ಒಳ ಮೀಸಲಾತಿ ಜಾರಿ ವಿಚಾರವಾಗಿ ನಿನ್ನೆ ರಾತ್ರಿ ಗೃಹ ಸಚಿವರ ನಿವಾಸದಲ್ಲಿ ದಲಿತ ಸಚಿವರ ಸಭೆ ನಡೀತು. ಗೃಹ ಸಚಿವ ಡಾ.ಜಿ.ಪರಮೇಶ್ವರ್, ಹೆಚ್.ಸಿ ಮಹದೇವಪ್ಪ, R.B ತಿಮ್ಮಾಪುರ್, ಶಿವರಾಜ್ ತಂಗಡಗಿ, ರುದ್ರಪ್ಪ ಲಮಾಣಿ ಸೇರಿದಂತೆ ದಲಿತ ಸಮುದಾಯದ ನಾಯಕರು ಭಾಗಿಯಾಗಿದ್ದರು. ಇಂದು ನಡೆಯುವ ವಿಶೇಷ ಸಚಿವ ಸಂಪುಟ ಸಭೆಗೂ ಮುನ್ನ ದಲಿತ ಸಮುದಾಯದ ನಾಯಕರು ಒಮ್ಮತದ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವೇ ಅನ್ನೋ ಬಗ್ಗೆ ಮಹತ್ವದ ಚರ್ಚೆ ಮಾಡಲಾಯ್ತು. ಆದರೆ ಒಳ ಮೀಸಲಾತಿ ಕುರಿತು ನಡೆಸಿದ ಚರ್ಚೆ ಅಪೂರ್ಣ ಆಯ್ತು. ದಲಿತ ಸಚಿವರು ಇಂದಿನ ಸಭೆಗೆ ಬಿಡಲು ನಿರ್ಧಾರ ಮಾಡಿದ್ರು.
ಗೃಹ ಸಚಿವರ ನಿವಾಸದಲ್ಲಿ ನಡೆದ ಸಚಿವರ ಸಭೆ ಅಪೂರ್ಣ ಆಗುವ ಮೂಲಕ ಸಮಸ್ಯೆ ಮತ್ತಷ್ಟು ಜಟಿಲ ಆಗುವತ್ತ ಸಾಗಿದೆ. ಮೀಸಲಾತಿ ಮರು ಹಂಚಿಕೆ ಸೂತ್ರ ಸಿದ್ದಪಡಿಸಿರುವ ನಾಯಕರು, ಇಂದು ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸಲು ಸಮಯಾವಕಾಶಕ್ಕೆ ಮನವಿ ಮಾಡಿದ್ದಾರೆ. ಸಿಎಂ ಜೊತೆ ಚರ್ಚಿಸಿದ ಬಳಿಕ ಮರು ಹಂಚಿಕೆ ಬಗ್ಗೆ ನಿರ್ಧಾರ ಮಾಡಲು ತೀರ್ಮಾನ ಮಾಡಲಾಗಿದೆ. ಮೀಸಲಾತಿ ಪ್ರಮಾಣ ಮರು ಹಂಚಿಕೆಗೆ ಒಮ್ಮತದ ಬಗ್ಗೆ ಚರ್ಚೆ ಮಾಡಲಾಗಿದೆ. ಆದರೆ ಸಚಿವರಲ್ಲಿ ಒಮ್ಮತ ಮೂಡದಿದ್ದರೆ ಸಂಪುಟ ಉಪ ಸಮಿತಿ ರಚನೆಗೂ ತೀರ್ಮಾನ ಮಾಡಲಾಗಿದೆ.
ಒಳ ಮೀಸಲಾತಿ ವಿಚಾರವಾಗಿ ಗೃಹ ಸಚಿವರ ನಿವಾಸದಲ್ಲಿ ದಲಿತ ಸಚಿವರ ಸಭೆ ಬಳಿಕ ರುದ್ರಪ್ಪ ಲಮಾಣಿ, ಗೃಹ ಸಚಿವರ ಮನೆಯಲ್ಲಿ ಸಭೆ ಸೇರಿದ್ದೆವು. ಸಾಧಕ ಬಾಧಕಗಳನ್ನ ಚರ್ಚೆ ಮಾಡಲಾಗಿದೆ. ಆದರೆ ಇನ್ನು ಅಂತಿಮವಾಗಿಲ್ಲ. ಸಿಎಂ ಸಿದ್ದರಾಮಯ್ಯ ಜೊತೆಗೆ ಸಭೆ ಮಾಡಲಾಗುತ್ತದೆ. ವಿಶೇಷ ಸಂಪುಟ ಸಭೆಯಲ್ಲಿ ಚರ್ಚೆ ಮಾಡಲಾಗುತ್ತದೆ. ಕ್ಯಾಬಿನೆಟ್ ಹೋಗುವ ಪೂರ್ವದಲ್ಲಿ ಸಭೆ ಮಾಡಿ ನಂತರ ತೀರ್ಮಾನ ಮಾಡಲಾಗುತ್ತದೆ ಎಂದಿದ್ದಾರೆ.

ಸಚಿವ ಆರ್ ಬಿ ತಿಮ್ಮಾಪುರ ಮಾತನಾಡಿ, ಸಭೆ ಮಾಡಿದ್ದೇವೆ ಅಷ್ಟೇ. ಯಾವುದೇ ತೀರ್ಮಾನ ಮಾಡಿಲ್ಲ. ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಚರ್ಚೆ ಮಾಡಬೇಕೆಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಂಡಿದ್ದೇವೆ. ಸಚಿವ ಸಂಪುಟ ಸಭೆಗೂ ಮುನ್ನ ಸಿಎಂ ಸಿದ್ದರಾಮಯ್ಯ ಜೊತೆಗೆ ಮಾತುಕತೆ ಮಾಡಿ ಅಂತಿಮ ತೀರ್ಮಾನ ಮಾಡ್ತೇವೆ ಎಂದಿದ್ದಾರೆ. ಸಿಎಂ ಜೊತೆ ಸಭೆ ನಂತರ ಕ್ಯಾಬಿನಟ್ನಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ. ಸಚಿವ ಕೆ ಹೆಚ್ ಮುನಿಯಪ್ಪ ಮಾತನಾಡಿ ಸದ್ಯಕ್ಕೇನೂ ಆಗಿಲ್ಲ. ಅಂತಿಮ ತೀರ್ಮಾನ ಸಿಎಂ ಸಿದ್ದರಾಮಯ್ಯ ಮಾಡ್ತಾರೆ ಎಂದಿದ್ದಾರೆ.
ಒಟ್ಟಾರೆ ಜಾತಿ ಜನಗಣತಿ ರೀತಿಯಲ್ಲೇ ಒಳಮೀಸಲಾತಿ ಹಳ್ಳ ಹಿಡಿಯುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಒಕ್ಕಲಿಗ ಹಾಗು ಲಿಂಗಾಯತ ಸಮುದಾಯಗಳ ವಿರೋಧದ ಬಳಿಕ ಜಾತಿ ಜನಗಣತಿಯನ್ನು ಸಿದ್ದರಾಮಯ್ಯ ಸರ್ಕಾರ ಹಳ್ಳ ಹಿಡಿಸಿತ್ತು. 160 ಕೋಟಿಗೂ ಹೆಚ್ಚು ಹಣ ಖರ್ಚು ಮಾಡಿದ್ದೇವೆ. ಜಾತಿ ಜನಗಣತಿಯನ್ನು ಜಾರಿ ಮಾಡಿಯೇ ಮಾಡುತ್ತೇನೆ ಎಂದಿದ್ದ ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ ಹೈಕಮಾಂಡ್ ಸೂಚನೆ ಬರುತ್ತಿದ್ದ ಹಾಗೆ ಮೆತ್ತಗಾಗಿದ್ದರು. ಇದೀಗ ಒಳ ಮೀಸಲಾತಿ ವಿಚಾರವೂ ಕಾಂಗ್ರೆಸ್ಗೆ ಕಗ್ಗಂಟಾಗಿದ್ದು, ಹೇಗೆ ಬಗೆ ಹರಿಸಲಾಗುತ್ತದೆ ಅನ್ನೋ ಕುತೂಹಲ ಹೆಚ್ಚಾಗಿದ್ದು, ಇಂದಿನ ಕ್ಯಾಬಿನೆಟ್ ಮೇಲೆ ಜನರು ಕಣ್ಣಿಟ್ಟಿದ್ದಾರೆ.


