ರೈತರ ಪ್ರತಿಭಟನೆ ವೇಳೆ ಕಲ್ಲು ತೂರಾಟ ಪ್ರಕರಣದ ಬಗ್ಗೆ ಬೆಳಗಾವಿಯಲ್ಲಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಮಾತನಾಡಿ, ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ಕಲ್ಲು ತೂರಾಟ ನಡೆದಿತ್ತು, ನವೆಂಬರ್ 7ರಂದು ರೈತರ ಹೋರಾಟದಲ್ಲಿ ಕಿಡಿಗೇಡಿಗಳು ಸೇರಿದ್ದಾರೆ ಎಂದು ಮಾಹಿತಿ ಇತ್ತು. ಕೆಲವರನ್ನು ವಶಕ್ಕೆ ಪಡೆಯುತ್ತಿದ್ದ ವೇಳೆ ಕಲ್ಲು ತೂರಾಟ ಆಗಿತ್ತು. ಈ ವೇಳೆಯಲ್ಲಿ ಡಿವೈಎಸ್ಪಿ ಮಹಾಂತೇಶ ಸಜ್ಜನ ಸೇರಿ 12 ಪೊಲೀಸ್ ಸಿಬ್ಬಂದಿಗೆ ಗಾಯ ಆಗಿದೆ ಎಂದಿದ್ದಾರೆ.

ಪೊಲೀಸರ ಮೇಲೆ ಕಲ್ಲು ತೂರಾಟ ಮಾಡಿದ್ದ ಪ್ರಕರಣ ಸಂಬಂಧ ಐದು ಜನ ಆರೋಪಿಗಳ ಬಂಧನ ಮಾಡಲಾಗಿದೆ. ಆರನೇ ಆರೋಪಿಯನ್ನೂ ಸಹ ವಶಕ್ಕೆ ಪಡೆದುಕೊಂಡಿದ್ದೇವೆ. ಚನ್ನಗೌಡ ಸಸಾಲಟ್ಟಿ, ಪ್ರಶಾಂತ ಮುಗಳಿ, ವಿನಾಯಕ ದುರದುಂಡಿ, ಮಲ್ಲಪ್ಪಾ ಘಟಗಿ, ಶಿವಪ್ಪ ವಾಣಿ ಎನ್ನುವರನ್ನು ಬಂಧನ ಮಾಡಲಾಗಿದೆ. ದೊಂಬಿ, ಗುಂಪು ಗಲಭೆ, ಮಾರಣಾಂತಿಕ ಹಲ್ಲೆ ಪ್ರಕರಣ ಅಡಿ ಕೇಸ್ ದಾಖಲು ಮಾಡಲಾಗಿದೆ. ರೈತರ ಹೆಸರಿನಲ್ಲಿ ಶಾಲು ಹಾಕಿಕೊಂಡು ಬಂದರೇ, ಅವರನ್ನು ರೈತರು ಅನ್ನಲು ಆಗಲ್ಲ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ 10 ದಿನ ಪ್ರತಿಭಟನೆ ನಡೆದರೂ ಎಲ್ಲಿಯೂ ಗಲಾಟೆ ಆಗಿರಲಿಲ್ಲ. ಹತ್ತರಗಿ ಬಳಿ ಮುಂಚೆ ಸಂಚ ರೂಪಿಸಿ ಕೃತ್ಯ ಎಸಗಿದ್ದಾರೆ. ಸಿಸಿಟಿವಿ ಹಾಗು ವಿವಿಧ ವಿಡಿಯೋಗಳನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ತಿದ್ದೇವೆ. ಆರೋಪಿಗಳು ಕಲ್ಲು ಎಸೆಯುತ್ತಿರೋದನ್ನು ಸಾಕ್ಷಿ ಇಟ್ಟುಕೊಂಡು ಆರೋಪಿಗಳ ಬಂಧನ ಮಾಡಲಾಗಿದೆ. ಕಲ್ಲು ತೂರಾಟಕ್ಕೆ ಪ್ರೇರಣೆ ಕೊಟ್ಟವರ ಬಗ್ಗೆಯೂ ತನಿಖೆ ಮಾಡ್ತಿವಿ. ಬಂಧಿತರ ಪೈಕಿ ಶಿವಾನಂದ ನಿವೃತ್ತ ಸೈನಿಕ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದಿದ್ದಾರೆ.
ಆರೋಪಿಗಳು ಕೈಯಲ್ಲಿ ಕಲ್ಲು ಹಿಡಿದುಕೊಂಡಿರೋದಕ್ಕೂ ದಾಖಲೆ ಇದೆ ಎಂದು ಎಸ್ಪಿ ಭೀಮಾಶಂಕರ್ ಗುಳೇದ್ ಬಿಡುಗಡೆ ಮಾಡಿದ್ದಾರೆ. ಒಳ ಸಂಚು ಮಾಡಿದ್ಯಾರು..? ಯಾರು ಪ್ರತಿಭಟನೆಗೆ ಕರೆತಂದ್ರು..? ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ ಎಂದಿದ್ದಾರೆ. ರೈತರ ಹೋರಾಟ ಶಾಂತಿಯುತವಾಗಿ ನಡೆಯುತ್ತಿತ್ತು. ಗುರ್ಲಾಪುರದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಹೋರಾಟಕ್ಕೆ ಕೈ ಜೋಡಿಸಿದ್ದ ಬಳಿಕ ಹತ್ತರಗಿ ಬಳಿ ಏಕಾಏಕಿ ಹೆದ್ದಾರಿಗೆ ಬಂದಿದ್ದ ರೈತರ ಹೋರಾಟ, ಆಕ್ರೋಶದ ಕಟ್ಟೆ ಹೊಡೆಯುವಂತೆ ಮಾಡಿತ್ತು. ರೈತರು ಒಂದು ಕಡೆ ಹೋರಾಟ ಮಾಡುವಾಗ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿತ್ತು.


