ಬೀದರ್ನಲ್ಲಿ ಮಲತಾಯಿ ಒಬ್ಬಳು 7 ವರ್ಷದ ಬಾಲಕಿಯನ್ನು ಕಟ್ಟಡ ಮೇಲಿನಿಂದ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ಅಮ್ಮನ ಪ್ರೀತಿಯನ್ನು ಕಾಣದ ಆ ಮುದ್ದು ಕಂದಮ್ಮ ತುತ್ತು ಅನ್ನ ತಿನ್ನಿಸುತ್ತಿದ್ದ ಇವಳನ್ನೇ ಅಮ್ಮಾ ಎಂದು ಭಾವಿಸಿತ್ತು. ಆದರೆ ಏಳು ವರ್ಷದ ಮಗಳನ್ನು ಸಹಿಸಿಕೊಳ್ಳದ ಮಲತಾಯಿ ಆಟವಾಡಿಸುವ ರೀತಿಯಲ್ಲಿ ನಾಟಕವಾಡಿ ಏನೂ ಅರಿಯದ ಕಂದಮ್ಮನನ್ನು ಕಟ್ಟಡದಿಂದ ತಳ್ಳಿ ಮಳ್ಳಿಯಂತೆ ಮನೆ ಸೇರಿಕೊಂಡಿದ್ದಾಳೆ.

ಮೂರನೇ ಮಹಡಿಯಿಂದ ಕೆಳಕ್ಕೆ ಬಿದ್ದ ಆ ಪುಟ್ಟ ಮುಗು ಅಚ್ಚರಿಯೆಂಬಂತೆ ಎದ್ದು ನಿಂತು ಸಾವಿಗೆ ಸವಾಲು ಹಾಕಿಬಿಟ್ಟಿದ್ದಾಳೆ. ಅಲ್ಲೇ ಯಾರೋ ರಸ್ತೆಯಲ್ಲಿ ಬರ್ತಿದ್ದವರು ಆಕೆಯ ಕೈಹಿಡಿದು ಮಾತನಾಡಿಸುವ ಪ್ರಯತ್ನವನ್ನೂ ಮಾಡಿದ್ದಾರೆ. ಆ ಬಳಿಕ ಕೈ ಹಿಡಿದು ಈ ಕಡೆ ಕರೆದುಕೊಂಡು ಬರಲು ಹೋದಾಗ ಅಲ್ಲೇ ಕುಸಿದು ಬಿದ್ದಿದ್ದಾಳೆ. ಆಕೆಯನ್ನು ಎತ್ತಿಕೊಂಡು ಬಂದು ಈ ಕಡೆ ಕೂರಿಸುವ ಪ್ರಯತ್ನ ಮಾಡಿದರೂ ಜವರಾಯ ತನ್ನ ಹಠ ಸಾಧಿಸಿಬಿಟ್ಟಿದ್ದಾನೆ. ಮಹಡಿ ಮೇಲಿನಿಂದ ಬಿದ್ದ ಜಾಗದಿಂದ ತಾನೇ ನಡ್ಕೊಂಡು ಬಂದ ಪುಟ್ಟ ಕಂದಮ್ಮ ಕೇವಲ ಒಂದೆರಡು ನಿಮಿಷದಲ್ಲಿ ಬದುಕಿನ ಪಯಣ ಮುಗಿಸಿ ಸಾವಿನ ಮನೆ ಸೇರಿದ್ದಾಳೆ.
ಬೀದರ್ ನಗರದ ಆದರ್ಶ ಕಾಲೋನಿಯ ಶಾನವಿಗೆ ಇನ್ನೂ ಬರೀ ಏಳು ವರ್ಷ. ಈಕೆ ಹುಟ್ಟಿದ ಒಂದೇ ಒಂದು ವರ್ಷಕ್ಕೆ ತಾಯಿ ಸಾವನ್ನಪ್ಪಿದ್ದಳು. ಹೀಗಾಗಿ ಹೆತ್ತವಳ ಮುಖ ನೋಡಿದ ನೆನಪೇ ಇಲ್ಲದ ಶಾನವಿಗೆ ಅಜ್ಜ-ಅಜ್ಜಿಯ ಆರೈಕೆ ಹಾಗೂ ಅಪ್ಪನ ಆಸರೆ ಅಷ್ಟೇ ಸಿಕ್ಕಿತ್ತು. ಹೆಂಡತಿ ಇಲ್ಲದ ಅಪ್ಪ ಸಿದ್ದಾಂತ್ ಎರಡ್ಮೂರು ವರ್ಷ ಒಬ್ಬಂಟಿಯಾಗಿಯೇ ಇದ್ದ. ಮನು ಇನ್ನೂ ಚಿಕ್ಕವಯಸ್ಸು ಅನ್ನೋ ಕಾರಣಕ್ಕೆ ಸ್ವತಃ ತಂದೆ ತಾಯಿಯೇ ಮುಂದೆ ನಿಂತು ರಾಧಾಳನ್ನು ತಂದು ಎರಡನೇ ಮದುವೆ ಮಾಡಿಸಿದ್ದರು.

ತಾಯಿ ಇಲ್ಲದ ಕಂದಮ್ಮನನ್ನು ನೋಡಿಕೊಂಡು ಸುಖಸಂಸಾರ ಮಾಡಬೇಕಿದ್ದ ರಾಧಾ ಮಲತಾಯಿಯಾಗಿ ಬಂದವಳು, ಮಲಮಗಳ ಮೇಲೆ ರಣಚಂಡಿ ಅವತಾರ ತಾಳಿದ್ದಳು. ಯಾರೂ ಇಲ್ಲದ ಹೊತ್ತು ನೋಡ್ಕೊಂಡು ಹೊಡಿಯೋದು, ಬಡಿಯೋದು ಮಾಡ್ತಿದ್ದಳು. ಈ ವಿಷ್ಯ ಶಾನವಿ ಅಜ್ಜಿಗೆ ಗೊತ್ತಾಗಿ ಬೈದು ಬುದ್ಧಿ ಹೇಳಿದ್ರಂತೆ. ಆದ್ರೆ, ಮಲತಾಯಿಯ ಕ್ರೂರ ಮನಸ್ಸು ಮಾತ್ರ ಬದಲಾಗಿರಲಿಲ್ಲ. ಈ ನಡುವೆ ಮಲತಾಯಿ ರಾಧಾಳಿಗೆ ಅವಳಿ-ಜವಳಿ ಮಕ್ಕಳೂ ಹುಟ್ಟಿದ್ದವು. ಯಾವಾಗ ಅವಳಿ ಜವಳಿ ಮಕ್ಕಳಾದವೋ ಶಾನವಿ ಮೇಲಿನ ಸಿಟ್ಟು ಮತ್ತಷ್ಟು ಹೆಚ್ಚಾಗಿತ್ತು. ಇವಳನ್ನ ಮುಗಿಸಿದ್ರೆ ನಾವು ಖುಷಿಯಾಗಿ ಇರಬಹುದು ಅಂತಾ ಹೊಂಚು ಹಾಕ್ತಿದ್ದಳು.
ಆಗಸ್ಟ್ ತಿಂಗಳ 27ರಂದು ಮೂರನೇ ಮಹಡಿಯಿಂದ ಬಿದ್ದ ಶಾನವಿ, ನರಳಿ ನರಳಿ ಪ್ರಾಣ ಬಿಟ್ಟಿದ್ದಳು. ಮನೆಯಲ್ಲಿ ಆಟ ಆಡ್ಕೊಂಡಿದ್ದ ಮಗು ದುರಂತ ಅಂತ್ಯ ಕಂಡಿದ್ದಳು. ಆ ದಿನ ಯಾರಿಗೂ ಅನುಮಾನವೂ ಬಂದಿರ್ಲಿಲ್ಲ. ಮೊಮ್ಮಗಳೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ, ಇದೊಂದು ಆಕಸ್ಮಿಕ ಸಾವು ಅಂತಾ ಅಜ್ಜ-ಅಜ್ಜಿಯೇ ಕೇಸ್ ಕೊಟ್ಟು ಮುಗಿಸಿದ್ದರು. ಹೀಗಾಗಿ ಮಲತಾಯಿ ರಾಧಾ ಬಿಂದಿಗೆ ಹಾಲು ಕುಡಿದಂತೆ ಸಂತೃಪ್ತಳಾಗಿದ್ದಳು. ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದವರು ಕಾರ್ಯವನ್ನೂ ಮುಗಿಸಿದ್ದರು. ಸೆಪ್ಟೆಂಬರ್ 12ರಂದು ಎದುರು ಮನೆಯ ವ್ಯಕ್ತಿಯೊಬ್ಬರು ಶಾನವಿ ತಂದೆಯ ವಾಟ್ಸಪ್ ನಂಬರ್ಗೆ ಸಿಸಿಟಿವಿ ವಿಡಿಯೋ ಕಳಿಸಿದ್ರು. ಆಗ ರಾಧಳ ಅಸಲಿ ಕೃತ್ಯ ಬಯಲಾಗಿತ್ತು.

ಆಟ ಆಡಿಸೋ ನೆಪದಲ್ಲಿ ಕರ್ಕೊಂಡು ಬಂದಿದ್ದ ರಾಧಾ, ಗೋಡೆ ಪಕ್ಕದಲ್ಲೇ ಚೇರ್ ಇಟ್ಟು ಅದ್ರ ಮೇಲೆ ಬಾಲಕಿಯನ್ನ ಹತ್ತಿಸಿದ್ದಳು. ತಾನು ಇರೋದು ಗೊತ್ತಾಗಬಾರದು ಅಂತಾ ಮೊಣಕಾಲಲ್ಲೇ ತೆವಳಿಕೊಂಡು ಮನೆಗೆ ಬಂದಿದ್ದಾಳೆ. ಗೋಡೆಗೆ ಅಡ್ಡಲಾಗಿ ನಿಂತ್ಕೊಂಡು ಮಗುವನ್ನ ಚೇರ್ ಮೇಲೆ ಹತ್ತಿಸಿದವ್ಳು, ಕೆಳಗೆ ನೋಡು ಅಂತಿದ್ದಂತೆಯೇ ತಳ್ಳಿದ್ಲು. ಮಲತಾಯಿ ಸಂಚು ಅರಿಯದ ಕಂದಮ್ಮ, ಕೆಳಗ್ಗೆ ಬಿದ್ದಿದ್ದಳು. ಬಾಲಕಿ ಶಾನವಿ ಕೆಳಗೆ ಬೀಳುತ್ತಿದ್ದಂತೆ, ಯಾರಿಗೂ ಗೊತ್ತಾಗದಂತೆ ಓಡಿ ಹೋಗಿದ್ದಳು. ಆ ದೃಶ್ಯವು ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯ ಆಧರಿಸಿ ತನಿಖೆಗಿಳಿದ ಪೊಲೀಸ್ರು ಆರೋಪಿಯನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.


