮುಂಭಾಗಕ್ಕೊಂದು ಹಿಂಭಾಗಕ್ಕೊಂದು ಅನಸ್ತೇಷಿಯಾ ಡೋಸ್ ಕೊಡ್ತಿದ್ದಂತೆ ಆನೆ ಆರ್ಭಟ ತಣ್ಣಗಾಯ್ತು. ಅಬ್ಬರಿಸಿ ಬೊಬ್ಬಿರಿದ ಕಾಡನೆ ನಿಧಾನಕ್ಕೆ ನೆಲಕಚ್ಚಿತ್ತು. ನೋಡ ನೋಡ್ತಿದ್ದಂತೆ ನೆಲಕ್ಕೆ ಕುಸಿದ ಬಿದ್ದ ಒಂಟಿ ಸಲಗ ಪ್ರಜ್ಞೆ ಕಳೆದುಕೊಂಡಿತ್ತು. ಕೂಡಲೇ ನೀರಿಗಿಳಿದ ಅರಣ್ಯ ಸಿಬ್ಬಂದಿ ಮೊದಲು ಸೊಂಡಿಲನ್ನ ಮೇಲಕ್ಕೆ ಎತ್ತಿ ಆನೆಯನ್ನು ಮೇಲಕ್ಕೆತ್ತುವ ಕಾರ್ಯ ಶುರು ಮಾಡಿದ್ರು. ಕ್ರೇನ್ ಮೂಲಕ ಆನೆಯನ್ನು ಮೇಲೆತ್ತಿದ ಬಳಿಕ ಆನೆಯನ್ನ ಲಾರಿ ಮೇಲೆ ಇರಿಸಿಕೊಂಡು ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟು ಬರಲಾಯ್ತು.

ಅರಣ್ಯಕ್ಕೆ ಬಿಡುವ ಮೊದಲು ಆನೆಗೆ ಅಗತ್ಯ ಚಿಕಿತ್ಸೆ ನೀಡಲಾಯ್ತು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ. ಆದರೆ ಕಳೆದ ನಾಲ್ಕು ದಿನಗಳಿಂದ ಆಹಾರ ಇಲ್ಲದೆ ನಿತ್ರಾಣಗೊಂಡಿದ್ದ ಆನೆಯನ್ನು ಏಕಾಏಕಿ ಕಾಡಿಗೆ ಬಿಟ್ಟಿದ್ದು ಸಾಕಷ್ಟು ಜನರಿಗೆ ಅಸಮಾಧಾನ ಉಂಟು ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿ ಈಗಾಗಲೇ ಸಾಕಷ್ಟು ಕಡೆ ನಿರ್ಲಕ್ಷ್ಯ ಮಾಡಿದ್ದು, ಕಾಡು ಪ್ರಾಣಿಗಳು ಸಾವನ್ನಪ್ಪಿವೆ. ಅನಸ್ತೇಷಿಯಾ ಪ್ರಮಾಣ ಸರಿಯಾಗಿತ್ತಾ..? ಅಸ್ವಸ್ಥ ಆಗಿದ್ದ ಆನೆ ಚೇತರಿಸಿಕೊಂಡಿದ್ಯಾ..? ಅನ್ನೋ ಬಗ್ಗೆ ಅರಣ್ಯ ಅಧಿಕಾರಿಗಳು ಮಾಹಿತಿ ಕೊಡಬೇಕಿದೆ. ಮರಗಟ್ಟಿರೋ ಕಾಲುಗಳು ಸರಿ ಹೋಗೋಕೂ ಮೊದಲೇ ಕಾಡಿಗೆ ಬಿಟ್ಟಿದ್ದೇಕೆ..? ಅನ್ನೋದು ಜನರ ಪ್ರಶ್ನೆ ಆಗಿದೆ. ಈ ಹಿಂದೆ ಮಂಚನಬೆಲೆ ಡ್ಯಾಂನಲ್ಲಿ ಸಿಲುಕಿ ರಕ್ಷಣೆಯಾಗಿದ್ದ ಆನೆ ಸಾವನ್ನಪ್ಪಿತ್ತು. ಗಾಯಕ್ಕೆ ಚಿಕಿತ್ಸೆ ನೀಡಿದ್ದ ವಿಧಾನ ಹಾಗೂ ವಿಳಂಬವೇ ಆನೆ ಸಾವಿಗೆ ಕಾರಣವಾಗಿತ್ತು. ಇದೀಗ ಅರಣ್ಯ ಇಲಾಖೆ ಆನೆಯನ್ನು ಯಶಸ್ವಿಯಾಗಿ ಕಾಡಿಗೆ ಬಿಟ್ಟಿದ್ಯಾ ಅನ್ನೋದೇ ಅನುಮಾನ.


