ಬಯಲು ಸೀಮೆ ಬಿಸಿಲನಾಡು ಕಲಬುರಗಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಕಲಬುರಗಿ ಹೊರವಲಯದ ಪಾಣೆಗಾಂವ್ ಗ್ರಾಮದ ಸಮೀಪ ಹೊಲದಲ್ಲಿ ಚಿರತೆ ಕಾಣಿಸಿಕೊಂಡಿದೆ. ಅಷ್ಟೇ ಅಲ್ಲದೆ ಹೊಲದಲ್ಲಿ ಕಟ್ಟಿದ್ದ ಎತ್ತಿನ ಮೇಲೆ ಚಿರತೆ ದಾಳಿಯನ್ನೂ ಮಾಡಿದೆ. ಎತ್ತಿನ ಮುಖಕ್ಕೆ ಪಂಜಾ ( ಕೈ ಉಗುರು) ನಿಂದ ಆಕ್ರಮಣಕ್ಕೆ ಮಾಡಿರುವ ಚಿರತೆ ತಿನ್ನಲು ಯತ್ನಿಸಿದೆ.
ಚಿರತೆಯನ್ನು ಕಂಡು ನಾಯಿಗಳು ಬೊಗಳುತ್ತಿರುವುದನ್ನು ಕಂಡ ಸ್ಥಳೀಯರು, ಸ್ಥಳಕ್ಕೆ ಓಡಿ ಬಂದಿದ್ದು, ಜನರ ಕೂಗಾಟ ಕಂಡು ಸ್ಥಳದಿಂದ ಪರಾರಿಯಾಗಿದೆ ಚಿರತೆ. ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎತ್ತಿನ ಮುಖದ ಮೇಲೆ ದಾಳಿ ಮಾಡಿರುವುದನ್ನು ನೋಡಿದ ಅರಣ್ಯ ಇಲಾಖೆ ಅಧಿಕಾರಿಗಳು, ಚಿರತೆಯ ಹೆಜ್ಜೆ ಗುರುತು ಪತ್ತೆ ಹಚ್ಚಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಪಾಣೆಗಾಂವ್ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಅಧಿಕಾರಿಗಳ ಸೂಚನೆ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆ ಮೇರೆಗೆ ಗ್ರಾಮದಲ್ಲಿ ಡಂಗೂರ ಸಾರುವ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡುವ ಕೆಲಸ ಮಾಡಿದ್ದಾರೆ ಗ್ರಾಮ ಪಂಚಾಯತ್ ಅಧಿಕಾರಿಗಳು. ಜೊತೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪಾಣೆಗಾಂವ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರ ಗಸ್ತು ಮಾಡುವ ಮೂಲಕ ಚಿರತೆ ಪತ್ತೆಗೆ ಮುಂದಾಗಿದ್ದಾರೆ. ಚಿರತೆಯ ಇರುವಿಕೆಯ ಬಗ್ಗೆ ಇನ್ನಷ್ಟು ಖಚಿತ ಮಾಹಿತಿ ಸಿಕ್ಕರೆ ಬೋನ್ ಇಟ್ಟು ಸೆರೆ ಹಿಡಿಯಲು ಕ್ರಮ ಎಂದಿದ್ದಾರೆ ಅಧಿಕಾರಿಗಳು. ಆದರೆ ಚಿರತೆ ಪ್ರತ್ಯಕ್ಷ ಹಿನ್ನಲೆ ಪಾಣೆಗಾಂವ್ ಗ್ರಾಮಸ್ಥರು ಆತಂಕದಲ್ಲಿ ಜೀವನ ನಡೆಸುವಂತಾಗಿದೆ. ‘
ಚಿರತೆ ದಾಳಿ ಮಾಡುವ ಭೀತಿಯಲ್ಲಿ ಹೆದರಿದ ಕೃಷಿ ಕಾರ್ಮಿಕರು, ಹೊಲದ ಕೆಲಸಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಮನೆಯಲ್ಲಿದ್ದರೂ ನೆಮ್ಮದಿಯಾಗಿ ನಿದ್ರಿಸಲು ಆಗುತ್ತಿಲ್ಲ ಎಂದು ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಪತ್ತೆ ಹಚ್ಚಿ ಸೆರೆ ಹಿಡಿಯುವಂತೆ ಪಾಣೆಗಾಂವ್ ಗ್ರಾಮಸ್ಥರು ಅಧಿಕಾರಿಗಳನ್ನು ಆಗ್ರಹ ಮಾಡಿದ್ದಾರೆ. ಉತ್ತಮ ಮಳೆಯಾಗುತ್ತಿರುವ ಈ ಹೊತ್ತಿನಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಚಿರತೆ ಪ್ರತ್ಯಕ್ಷವಾಗಿರುವುದು ರೈತರ ಪಾಲಿಗೆ ಸಂಕಷ್ಟ ತಂದಂತಾಗಿದೆ.



