RSSಗೆ ಅಂಕುಶ ಅನ್ನೊ ವಿಚಾರ ರಾಜ್ಯ ರಾಜಕಾರಣದಲ್ಲಿ ಕಳೆದೊಂದು ತಿಂಗಳಿಂದ ಭಾರೀ ಚರ್ಚೆ ಹುಟ್ಟುಹಾಕಿತ್ತು. ಸಂಘ ಪರಿವಾರದ ಕಾರ್ಯವೈಖರಿ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಎತ್ತಿದ್ದ ಪ್ರಶ್ನೆ ಬಳಿಕ ದೇಶಾದ್ಯಂತ ಪರ ವಿರೋಧ ಚರ್ಚೆ ಸೃಷ್ಟಿಸಿತ್ತು. ರಾಜ್ಯದಲ್ಲಿ RSSಗೆ ಕಡಿವಾಣ ಹಾಕೋ ಸರ್ಕಾರದ ಪ್ರಯತ್ನಕ್ಕೆ ಹೈಕೋರ್ಟ್ ತಾತ್ಕಾಲಿಕ್ ಬ್ರೇಕ್ ಹಾಕಿತ್ತು. ಈ ಮಧ್ಯೆ RSS ನೋಂದಣಿ ವಿಚಾರವಾಗಿ ಕಾಂಗ್ರೆಸ್ ನಾಯಕರು ವ್ಯಾಪಕ ಟೀಕೆ ಮಾಡಿದ್ದರು. ಅಷ್ಟೇ ಅಲ್ಲ RSS ಬ್ಯಾನ್ ಮಾಡಬೇಕು ಎಂಬ ಚರ್ಚೆಯನ್ನೂ ಹುಟ್ಟು ಹಾಕಿದ್ರು. ಈ ಎಲ್ಲಾ ವಿಚಾರಗಳಿಗೆ RSS ಮುಖ್ಯಸ್ಥ ಮೋಹನ್ ಭಾಗವತ್ ಪ್ರತ್ಯುತ್ತರ ನೀಡಿದ್ದಾರೆ. RSS ನೋಂದಣಿ ವಿಚಾರವಾಗಿ ಪ್ರಶ್ನಿಸಿದ್ದವರಿಗೆ ತಿರುಗೇಟು ನೀಡಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ನೂರನೇ ವರ್ಷದ ಸಂಭ್ರಮದಲ್ಲಿದೆ. ಸಂಘ ಸಂಸ್ಥೆಗೆ ಕಡಿವಾಣ ಹಾಕೋ ಧಾವಂತದಲ್ಲಿರೋ ಕಾಂಗ್ರೆಸ್ ನಾಯಕರು, ಆರೆಸ್ಸೆಸ್ ಒಂದು ಸಂಘಟನೆಯಾಗಿ ಅಧಿಕೃತವಾಗಿ ನೋಂದಾಯಿಸಿಕೊಂಡಿಲ್ಲ. ನೋಂದಣಿ ಪತ್ರ ಇದ್ದರೆ ತೋರಿಸಿ ಎಂದು ಸವಾಲು ಹಾಕಿದ್ದರು. ಬೆಂಗಳೂರಿನ PES ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರದ್ದೇ ಆದ ರೀತಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ಹಿಂದೂ ಧರ್ಮವೂ ನೋಂದಣಿ ಆಗಿಲ್ಲ. RSS ಸಂಘಟನೆ 1925ರಲ್ಲಿ ಸ್ಥಾಪನೆ ಆಯ್ತು. ಬ್ರಿಟೀಷರಿಂದ ನೋಂದಾಯಿಸಿಕೊಳ್ಳಬೇಕಿತ್ತಾ..? ಅಂತ RSS ಸರಸಂಘಚಾಲಕ ಮೋಹನ್ ಭಾಗವತ್ ತಿರುಗೇಟು ಕೊಟ್ಟಿದ್ದಾರೆ. ಬ್ರಿಟಿಷರಿಂದ ನೋಂದಣಿ ಮಾಡಿಸಬೇಕು ಅಂತಾ ನೀವು ನಿರೀಕ್ಷೆ ಮಾಡ್ತೀರಾ..? ಎಂದು ಪ್ರಶ್ನಿಸಿದ್ದಾರೆ.

ನಮ್ಮ RSS ಸಂಘಟನೆ ಯಾವಾಗಲೂ ಬ್ರಿಟೀಷರ ವಿರುದ್ಧ ಇತ್ತು. ಸ್ವಾತಂತ್ರ್ಯ ಬಂದ ನಂತರವೂ ನೋಂದಣಿ ಕಡ್ಡಾಯ ಮಾಡಿಲ್ಲ. ನಮ್ಮದು ಸ್ವತಂತ್ರ ಹಾಗೂ ಕಾನೂನಾತ್ಮಕ ಸಂಘ. ನಮ್ಮದು ಗುರುತಿಸಲ್ಪಡುವ ಸಂಘ ಎಂದಿದ್ದಾರೆ. ಆದಾಯ ತೆರಿಗೆ ಇಲಾಖೆ ತೆರಿಗೆ ಪಾವತಿಸಲು ಹೇಳಿತು. ಅಲ್ಲೊಂದು ತೊಡಕಿತ್ತು ಇತ್ತು. ಆದಾಯ ತೆರಿಗೆ ಕೇಳಿತ್ತು. ಗುರುದಕ್ಷಿಣೆ ಆದಾಯ ತೆರಿಗೆಯಿಂದ ಹೊರತಾಗಿದೆ. ಮೂರು ಬಾರಿ RSS ನಿಷೇಧಿಸಲಾಯ್ತು. ಪ್ರತಿ ಬಾರಿಯೂ ನಿಷೇಧವನ್ನು ಕೋರ್ಟ್ ತೆಗೆದು ಹಾಕುವ ಮೂಲಕ RSSಗೆ ಕಾನೂನಿನ ಮಾನ್ಯತೆ ನೀಡಿದೆ ಎಂದು ಜ್ಞಾಪಿಸಿದ್ದಾರೆ. ಕಾನೂನಾತ್ಮಕವಾಗಿ, ವಾಸ್ತವವಾಗಿ, ನಮ್ಮದು ಒಂದು ಸಂಸ್ಥೆ. ನಮ್ಮದು ಸಂವಿಧಾನಿಕ ಬಾಹಿರ ಸಂಸ್ಥೆಯಲ್ಲ. ಕಾನೂನಿನ ಒಳಗೇ ನಾವು ಇದ್ದೇವೆ. ನಮ್ಮ ಸ್ಟೇಟಸ್ ಕೂಡ ಕಾನೂನಿನ ಒಳಗೇ ಇದೆ. ಹೀಗಾಗಿ ನೋಂದಣಿಯ ಅಗತ್ಯವಿಲ್ಲ. ಹಿಂದೂ ಧರ್ಮ ಕೂಡ ನೋಂದಣಿಯಾಗಿಲ್ಲ ಎಂದಿದ್ದಾರೆ.
ಹಿಂದೂ ಧರ್ಮೇತರರಿಗೂ ಶಾಖೆಗೆ ಬರಲು ಅವಕಾಶವಿದ್ಯಾ..? ಅನ್ನೋ ಪ್ರಶ್ನೆಗೂ ಆರ್ಎಸ್ಎಸ್ ಸರ ಸಂಘಚಾಲಕ ಮೋಹನ್ ಭಾಗವತ್ ಸ್ಪಷ್ಟನೆ ಕೊಟ್ಟಿದ್ದಾರೆ. ನಮ್ಮಲ್ಲಿ ಜಾತಿ, ಲಿಂಗ, ಮುಸ್ಲಿಂ, ಕ್ರೈಸ್ತ, ಬ್ರಾಹ್ಮಣ, ಶೈವ ಎಂಬ ಪಂಥಗಳಿಗೆ ಅವಕಾಶ ಇಲ್ಲ. ಯಾವುದೇ ಧರ್ಮದವರು ಶಾಖೆಗೆ ಬರಬಹುದು. ಆದರೆ ಶಾಖೆಗೆ ಬರುವವರು ತಮ್ಮ ಧರ್ಮವನ್ನು ಹೊರಗಿಟ್ಟು ಭಾರತ ಮಾತೆಯ ಮಕ್ಕಳಾಗಿ ಬರಬೇಕು. ಹಿಂದೂ ಸಮಾಜವನ್ನು ಒಪ್ಪಿಕೊಂಡು ಶಾಖೆಗೆ ಬರಬೇಕು. ಸಂಘದ ನಿಯಮಗಳನ್ನು ಪಾಲನೆ ಮಾಡಬೇಕು ಎಂದಿದ್ದಾರೆ. ಇಷ್ಟೆಲ್ಲಾ ಮಾತುಗಳನ್ನು ಹೇಳಿದ ಬಳಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಸಚಿವ ಪ್ರಿಯಾಕ್ ಖರ್ಗೆ, ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ಗೆ 9 ಪ್ರಶ್ನೆಗಳನ್ನು ಕೇಳಿದ್ದಾರೆ.
ಸ್ವಯಂಸೇವಕರು ಯಾರು..?, ಅವರನ್ನು ಹೇಗೆ ಗುರುತಿಸಲಾಗುತ್ತದೆ..? ದೇಣಿಗೆಯ ಪ್ರಮಾಣ ಮತ್ತು ಸ್ವರೂಪವೇನು..? ದೇಣಿಗೆಗಳನ್ನು ಯಾವ ರೂಪದಲ್ಲಿ ಸ್ವೀಕರಿಸಲಾಗುತ್ತದೆ..? ಸಂಸ್ಥೆಗೆ ನೇರವಾಗಿ ದೇಣಿಗೆಗಳನ್ನು ಏಕೆ ನೀಡಲಾಗುವುದಿಲ್ಲ..? ಆರ್ಥಿಕ ಮತ್ತು ಸಾಂಸ್ಥಿಕ ರಚನೆಯನ್ನು ಹೇಗೆ ನಿರ್ವಹಿಸಲಾಗುತ್ತದೆ..? ಪೂರ್ಣ ಸಮಯದ ಪ್ರಚಾರಕರು & ನಿತ್ಯದ ವೆಚ್ಚ ಭರಿಸೋದ್ಯಾರು..? ದೊಡ್ಡ ದೊಡ್ಡ ಕಾರ್ಯಕ್ರಮಗಳಿಗೆ ಹಣ ಒದಗಿಸುವುದು ಹೇಗೆ..? ಸ್ಥಳೀಯ ಮಟ್ಟದಲ್ಲಿ ಸಮವಸ್ತ್ರ, ವಸ್ತು ಖರೀದಿಸಿದಾಗ ಹಣದ ಲೆಕ್ಕ ಹೇಗೆ..? ಸ್ಥಳೀಯ ಕಚೇರಿಗಳ ನಿರ್ವಹಣೆ ವೆಚ್ಚವನ್ನು ಯಾರು ಭರಿಸುತ್ತಾರೆ..? ಎಂದು ಪ್ರಶ್ನೆ ಮಾಡಿದ್ದಾರೆ. ಜೊತೆಗೆ RSS ವಿರುದ್ಧ ನಮ್ಮ ಹೋರಾಟ ಇಷ್ಟಕ್ಕೆ ನಿಲ್ಲೋದಿಲ್ಲ ಅನ್ನೋ ಸಂದೇಶವನ್ನೂ ನೀಡಿದ್ದಾರೆ. ವಿಜಯನಗರದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಆರ್ಎಸ್ಎಸ್ ಮಾತ್ರ ರಿಜಿಸ್ಟರ್ ಮಾಡಿಸ್ಬೇಕು ಅಂತ ಹೇಳಿಲ್ಲ. ಯಾವುದೇ ಸಂಸ್ಥೆ ಆದರೂ ನೋಂದಣಿ ಮಾಡಬೇಕು ಅಂತಾ ಹೇಳಿದ್ದೇವೆ. ಆದರೆ ಅವರು RSS ಎಂದು ಭಾವಿಸಿದ್ದಾರೆ. ಭಾಗವತ್ ಹೇಳಿದ್ದಕ್ಕೆಲ್ಲ ನಾವು ಉತ್ತರ ಕೊಡಕ್ಕೆ ಆಗಲ್ಲ ಅಂತ ಹೇಳಿದ್ದಾರೆ.


