KIAL ರಾಮೇಶ್ವರಂ ಕೆಫೆಯಲ್ಲಿ ಹುಳ ಸಿಕ್ಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ರಾಮೇಶ್ವರಂ ಕೆಫೆ ಮಾಲೀಕರು ಹಾಗೂ ಮ್ಯಾನೇಜರ್ ಮೇಲೆ FIR ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ರಾಮೇಶ್ವರಂ ಕೆಫೆ ಮಾಲೀಕರಾದ ದಿವ್ಯಾ, ರಾಘವೇಂದ್ರ ರಾವ್, ಮ್ಯಾನೇಜರ್ ಸುಮಂತ್ ಮೇಲೆ ಪ್ರಕರಣ ದಾಖಲಾಗಿದೆ. ಸುಳ್ಳು ದೂರು ನೀಡಿ ಮಾನ ಹಾನಿ ಮಾಡಿದ ಆರೋಪದ ಅಡಿ ಎಫ್ಐಆರ್ ದಾಖಲಾಗಿದೆ. ನಿಖಿಲ್ ಎಂಬ ಯುವಕ ನೀಡಿದ ದೂರಿನ ಮೇಲೆ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.
2025ರ ಜುಲೈ 24 ರಂದು ಗುವಾಹಟಿಗೆ ಪ್ರಯಾಣ ಬೆಳೆಸಿದ್ದ ನಿಖಿಲ್ ಹಾಗೂ ಸ್ನೇಹಿತರು, KIAL ರಾಮೇಶ್ವರಂ ಕೆಫೆಯಲ್ಲಿ ಪೊಂಗಲ್ ಮತ್ತು ಕಾಫಿ ಖರೀದಿಸಿದ್ದರು. ಆ ವೇಳೆ ಪೊಂಗಲ್ನಲ್ಲಿ ಹುಳ ಸಿಕ್ಕಿತ್ತು. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದ ನಿಖಿಲ್ ಹಾಗೂ ಸ್ನೇಹಿತರು ವಿಡಿಯೋ ಮಾಡಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಪೊಂಗಲ್ನಲ್ಲಿ ಹುಳ ಸಿಕ್ಕಿದೆ ಎಂದು ಆರೋಪಿಸಿದ್ದ ನಿಖಿಲ್ ಹಾಗೂ ಸ್ನೇಹಿತರ ವಿರುದ್ಧವೇ ತಿರುಗಿ ಬಿದ್ದಿದ್ದ ರಾಮೇಶ್ವರಂ ಕೆಫೆ ಮಾಲೀಕರು, ಹುಳು ಎಂದು ಡ್ರಾಮಾ ಮಾಡಿ 25 ಲಕ್ಷಕ್ಕೆ ಬೇಡಿಕೆ ಇಟ್ಟಿರೋದಾಗಿ ಕೇಸ್ ದಾಖಲಿಸಿದ್ದರು.

ಪೊಂಗಲ್ನಲ್ಲಿ ಹುಳ ಬಿದ್ದಿದೆ ಎಂದು ಗಲಾಟೆ ಮಾಡಿದ ಬಳಿಕ ಯುವಕರು ವಿಮಾನದಲ್ಲಿ ಗುವಾಹಟಿಗೆ ಪ್ರಯಾಣ ಬೆಳೆಸಿದ್ದರು. ಆದರೆ ಏರ್ಪೋರ್ಟ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದ ರಾಮೇಶ್ವರಂ ಕೆಫೆ ಮ್ಯಾನೇಜರ್ ಸುಮಂತ್. ಆ ಬಳಿಕ ಕೇಸ್ ವೈಯಾಲಿಕಾವಲ್ ಠಾಣೆಗೆ ವರ್ಗಾವಣೆ ಆಗಿತ್ತು. ತನಿಖೆ ಪೂರ್ಣಗೊಳಿಸಿದ ವೈಯಾಲಿಕಾವಲ್ ಠಾಣೆ ಪೊಲೀಸರು, ತನಿಖೆ ವೇಳೆ ಬ್ಲಾಕ್ ಮೇಲ್ ಮಾಡಿರೋದು ಪೊಂಗಲ್ ಖರೀದಿಸಿ ಗಲಾಟೆ ಮಾಡಿದ ಗ್ರಾಹಕರಲ್ಲ ಅನ್ನೋದು ಖಚಿತವಾಗಿದೆ. ಈ ಘಟನೆಯನ್ನು ಬಂಡವಾಳ ಮಾಡಿಕೊಂಡ ಬೇರೊಬ್ಬ ಯುವಕ ಬ್ಲಾಕ್ ಮೇಲ್ ಮಾಡಿದ್ದಾನೆ ಅನ್ನೋದು ಗೊತ್ತಾಗಿದೆ.
ಗ್ರಾಹಕರೇ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಸುಮಂತ್ ಎಫ್ಐಆರ್ ದಾಖಲಿಸಿದ್ದರು. ರಾಮೇಶ್ವರಂ ಕೆಫೆಗೆ ಆಗುತ್ತಿದ್ದ ಡ್ಯಾಮೆಜ್ ಕಂಟ್ರೋಲ್ ಮಾಡಲು ಗ್ರಾಹಕರ ಮೇಲೆ ದೂರು ನೀಡಿದ್ದರು ಎನ್ನಲಾಗಿದೆ. ಸದ್ಯ ಮಾನಹಾನಿ ಸೇರಿದಂತೆ ಹುಳ ಸಿಕ್ಕ ಘಟನೆಗೆ ಸಂಬಂಧಿಸಿದಂತೆ ಇದೀಗ ಎಫ್ಐಆರ್ ದಾಖಲಾಗಿದೆ. ಗ್ರಾಹಕರು ನೀಡಿದ ಹೊಸ ದೂರಿನಲ್ಲಿ ಏನಿದೆ ಅನ್ನೋದನ್ನು ನೋಡೋದಾದರೆ ಕೆಫೆ ಅವರಿಗೆ ಬ್ಲಾಕ್ ಮೇಲ್ ಕರೆ ಬಂದಾಗ ಬೆಳಗ್ಗೆ 10.27ಕ್ಕೆ ಎಂದಿದ್ದಾರೆ. ಆದರೆ ನಾವು ಆ ಸಮಯದಲ್ಲಿ ವಿಮಾನದಲ್ಲಿ ಇದ್ದೆವು ಎಂದು ದೂರಿನಲ್ಲಿ ಉಲ್ಲೇಖಿಸಿದ್ದು, ಬ್ಲಾಕ್ಮೇಲ್ ಮಾಡಿದ ಫೋನ್ ನಂಬರ್ಗು ನಮಗೂ ಸಂಬಂಧವಿಲ್ಲ ಎಂದಿದ್ದಾರೆ.
ಅಹಿತಕರವಾದ ಆಹಾರ ನೀಡಿ ನಮ್ಮ ಜೀವಕ್ಕೆ ಅಪಾಯ ಉಂಟು ಮಾಡಿದ್ದಾರೆ. ಅಷ್ಟೇ ಅಲ್ಲದೆ ಮಾನಹಾನಿ ಆಗುವಂತೆ ಸುಲಿಗೆ ಎಂದು ದೂರು ನೀಡಿದ್ದಾರೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಕೆ ಮಾಡಲಾಗಿದೆ. ಇದೀಗ ಏರ್ಪೋರ್ಟ್ ಠಾಣೆ ಪೊಲೀಸರು ದೂರು ದಾಖಲು ಮಾಡಿಕೊಂಡು ರಾಮೇಶ್ವರಂ ಕೆಫೆ ವಿರುದ್ಧ ತನಿಖೆ ಆರಂಭ ಮಾಡಿದ್ದಾರೆ. ರಾಮೇಶ್ವರಂ ಕೆಫೆ ವಿರುದ್ಧ ಕೇಳಿ ಬಂದಿದ್ದ ಆರೋಪವನ್ನು ಗ್ರಾಹಕರ ಮೇಲೆಯೇ ತಿರುಗಿಸುವ ಪ್ರಯತ್ನ ಮಾಡಿದ್ದು ಬಯಲಾಗಿದೆ. ಅಷ್ಟೇ ಅಲ್ಲದೆ ಗ್ರಾಹಕರು ಹೇಗೂ ಮತ್ತೆ ಬರೋದಿಲ್ಲ ಎನ್ನುವಂತೆ ದೂರು ನೀಡಿ ಎಸ್ಕೇಪ್ ಆಗುವ ಪ್ರಯತ್ನ ಮಾಡಿದ್ದರು. ಆದರೆ ಗ್ರಾಹಕ ತಿರುಗಿ ನಿಂತಾಗ ಬಣ್ಣ ಬಯಲಾಗಿದೆ.


