ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಬಿಕ್ಕಟ್ಟು ತಾರಕಕ್ಕೇರಿದೆ. ಡಿ.ಕೆ ಶಿವಕುಮಾರ್ ಆಪ್ತ ಶಾಸಕರು ದೆಹಲಿಗೆ ಹೋಗಿ ಹೈಕಮಾಂಡ್ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ. ಈ ನಡುವೆ ಬೆಂಗಳೂರಿಗೆ ಬಂದಿಳಿದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಸಿಎಂ ಸಿದ್ದರಾಮಯ್ಯಗೆ ಕರೆ ಮಾಡಿದ್ದಾರೆ. ಒಕ್ಕಲಿಗ ಶಾಸಕರ ದೆಹಲಿ ಭೇಟಿ, ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಮೀಟಿಂಗ್ ಬಗ್ಗೆಯೂ ಮಾಹಿತಿ ಪಡೆದಿರುವ ಮಲ್ಲಿಕಾರ್ಜುನ ಖರ್ಗೆ, ಶನಿವಾರ ಸದಾಶಿವನಗರ ನಿವಾಸದಲ್ಲಿ ಭೇಟಿಯಾಗುವಂತೆ ಸೂಚಿಸಿದ್ದಾರೆ. ಸದ್ಯ ಮೈಸೂರು ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯರಿಗೆ ಖುದ್ದು ಭೇಟಿಯಾಗುವಂತೆ ತಿಳಿಸಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮಲ್ಲಿಕಾರ್ಜುನ ಖರ್ಗೆ ಸಿಎಂ ಸಿದ್ದರಾಮಯ್ಯಗೆ ಬುಲಾವ್ ಕೊಡ್ತಿದ್ದ ಹಾಗೆ ಮಲ್ಲಿಕಾರ್ಜುನ್ ಖರ್ಗೆ ನಿವಾಸಕ್ಕೆ ಆರ್. ವಿ ದೇಶಪಾಂಡೆ, ಸಚಿವ ಸಚಿವ ಶಿವರಾಜ್ ತಂಗಡಗಿ ಭೇಟಿ ಕೊಟ್ಟು ಚರ್ಚೆ ನಡೆಸಿದ್ದಾರೆ. ಖರ್ಗೆ ಭೇಟಿ ಬಳಿಕ ಮಾತನಾಡಿದ ಆರ್.ವಿ ದೇಶಪಾಂಡೆ, ಸಹಜವಾಗಿ ಭೇಟಿ ಮಾಡಿದ್ದೇನೆ. ಮಲ್ಲಿಕಾರ್ಜುನ್ ಖರ್ಗೆಯವರು ಎಐಸಿಸಿ ಅಧ್ಯಕ್ಷರಿದ್ದಾರೆ, ಭೇಟಿಯಾಗಿ ಚರ್ಚಿಸಿದ್ದೇನೆ. ಸಚಿವ ಸ್ಥಾನದ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ ಎಂದಿದ್ದಾರೆ ಆರ್. ವಿ ದೇಶಪಾಂಡೆ.

ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಖರ್ಗೆ ಅವರು ಎಐಸಿಸಿ ಅಧ್ಯಕ್ಷರಿದ್ದಾರೆ, ಅವರನ್ನ ಭೇಟಿ ಮಾಡಿದ್ದೇನೆ. ಪ್ರತಿ ಸಾರಿಯೂ ಭೇಟಿ ಮಾಡ್ತೇನೆ, ಅದರಂತೆ ಈಗಲೂ ಭೇಟಿ ಮಾಡಿದ್ದೇನೆ. ನಾಯಕತ್ವ ಬದಲಾವಣೆ ವಿಚಾರ ಏನೂ ಇಲ್ಲ. ನಾಯಕತ್ವ ಬದಲಾವಣೆ ಅನ್ನೋದು ಮಾಧ್ಯಮ ಸೃಷ್ಟಿ ಅಷ್ಟೇ. ದೆಹಲಿಗೆ ಹೋದ ಶಾಸಕರು ಹೈಕಮಾಂಡ್ ಭೇಟಿ ಮಾಡದೆ ಬಿಜೆಪಿಯರನ್ನ ಭೇಟಿ ಮಾಡೋಕಾಗುತ್ತಾ..? ಎಂದಿರುವ ಸಚಿವ ಶಿವರಾಜ್ ತಂಗಡಗಿ, ಸಿದ್ದರಾಮಯ್ಯನವರು ಐದು ವರ್ಷವೂ ಸಿಎಂ ಆಗಿರ್ತೇನೆ ಎನ್ನುವುದರ ಜೊತೆಗೆ, ಹೈಕಮಾಂಡ್ ಏನ್ ಹೇಳುತ್ತೋ ಅದಕ್ಕೆ ಬದ್ಧ ಎಂದಿದ್ದಾರೆ. ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಿದ್ದೇನೆ ಅಂದಿರೊದನ್ನು ನೀವು ಯಾಕೆ ಹೇಳಲ್ಲ ಎಂದು ಮಾಧ್ಯಮಗಳನ್ನೇ ಪ್ರಶ್ನಿಸಿದ್ದಾರೆ.

ದೆಹಲಿಯಿಂದ ವಾಪಸ್ ಆದ ಬಳಿಕ ಕೆಂಪೇಗೌಡ ಏರ್ಪೋಟ್ನಲ್ಲಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ನಾನು ದೆಹಲಿಗೆ ಹೋಗಿದ್ದು ನೂರಕ್ಕೆ ನೂರು ಕೃಷಿ ಇಲಾಖೆ ಕೆಲಸಕ್ಕೆ. ಎಂಎಸ್ಪಿ ಬಗ್ಗೆ ಸಿಎಂ ಮೇಜರ್ ಮೀಟಿಂಗ್ ಮಾಡಿದ್ದಾರೆ. ರಾತ್ರಿ ಸೆಂಟ್ರಲ್ ಮಿನಿಸ್ಟರ್ ಜೊತೆ ಮೀಟಿಂಗ್ ಮಾಡಿ ಸಿಎಂ ಜೊತೆಗೂ ವಿಡಿಯೋ ಕಾನ್ಫರೆನ್ಸ್ ಸಹ ಮಾಡಿದ್ದೀವಿ. ಹೈಕಮಾಂಡ್ ಅವರು ಯಾರನ್ನು ಸಹ ನಾನು ದೆಹಲಿಯಲ್ಲಿ ಭೇಟಿ ಮಾಡಿಲ್ಲ. ನಾನು ಬರುವ ವಿಮಾನದಲ್ಲೇ ಎಐಸಿಸಿ ಅಧ್ಯಕ್ಷರು ಸಹ ಬಂದ್ರು, ಆಗ 2 ನಿಮಿಷ ಖರ್ಗೆ ಅವರ ಜೊತೆ ಮಾತನಾಡಿದ್ದೀನಿ ಅಷ್ಟೆ. ಅದು ರಾಜಕೀಯ ವಿಚಾರ ಮಾತನಾಡಿಲ್ಲ. ಪುನಾರಚನೆ ಚರ್ಚೆ ಆಗ್ತಿದೆ. ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಹೈಕಮಾಂಡ್ ಜೊತೆಗೆ ಕುಳಿತುಕೊಂಡು ಒಂದು ನಿರ್ಧಾರ ಮಾಡ್ತಾರೆ ಎಂದಿದ್ದಾರೆ.

ನಾಯಕತ್ವ ಬದಲಾವಣೆ ಬಿಕ್ಕಟ್ಟು ಜಾಸ್ತಿ ಆಗ್ತಿದ್ದಂತೆ ಒಕ್ಕಲಿಗ ನಾಯಕರು ಡಿ.ಕೆ ಶಿವಕುಮಾರ್ ಪರ ಬ್ಯಾಟಿಂಗ್ ಮಾಡ್ತಿದ್ರೆ, ಮತ್ತೊಂದು ಕಡೆ ಸಿಎಂ ಆಪ್ತರು ಅಹಿಂದಾ ಅಸ್ತ್ರ ಪ್ರಯೋಗ ಮಾಡಲು ಮುಂದಾಗುತ್ತಿದ್ದಾರೆ. ಡಿನ್ನರ್ ಮೀಟಿಂಗ್ ಬೆನ್ನಲ್ಲೇ ಅಹಿಂದ ನಾಯಕರು ಒಗ್ಗೂಡುತ್ತಿದ್ದು, ಸಚಿವ ಜಮೀರ್ ಅಹ್ಮದ್ ಕಚೇರಿಯಲ್ಲಿ ಸತೀಶ್ ಜಾರಕಿಹೊಳಿ, ಬಿ.ಕೆ.ಹರಿಪ್ರಸಾದ್ ಮೀಟಿಂಗ್ ಮಾಡಿದ್ದಾರೆ, ಶನಿವಾರ ಬೆಳಗ್ಗೆ ಸಿದ್ದರಾಮಯ್ಯ – ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ತಯಾರಿ ನಡೆದಿದೆ ಎನ್ನಲಾಗಿದೆ. ಈ ನಡುವೆ ಇಂದಿನ ಸಭೆಯಲ್ಲಿ ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರಕ್ಕೆ ಸಿದ್ದರಾಮಯ್ಯ ಅವರ ಮನವೊಲಿಸುವ ಕೆಲಸ ಮಾಡ್ತಾರಾ..? ಅನ್ನೋ ಕುತೂಹಲ ಹೆಚ್ಚಾಗಿದೆ.


