ಕಾನ್ಪಿಡೆಂಟ್ ಗ್ರೂಪ್ ಅಂದ್ರೆ ಬೆಂಗಳೂರಿನ ರಿಯಲ್ ಎಸ್ಟೇಟ್ ವಲಯದಲ್ಲಿ ಭಾರೀ ಪ್ರಸಿದ್ಧಿ ಪಡೆದಿರುವ ಸಂಸ್ಥೆ ಅಂದ್ರೆ ತಪ್ಪಲ್ಲ. ಈ ಸಂಸ್ಥೆಯ ಮಾಲೀಕ ಸಿ.ಜೆ ರಾಯ್ ಸಾಕಷ್ಟು ಕೆಲಸಗಳ ಮೂಲಕ ತನ್ನನ್ನು ತಾನೂ ಗುರ್ತಿಸಿಕೊಂಡಿದ್ದರು. ಬಿಗ್ಬಾಸ್ ಸೀಸನ್ 11ರ ಕ್ಯಾಷ್ ಪ್ರೈಜ್ ಕೊಟ್ಟಿದ್ದರು. ಆ ಮೂಲಕ ಖ್ಯಾತಿ ಗಳಿಸಿದ ಬಳಿಕ ಕಳೆದ ಬಾರಿ ಅತಿ ಹೆಚ್ಚು ಅಂಕ ಗಳಿಸಿದ 201 ಮಕ್ಕಳಿಗೆ ತಲಾ 50 ಸಾವಿರ ರೂಪಾಯಿ ಸ್ಕಾಲರ್ಶಿಪ್ ಕೊಡುವ ಮೂಲಕ ಸಮಾಜಮುಖಿ ಕೆಲಸಗಳತ್ತ ಗಮನ ನೀಡಿದ್ದರು. ಇತ್ತೀಚಿಗೆ ತನ್ನ ಮೊದಲ ಕಾರು 800 ಎಲ್ಲಿದೆ ಅನ್ನೋದನ್ನು ಹುಡುಕಿಕೊಟ್ಟರೆ 1 ಲಕ್ಷ ಹಾಗೂ ಕಾರಿನ ಮಾಲೀಕರಿಗೆ 10 ಲಕ್ಷ ಕೊಡುವುದಾಗಿ ಘೋಷಣೆ ಮಾಡಿ ತನ್ನ ಕಾರು ಕ್ರೇಜ್ ಎಷ್ಟಿದೆ ಅನ್ನೋದನ್ನು ತೋರಿಸಿಕೊಂಡಿದ್ದರು. ಅದೇ ರೀತಿ ತನ್ನ ಬಳಿ ಹತ್ತಾರು ಐಶಾರಾಮಿ ಕಾರುಗಳನ್ನೂ ಹೊಂದಿದ್ದರು. ಆದರೂ ಆತ್ಮ-ಹತ್ಯೆಗೆ ಶರಣಾಗುವ ಮೂಲಕ ತನ್ನ ಸಂಸ್ಥೆಯ ಕಾನ್ಫಿಡೆಂಟ್ ಅನ್ನೋದನ್ನು ನಾಚಿಸುವಂತೆ ಮಾಡಿದ್ದಾರೆ.

ಉದ್ಯಮಿ ಸಿ.ಜೆ ರಾಯ್ ಆತ್ಮಹತ್ಯೆಗೆ ನಿಖರ ಕಾರಣ ಏನು ಅನ್ನೋದು ಇಲ್ಲೀವರೆಗೂ ಗೊತ್ತಾಗಿಲ್ಲ. ಆದರೆ ಕಾನ್ಫಿಡೆಂಟ್ ಗ್ರೂಪ್ ಮೇಲೆ ನಿರಂತರವಾಗಿ ( IT ) ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಂದ ದಾಳಿ ಆಗ್ತಿತ್ತು. ಮೊನ್ನೆ ಕೇರಳ ಕಚೇರಿ ಮೇಲೆ ದಾಳಿ ಮಾಡಿದ್ದ ಅಧಿಕಾರಿಗಳು ದಾಖಲೆ ಪತ್ರ ವಶಕ್ಕೆ ಪಡೆದಿದ್ದರು. ನಿನ್ನೆ ಬೆಂಗಳೂರಿನ ಕಾನ್ಫಿಡೆಂಟ್ ಗ್ರೂಪ್ ಕಚೇರಿ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದರು. ಮಧ್ಯಾಹ್ನದ ಬಳಿಕ ಲ್ಯಾಂಗ್ ಫೋರ್ಡ್ ರಸ್ತೆಗೆ ಬಂದ್ರು. ಕಚೇರಿಗೆ ಬಂದವರೇ ಗಾಬರಿಯಿಂದ ಒಳಕ್ಕೆ ಹೋದ್ರು. ಕಾರಿನಲ್ಲಿ ಬಂದವರು ಕೆಳಗಡೆ ಕಾರಿನಿಂದ ಇಳಿದು ಮೇಲೆ ನಡೆದುಕೊಂಡು ಬಂದರು. ಒಳಕ್ಕೆ ಬಂದವರೇ ಗನ್ ಮ್ಯಾನ್ ನ ಹೊರಗಡೆ ಇರೋಕೆ ಹೇಳಿದ್ದಾರೆ. ಅದರ ಜೊತೆಗೆ ಯಾರನ್ನು ಒಳಗಡೆ ಬಿಡಬೇಡ ಅಂತ ಹೇಳಿ ಹೋಗಿದ್ದಾರೆ. ಒಳಕ್ಕೆ ಹೋದವರೇ ತಮ್ಮ ಕೊಠಡಿಗೆ ಹೋಗಿ ಲಾಕ್ ಮಾಡಿಕೊಂಡಿದ್ದಾರೆ. 15 ನಿಮಿಷದ ಬಳಿಕ ಒಂದು ಶಬ್ದ ಬಂದಿದೆ. ಶಬ್ದ ಬಂದಾಗ ಹೋಗಿ ನೋಡಿದ್ರೆ ರಕ್ತದ ಮಡವಿನಲ್ಲಿ ಬಿದ್ದಿದ್ರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಪ್ರಯೋಜನೆ ಆಗಿಲ್ಲ. ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಆತ್ಮ*ಹತ್ಯೆಗೆ ಕಾರಣ ಏನು ಅಂತ ತನಿಖೆ ಮಾಡುವಂತೆ ದೂರು ನೀಡಲಾಗಿದೆ. ಸದ್ಯ ದೂರು ದಾಖಲಿಸಿರುವ ಅಶೋಕನಗರ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಆದರೆ ಇಲ್ಲೊಂದು ಅನುಮಾನ ಎಲ್ಲರನ್ನೂ ಕಾಡ್ತಿದೆ.

ರಿಯಲ್ ಎಸ್ಟೇಟ್ ವ್ಯವಹಾರ ಅಷ್ಟೇ ಅಲ್ಲದೆ ಹತ್ತಾರು ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಕೋಟ್ಯಂತರ ರೂಪಾಯಿ ವ್ಯವಹಾರ ಮಾಡುತ್ತಿದ್ದ ಸಿ.ಜೆ ರಾಯ್ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಗೆ ಹೆದರುವ ವ್ಯಕ್ತಿನಾ..? ಅನ್ನೋ ಪ್ರಶ್ನೆ ಮೂಡುತ್ತದೆ. ಕೋಟ್ಯಂತರ ರೂಪಾಯಿ ಸಾಲದ ಸುಳಿಗೆ ಸಿಲುಕಿದ್ರಾ..? ಅಂದ್ರೆ ಖಂಡಿತ ಇಲ್ಲ. ಸಾವಿರಾರು ಎಕರೆ ಭೂಮಿ ಮೇಲೆ ಬಂಡವಾಳ ಹೂಡಿಕೆ ಮಾಡಿದ್ದ ರಾಯ್, ಸಾಕಷ್ಟು ಲಾಭದಾಯಕ ಸಂಸ್ಥೆ ನಡೆಸುತ್ತಿದ್ರು. ಇತ್ತೀಚಿಗೆ ಕೇರಳ ಹಾಗೂ ದುಬೈನಲ್ಲೂ ವ್ಯವಹಾರ ವಿಸ್ತರಣೆ ಮಾಡುವ ತಯಾರಿ ಮಾಡಿದ್ದರು ಎಂದು ರಾಯ್ ಆಪ್ತಮೂಲಗಳು ತಿಳಿಸಿವೆ. ದುಬೈನಲ್ಲೇ ಕುಟುಂಬ ಸಮೇತರಾಗಿ ನೆಲೆಸಿದ್ದ ರಾಯ್, ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು. ಆದರೆ ಆದಾಯ ತೆರಿಗೆ ಇಲಾಖೆಯ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೊಂದು ಟ್ಯಾಕ್ಸ್ ಟೆರರಿಸಂ ಅಂತಾ ಪೋಸ್ಟ್ ಹಾಕುವ ಮೂಲಕ ಕೇಂದ್ರ ಸರ್ಕಾರವೇ ಹೊಣೆ ಎನ್ನುವಂತೆ ಹೇಳಿದೆ. ಆದರೆ ಒಂದು ವ್ಯವಹಾರ ಮಾಡುವಾಗ ಸಣ್ಣಪುಟ್ಟ ಲೋಪಗಳು ಖಂಡಿತವಾಗಿಯೂ ಆಗಿರುತ್ತದೆ. ಅದನ್ನು ತನಿಖಾ ಸಂಸ್ಥೆಗಳು ಪತ್ತೆ ಮಾಡಿದಾಗ ದಂಡ ವಿಧಿಸುವುದು, ನೋಟಿಸ್ ಕೊಡುವುದು, ತನಿಖೆ ಮಾಡುವುದು ಇದೆಲ್ಲವೂ ಸರ್ವೇ ಸಾಮಾನ್ಯ. ಇದೆಲ್ಲವೂ ಗೊತ್ತಿಲ್ಲದೆ ಅಷ್ಟೊಂದು ದೊಡ್ಡ ವ್ಯವಹಾರ ಮಾಡುತ್ತಿದ್ರಾ..? ಅನ್ನೋ ಪ್ರಶ್ನೆ ಸಹಜವಾಗಿಯೇ ಶುರುವಾಗುತ್ತದೆ.
C.J ರಾಯ್ ಅವರು ಇತ್ತೀಚಿಗೆ ತನ್ನ ಕಚೇರಿಯ ಸಿಸಿಟಿವಿಗಳನ್ನು ಬಂದ್ ಮಾಡಿದ್ದರು. ಯಾವುದೇ ಕಾರಣಕ್ಕೂ ಕಚೇರಿಗೆ ಯಾರು ಬಂದರು, ಯಾರು ಹೋದರು ಎನ್ನುವುದು ತಿಳಿಯದಂತೆ ಎಚ್ಚರಿಕೆ ವಹಿಸಿದ್ದರು ಎನ್ನಲಾಗ್ತಿದೆ. ಅಂದರೆ ತಿಂಗಳ ಹಿಂದೆಯೇ ಸಿಜೆ ರಾಯ್ಗೆ ತನ್ನ ಸಾವಿನ ಬಗ್ಗೆ ಗೊತ್ತಿತ್ತು ಅನ್ನೋದು ಈ ವಿಚಾರದಿಂದ ತಿಳಿಯುತ್ತದೆ. ತನ್ನ ವ್ಯವಹಾರಕ್ಕೆ ಸಂಬಂಧಿಸಿದವರೇ ದೂರದಲ್ಲಿ ನಿಂತು ಬೆದರಿಸುವ ಕೆಲಸ ಮಾಡಿದ್ರಾ..? ಅಂದ್ರೆ ಖಂಡಿತವಾಗಿಯೂ ಹೌದು ಎನ್ನುತ್ತಿದೆ ಸಾಂಧರ್ಭಿಕ ಸಂಗತಿಗಳು. ಆದರೆ IT ದಾಳಿ, ಅದರಿಂದಲೇ ಸತ್ತರು ಅನ್ನೋದೆಲ್ಲಾ ಸಮಾಜದ ಕಣ್ಣು ಒರೆಸುವ ಸಂಗತಿ ಆಗಿದೆ ಎನ್ನಬಹುದು. ಈಗ ತನಿಖೆ ಮಾಡಿ ಸಾವಿನ ಬಗ್ಗೆ ಸತ್ಯ ಸಂಗತಿಯನ್ನು ಹೊರಕ್ಕೆ ತರುತ್ತೇವೆ ಎಂದು ರಾಜಕಾರಣಿಗಳು ಹೇಳಬಹುದು. ಆದರೆ ಈ ಹಿಂದಿನ ಘಟನೆಗಳನ್ನು ನೋಡಿದಾಗ ಅದೆಲ್ಲಾ ಕೇವಲ ಭರವಸೆ ಅನ್ನೋದು ಜನರಿಗೆ ತಿಳಿಯದ ವಿಚಾರವೇನು ಅಲ್ಲ. ಇವತ್ತು ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರ ಮಾಡಲಿದ್ದು, ಬನ್ನೇರುಘಟ್ಟ ರಸ್ತೆಯಲ್ಲಿರುವ ಕಾನ್ಫಿಡೆಂಟ್ ಗ್ರೂಪ್ ಸಂಸ್ಥೆಯ ಜಮೀನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


