ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರೋದಕ್ಕೆ ವಿರೋಧ ವ್ಯಕ್ತವಾಗ್ತಿರೋ ವಿಚಾರದ ಬಗ್ಗೆ ಕೇಂದ್ರ ಸಚಿವ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ಚಾಮುಂಡಿ ತಾಯಿಯ ಮೆರವಣಿಗೆಗೆ ಭಾನು ಮುಷ್ತಾಕ್ ಅವರಿಗೆ ಕೊಟ್ಟಿರುವ ಜವಾಬ್ದಾರಿಗೆ ನನ್ನ ತಕರಾರು ಇಲ್ಲ. ಆದ್ರೆ ಇದರಲ್ಲಿ ಉದ್ಧಟತನ ಬೇಡ. ಹಿಂದೂ ದೇಗುಲಗಳು, ಧಾರ್ಮಿಕ ಕೇಂದ್ರಗಳು ಹಿಂದೂಗಳ ಆಸ್ತಿಯಲ್ಲ ಅಂತಾರೆ. ಧಾರ್ಮಿಕ ಕ್ಷೇತ್ರಗಳಿಗೆ ಈ ರೀತಿ ಸಮಸ್ಯೆ ಉಂಟು ಮಾಡೋದು ಸರ್ಕಾರಕ್ಕೆ ಕುತ್ತು ತರುವಂಥಹ ವಿಚಾರ ಎಂದು ಪರೋಕ್ಷವಾಗಿ ಡಿ.ಕೆ ಶಿವಕುಮಾರ್ಗೆ ಕೌಂಟರ್ ಕೊಟ್ಟಿದ್ದಾರೆ.

ಬಾನು ಮುಷ್ತಾಕ್ ದಸರಾ ಉದ್ಘಾಟನೆ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಬಿ.ವೈ ವಿಜಯೇಂದ್ರ, ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಕರೆಯುತ್ತಾರೆ. ಆದರೆ ಬಾನು ಮುಷ್ತಾಕ್ ಜೊತೆ ದೀಪಾ ಬಸ್ತಿಗೂ ಕೂಡ ಬುಕರ್ ಪ್ರಶಸ್ತಿ ಸಿಕ್ಕಿದೆ. ಅವರನ್ನ ಯಾಕೆ ಉದ್ಘಾಟನೆಗೆ ಆಹ್ವಾನಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ದೀಪಾ ಬಸ್ತಿ ಅವರನ್ನೂ ಸರ್ಕಾರ ಉದ್ಘಾಟನೆಗೆ ಆಹ್ವಾನಿಸಲಿ ಅಂತ ಆಗ್ರಹಿಸಿದ್ದಾರೆ. ಇನ್ನು ವಿಧಾನಸಭಾ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಮಾತನಾಡಿ, ಇತಿಹಾಸವೇ ಗೊತ್ತಿಲ್ಲದ ಆಯಮ್ಮನನ್ನು ಕರೆದುಕೊಂಡು ಬಂದು ದಸರಾ ಉದ್ಘಾಟಿಸ್ತಾರಾ..? ಅಂತ ವ್ಯಂಗ್ಯವಾಡಿದ್ದಾರೆ.

ಬಾನು ಮುಷ್ತಾಕ್ ದಸರಾ ಉದ್ಘಾಟನೆಗೆ ಬಿಜೆಪಿ ವಿರೋಧದ ಕುರಿತು ಮಾತನಾಡಿದ ಸಚಿವ ಎಂಬಿ ಪಾಟೀಲ್, ಬಾನು ಮುಷ್ತಾಕ್ಗೆ ಬುಕರ್ ಪ್ರಶಸ್ತಿ ಸಿಕ್ಕಿದೆ. ವಿಜಯಪುರದಲ್ಲಿ ದರ್ಗಾಗೆ ನಮ್ಮನ್ನೂ ಕರೆಯುತ್ತಾರೆ. ಭ್ರಾತೃತ್ವ ಬಾಂಧವ್ಯ ಇರೋದಕ್ಕೆ ಕರೆಯುತ್ತಾರೆ. ಸಮಾಜದಲ್ಲಿ ಬಾಂಧವ್ಯ ಸಾಮರಸ್ಯ ಬೆಸೆಯಬೇಕು. ಬಿಜೆಪಿಯವ್ರು ಟ್ರಂಪ್ ಶೇಕಡ 50 ರಷ್ಟು ತೆರಿಗೆ ಏರಿಸಿದ್ದಾರಲ್ಲ ಅದರ ಬಗ್ಗೆ ಮಾತನಾಡಲಿ. ರಾಜ್ಯದ ತೆರಿಗೆ ಪಾಲು ಸರಿಯಾಗಿ ಸಿಕ್ತಿಲ್ಲ ಅದನ್ನ ಕೇಳಲಿ ಎಂದು ಕೌಂಟರ್ ಕೊಟ್ಟಿದ್ದಾರೆ.

ಈ ಬಗ್ಗೆ ಕೋಲಾರದಲ್ಲಿ ಮಾತನಾಡಿರುವ ಸಚಿವ ರಾಮಲಿಂಗಾರಡ್ಢಿ, ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನಾಡಹಬ್ಬ ದಸರಾ ರಾಜ್ಯದ 7 ಕೋಟಿ ಜನರಿಗೆ ಸೇರಿದ್ದು. 2017ರಲ್ಲಿ ನಿಸಾರ್ ಅಹಮದ್ ಉದ್ಘಾಟಿಸಿದಾಗ ಇಲ್ಲದ ಖ್ಯಾತೆ, ಈಗ್ಯಾಕೆ..? ಅಂತ ಪ್ರಶ್ನಿಸಿದ್ದಾರೆ.. ಇನ್ನು ಮಂಡ್ಯದಲ್ಲಿ ಸಚಿವ ಚಲುವರಾಯಸ್ವಾಮಿ ಮಾತನಾಡಿ, ಏನೂ ವಿಚಾರ ಇಲ್ಲದಿದ್ರೆ ತೀಟೆ ಮಾಡೋದು ವಿರೋಧ ಪಕ್ಷದ ಕೆಲಸ ಅಂತ ಬಿಜೆಪಿಗೆ ಚಾಟಿ ಬೀಸಿದ್ದಾರೆ.

ಬಾನು ಮುಷ್ತಾಕ್ ಆಯ್ಕೆಗೆ ಬಿಜೆಪಿ ವಿರೋಧ ವಿಚಾರವಾಗಿ ಮಾತನಾಡಿರುವ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ಬಿಜೆಪಿ ಅವರು ಸಮಾಜವನ್ನು ಒಗ್ಗೂಡಿಸಿದ ಒಂದೇ ಒಂದು ಉದಾಹರಣೆ ಇಲ್ಲ. ಯಾವುದಾದರೂ ವಿಷಯ ತೆಗೆದುಕೊಂಡು ಹಿಂದೂ, ಮುಸ್ಲಿಂ ಅಂತಾ ತಂದಿಡುವ ಕೆಲಸ ಮಾಡುತ್ತಾರೆ. ಬುಕರ್ ಪ್ರಶಸ್ತಿ ಗೆದ್ದು ಕನ್ನಡವನ್ನು ಕನ್ನಡಿಗರನ್ನು ಹೆಮ್ಮೆ ಪಡುವ ಸ್ಥಾನಕ್ಕೆ ಕೊಂಡೊಯ್ದ ಲೇಖಕಿ ಬಾನು ಮುಷ್ತಾಕ್ ಎಂದಿದ್ದಾರೆ. ಜೊತೆಗೆ, ಕನ್ನಡಿಗರು ಅಷ್ಟೇ ಅಲ್ಲ ಇಡೀ ಭಾರತ ದೇಶದ ಜನ ಅವರನ್ನು ಮೆಚ್ಚಿದರು. ಅಂಥಹವರು ದಸರಾ ಉದ್ಘಾಟನೆಗೆ ಅರ್ಹರಲ್ಲ ಅಂತ ಬಿಜೆಪಿ ಹೇಳ್ತಿದೆ ಎಂದು ಟೀಕಿಸಿದ್ದಾರೆ.


