ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಆಯ್ಕೆಯನ್ನು ಅಸಿಂಧು ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದ್ದು, ಮರು ಮತ ಎಣಿಕೆಗೆ ಒಂದು ತಿಂಗಳ ಕಾಲಾವಕಾಶ ನೀಡಿ ಆದೇಶ ಮಾಡಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 248 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ ನಂಜೇಗೌಡ ಗೆಲುವು ಸಾಧಿಸಿದ್ದರು. ಆದರೆ, ಮತ ಎಣಿಕೆಯಲ್ಲಿ ಲೋಪ ನಡೆದಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಆರೋಪ ಮಾಡಿ ಹೈಕೋರ್ಟ್ ಮೆಟ್ಟಿಲೇರಿದ್ದರು. ನಂಜೇಗೌಡರ ಆಯ್ಕೆಯನ್ನು ಅಸಿಂಧು ಮಾಡಬೇಕು ಎಂದು ಹೈಕೋರ್ಟ್ನಲ್ಲಿ ಕೇಳಿಕೊಂಡಿದ್ದರು. ಇದೀಗ ಮಂಜುನಾಥ್ ಗೌಡರ ಮನವಿಯನ್ನು ಮಾನ್ಯ ಮಾಡಿದೆ.

ನಾಲ್ಕು ವಾರಗಳ ಒಳಗೆ ಮರು ಮತ ಎಣಿಕೆ ನಡೆಸಿ, ಹೊಸ ಮಾಲೂರು ವಿಧಾನಸಭಾ ಕ್ಷೇತ್ರದ ಫಲಿತಾಂಶ ಪ್ರಕಟಿಸಬೇಕು ಎಂದು ಹೈಕೋರ್ಟ್ ಆದೇಶ ಮಾಡಿದೆ. ಇದೇ ವೇಳೆ ಕೆ.ವೈ ನಂಜೇಗೌಡರಿಗೆ ಸುಪ್ರೀಂಕೋರ್ಟ್ಗೆ ಹೋಗುವುದಕ್ಕೂ ಕೋರ್ಟ್ ಅವಕಾಶ ನೀಡಿದ್ದು, 1 ತಿಂಗಳ ಕಾಲಾವಕಾಶ ಕೊಡಲಾಗಿದೆ. 2023ರ ಮತ ಎಣಿಕೆಯ ವೇಳೆ ರೆಕಾರ್ಡ್ ಮಾಡಿದ್ದ ವಿಡಿಯೋ ಕೇಳಿದರೂ ಕೋರ್ಟ್ಗೆ ಸಲ್ಲಿಸದ ಅಂದಿನ ಜಿಲ್ಲಾಧಿಕಾರಿಗಳ ವಿರುದ್ಧವೂ ಕ್ರಮಕ್ಕೆ ಹೈಕೋರ್ಟ್ ಸೂಚನೆ ನೀಡಿ ಆದೇಶ ಮಾಡಿದೆ. ಕಳೆದ ಎರಡು ವರ್ಷಗಳಿಂದ ಸುದೀರ್ಘ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ಆರ್. ದೇವದಾಸ್ ಪೀಠ ಮಹತ್ವದ ತೀರ್ಪು ನೀಡಿದೆ.

ಪರಾಜಿತ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಮಾತನಾಡಿ, ಮಾಲೂರು ಕ್ಷೇತ್ರದ ಮತ ಎಣಿಕೆಯಲ್ಲಿ ಭಾರೀ ಅವ್ಯವಹಾರ ನಡೆದಿದೆ. ಹೀಗಾಗಿ ಮರು ಎಣಿಕೆಗೆ ಮನವಿ ಮಾಡಿದ್ದೆ.. ಇದೀಗ ಮರು ಮತ ಎಣಿಕೆಯಲ್ಲಿ ನಾನು 300ಕ್ಕೂ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ ಎಂದಿದ್ದಾರೆ. ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ. ಕೆ ಸುಧಾಕರ್ ಮಾತನಾಡಿ, ಹೈಕೋರ್ಟ್ ತೀರ್ಪು ಸ್ವಾಗತಾರ್ಹ. ನಿಜವಾದ ಶಾಸಕ ಯಾರು..? ಎಂಬುದು ಮರು ಎಣಿಕೆಯ ಬಳಿಕ ಸ್ಪಷ್ಟವಾಗುತ್ತದೆ. ಮರು ಎಣಿಕೆಯಲ್ಲಿ ನಿಜವಾದ ಶಾಸಕ ಯಾರು ಎಂಬ ಸತ್ಯ ಹೊರಬರುತ್ತದೆಯೇ ಎಂದು ಮಾಲೂರಿನ ಜನತೆ ಎದುರು ನೋಡುತ್ತಿದ್ದಾರೆ ಎಂದಿದ್ದಾರೆ.

ಮಾಲೂರು ವಿಧಾನಸಭೆ ಫಲಿತಾಂಶ ರದ್ದು ಮಾಡಿ, ಮರು ಎಣಿಕೆಗೆ ಹೈಕೋರ್ಟ್ ಆದೇಶ ಮಾಡಿರುವ ವಿಚಾರವಾಗಿ ಕೆ.ವೈ ನಂಜೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಶಾಸಕ ಸ್ಥಾನ ಆಯ್ಕೆ ಅಸಿಂಧು ಆದೇಶಕ್ಕೆ ಈಗಾಗಲೇ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ರೀ ಕೌಟಿಂಗ್ ಆದೇಶದ ವಿರುದ್ಧ ಮೇಲ್ಮನವಿ ಹೋಗದಿರಲು ಈ ಹಿಂದೆ ನಿರ್ಧಾರ ಮಾಡಿದ್ದೆ. ಆದರೆ ಇದೀಗ ಶಾಸಕರ ಆಯ್ಕೆಯೇ ಅಸಿಂಧು ಎಂಬ ತೀರ್ಪು ಬಂದಿರುವ ಹಿನ್ನಲೆಯಲ್ಲಿ ಮೇಲ್ಮನವಿ ಹೋಗ್ತೇನೆ ಎಂದಿದ್ದಾರೆ. ಇನ್ನು ಹೈಕೋರ್ಟ್ ತೀರ್ಪಿನಿಂದ ಮುಖಂಡರು, ಬೆಂಬಲಿಗರು ಗಾಬರಿ ಆಗಬೇಕಿಲ್ಲ. ಸುಪ್ರೀಂಕೋರ್ಟ್ನಲ್ಲಿ ನಮಗೆ ಜಯವಾಗುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.


