ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ಡಿ.ಕೆ ಶಿವಕುಮಾರ್ ನಿವಾಸ ಸದ್ಯಕ್ಕೆ ಪವರ್ ಹೌಸ್ ಆಗಿ ಮಾರ್ಪಟ್ಟಿದೆ. ಸಾಕಷ್ಟು ಶಾಸಕರು, ಪರಿಷತ್ ಸದಸ್ಯರು ಈಗಾಗಲೇ ಭೇಟಿ ನೀಡಿ ಮಾತುಕತೆ ನಡೆಸಿ ವಾಪಸ್ ಆಗ್ತಿದ್ದಾರೆ. ಕಾಂಗ್ರೆಸ್ನಲ್ಲಿ ಬದಲಾಗುತ್ತಿರುವ ಪರಿಸ್ಥಿತಿ ಅವಲೋಕಿಸಿದ್ರೆ ಮುಂದಿನ ಸಿಎಂ ಡಿ.ಕೆ ಶಿವಕುಮಾರ್ ಎಂದೇ ಹೇಳಬೇಕು. ಆ ರೀತಿಯಲ್ಲಿ ಭಾರೀ ಬದಲಾವಣೆ ಕಾಣಿಸುತ್ತಿದೆ. ಕಳೆದ 3 ದಿನಗಳಿಂದ ಎಲ್ಲಿಯೂ ಕಾರ್ಯಕ್ರಮಗಳಿಗೆ ತೆರಳದೆ ಮನೆಯಲ್ಲೇ ವಾಸ್ತವ್ಯ ಹೂಡಿರುವ ಡಿಸಿಎಂ ಡಿಕೆಶಿ, ಶಾಸಕರು, ಪರಿಷತ್ ಸದಸ್ಯರು, ಸಚಿವರ ಜೊತೆಗೂ ಚರ್ಚೆ ನಡೆಸುತ್ತಿದ್ದಾರೆ.
ನಿನ್ನೆ ರಾತ್ರಿಯೂ ಕೂಡ ಶಾಸಕರಾದ ಸಿ ಪಿ ಯೋಗೇಶ್ವರ್, ಪ್ರಕಾಶ್ ಕೋಳಿವಾಡ್, ಯಾಸೀರ್ ಪಠಾಣ್, ಶ್ರೀನಿವಾಸ್ ಮಾನೆ, ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಭೇಟಿ ಮಾಡಿ ಚರ್ಚೆ ನಡೆಸಿ ವಾಪಸ್ ಆಗಿದ್ದಾರೆ. ಇದಕ್ಕೂ ಮೊದಲು ಡಿ.ಕೆ ಶಿವಕುಮಾರ್, ಪರಪ್ಪನ ಅಗ್ರಹಾರದಲ್ಲಿ ಶಾಸಕರನ್ನು ಭೇಟಿ ಮಾಡಿ ವಾಪಸ್ ಆಗಿದ್ದರು. ಕಾಂಗ್ರೆಸ್ ಶಾಸಕರೂ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ವಿನಯ್ ಕುಲಕರ್ಣಿ ಹಾಗೂ ವೀರೆಂದ್ರ ಪಪ್ಪಿ ಭೇಟಿ ಮಾಡಿ ಮನೆಗೆ ವಾಪಸ್ ಆಗಿದ್ದರು. ಆ ಬಳಿಕ ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಡಿಸಿಎಂ, ಸುಮ್ಮನೆ ಏನೇನೋ ಹಬ್ಬಿಸಬೇಡಿ, ಮೊನ್ನೆಯೇ ಖರ್ಗೆ ಅವರನ್ನ ದೆಹಲಿಯಲ್ಲಿ ಭೇಟಿ ಆಗಿದ್ದೇನೆ. ಪಕ್ಷಕ್ಕೆ ಯಾವಾಗ ಹಿರಿಯರ ಸಲಹೆ ಬೇಕೋ ಆಗ ಭೇಟಿ ಮಾಡ್ತೀನಿ. ಅವರ ಬಳಿ ಸಲಹೆ ಪಡೆಯುತ್ತೇನೆ ಎಂದಿದ್ದಾರೆ.

ಇನ್ನು ಮಲ್ಲಿಕಾರ್ಜುನ ಖರ್ಗೆ ಭೇಟಿಗೆ ಸಿಎಂ ಸಿದ್ದರಾಮಯ್ಯ ಸಮಯ ಪಡೆದಿರೋ ವಿಚಾರವಾಗಿ ಮಾತನಾಡಿ, ಭೇಟಿ ಮಾಡಲಿ, ಅದರಲ್ಲಿ ತಪ್ಪೇನಿದೆ..? ರಾಜ್ಯದ ಸಿಎಂ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡೋದ್ರಲ್ಲಿ ತಪ್ಪೇನಿದೆ..? ಎಂದು ಪ್ರಶ್ನಿಸಿದ್ದಾರೆ. ಅವರು ಐದು ವರ್ಷ ಸಿಎಂ ಅಂತ ಹೇಳ್ತಾ ಇದ್ದಾರೆ, ನಾವೇನು ಮಾಡಬೇಡಿ ಅಂತ ಹೇಳಿಲ್ಲ. ಈಗ ಅವರೇ ಸಂಪುಟ ವಿಸ್ತರಣೆ ಮಾಡಲು ಮುಂದಾಗಿದ್ದಾರೆ. ಮಾಡಿಕೊಳ್ಳಲಿ ಬೇಡ ಅಂದವರು ಯಾರು..? ಎಂದಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಭೇಟಿ ವಿಚಾರವಾಗಿ ಅವರು ನಮ್ಮ ನಾಯಕರು, ಎಐಸಿಸಿ ಅಧ್ಯಕ್ಷರು, ಅವಶ್ಯಕತೆ ಇದ್ದಾಗ ಭೇಟಿ ಮಾಡ್ತೀವಿ. ಅದರಲ್ಲಿ ಏನಿದೆ ಎಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಾಸಕರನ್ನು ಭೇಟಿ ಮಾಡಿದ ವಿಚಾರವಾಗಿ ಮಾತನಾಡಿ, ಇಂದು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದೇ. ಕೆಲವರು ಷಡ್ಯಂತ್ರ ನಡೆಸಿ ಜೈಲಿಗೆ ಕಳಿಸಿದ್ದಾರೆ. ಅವರ ಯೋಗ ಕ್ಷೇಮ ವಿಚಾರಿಸಲು ಹೋಗಿದ್ದೆ ಎಂದಿದ್ದಾರೆ. ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಹಾಗೂ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಭೇಟಿ ಹಿಂದಿನ ಮರ್ಮ ಮಾತ್ರ ಅರ್ಥವಾಗಿಲ್ಲ. ಆದರೆ ಶಾಸಕರ ಸಂಖ್ಯಾಬಲ ಹೆಚ್ಚಿದ್ದವರು ಸಿಎಂ ಆಗೋಣ ಎನ್ನುವ ಸಮರ್ಥನೆ ಬಂದರೆ ಮುಂದೆ 40-50 ಶಾಸಕರು ಬೆಂಬಲ ಕೊಟ್ಟರೆ ಕಾಂಗ್ರೆಸ್ ಹೈಕಮಾಂಡ್ ಅನಿವಾರ್ಯವಾಗಿ ಸಿಎಂ ಮಾಡಬೇಕಾಗುತ್ತದೆ. ಒಂದೊಮ್ಮೆ ಕೊಟ್ಟ ಮಾತಿನಂತೆ ಸಿಎಂ ಸ್ಥಾನ ನೀಡದಿದ್ದರೆ ಡಿಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೇನೆ, ನನ್ನ ಬೆಂಬಲಿಗರೂ ಕೂಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎನ್ನುವ ಮೂಲಕ ಇಕ್ಕಟ್ಟಿಗೂ ಸಿಲುಕಿಸುವ ತಂತ್ರಗಾರಿಕೆ ಇದ್ದೇ ಇದೆ.



