ಕರ್ನಾಟಕ ಸರ್ಕಾರದ ವತಿಯಿಂದ ಯುವ ಪತ್ರಕರ್ತರಿಗೆ ಕನ್ನಡ ಸಾಹಿತ್ಯಾಭಿರುಚಿ ಶಿಬಿರ ಆಯೋಜನೆ ಮಾಡಲಾಗಿತ್ತು. ಕನ್ನಡ ಸಾಹಿತ್ಯ ಅಕಾಡೆಮಿ ಆಯೋಜನೆ ಮಾಡಿರುವ ಮೂರು ದಿನಗಳ ಸಾಹಿತ್ಯ ಶಿಬಿರವನ್ನು ಶುಕ್ರವಾರ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಉದ್ಘಾಟನೆ ಮಾಡಿದ್ರು. ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್ ಮುಕುಂದರಾಜ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಟಿ ಕುಮಾರಸ್ವಾಮಿ, ಶಿಬಿರದ ನಿರ್ದೇಶಕ ಅಬ್ದುಲ್ ರೆಹಮಾನ್ ಪಾಷ, ಚಿತ್ರದುರ್ಗ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಉಪಸ್ಥಿತರಿದ್ದರು. ಸಹ ನಿರ್ದೇಶಕರಾಗಿ ಮಮತಾ ಅರಸೀಕೆರೆ, ನಾಕಿಕೆರೆ ತಿಪ್ಪೇಸ್ವಾಮಿ, ರಿಜಿಸ್ಟ್ರಾರ್ ಕರಿಯಪ್ಪ, ಸದಸ್ಯ ಸಂಚಾಲಕಿ ಡಾ ಪಿ ಚಂದ್ರಿಕಾ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ರು.

3 ದಿನಗಳ ಸಾಹಿತ್ಯ ಶಿಬಿರ ಉದ್ಘಾಟನೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಪತ್ರಕರ್ತರಾದವರು ಸಾಹಿತ್ಯವನ್ನು ಓದಿಕೊಳ್ಳಬೇಕು. ಲಂಕೇಶ್, ಖುಷ್ವಂತ್ ಸಿಂಗ್, ವಿನೋದ್ ಮೆಹ್ತಾ, ರಾಜ್ದೀಪ್ ಸರ್ ದೇಸಾಯಿ ಸೇರಿದಂತೆ ಖ್ಯಾತನಾಮ ಪತ್ರಕರ್ತರು ಯಾರೊಬ್ಬರೂ ಪತ್ರಿಕೋದ್ಯಮ ಓದಿಕೊಂಡು ಪತ್ರಕರ್ತರು ಆಗಲಿಲ್ಲ. ಎಲ್ಲರೂ ಬರವಣಿಗೆಯನ್ನು ಪ್ಯಾಷನ್ ಮಾಡಿಕೊಂಡಿದ್ದರು. ಹಣ ಮಾಡುವುದಕ್ಕೆ ಪತ್ರಿಕೋದ್ಯಮಕ್ಕೆ ಬಂದವರಲ್ಲ. ಸಾಹಿತ್ಯದ ಮೇಲೆ ಪ್ರೀತಿಯಿಂದ ಸಮಾಜಕ್ಕೆ ತನ್ನದೇ ಆದ ಕೊಡುಗೆ ಕೊಡಲು ಬಂದವರು. ಆದರೆ ಇತ್ತೀಚಿನ ದಿನಗಳಲ್ಲಿ ಪತ್ರಿಕೋದ್ಯಮ ಡಿಗ್ರಿ ಪಡೆದವರು ಪತ್ರಕರ್ತರಾಗಬೇಕಿದೆ. ಹೀಗಾಗಿ ಪತ್ರಿಕೋದ್ಯಮವೇ ಸೊರಗುತ್ತಿದೆ ಎನಿಸುತ್ತಿದೆ. ಯಾವಾಗಲೂ ಜನರಿಗೆ ಕಥೆ ಹೇಳಿದಂತೆ ಹೇಳಿಕೊಂಡು ಹೋಗಬೇಕು. ಜನಸಾಮಾನ್ಯರಿಗೆ ಅರ್ಥ ಆಗುವಂತೆ ಇರಬೇಕು. ಸರಳವಾಗಿ ಬರೆಯುವುದನ್ನು ಕಲಿಯಬೇಕು ಅಂತಾ ತಿಳಿಸಿದ್ರು. ಲಂಕೇಶ್, ಕಾರಂತ, ಕುವೆಂಪು ಪುಸ್ತಕಗಳನ್ನು ಓದಿ ಎಂದು ಸಲಹೆ ನೀಡಿದ್ರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಲ್.ಎನ್ ಮುಕುಂದ್ ರಾಜ್ ಮಾತನಾಡಿ, ಕನ್ನಡ ಸಾಹಿತ್ಯದ ಬಗ್ಗೆ ಶಿಕ್ಷಕರು ಸರಿಯಾಗಿ ಪಾಠ ಮಾಡಿದ್ದರೆ ಎಲ್ಲವೂ ಸರಿಯಿರುತ್ತಿತ್ತು. ಆದರೆ ನಾವು ಮಾಸ್ಟರ್ ಕೆಲಸ ಮಾಡಿದವರು, ಪರೀಕ್ಷೆಗೆ ಬೇಕಾದಷ್ಟು ಮಾತ್ರ ಹೇಳಿಕೊಟ್ಟು ತಪ್ಪು ಮಾಡಿದ್ದೇವೆ. ನಾವು ಕನ್ನಡದ ಜ್ಞಾನ ಪರಂಪರೆಯನ್ನು ಸರಿಯಾಗಿ ಹೇಳಿಕೊಟ್ಟಿದ್ದರೆ ಸಮಾಜ ದಿಕ್ಕು ತಪ್ಪುತ್ತಿರಲಿಲ್ಲ ಎನ್ನುವ ಮೂಲಕ ಶಿಕ್ಷಕರಾದವರು ಮಾಡುತ್ತಿರುವ ತಪ್ಪಿನ ಬಗ್ಗೆ ಹೇಳಿದರು. ಪಂಪ ಹೇಳ್ತಾನೆ ಬೇರೆಯವರು ಏನು ಕೊಡ್ತಾರೆ..? ಬೇರೆಯವರು ಏನ್ ಮಾಡ್ತಾರೆ..? ಬೇರೆಯವರಿಂದ ಆಗಬೇಕಿರುವುದು ಏನು..? ಎಂದು ಹೇಳಿದ್ದಾನೆ. ಪಂಪ ಸಾವಿರ ವರ್ಷದ ಹಿಂದೆಯೇ ಇಂತಹ ಮೌಲ್ಯಯುತ ಮಾತನ್ನು ಹೇಳಿದ್ದಾನೆ ಅಂದ್ರೆ ಕನ್ನಡ ಸಾಹಿತ್ಯದ ಶ್ರೀಮಂತಿಕೆಯನ್ನು ನಾವು ಅರ್ಥ ಮಾಡಿಕೊಳ್ಬೇಕು ಅಂದ್ರು.

ರಾಜ ಭರತ ಇಡೀ ಜಗತ್ತನ್ನು ಗೆದ್ದುಕೊಂಡು ಬಂದ ಬಳಿ ಬಳಿಕ ಹೋಗುವ ದಾರಿಯಲ್ಲಿ ಒಂದು ಬೆಟ್ಟ ಸಿಗುತ್ತೆ. ಈ ಬೆಟ್ಟದ ವಿಶೇಷ ಏನು ಅಂತಾ ಮಂತ್ರಿಗಳನ್ನು ಕೇಳ್ತಾನೆ. ಇಡೀ ಜಗತ್ತನ್ನು ಗೆದ್ದವರು ಇಲ್ಲಿ ಹೆಸರು ಬರೆಸ್ತಾರೆ ಸ್ವಾಮಿ ಅಂದಾಗ, ನಾನೂ ಜಗತ್ತನ್ನು ಗೆದ್ದಿದ್ದೇನೆ. ನನ್ನ ಹೆಸರನ್ನು ಬರೆದು ಬನ್ನಿ ಅಂತಾ ಆಜ್ಞೆ ಮಾಡ್ತಾನೆ. ವೃಷುಭಾಚಲ ಬೆಟ್ಟದಲ್ಲಿ ಹೆಸರು ಬರೆಸಲು ಹೋದ್ರೆ ಅಲ್ಲಿ ಹೆಸರು ಬರೆಯೋಕೆ ಜಾಗವೇ ಇರಲಿಲ್ಲ. ಅಷ್ಟು ಹೊತ್ತಿಗೆ ಆಗಲೆ ಅಷ್ಟೊಂದು ಜನ ಜಗತ್ತನ್ನು ಗೆದ್ದು ಹೆಸರು ಬರೆಸಿಕೊಂಡಿದ್ದರು. ಆದರೆ ಒಬ್ಬರ ಹೆಸರನ್ನು ಅಳಿಸಿ ನನ್ನ ಹೆಸರನ್ನು ಬರೆಯಿರಿ ಎಂದು ರಾಜ ಆದೇಶ ಮಾಡಿದ್ದ. ಇದನ್ನು ಪಂಪಾ ಹೀಗೆ ಹೇಳ್ತಾನೆ. ಇವತ್ತು ಇವನು ಒಬ್ಬನ ಹೆಸರು ಅಳಿಸಿದ್ರೆ, ಇನ್ನೊಬ್ಬ ಇವನ ಹೆಸರನ್ನು ಅಳಿಸ್ತಾನೆ ಅನ್ನೋ ಕನಿಷ್ಟ ಜ್ಞಾನವೂ ಇಲ್ಲವಲ್ಲ ಎಂದಿದ್ದಾನೆ.

ಜಗತ್ತಿನಲ್ಲಿ ಯಾವುದೇ ಸರ್ವಾಧಿಕಾರಿ ಇಡೀ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಮೊದಲು ಮಾಧ್ಯಮಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ತಾನೆ. ಹಿಟ್ಲರ್, ಮುಸಲೋನಿ ಸೇರಿದಂತೆ ಜಗತ್ತಿನ ಯಾವುದೇ ಸರ್ವಾಧಿಕಾರಿಯೂ ಇದೇ ರೀತಿ ಮಾಡಿಕೊಂಡು ಬಂದಿದ್ದಾನೆ. ನಮ್ಮ ದೇಶದಲ್ಲೂ 11 ವರ್ಷದ ಹಿಂದೆ ಇದೇ ರೀತಿ ಘಟನೆ ನಡೆದಿದೆ. ಮಾಧ್ಯಮದವರನ್ನು ಬೆದರಿಸಿದ್ರೋ..? ಹೆದರಿಸಿದ್ರೋ ಗೊತ್ತಿಲ್ಲ. ನಮ್ಮ ಕಾಲಘಟ್ಟದಲ್ಲೇ ನಡೆದಿರುವ ಘಟನೆ ಇದು. ಮಾಧ್ಯಮಗಳ ಪಾತ್ರ ಬಹುಮುಖ್ಯವಾಗಿ ಇರುತ್ತದೆ. ಮಾಧ್ಯಮವನ್ನು ನೋಡಿದ ಜನರು ನಂಬಿ ಬಿಡ್ತಾರೆ. ಆ ಜನರ ನಂಬಿಕೆಯನ್ನು ಬದಲಾಯಿಸಿ ಸ್ವಾರ್ಥ ಸಾಧನೆ ಅವಿವೇಕತನ ಅಂತಾ ಖಂಡಿಸಿದ್ರು. ಮಧ್ಯಾಹ್ನದ ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ಗೋಷ್ಟಿಗಳನ್ನು ಆಯೋಜನೆ ಮಾಡಲಾಗಿತ್ತು.



