ವಿಜಯಪುರದಲ್ಲಿ ಸಚಿವ ಎಂಬಿ ಪಾಟೀಲ್ ಮಾತನಾಡಿ ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸೋಕಾಲ್ಡ್ ಹಿಂದೂ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ ಎಂದಿನಂತೆ ತಮ್ಮ ನಾಲಿಗೆ ಹರಿ ಬಿಟ್ಟಿದ್ದಾರೆ. ಇವರು ಹಿಂದೂ ಹುಲಿ ಅಂತಾ ಹೇಳಿಕೊಳ್ಳುತ್ತಾರೆ, ಇವರ ಬಗ್ಗೆ ವಿಜಯಪುರ ಜನರಿಗೆ ಗೊತ್ತಿದೆ. ನನ್ನ ಜೊತೆಗೆ ಯತ್ನಾಳ್ ಈದ್ಗಾ ಮೈದಾನಕ್ಕೆ ಪ್ರಾರ್ಥನೆಗೆ ಬಂದಿದ್ದರು. ಅಂದು ಅಲ್ಲಾಹು ಅಕ್ಬರ್ ಎಂದು ಇಂದು ಹಿಂದೂ ಬಗ್ಗೆ ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ. ಇವರು ನಾಲಿಗೆ ಹರಿ ಬಿಟ್ಟ ಕಾರಣವೇ ಇವರನ್ನು ಬಿಜೆಪಿಯಿಂದ ಹೊರ ಹಾಕಿದ್ದಾರೆ. ಈಗ ಉಚ್ಚಾಟಿತ ಹಿಂದು ಹುಲಿ ಇದು. ಯತ್ನಾಳ್ ಎಲ್ಲರ ಬಗ್ಗೆಯೂ ಬಾಯಿ ಬಿಟ್ಟಿದ್ದಾರೆ, ಈಗ ನನ್ನ ಬಗ್ಗೆಯೂ ಬಾಯಿ ಹರಿ ಬಿಟ್ಟಿದ್ದಾರೆ.

ಯತ್ನಾಳ್, ನೀವು ಯಾರಿಗಾದರೂ ಧಮ್ಕಿ ಹಾಕಿ, ನನ್ನೊಟ್ಟಿಗೆ ಇದು ನಡೆಯಲ್ಲ ಎಂದಿರುವ ಸಚಿವ ಎಂ.ಬಿ ಪಾಟೀಲ್, ಯತ್ನಾಳ್ ಅವರಿಗೆ ರಿಯಾಕ್ಷನ್ ಕೊಡಲು ನಾನು ದಿನಕ್ಕೆ ನಾಲ್ಕು ಸಲ ಪ್ರೇಸ್ ಮೀಟ್ ಮಾಡಬೇಕಾಗತ್ತದೆ. ಇವರ ಹಾಗೆ ನಾನು ನಿರುದ್ಯೋಗಿ ಅಲ್ಲ. ಹಿಂದೂ ಮತಗಳ ಸಲುವಾಗಿ ಈಗ ಇವರು ಹೀಗೆ ಮಾತನಾಡುತ್ತಾರೆ. ಇವರು ಟೋಪಿ ಹಾಕೊಂಡಿದ್ದು ಜನ ಎಲ್ಲ ನೋಡಿದ್ದಾರೆ. ನನ್ನ ಬಗ್ಗೆ ಬಾಯಿ ಬಿಟ್ಟರೆ ಸರಿ ಇರಲ್ಲ. ಸಚಿವ ಎಂ.ಬಿ ಪಾಟೀಲ್ ಹಿಂದೆ ಭೂ ಹಗರಣ ಮಾಡಿದವರಿದ್ದಾರೆ ಎಂದು ಯತ್ನಾಳ್ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಯಾವುದೇ ಆಸ್ತಿ ವಿಚಾರದಲ್ಲಿ ನ್ಯಾಯಯುತವಾಗಿ ಮಾಡಿ ಎಂದು ಪೊಲೀಸರಿಗೆ ಹೇಳಿದ್ದೇನೆ. ನಾನು ಜಿ ಕ್ಯಾಟಗರಿ ಸೈಟ್ ಕೂಡ ತೆಗೆದುಕೊಂಡಿಲ್ಲ ಎಂದಿದ್ದಾರೆ.
ಎಂ. ಬಿ ಪಾಟೀಲ್ ಜೊತೆ ಧರ್ಮ ಒಡೆಯುವವರು ಇದ್ದಾರೆ ಎಂದು ಯತ್ನಾಳ್ ದೂರಿದ್ದರು. ಎಂ.ಬಿ ಪಾಟೀಲ್ ಹಿಂದೆ ಇರುವ ಸಲಹೆಗಾರರು ಈ ಕೆಲಸ ಮಾಡಬೇಡಿ. ಎಂ.ಬಿ ಪಾಟೀಲ್ ಹಿಂದೆ ಧರ್ಮ ಒಡೆಯುವ ಓರ್ವ ಇದ್ದಾನೆ. ಇನ್ನೊಬ್ಬ ಅಕ್ರಮವಾಗಿ ರೈತರ ಜಾಗ ಲಪಟಾಯಿಸುವ ಇದ್ದಾನೆ. ಇವರಿಬ್ಬರು ಎಂ.ಬಿ ಪಾಟೀಲ್ ಅವರಿಗೆ ದೊಡ್ಡ ಸಮಸ್ಯೆಯಾಗಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಆಗುತ್ತಿರುವ ಭೂ ಹಗರಣಗಳೆಲ್ಲವೂ ಎಂಬಿ ಪಾಟೀಲ್ ಶಿಷ್ಯರಿಂದಲೇ ಆಗ್ತಿದೆ. ಹಿತೈಷಿಯಾಗಿ ಹೇಳುತ್ತಿದ್ದೇನೆ ನೀವು ಜಾಗೃತರಾಗಿ ಎಂದು ಎಂ.ಬಿ ಪಾಟೀಲ್ ಅವರನ್ನು ಎಚ್ಚರಿಸುವ ಕೆಲಸ ಮಾಡಿದ್ದರು. ಆ ನಿಜಗುಣಾನಂದ ಹೇಗೆಲ್ಲ ಮಾತನಾಡಿದ್ದಾನೆ. ಹಿಂದೂ ಧರ್ಮದ ಬಗ್ಗೆ ಏನು ಮಾತನಾಡಿದ್ದಾನೆ, ಗೋವುಗಳ ಬಗ್ಗೆ ಏನು ಮಾತನಾಡಿದ್ದಾನೆ. ವೀರಭದ್ರನ ಬಗ್ಗೆ ಇಳಕಲ್ ಸ್ವಾಮಿ ಏನು ಮಾತನಾಡಿದ್ದಾನೆ ನೀವೇ ನೋಡಿ. ಮೊದಲು ಇವರಿಂದ ಅಶಾಂತಿ ಉಂಟಾಗುತ್ತೆ, ಇವರನ್ನ ಒಳಗಡೆ ಹಾಕಬೇಕು ಎಂದು ಆಗ್ರಹಿಸಿದ್ದರು.


