ರಾಜ್ಯಾದ್ಯಂತ ಕಬ್ಬು ಬೆಳೆಗಾರರ ಆಕ್ರೋಶಕ್ಕೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಒಂದು ನಿರ್ಣಯಕ್ಕೆ ಬರುವಲ್ಲಿ ಯಶಸ್ವಿ ಆಗಿವೆ. ಕಳೆದ ಮೂರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದ ಸಿಎಂ ಸಿದ್ದರಾಮಯ್ಯ, ಭಾರೀ ಮಳೆಯಿಂದ ರಾಜ್ಯದಲ್ಲಿ ಬೆಳೆ ಹಾನಿ ವಿಚಾರ, ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವ ವಿಚಾರ, ಮೇಕೆದಾಟು ಯೋಜನೆ, ಜಲಜೀವನ್ ಯೋಜನೆಗೆ ಬಾಕಿ ಹಣ, ಮಹದಾಯಿ ವಿಚಾರವಾಗಿಯೂ ಚರ್ಚೆ ನಡೆಸಿದ್ದೇನೆ ಎಂದಿದ್ದರು. ಈಗ ಪ್ರತಿ ಕೆಜಿ ಸಕ್ಕರೆ ಕೇಂದ್ರ ಸರ್ಕಾರ 31 ರೂಪಾಯಿ ಬೆಂಬಲ ಬೆಲೆ ನೀಡುತ್ತಿದ್ದು, ಅದನ್ನು ₹41 ರೂಪಾಯಿಗೆ ಹೆಚ್ಚಳ ಮಾಡಬೇಕು. ಇದರಿಂದ ರೈತರಿಗೆ ಕೊಂಚ ಸಹಕಾರಿ ಆಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಇದೀಗ ರಾಜ್ಯದ ಆಗ್ರಹಕ್ಕೆ ಕೇಂದ್ರ ಸರ್ಕಾರ ಮನ್ನಣೆ ನೀಡಿದೆ.

ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಕ್ಕರೆ ದರ ಹೆಚ್ಚಳ ಮಾಡೋದಕ್ಕೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದಾರೆ. ಹಲವು ವರ್ಷಗಳಿಂದ ಸಕ್ಕರೆ ದರ ಹೆಚ್ಚಳ ಆಗಿರಲಿಲ್ಲ. ಕೇವಲ 31 ರೂಪಾಯಿ ದರ ಇತ್ತು. 41 ರೂಪಾಯಿ ಮಾಡುವಂತೆ ಮನವಿ ಮಾಡಿದ್ದೆವು. ಇದೀಗ 40 ರೂಪಾಯಿ ಮಾಡಲು ಚಿಂತನೆ ಮಾಡಿದ್ದಾರೆ. ಒಳ್ಳೇದು ಅಂದಿದ್ದಾರೆ. ಹುಬ್ಬಳ್ಳಿಯಲ್ಲಿ ಸಚಿವ ಸಂತೋಷ್ ಲಾಡ್ ಮಾತನಾಡಿ, ಸಿಎಂ ಸಿದ್ದರಾಮಯ್ಯ ಪ್ರಧಾನಿ ನರೇಂದ್ರ ಮೋದಿ ಎದುರು ಒಟ್ಟು 5 ಬೇಡಿಕೆಗಳನ್ನು ಇಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಏನ್ ಮಾಡ್ತಾರೋ ನೋಡೋಣ ಎಂದಿದ್ದಾರೆ.

ಸಕ್ಕರೆ ದರ ಹೆಚ್ಚಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿರ್ಧಾರ ವಿಚಾರವಾಗಿ ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಸಕ್ಕರೆ ಕಾರ್ಖಾನೆ ಮಾಲೀಕರು ಗಲಾಟೆ ಮಾಡಿದ್ದಾರೆ. ಸಿಎಂ ಹಾಗೂ ನನ್ನ ಜೊತೆಗೆ ಚರ್ಚೆ ಮಾಡಿದ್ದಾರೆ. ದರ ಹೆಚ್ಚಳ ಮಾಡಿ ಹತ್ತು ವರ್ಷವಾಗಿದೆ ಅಂತ ಗಲಾಟೆ ಮಾಡಿದ್ದಾರೆ. ಅದನ್ನು ಪ್ರಧಾನಿ ಮೋದಿಗೆ ಮನವಿ ಮಾಡಿದ್ದೇವೆ. ರೈತರಿಗೂ ಒಳ್ಳೆಯದಾಗಬೇಕು, ಸಕ್ಕರೆ ಕಾರ್ಖಾನೆ ಮಾಲೀಕರಿಗೂ ಒಳ್ಳೆಯದಾಗಬೇಕು. ರೈತರು ಇದ್ರೆ ಫ್ಯಾಕ್ಟರಿ, ಫ್ಯಾಕ್ಟರಿ ಇದ್ದರೆ ರೈತರು. ಉದ್ಯಮ ಕೂಡ ನಡೆಯಬೇಕು. ತೀರ್ಮಾನ ಮಾಡೋದು ಕೇಂದ್ರ ಸರ್ಕಾರ. ಹೀಗಾಗಿ ನಾವು ಒತ್ತಡ ಹಾಕಿದ್ದೇವೆ. ದರ ನಿಗದಿ, ಮೊಲಾಸಸ್, ವಿದ್ಯುತ್ ದರ ನಿರ್ಧಾರ ಮಾಡೋದು ಕೂಡ ಕೆಂದ್ರ ಸರ್ಕಾರ. ಎಲ್ಲರಿಗೂ ನ್ಯಾಯ ಒದಗಿಸಬೇಕು ಅಂತ ಹೇಳಿದ್ದೇವೆ, ನೋಡೋಣ. ಈಗ ಪ್ರಹ್ಲಾದ್ ಜೋಶಿ ಅವರು ತೆಗೆದುಕೊಂಡಿರುವ ನಿರ್ಧಾರದಿಂದ ಸಂತೋಷ ಆಗಿದೆ ಎಂದಿದ್ದಾರೆ.

ಸಕ್ಕರೆ ದರ ಹೆಚ್ಚಳ ಆದರೆ ಸಹಜವಾಗಿಯೇ ಕಾರ್ಖಾನೆಗಳಿಗೆ ಹಣ ಹೆಚ್ಚಿಗೆ ಬರುತ್ತದೆ. ಆಗ ಮತ್ತೆ ರೈತರಿಗೂ ಅದರ ಪಾಲು ಸಿಗುವಂತಾಗಬೇಕು. ಇಲ್ಲದಿದ್ರೆ ಮತ್ತೆ ಸಮಸ್ಯೆ ಬಂದೇ ಬರುತ್ತದೆ. ಈಗ ಹೆಚ್ಚಳ ಆಗಿರುವ ಹಣ ರಾಜ್ಯಾದ್ಯಂತ ಏಕರೂಪ ದರ ನಿಗದಿ ಆಗಬೇಕು ಅನ್ನೋ ಒತ್ತಾಯಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಯಾವ ರೀತಿಯಲ್ಲಿ ಸ್ಪಂದಿಸ್ತಾರೆ ಅನ್ನೋದನ್ನು ಕಾದು ನೋಡ್ಬೇಕು. ಇಲ್ಲದಿದ್ರೆ ರಾಜ್ಯದ ಇರತೆ ಕಡೆಯ ರೈತರು ಪ್ರತಿಭಟನೆ ನಡೆಸುವುದು ನಿಶ್ಚಿತ. ಇದೀಗ ಒಂದೆರೆಡು ಕಡೆ ಹೋರಾಟ ನಿಂತಿದೆ. ಕಲಬುರಗಿಯಲ್ಲಿ ಹೋರಾಟ ಇನ್ನೂ ಜೀವಂತವಾಗಿದೆ. ಸಕ್ಕರೆ ಸಮಸ್ಯೆ ಜಟಿಲ ಆಗದಂತೆ ಸರ್ಕಾರಗಳು ಎಚ್ಚರ ವಹಿಸಿದ್ರೆ ಉತ್ತಮ ಎನ್ನಬಹುದು.


