ರಾಜ್ಯದಲ್ಲಿ ಧರ್ಮಸ್ಥಳ ರಹಸ್ಯದ ಬಗ್ಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಲೇ ಇದೆ. ಮಾಸ್ಕ್ ಮ್ಯಾನ್ ಆಗಿದ್ದ ಚಿನ್ನಯ್ಯನನ್ನು ಬಂಧಿಸಿದ ಬಳಿಕ SIT ಟೀಂ ತನಿಖೆಯ ದಿಕ್ಕನ್ನು ಹಲವು ಆಯಾಮಗಳಿಗೆ ತಿರುಗಿಸಿದೆ. ಉಜಿರೆಯಲ್ಲಿ SIT ಟೀಂ ಹೋರಾಟಗಾರ ಮಹೇಶ್ ತಿಮರೋಡಿ ನಿವಾಸದ ಮೇಲೆ ದಾಳಿ ಮಾಡಿದ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ಆಗಮಿಸಿದ ಡಿಜಿ ಐಜಿಪಿ ಸಲೀಂ, ಮಹೇಶ್ ತಿಮರೋಡಿ ಮನೆ ಮೇಲೆ SIT ದಾಳಿ ವಿಚಾರವಾಗಿ ಗೃಹ ಸಚಿವರಿಗೆ ಮಾಹಿತಿ ನೀಡಿ ತೆರಳಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಗೃಹ ಸಚಿವರೊಂದಿಗೆ ಮಾತುಕತೆ ನಡೆಸಿದ ಡಿಜಿ ಐಜಿಪಿ ಸಲೀಂ, SIT ತನಿಖೆ ಬಗ್ಗೆ ಗೃಹಸಚಿವರಿಗೆ ಮಾಹಿತಿ ನೀಡಿದ್ದಾರೆ. ಜೊತೆಗೆ ಸರ್ಕಾರದಿಂದಲೂ ಕೆಲವೊಂದಿಷ್ಟು ಸಲಹೆಗಳನ್ನು ಪಡೆದುಕೊಂಡು ವಾಪಸ್ ಆಗಿದ್ದಾರೆ ಎನ್ನಲಾಗ್ತಿದೆ.
SIT ಗೆ ನಾವು ಯಾವುದೇ ಡೈರೆಕ್ಷನ್ ಕೊಡಲ್ಲ..!
ಧರ್ಮಸ್ಥಳ ಪ್ರಕರಣ ತನಿಖೆ ವಿಚಾರ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ಬಹಳ ಗಂಭೀರವಾಗಿ ತನಿಖೆ ನಡೆಯುತ್ತಿದೆ. ಕೋಟ್ಯಂತರ ಭಕ್ತರು ಧರ್ಮಸ್ಥಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸತ್ಯಾಸತ್ಯತೆ ಹೊರಗೆ ಬರಬೇಕು ಎಂಬುದು ಇದೆ. ಹೀಗಾಗಿ ಎಸ್ಐಟಿ ಅವರ ಮೇಲೆ ಜವಾಬ್ದಾರಿ ಇದೆ. ಚಿನ್ನಯ್ಯನ ಬಂಧನ ಆದ ಮೇಲೆ ಅದರ ಫಾಲೋಅಪ್ ಕೂಡ ಆಗ್ತಿದೆ. ಆದಷ್ಟು ಬೇಗ ತನಿಖೆ ನಡೆದು ಸತ್ಯಾಸತ್ಯತೆ ಹೊರಗೆ ಬರಲಿದೆ. ತನಿಖೆ ಬೇಗ ಮುಗಿಸಬೇಕು ಅಂತ ಎಸ್ಐಟಿ ಅವರೂ ಪ್ರಯತ್ನ ಮಾಡುತ್ತಿದ್ದಾರೆ ಎಂದಿದ್ದಾರೆ. ಇನ್ನು ತಿಮರೋಡಿ ಮನೆ ಮೇಲೆ ಎಸ್ಐಟಿ ರೇಡ್ ವಿಚಾರವಾಗಿ ಮಾತನಾಡಿ, ಸರ್ಕಾರ ಎಸ್ಐಟಿಗೆ ಯಾವುದೇ ನಿರ್ದೇಶನ ಕೊಡಲ್ಲ. ನಾವು ಆದೇಶದಲ್ಲಿ ಟರ್ಮ್ಸ್ ಆಫ್ ರೆಫರೆನ್ಸ್ ಕೊಟ್ಟಿದ್ದೇವೆ ಅಷ್ಟೆ ಎಂದಿದ್ದಾರೆ.

SIT ರಚನೆಯೇ ಸತ್ಯವನ್ನು ಶೋಧಿಸಲು..!
ಎಸ್ಐಟಿ ಅವರದೇ ಆಯಾಮದಲ್ಲಿ ತನಿಖೆ ಮಾಡುತ್ತಿದ್ದಾರೆ. ಅವರು ಯಾರನ್ನು ವಿಚಾರಣೆ ಕರೆಯುತ್ತಾರೆ ಯಾರ ಮೇಲೆ ರೇಡ್ ಮಾಡ್ತಾರೆ ಅದನ್ನೆಲ್ಲ ನಮಗೆ ಹೇಳಿ ಕೇಳಿ ಮಾಡೋದಿಲ್ಲ. ಅವರು ತನಿಖೆಯ ಆಧಾರದ ಮೇಲೆ ಮಾಹಿತಿ ಆಧಾರದ ಮೇಲೆ ಮಾಡುತ್ತಾರೆ ಎಂದಿರುವ ಪರಮೇಶ್ವರ್, ಸರ್ಕಾರ ಕ್ಷಮೆ ಕೇಳಬೇಕು ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ. ಎನ್ಐಎಗೆ ಕೊಡಬೇಕಾದ ಅವಶ್ಯಕತೆ ಇಲ್ಲ. ನಮ್ಮ ಎಸ್ಐಟಿ ಸಮರ್ಪಕವಾಗಿ ತನಿಖೆ ಮಾಡುತ್ತಿದ್ದಾರೆ. ಅದರಲ್ಲಿ ಲೋಪ ಇದೆ ಅಂತ ಕಂಡು ಬಂದ್ರೆ ಅದು ಬೇರೆ ವಿಚಾರ. ಅವರು ತನಿಖೆ ಮಾಡಿ ವರದಿ ಕೊಡುವ ಮುನ್ನ ತನಿಖೆ ಸರಿ ಇಲ್ಲ ಅಂತ ಹೇಗೆ ಹೇಳೋದು. ಮಾತನಾಡುವಾಗ ಏನಾದರೂ ಮಾನದಂಡ ಇರಬೇಕು. ಸದ್ಯದ ಪರಿಸ್ಥಿತಿಯಲ್ಲಿ ಎನ್ಐಎಗೆ ಕೊಡುವ ಅಗತ್ಯತೆ ಇಲ್ಲ. ವರದಿ ಬಂದ ನಂತರ ಪರ ವಿರೋಧ ಚರ್ಚೆ ಆಗುತ್ತದೆ. ಆ ನಂತರ ಸರ್ಕಾರದ ಹಂತದಲ್ಲಿ ಏನು ತೀರ್ಮಾನ ಮಾಡಬೇಕು ಮಾಡುತ್ತೇವೆ. ಯಾವ ಆಧಾರದ ಮೇಲೆ ಸರ್ಕಾರವನ್ನು ತಪ್ಪಿತಸ್ಥರು ಅಂತ ಹೇಳ್ತಾರೆ..? ಎಲ್ಲಾ ರೀತಿಯ ಕ್ರಮವನ್ನು ನಾವು ತೆಗೆದುಕೊಂಡಿದ್ದೇವೆ. ಎಸ್ಐಟಿ ಮಾಡಿದ್ದೇ ಷಡ್ಯಂತ್ರ ಎಂದರೆ ವಿಪರ್ಯಾಸ ಅಂತ ಹೇಳಬೇಕಾಗುತ್ತದೆ ಅಷ್ಟೆ ಎಂದಿದ್ದಾರೆ.

ಮಂಜುನಾಥನ ದರ್ಶನವನ್ನು ಬಿಜೆಪಿ ಕೇಳಿ ಮಾಡ್ಬೇಕಾ..?
ಎಸ್ಐಟಿ ಉತ್ಖನನ ಮಾಡಿದ್ದ ಎಫ್ಎಸ್ಎಲ್ ವರದಿ ಯಾವಾಗ ಬರಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್, ನಾವು ಬೇಗ ಬೇಗ ಮಾಡಲು ಹೇಳಿದ್ದೇವೆ. ಒಂದು ಕೆಮಿಕಲ್ ಅನಾಲಿಸಿಸ್ ಮಾಡೋದಕ್ಕೆ ಅನೇಕ ವಿಧಾನ ಬಳಕೆ ಮಾಡ್ತಾರೆ. ಶಾರ್ಟ್ ಕಟ್ನಲ್ಲಿ ಮಾಡಿ ಅಂತ ಹೇಳುವುದಕ್ಕೆ ಆಗಲ್ಲ. ಆದಷ್ಟು ಬೇಗ ವರದಿ ಕೊಡಿ ಅಂತ ಹೇಳಿದ್ದೇವೆ ಎಂದಿದ್ದಾರೆ. ಸರ್ಕಾರದ ಉದ್ದೇಶ ಇರೋದು ಸತ್ಯವನ್ನು ಹೊರಗೆ ತರಬೇಕು ಅನ್ನೋದು ಮಾತ್ರ. ಎಸ್ಐಟಿ ಮಾಡಿರುವುದೇ ಅದರ ಉದ್ದೇಶಕ್ಕೆ. ಎಸ್ಐಟಿ ಮಾಡಿರೋದು ನಾವು ಇಡೀ ರಾಜ್ಯಕ್ಕೆ ಜನಕ್ಕೆ ಸತ್ಯ ತಿಳಿಸಬೇಕು ಎನ್ನುವ ಕಾರಣಕ್ಕೆ. ಧರ್ಮಸ್ಥಳದ ಪರ ವಿರೋಧ ಪ್ರಶ್ನೆ ಬರಲ್ಲ ನಾವು ಸತ್ಯವನ್ನು ಹೊರಗೆ ತಂದು ಬಿಡುತ್ತೇವೆ. ಅಷ್ಟು ಮಾತ್ರ ನಮ್ಮ ಕೆಲಸ ಎಂದಿರುವ ಹೋಂ ಮಿನಿಸ್ಟರ್, ಕಾಂಗ್ರೆಸ್ ನಾಯಕರು ಧರ್ಮಸ್ಥಳಕ್ಕೆ ಹೋಗಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಮಗೆ ಅನಿಸಿದಾಗ ಹೋಗ್ತೇವೆ, ಮಂಜುನಾಥನ ದರ್ಶನ ಮಾಡೋಕ್ಕೆ ಬಿಜೆಪಿಗರ ಅಪ್ಪಣೆ ಕೇಳಬೇಕಾ..? ನನ್ನ ಹೆಸರು ಪರಮೇಶ್ವರ ಅಂತ ಇಟ್ಟಿದ್ದಾರೆ ಮಂಜುನಾಥ ಅಂದ್ರೆ ಯಾರು ಎರಡು ಒಂದೇ ಅಲ್ವಾ ಎಂದಿದ್ದಾರೆ.


