ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಡಿಜಿಯಾಗಿ ಅಲೋಕ್ ಕುಮಾರ್ ಅಧಿಕಾರ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕಾರ ಮಾಡಿದ ಬಳಿಕ ಮಾತನಾಡಿದ ಅಲೋಕ್ ಕುಮಾರ್, ಈಗಷ್ಟೇ ಚಾರ್ಜ್ ತೆಗೆದುಕೊಂಡಿದ್ದೇನೆ. ಕಾರಾಗೃಹ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡ್ತೀನಿ. ಮುಂದಿನ ದಿನಗಳಲ್ಲಿ ಏನೆಲ್ಲಾ ಬದಲಾವಣೆ ತರಬೇಕು ತರ್ತಿವಿ ಎಂದಿದ್ದಾರೆ. ಸ್ನೇಹಿತರಾಗಿ ಜೊತೆಯಲ್ಲಿ ಕೆಲಸ ಮಾಡೋಣ, ಕ್ರಿಮಿನಲ್ಗಳ ಜೊತೆ ಭಾಗಿಯಾಗೋದು, ಸಹಾಯ ಮಾಡೋದು ಮಾಡಿದ್ರೆ..! ಏನ್ ಮಾಡಬೇಕು ಗೊತ್ತಿದೆ ಎಂದು ಜೈಲು ಸಿಬ್ಬಂದಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಮೊದಲು ಜೈಲುಗಳಲ್ಲಿ ಏನೆಲ್ಲಾ ಸಮಸ್ಯೆ ಇದೆ. ಯಾರಿಂದ ಈ ಸಮಸ್ಯೆ ಆಗ್ತಿದೆ ಅದನ್ನು ನೋಡಬೇಕು. ಆಮೇಲೆ ಸಮಸ್ಯೆ ಪರಿಹಾರಕ್ಕೆ ಏನು ಮಾಡೋದು ಅಂತಾ ತೀರ್ಮಾನ ಮಾಡ್ತೀವಿ ಎನ್ನುವ ಮೂಲಕ ಜೈಲುಗಳು ಅಕ್ರಮದ ಗೂಡಾಗಲು ಬಿಡಲ್ಲ ಎಂದಿದ್ದಾರೆ. ರಾಜ್ಯದ ಎಲ್ಲಾ ಕಾರಾಗೃಹಗಳನ್ನೂ ನೋಡಿದ್ದೀನಿ. ಈ ಹಿಂದೆ ಬೆಂಗಳೂರು ಸೌತ್ನಲ್ಲಿ ಇದ್ದಾಗ, ಪರಪ್ಪನ ಅಗ್ರಹಾರವನ್ನೂ ನೋಡಿದ್ದೀನಿ. ಈಗ ಪರಿಸ್ಥಿತಿ ಹೇಗಿದೆ ಅನ್ನೋದನ್ನು ನೋಡಬೇಕು ಎಂದಿದ್ದಾರೆ. ಖಡಕ್ ಅಧಿಕಾರಿ ಎಂದೇ ಖ್ಯಾತಿ ಪಡೆದಿರುವ ಅಲೋಕ್ ಕುಮಾರ್ ಜೈಲಿನಲ್ಲಿ ಇರುವ ಕೈದಿಗಳ ಪಾಲಿಗೆ ಕಂಟಕ ಆಗೋದು ಫಿಕ್ಸ್ ಎನ್ನಲಾಗ್ತಿದೆ.

ಅಧಿಕಾರ ಸ್ವೀಕಾರ ಮಾಡಿದ ಕೂಡಲೇ ಜೈಲು ಅಧಿಕಾರಿಗಳಿಗೆ ವಾರ್ನಿಂಗ್ ಕೊಟ್ಟಿದ್ದು, ಜೈಲಿನಲ್ಲಿ ಇತ್ತೀಚೆಗೆ ಸಾಕಷ್ಟು ಬೆಳವಣಿಗೆಗಳು ಆಗಿವೆ. ಮುಂದೆ ಯಾವುದೇ ರೀತಿಯ ಬೆಳವಣಿಗೆಗಳು ಆಗಬಾರದು. ಜೈಲಿನಲ್ಲಿ ಹೇಗೆ ಸುಧಾರಣೆ ಮಾಡಬೇಕು ಅನ್ನೋದನ್ನ ನೋಡಬೇಕಾಗಿದೆ ಎಂದಿರುವ ಅಲೋಕ್ ಕುಮಾರ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ವಿಚಾರವಾಗಿ ಆಫೀಸರ್ಸ್ಗೆ ಕ್ಲಾಸ್ ಕೊಟ್ಟಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಲವು ರಾಜಾತಿಥ್ಯ ವೀಡಿಯೋಗಳು ವೈರಲ್ ಆಗಿವೆ. ಯಾವಾಗ ಆಯ್ತು..? ಅನ್ನೋದ್ರ ಜೊತೆಗೆ ಮಾಡಿದ್ದು ಯಾರು ಅಂತ ನನಗೆ ಮಾಹಿತಿ ಬೇಕು. ಯಾವ ಅಧಿಕಾರಿ, ಸಿಬ್ಬಂದಿ ಭಾಗಿಯಾಗಿದ್ದಾರೆ ಅನ್ನೋ ರಿಪೋರ್ಟ್ ಕೂಡ ಬೇಕು. ಸುಮ್ಮನೆ ತನಿಖೆ ಆಗ್ತಾ ಇದೆ, ವಿಚಾರಣೆ ಆಗ್ತಾ ಇದೆ ಅನ್ನೋ ಮಾತುಗಳು ಬೇಡ ಎಂದಿದ್ದಾರೆ.
ಕಳೆದ ಒಂದು ವರ್ಷದಲ್ಲಿ ದಾಖಲಾದ ಕೇಸ್ಗಳು ಹಾಗೂ ತನಿಖಾ ಹಂತದ ಬಗ್ಗೆ ವರದಿ ಕೇಳಿದ ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್, ಈ ವರ್ಷದಲ್ಲಿ 67 ಮೊಬೈಲ್ ಸಿಕ್ಕಿದೆ, 48 ಸಿಮ್ ಹಾಗೂ ಚಾಕುಗಳು ಸಿಕ್ಕಿವೆ. ಇದರ ಬಗ್ಗೆ ತನಿಖೆ ಆಗ್ತಾ ಇದೆ ಅಂತ ಸಭೆಯಲ್ಲಿ ಅಧಿಕಾರಿಗಳು ಹೇಳಿದ್ದಾರೆ. ಇಷ್ಟೊಂದು ಭದ್ರತೆ ಇದ್ದರೂ ಮೊಬೈಲ್ ಫೋನ್ ಜೈಲು ಒಳಗಡೆ ಹೋಗ್ತಾ ಇದೆ. ಭದ್ರತೆ ಇದ್ದು ಮೊಬೈಲ್ ಫೋನ್ ಒಳಕ್ಕೆ ಹೋಗ್ತಾ ಇದೆ ಅಂದ್ರೆ ನಮ್ಮವರೇ ಶಾಮೀಲು ಆಗಿದ್ದಾರೆ ಅಂತ ತಾನೆ ಅರ್ಥ..? ಅವರು ಯಾರು ಅನ್ನೋ ಬಗ್ಗೆ ತನಿಖೆ ಮಾಡಿ ವರದಿ ಕೊಡಿ ಅಂತ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇಂದಿನಿಂದಲೇ ಎಲ್ಲಾ ಜೈಲಿನಲ್ಲೂ ಅಕ್ರಮಗಳು ನಿಲ್ಲಬೇಕು. ಯಾವ ಕೈದಿಗೂ ಯಾವುದೇ ರಾಜಾತಿಥ್ಯ ಕೊಡಲು ಸರ್ಕಾರ ಹೇಳಿಲ್ಲ. ಅದು ಮೀರಿ ರಿಸ್ಕ್ ತಗೊಂಡು ರಾಜಾತಿಥ್ಯ ನೀಡಿದ್ರೆ..! ನಿಮ್ಮ ತಿಥಿ ಮಾಡ್ತೀನಿ.. ಅಂದಿದ್ದಾರೆ ಎನ್ನಲಾಗಿದೆ. ಇನ್ನೂ ಜೈಲಿನಲ್ಲಿ ಅಳವಡಿಸಿರುವ ಜಾಮರ್ ಬಗ್ಗೆ ಅಲೋಕ್ ಕುಮಾರ್ಗೆ ದೂರು ಬಂದಿದ್ದು, ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಸ್ಥಳೀಯರು ದೂರು ಸಲ್ಲಿಸಿದ್ದಾರೆ. ಜೈಲಿಗೆ ಜಾಮರ್ ಅಂತ ಹಾಕಿದ್ದಾರೆ. ಆದರೆ ಅದು ನಮ್ಮ ಮನೆಗೂ ಜಾಮರ್ ಎಫೆಕ್ಟ್ ಆಗ್ತಿದೆ. ಎಮರ್ಜೆನ್ಸಿಗೂ ಯಾರನ್ನು ಸಂಪರ್ಕ ಮಾಡಲು ಆಗ್ತಾ ಇಲ್ಲ. ನೀವಾದ್ರೂ ನಮ್ಮ ಸಮಸ್ಯೆ ಬಗೆಹರಿಸಿ ಅಂತ ಫೋನ್ ಮೂಲಕ ದೂರು ನೀಡಿದ್ದಾರೆ. ಒಂದು ವಾರದಲ್ಲಿ ನೇರವಾಗಿ ಬಂದು ಮಾಹಿತಿ ಪಡೆಯೋದಾಗಿ ಹೇಳಿರುವ ಅಲೋಕ್ ಕುಮಾರ್, ಜಾಮರ್ ಸಮಸ್ಯೆ ನಿವಾರಣೆಗೆ ಹೊಸ ಯೋಜನೆ ರೂಪಿಸುವ ಭರವಸೆ ನೀಡಿದ್ದಾರಂತೆ..


