ಬಿಗ್ಬಾಸ್ ಕನ್ನಡ ರಿಯಾಲಿಟಿ ಶೋ ನಡೆಯುತ್ತಿದ್ದ ಬಿಡದಿಯ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸಿಲ್ಲ ಅನ್ನೋ ಕಾರಣಕ್ಕೆ ಮಂಗಳವಾರ ಸಂಜೆಯೇ ರಾಮನಗರ ತಹಶೀಲ್ದಾರ್ ಬೀಗ ಹಾಕಿದ್ದರು. ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿರುವ ಕಾರಣಕ್ಕೆ ಬಂದ್ ಮಾಡಲಾಗಿದೆ ಎಂದು ಹೇಳಿದರೂ ರಾಜಕೀಯ ಕಾರಣಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಬೀಗ ಹಾಕಿಸಿದ್ದಾರೆ ಅನ್ನೋ ಆರೋಪವೂ ಕೇಳಿಬಂದಿತ್ತು. ಅದನ್ನು ತಾಳೆ ಮಾಡಿ ನೋಡಲು ಸೂಕ್ತ ಸಮಯವೂ ಇದಾಗಿತ್ತು. ಸಮಯ ಬಂದಾಗ ನಟ್ಟು ಬೋಲ್ಟ್ ಟೈಟ್ ಮಾಡ್ತೇನೆ ಎಂದಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ಗೆ ನಟ ಸುದೀಪ್ ಕೂಡ ಠಕ್ಕರ್ ಕೊಟ್ಟಿದ್ದರು. ಬಿಸಿಯೇರಿದ್ದ ಮಾತುಕತೆಯೂ ನಡೆದಿತ್ತು. ಇದೀಗ ಬಿಗ್ಬಾಸ್ ಹೋಸ್ಟ್ ಮಾಡುತ್ತಿದ್ದಾರೆ. ಅದೇ ಕಾರಣಕ್ಕೆ ಈಗ ಬಿಗ್ಬಾಸ್ ಮನೆಗೆ ಬೀಗ ಹಾಕಲಾಗಿದೆ ಅನ್ನೋ ರೀತಿ ಜಾಲತಾಣದಲ್ಲಿ ಚರ್ಚೆಗಳು ಶುರುವಾಗಿದ್ದವು.

ಡಿ.ಕೆ ಶಿವಕುಮಾರ್ ಈ ಬಗ್ಗೆ ಮಾತನಾಡಿ, ನಾನು ಯಾವುದೇ ದ್ವೇಷ ಮಾಡಿಲ್ಲ, ನಾನೇ ಜಾಲಿವುಡ್ ಉದ್ಘಾಟನೆ ಮಾಡಿದ್ದು. ಈಗ ಬಿಗ್ಬಾಸ್ ಕಾರ್ಯಕ್ರಮಕ್ಕೆ ತೊಂದರೆ ಆಗದಂತೆ 10 ದಿನಗಳ ಕಾಲಾವಕಾಶ ನೀಡಲು ಸೂಚನೆ ಕೊಟ್ಟಿದ್ದೇನೆ ಎಂದಿದ್ದರು. ಜಾಲಿವುಡ್ ಆಡಳಿತ ಮಂಡಳಿಯ ಮನವಿ ಮೇರೆಗೆ ಜಿಲ್ಲಾಡಳಿತ 10 ದಿನ ಸಮಾಯವಕಾಶ ನೀಡಿದೆ. 10 ದಿನದಲ್ಲಿ ಎಲ್ಲಾ ನಿಯಮ ಸರಿಪಡಿಸಿಕೊಳ್ಳಲು ಅವಕಾಶ ನೀಡಲಾಗಿದೆ. ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಾಣ ಮಾಡಬೇಕಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿಯೇ ತಿಳಿಸಿದ್ರು. ಆದರೆ ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಮಾತನ್ನು ಸಾರಸಗಟಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ತಳ್ಳಿ ಹಾಕಿದ್ರು. ಅಸಲಿಗೆ ಜಾಲಿವುಡ್ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮ ಉಲ್ಲಂಘನೆ ವಿಚಾರವಾಗಿ ಡಿಸಿ ಅನುಮತಿ ಕೊಡುವುದಕ್ಕೆ ಅವಕಾಶವೇ ಇಲ್ಲ ಎಂದುಬಿಟ್ಟರು.

ಜಾಲಿವುಡ್ ಸ್ಟುಡಿಯೋ ಬಂದ್ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ನರೇಂದ್ರ ಸ್ವಾಮಿ ಮಾತನಾಡಿದ್ದಾರೆ.. ಜಾಲಿವುಡ್ ಸ್ಟುಡಿಯೋ ಓಪನ್ ಮಾಡಲು ನಾವು ಇದುವರೆಗೂ ಯಾವುದೇ ತೀರ್ಮಾನ ಮಾಡಿಲ್ಲ. ಜಾಲಿವುಡ್ಗೆ ನಾವು ಕ್ಲೋಸರ್ ಆರ್ಡರ್ ಕೊಟ್ಡಿದ್ದು, ಬಿಗ್ಬಾಸ್ ಕಾರ್ಯಕ್ರಮಕ್ಕೆ ಅಲ್ಲ. ಜಾಲಿವುಡ್ ಬಿಗ್ ಬಾಸ್ನವ್ರಿಗೆ ಮಾಹಿತಿ ಕೊಡದೇ ಮೋಸ ಮಾಡಿರಬೇಕು. ನಾವು ಬಿಗ್ಬಾಸ್ ವಿರುದ್ಧವಾಗಿ ಯಾವುದೇ ಕ್ರಮಕೈಗೊಂಡಿಲ್ಲ ಎಂದಿದ್ದಾರೆ. ಇನ್ನು 10 ದಿನ ಕಾಲಾವಕಾಶ ಕೊಡೋ ವಿಚಾರದ ಬಗ್ಗೆ ನಮಗೆ ಯಾವುದೇ ಮನವಿ ಬಂದಿಲ್ಲ, ಅವಕಾಶ ನೀಡೋದು ಇಲ್ಲ ಎಂದಿದ್ದರು. ಪರಿಸರದ ಕಾಳಜಿ ಇಟ್ಟುಕೊಂಡು ನಡೆಸ್ತೀವಿ ಅಂದ್ರೆ ನಿರ್ದೇಶನ ಕೊಡಬಹುದು. ಜಾಲಿವುಡ್ 30 ಎಕರೆ ಪ್ರದೇಶ, ಬಿಗ್ಬಾಸ್ ನಡೆಯುತ್ತಿರೋದು ಕೇವಲ 1 ಎಕರೆ ಪ್ರದೇಶದಲ್ಲಿ. ಜಾಲಿವುಡ್ಗೆ ನೋಟಿಸ್ ಕೊಟ್ಟು 2 ವರ್ಷ ಆಯ್ತು. ನೋಟಿಸ್ ಕೊಟ್ಟರೂ ಎಚ್ಚೆತ್ತುಕೊಂಡಿಲ್ಲ ಅಂದಾಗ ಕಾನೂನು ಕ್ರಮ ಕೈಗೊಂಡಿದ್ದೀವೆ ಎಂದಿದ್ದರು.

ಆದರೆ, ಮಧ್ಯರಾತ್ರಿ ಟ್ವೀಟ್ (X Post) ಮಾಡಿದ ಡಿಸಿಎಂ ಡಿಕೆ ಶಿವಕುಮಾರ್, ಜಾಲಿವುಡ್ ಲಾಕ್ ಓಪನ್ ಮಾಡುವಂತೆ ನಾನು ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ. ಜೊತೆಗೆ ಪರಿಸರ ಕಾಳಜಿಯನ್ನು ಮಾಡಿಕೊಳ್ಳಲು ಜಾಲಿವುಡ್ಗೆ ಸಮಯಾವಕಾಶ ಕೊಟ್ಟಿದ್ದೇವೆ. ಕರ್ನಾಟಕದಲ್ಲಿ ಎಂಟರ್ಟೈನ್ಮೆಂಟ್ ಇಂಡಸ್ಟ್ರಿ ಬೆಳೆಯುವುದಕ್ಕೆ ನಾವು ಸಹಕಾರ ನೀಡ್ತೇವೆ ಎಂದು ಬರೆದುಕೊಂಡಿದ್ದಾರೆ. ಇದನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು ಹೇಳಿದ್ದರು. ಜಿಲ್ಲಾಧಿಕಾರಿ ಕೂಡ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ಕೊಟ್ಟರೆ ನಾವು ಸೀಜ್ ತೆರವು ಮಾಡ್ತೇವೆ ಎಂದಿದ್ದರು. ಆದರೆ ಮಧ್ಯರಾತ್ರಿ ಆಗಿದ್ದೇನು..? ಹೈಕೋರ್ಟ್ನಲ್ಲಿ PIL ಸಲ್ಲಿಕೆ ಆಗಿತ್ತು. ಇವತ್ತು ವಿಚಾರಣೆಗೆ ಬರಬೇಕಿತ್ತು. ಹೀಗಿರುವಾಗ ಏಕಾಏಕಿ ಬೀಗ ಓಪನ್ ಮಾಡುವ ನಿರ್ಧಾರ ಮಾಡಿದ್ಯಾಕೆ..? ಬೀಗ ತೆರವು ಮಾಡುವುದೇ ಆಗಿದ್ದರೆ ಬುಧವಾರ ಮಧ್ಯಾಹ್ನವೇ ಹೇಳಿದಾಗ ಡಿಸಿಎಂ ಮಾತನ್ನು ಯಾರು ಒಪ್ಪಲಿಲ್ಲ..? ಕಾಂಗ್ರೆಸ್ ಸರ್ಕಾರದಲ್ಲೇ ಸಾಕಷ್ಟು ಗೊಂದಲ ಇರುವುದು ಈ ಪ್ರಕರಣದಿಂದ ಬಟಾಬಯಲಾಗಿದೆ.


