ರಾಜ್ಯ ಸಚಿವ ಸಂಪುಟದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಬರೋಬ್ಬರಿ 60 ಕ್ರಿಮಿನಲ್ ಪ್ರಕರಣಗಳ ವಾಪಸ್ ಪಡೆಯಲು ನಿರ್ಧಾರ ಮಾಡಲಾಗಿದೆ. ಈ ಬಗ್ಗೆ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಮಾಹಿತಿ ನೀಡಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅಕ್ರಮ ಕಾಮಗಾರಿ ಆರೋಪದ ಬಗ್ಗೆ ನ್ಯಾ.ನಾಗಮೋಹನ್ ದಾಸ್ ವರದಿ ಕೊಟ್ಟಿದ್ದು, ಆ ವರದಿಯನ್ನ ಸಂಪುಟ ಸ್ವೀಕಾರ ಮಾಡಿದೆ. ವರದಿ ಬಗ್ಗೆ ಅಧ್ಯಯನ ಮಾಡಬೇಕಿದೆ. ಅಧ್ಯಯನದ ನಂತರ ಸೂಕ್ತ ಕ್ರಮಕ್ಕೆ ನಿರ್ಧಾರ ಮಾಡಲಿದೆ ಎಂದಿದ್ದಾರೆ.

ಕೇಸ್ ಹಿಂಪಡೆವ ನಿರ್ಧಾರ.. ಯಾವ ಕೇಸ್..?
ಡಿ.ಕೆ ಶಿವಕುಮಾರ್ ಬೆಂಬಲಿಗರ ಕೇಸ್ ವಾಪಸ್ ಪಡೆಯಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಕ್ಯಾಬಿನೆಟ್ ಸಭೆಯಲ್ಲಿ ಕೇಸ್ಗಳನ್ನು ವಾಪಸ್ ಪಡೆಯುವ ನಿರ್ಧಾರ ಮಾಡಿತ್ತು. 62 ಕ್ರಿಮಿನಲ್ ಕೇಸ್ಗಳ ಪೈಕಿ, ಹನ್ನೊಂದು ಕೇಸ್ಳು ಡಿ.ಕೆ ಶಿವಕುಮಾರ್ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಮೇಲಿನ ಕೇಸ್ಗಳು ಎನ್ನುವುದು ಗೊತ್ತಾಗಿದೆ. ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಆಪ್ತರ 11 ಪ್ರಕರಣಗಳನ್ನು ಸಂಪುಟ ಸಭೆ ಕೈಬಿಡಲು ತೀರ್ಮಾನ ಕೈಗೊಂಡಿದೆ. 2019ರಲ್ಲಿ ಡಿ.ಕೆ ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಬಂಧಿಸಿದ್ದ ಸಮಯದಲ್ಲಿ ಬಂಧನ ಖಂಡಿಸಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಅಂದು ಡಿ.ಕೆ ಶಿವಕುಮಾರ್ ಬೆಂಬಲಿಗರ ವಿರುದ್ಧ ಕೇಸು ದಾಖಲಾಗಿದ್ದು, 11 ಪ್ರಕರಣಗಳಲ್ಲಿ ಡಿ.ಕೆ ಶಿವಕುಮಾರ್ ಬೆಂಬಲಿಗರು, ಕಾರ್ಯಕರ್ತರು ಸಿಲುಕಿದ್ದರು. ಆ ಕೇಸ್ಗಳನ್ನು ಸರ್ಕಾರ ವಾಪಸ್ ಪಡೆಯುತ್ತಿದೆ.

ದನಗಳ್ಳರ ಪರವಾಗಿ ಪೊಲೀಸರ ಮೇಲೆ ಕಲ್ಲೆಸೆದವರ ಕೇಸ್ ವಾಪಸ್ ಪಡೆಯುವುದಕ್ಕೆ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದೆ. ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮೇರೆಗೆ ಪ್ರಕರಣ ಕೈ ಬಿಡಲು ರಾಜ್ಯ ಸರ್ಕಾರ ಸಮ್ಮತಿ ಸೂಚಿಸಿದೆ. 12-8-2019ರಲ್ಲಿ ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 11-8-2019ರ ರಾತ್ರಿ ಪೊಲೀಸ್ ಠಾಣೆ ಮುಂಭಾಗ ನಡೆದ ಕಲ್ಲುತೂರಾಟ ವಿಚಾರದಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ರಮವಾಗಿ ದನ ಸಾಗಿಸುತ್ತಿದ್ದ ಬೊಲೆರೋ ವಾಹನ ಬಿಡುವಂತೆ ಆಗ್ರಹಿಸಲಾಗಿತ್ತು. ಪೊಲೀಸರು ವಿಚಾರಣೆ ಮಾಡಿ ಬಿಡೋದಾಗಿ ಭರವಸೆ ನೀಡಿದ್ದರೂ ಠಾಣೆ ಮಂದೆ ಜಮಾವಣೆ ಆಗಿದ್ದ ಜನ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕಲ್ಲು ತೂರಾಟ ಮಾಡಿದ್ದರು.
ಅಕ್ರಮವಾಗಿ ದನ ಸಾಗಿಸುತ್ತಿದ್ದ ಬುಲೇರೋ ವಾಹನವನ್ನ ಪೊಲೀಸ್ ಠಾಣೆಗೆ ಒಪ್ಪಿಸಲಾಗಿತ್ತು. ಆ ವಾಹನವನ್ನ ಬಿಡಬೇಕೆಂದು ಆಗ್ರಹಿಸಿ ಜಮಾವಣೆಯಾಗಿದ್ದ ಮುಸ್ಲಿಂ ಸಮುದಾಯದ ಕೆಲವರು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಕಲ್ಲು ತೂರಿದ್ದರು. ಆ ಕಾರಣಕ್ಕೆ ಪುಂಡರ ಮೇಲೆ ಪ್ರಕರಣ ದಾಖಲಾಗಿತ್ತು. ಶೇಖ್ ಮೊಸಿನ್, ಮಹ್ಮದ್ ಫಯಾಜ್, ಮಹ್ಮದ್ ಯೂಸುಫ್, ಇಮ್ರಾನ್, ನೂರ್ ಮಹ್ಮದ್, ಮಹ್ಮದ್ ಝಾಕೀರ್, ಮಹ್ಮದ್ ವಾಜೀದ್, ಮುಜಾಹಿದ್, ಮಹ್ಮದ್ ಖಲೀಲ್, ಇಕ್ಬಾಲ್, ರಿಯಾಜ್, ಫಾರುಖ್, ಬಾಬ ಸೌಧಾಗರ್ ಗುಂಪುಗೂಡಿ ಪೊಲೀಸರತ್ತ ಕಲ್ಲು ಎಸೆದಿದ್ದರು. ಇದೀಗ ಈ ಪ್ರಕರಣವನ್ನ ರಾಜ್ಯ ಸರ್ಕಾರ ಕೈ ಬಿಟ್ಟಿದೆ.
ಕಾಂಗ್ರೆಸ್ ಕಾರ್ಯಕರ್ತರು ಅನ್ನೋ ಕಾರಣಕ್ಕೆ, ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತದೆ ಅನ್ನೋ ಕಾರಣಕ್ಕೆ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ಪಡೆಯುವುದು ಅಕ್ಷಮ್ಯ ಅಪರಾಧ. ಕೆಲವೊಮ್ಮೆ ಸಾಮಾಜಿಕ ಕಳಕಳಿಯಿಂದ ಪ್ರತಿಭಟನೆ ಮಾಡಲಾಗುತ್ತದೆ. ಆಸಮಯದಲ್ಲೂ ಕೇಸ್ಗಳನ್ನು ಹಾಕುವುದು ನಡೆದಿರುತ್ತದೆ. ಇನ್ನು ಕೆಲವೊಮ್ಮೆ ಯಾರೋ ಸತ್ತಾಗ, ಯಾವುದೋ ಅಪಘಾತ ಆದಾಗ ಜನರು ಕೋಪದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಿರ್ತಾರೆ, ಆ ರೀತಿಯಲ್ಲಿ ಕೇಸ್ ಹಾಕಿಸಿಕೊಂಡವರು, ಕನ್ನಡಕ್ಕಾಗಿ ಪ್ರತಿಭಟನೆ ಮಾಡಿ ಕೇಸ್ ಹಾಕಿಸಿಕಕೊಂಡು ಕೋರ್ಟ್ ಅಲೆದಾಡುವ ಜನರ ಪ್ರಕರಣ ವಾಪಸ್ ಪಡೆದರೆ ಅದಕ್ಕೊಂದು ನ್ಯಾಯ ಅನ್ನೋದಾದರೂ ಇರುತ್ತದೆ. ಆದರೆ ಕ್ರಿಮಿನಲ್ಗಳ ಕೇಸ್ ವಾಪಸ್ ಪಡೆದರೆ ಅದರಿಂದ ಸಮಾಜಕ್ಕೆ ಆಗುವುದು ಏನು ಇಲ್ಲ ಅನ್ನಬಹುದು.


