2022ರ ಬಳಿಕ ಅತಿ ದೀರ್ಘವಾದ ಪೂರ್ಣ ಚಂದ್ರ ಗ್ರಹಣ ಇಂದು ಸಂಭವಿಸಲಿದೆ. 2018ರ ಚಂದ್ರಗ್ರಹಣದ ನಂತರ ದೇಶದ ಎಲ್ಲಾ ಭಾಗಗಳಲ್ಲಿಯೂ ಪೂರ್ಣ ಚಂದ್ರ ಗ್ರಹಣ ಕಾಣಿಸುತ್ತಿವುದು ಇದೇ ಮೊದಲು ಎನ್ನಬಹುದು. ಇವತ್ತು ಭಾನುವಾರ ರಾತ್ರಿ 8.50ಕ್ಕೆ ಆರಂಭವಾಗಿ ಚಂದ್ರಗ್ರಹಣ ಪ್ರಕ್ರಿಯೆ ಮಧ್ಯರಾತ್ರಿ 12.22ರವರೆಗೆ ನಡೆಯಲಿದೆ. ಇಂದು ವರ್ಷದ ಕೊನೆ ರಕ್ತ ಚಂದ್ರಗ್ರಹಣ ಆಗಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳನ್ನು ಬಂದ್ ಮಾಡಲಾಗ್ತಿದೆ.
ಚಾಮರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತರಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಎಂದಿನಂತೆ ಬೆಳಗಿನ ಜಾವ 4 ಗಂಟೆಯಿಂದ ರಾತ್ರಿ 11 ಗಂಟೆವರೆಗೂ ದೇಗುಲ ತೆರೆದಿರಲಿದೆ. ಆದರೆ ಗ್ರಹಣದ ವೇಳೆ ಮಾತ್ರ ಯಾವುದೇ ಪೂಜೆ ಪುನಸ್ಕಾರ ನಡೆಯಲ್ಲ. ಉಳಿದಂತೆ ಭಕ್ತರಿಗೆ ಮಾದಪ್ಪನ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ರಕ್ತಚಂದ್ರಗ್ರಹಣ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಗ್ರಹಣ ಸಂದರ್ಭದಲ್ಲಿ ತಾಯಿ ಚಾಮುಂಡೇಶ್ವರಿಗೆ ಅಭಿಷೇಕ ಮಾಡಿ ವಿಶೇಷ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಎಂದಿನಂತೆ ರಾತ್ರಿ 9 ಗಂಟೆಗೆ ದೇವಸ್ಥಾನ ಬಂದ್ ಆಗಲಿದ್ದು, ಗ್ರಹಣದ ನಂತರ ದೇವಸ್ಥಾನದಲ್ಲಿ ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಪುನಸ್ಕಾರ ನೇರವೇರಲಿದೆ.
ಚಿಕ್ಕಬಳ್ಳಾಪುರದಲ್ಲಿರುವ ಭೋಗನಂದೀಶ್ವರ ದೇಗುಲ ಇಂದು ಸಂಜೆ 4 ಗಂಟೆಗೆ ಬಂದ್ ಆಗಲಿದೆ. ಇಂದು ಸಂಜೆ 4 ಗಂಟೆಯಿಂದ ಭಕ್ತಾದಿಗಳಿಗೆ ದೇಗುಲ ಪ್ರವೇಶ ನಿಷೇಧಿಸಲಾಗಿದೆ. ಸೋಮವಾರ ಮುಂಜಾನೆ ದೇಗುಲ ಶುದ್ಧೀಕರಣ ಮಾಡಿ ಜಲಾಭಿಷೇಕ, ಕ್ಷೀರಾಭಿಷೇಕ ಮಾಡಿದ ಬಳಿಕ ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ಮಾಡಲಾಗುತ್ತದೆ. ಇದಾದ ಬಳಿಕ ಸೋಮವಾರ ಮಧ್ಯಾಹ್ನ 1 ಗಂಟೆಯಿಂದ ಎಂದಿನಂತೆ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ರಕ್ತಚಂದ್ರಗ್ರಹಣ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮಹಾಬಲೇಶ್ವರ ದೇವಾಲಯದಲ್ಲಿ ಗ್ರಹಣ ಸಂದರ್ಭದಲ್ಲಿ ಲಿಂಗ ಸ್ಪರ್ಶ ಪೂಜೆಗೆ ಅವಕಾಶ ನೀಡಲಾಗಿದೆ. ಗ್ರಹಣದ ದಿನ ಮುಂಜಾನೆ 7 ಗಂಟೆಯಿಂದ 10:45ರ ತನಕ ಮಾತ್ರ ಸ್ಪರ್ಶ ಪೂಜೆ ನಡೆಯಲಿದೆ. ಮಧ್ಯಾಹ್ನ 12:30ಕ್ಕೆ ಮಹಾ ಪೂಜೆ ಆಗಲಿದ್ದು, ಸಂಜೆ 4 ಗಂಟೆಯಿಂದ 5:30ರವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ ಬೆಳಿಗ್ಗೆ ಸ್ವಚ್ಚತಾ ಕಾರ್ಯ ನಡೆಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಉಡುಪಿಯ ಶ್ರೀ ಕೃಷ್ಣ ಮಠದಲ್ಲೂ ಹಲವು ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನದ ಅನ್ನಪ್ರಸಾದ ಬೆಳಿಗ್ಗೆ 10:30 ರಿಂದ 12 ಗಂಟೆಯ ನಡುವೆ ವಿತರಣೆ ಮಾಡಲಾಗುತ್ತದೆ. ಮಠದಲ್ಲಿ ಗ್ರಹಣ ಶಾಂತಿ ಹೋಮ ಹವನಗಳನ್ನು ಮಾಡಲು ವ್ಯವಸ್ಥೆ ಮಾಡಲಾಗಿದೆ. ಗ್ರಹಣ ಆರಂಭಕ್ಕೂ ಮೊದಲು ನೈರ್ಮಲ್ಯ ವಿಸರ್ಜನೆ ಪೂಜೆ ನಡೆಯಲಿದೆ. ಬಳಿಕ ಸ್ಪರ್ಶ ಕಾಲ, ಮೋಕ್ಷಕಾಲದ ವೇಳೆ ಸರೋವರದಲ್ಲಿ ಭಕ್ತರಿಂದ ಪುಣ್ಯ ಸ್ನಾನ ಮಾಡಲಾಗುತ್ತದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲಿಕಾರ್ಜುನ ದೇಗುಲ ಇಂದು ಸಂಜೆ 7 ಗಂಟೆಯಿಂದ ಬಂದ್ ಆಗಲಿದೆ. ದೇಗುಲಕ್ಕೆ ದರ್ಬಾ ಬಂಧನ ಮಾಡಿ ಬಂದ್ ಮಾಡಲಾಗುತ್ತದೆ. ಸೋಮವಾರ ಬೆಳಿಗ್ಗೆ 5 ಗಂಟೆಗೆ ದೇಗುಲ ತೆರೆಯಲಿದ್ದು, 6 ಗಂಟೆಗೆ ಶುದ್ದೀಕರಣ ಕಾರ್ಯ ಮಾಡಲಾಗುತ್ತದೆ. ಆ ಬಳಿಕ ಬೆಳಗ್ಗೆ 9 ಗಂಟೆಗೆ ದೇಗುಲದಲ್ಲಿ ನವಗ್ರಹ ಶಾಂತಿ ಹೋಮ ನಡೆಯಲಿದ್ದು, ಆ ನಂತರವಷ್ಟೇ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗುತ್ತದೆ.


