The Public Spot
ಅಂಕಣ

Cricket and Politics; ಕ್ರೀಡೆ ಮತ್ತು ಸ್ನೇಹ.. ಕ್ರಿಕೆಟ್​ ಮತ್ತು ರಾಜಕೀಯ.. ಭಾರತ ತಪ್ಪು ಮಾಡಿದ್ದೆಲ್ಲಿ..?

ಒಂದು ಕ್ರೀಡೆ ಎಂದ ಮೇಲೆ ಒಬ್ಬರು ಸೋಲಬೇಕು, ಒಬ್ಬರು ಗೆಲ್ಲಬೇಕು. ಅಂದರೆ ಕ್ರೀಡೆಯಲ್ಲಿ ಎದುರಾಳಿ ಒಬ್ಬರು ಇದ್ದೇ ಇರುತ್ತಾರೆ. ಆದರೆ ಕ್ರೀಡೆಯಲ್ಲಿ ದ್ವೇಷ ಮನೋಭಾವ ಬರಬಾರದು ಅನ್ನೋ ಕಾರಣಕ್ಕೆ ಪಂದ್ಯ ಮುಗಿದ ಬಳಿಕ ಎದುರಾಳಿ ಆಡಗಾರರು ಪರಸ್ಪರ ಹಸ್ತಾಲಾಘವ ಮಾಡುತ್ತಾ ದ್ವೇಷ ಮರೆಯುತ್ತಾರೆ. ಇದೇ ಕಾರಣಕ್ಕೆ ಕ್ರೀಡಾ ಮನೋಭಾವ ಅನ್ನೋ ಹೆಸರು ಸಾಕಷ್ಟು ಕಡೆಗಳಲ್ಲಿ ಚಲಾವಣೆ ಆಗುತ್ತದೆ. ಕ್ರೀಡಾ ಮನೋಭಾವ ಎಂದರೆ ಎಷ್ಟೇ ಕೋಪವಿದ್ದರೂ ಅದನ್ನು ಮರೆತು ಮುಂದೆ ಸಾಗುವುದು. ಸಾಕಷ್ಟು ಬಾರಿ ಎರಡು ರಾಷ್ಟ್ರಗಳ ನಡುವಿನ ಕೋಪ ತಣಿಸಲು ಉಭಯ ರಾಷ್ಟ್ರಗಳ ನಡುವೆ ಕ್ರೀಡೆಯನ್ನು ಶುರು ಮಾಡುವುದೂ ಇದೆ. ಆದರೆ ಇದೀಗ ಕ್ರೀಡೆಯಲ್ಲಿ ರಾಜಕೀಯ ಅಡಗಿರುವ ಶಂಕೆ ಅಲ್ಲ ಖಾತರಿ ಕಾಣಿಸುತ್ತಿದೆ.

ಜಮ್ಮು ಕಾಶ್ಮೀರದ ಪೆಹಲ್ಗಾಮ್​ನಲ್ಲಿ ಉಗ್ರರು ಭಾರತೀಯರನ್ನು ಹತ್ಯೆ ಮಾಡಿದ್ದರು. ಅದರಲ್ಲೂ ಧರ್ಮವನ್ನು ಕೇಳುತ್ತಾ ಹಿಂದೂಗಳು ಎಂದವರನ್ನು ಗುಂಡಿಟ್ಟು ಕೊಂದು ಅಟ್ಟಹಾಸ ಮೆರೆದಿದ್ದರು. ಉಗ್ರರಿಗೆ ಪಾಕಿಸ್ತಾನ ಸಾಥ್​ ನೀಡುತ್ತಿದೆ ಎನ್ನುವ ಕಾರಣಕ್ಕೆ ಆಪರೇಷನ್​ ಸಿಂದೂರ್​ ಮೂಲಕ ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿತ್ತು. ಆ ಬಳಿಕ ಪಾಕಿಸ್ತಾನದ ನಡುವಿನ ಸಂಬಂಧ ತಿಳಿಯಾಗುವ ಕಾಲ ಬಂದಿರಲಿಲ್ಲ. ಆಪರೇಷನ್​ ಸಿಂದೂರ್​ ಮೂಲಕ ಪಾಕಿಸ್ತಾನದ ಉಗ್ರರ ತಾಣಗಳನ್ನು ಧ್ವಂಸ ಮಾಡಿದ್ದೇವೆ ಎಂದು ಹೇಳಿದ್ದ ಭಾರತ ಸರ್ಕಾರ, ಮತ್ತೊಮ್ಮೆ ಪಾಕಿಸ್ತಾನ ಉಗ್ರರ ಮೂಲಕ ಭಾರತದ ವಿಚಾರಕ್ಕೆ ಬಂದರೆ ಮತ್ತೆ ಆಪರೇಷನ್​ ಸಿಂದೂರ್​ ಶುರುವಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿತ್ತು. ಈ ನಡುವೆ ಕ್ರಿಕೆಟ್​ ಬೇಕಾ ಅನ್ನೋ ಪ್ರಶ್ನೆ ಆರಂಭದಲ್ಲೇ ಎದ್ದಿತ್ತು. ಆದರೆ ಯಾವುದಕ್ಕೂ ಉತ್ತರ ನೀಡಿರಲಿಲ್ಲ.

ಅಂಗಳದಲ್ಲೇ ಉತ್ತರ ಎಂದು ಸಾಬೀತು..!

ಕ್ರಿಕೆಟ್​ ಆಟಕ್ಕೆ ಹೋದಾಗಲೇ ರಾಜಕೀಯ ಇರುವ ಬಗ್ಗೆ ಚರ್ಚೆಗಳು ನಡೆದಿದ್ದವು. ಆಟಗಾರರು ಟಾಸ್​ಗೆ ಹೋದಾಗ ಪರಸ್ಪರ ಹಸ್ತಲಾಘವ ಮಾಡುವುದು ಸರ್ವೇ ಸಾಮಾನ್ಯ. ಆದರೆ ಈ ಬಾರಿ ಏಷ್ಯಾ ಕಪ್​ನಲ್ಲಿ ಅದು ಸಾಧ್ಯವಾಗಲಿಲ್ಲ. ಒಂದು ಕಡೆ ಪಾಕಿಸ್ತಾನದ ಜೊತೆಗೆ ಈ ಕ್ರಿಕೆಟ್​ ಅವಶಶ್ಯಕತೆ ಇತ್ತೇ..? ಎಂದು ಆಕ್ರೋಶ ಕೇಳಿ ಬರುತ್ತಿರುವ ಹೊತ್ತಿನಲ್ಲಿ ಟಾಸ್​ ಹಾಗೂ ಪಂದ್ಯದ ಬಳಿಕ ಪರಸ್ಪರ ಹಸ್ತಲಾಘವ ಮಾಡದೆ ದ್ವೇಷ ಪೂರಿತ ವಾತಾವರಣ ಸೃಷ್ಟಿಯಾಗಿದ್ದು, ಪಂದ್ಯದಲ್ಲಿ ಗೆದ್ದ ಬಳಿಕ ಈ ಗೆಲುವು ಪೆಹಲ್ಗಾಮ್​ ಸಂತ್ರಸ್ತರಿಗೆ ಅರ್ಪಣೆ ಎನ್ನಲಾಗಿತ್ತು. ಆ ಬಳಿಕ ಅದಕ್ಕಾಗಿ ICC ದಂಡವನ್ನೂ ವಿಧಿಸಿತ್ತು. ಎರಡನೇ ಪಂದ್ಯದಲ್ಲೂ ಅದೇ ರೀತಿ ಮುಂದುವರಿಸಲಾಗಿತ್ತು. ಕೊನೆಗೆ ಅಂತಿಮ ಪಂದ್ಯ ಫೈನಲ್​ನಲ್ಲಿ ಅದು ಅತಿರೇಖಕಕ್ಕೆ ಹೋಯ್ತು. ಪಾಕಿಸ್ತಾನದ ಒಳಾಡಳಿತ ಸಚಿವರೂ ಆಗಿರುವ ಕ್ರಿಕೆಟ್​ ಸಂಸ್ಥೆ ಮುಖ್ಯಸ್ಥನ ಕೈಯ್ಯಲ್ಲಿ ಕಪ್​ ಪಡೆದುಕೊಳ್ಳಲ್ಲ ಅನ್ನೋ ಹಠಕ್ಕೆ ಬಿದ್ದ ಭಾರತೀಯ ಆಟಗಾರರು ಬರಿಗೈ ಸಂಭ್ರಮಾಚರಣೆ ಮಾಡಿದ್ದಾರೆ.

ಪಾಕಿಸ್ತಾನದ ವಿರುದ್ಧ ಭಾರತೀಯರಾದ ನಮಗೆ ಕೋಪ ಇದೆ ಎನ್ನುವುದು ತಪ್ಪೇನು ಅಲ್ಲ. ನಮ್ಮ ದೇಶದ ಅಮಾಯಕರ ಪ್ರಾಣದ ಜೊತೆಗೆ ಪಾಕಿಸ್ತಾನ ಮೂಲದ ಉಗ್ರರು ಚೆಲ್ಲಾಟ ಆಡಿದ್ದಾರೆ. ಪಾಕಿಸ್ತಾನ ಉಗ್ರರ ಅಡಗುತಾಣ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಆದರೆ ಅಷ್ಟೊಂದು ನಮ್ಮೊಳಗೆ ಕೋಪ ತುಂಬಿರುವಾಗ ಏಷ್ಯಾ ಕಪ್​ನಲ್ಲಿ ಆಡುವುದಕ್ಕೆ ಹೋಗಿದ್ದೇ ಮೊದಲನೇ ತಪ್ಪು. ಆ ತಪ್ಪು ಆದ ಬಳಿಕ ಜನರ ಕೋಪ ತಣಿಸುವ ಉದ್ದೇಶದಿಂದ ಕ್ರೀಡಾಸ್ಫೂರ್ತಿಯನ್ನು ಮರೆತು ಅಂಗಳದಲ್ಲಿ ದ್ವೇಷಪೂರಿತ ನಡಾವಳಿಕೆ ಮತ್ತೊಂದು ತಪ್ಪು. ಇಷ್ಟೆಲ್ಲಾ ಆದ ಬಳಿಕ ಕ್ರೀಡೆಯಲ್ಲಿ ರಾಜಕೀಯ ಬೆರೆತಿತ್ತು ಎನ್ನುವುದು ಎಲ್ಲರಿಗೂ ಅರ್ಥವಾಗಿತ್ತು. ಆಟಗಾರರು ಏನೇನು ಮಾಡಬೇಕು ಅನ್ನೋ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದ ತಂಡಕ್ಕೆ ಸೂಚನೆಗಳು ಹೊರಗಿನಿಂದ ಬರುತ್ತಿತ್ತು ಎನ್ನುವುದು ಎಲ್ಲರಿಗೂ ಅರ್ಥವಾಗಿತ್ತು.

ಭಾರತೀಯ ಕ್ರಿಕೆಟ್ ತಂಡದ​ ಮಾಜಿ ಆಟಗಾರ ಸೈಯ್ಯದ್​ ಕಿರ್ಮಾನಿ ಹೇಳ್ತಾರೆ, ಕ್ರಿಕೆಟ್​ ಎನ್ನುವ ಆಟವನ್ನು ಈ ರೀತಿ ಆಡುವುದಲ್ಲ. ಆಟದಲ್ಲಿ ಸಜ್ಜನಿಕೆ ಇರಲಿಲ್ಲ. ಮೈದಾನದಲ್ಲಿ ಅಸಭ್ಯವಾಗಿ ವರ್ತನೆ ಮಾಡಲಾಗಿದೆ. ದುರಹಂಕಾರಿ ಸನ್ಹೆಗಳನ್ನು ಮಾಡಲಾಗಿದೆ. ಭಾರತೀಯ ತಂಡ ನಡೆದುಕೊಂಡ ರೀತಿ ಬಗ್ಗೆ ಎಲ್ಲೆಡೆಯಿಂದ ಕಮೆಂಟ್ಸ್​ ಬರುತ್ತಿವೆ. ಆ ಮಾತುಗಳನ್ನು ಕೇಳಲು ನನಗೆ ನಾಚಿಕೆ ಆಗುತ್ತಿದೆ ಎಂದಿದ್ದಾರೆ. ರಾಜಕೀಯ ಕ್ರೀಡೆಯನ್ನು ಪ್ರವೇಶ ಮಾಡಬಾರದು ಎಂದಿದ್ದಾರೆ. ಇದೇ ವೇಳೆ ಈಗಿನ ಕಾಲದ ಕ್ರಿಕೆಟ್​ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ಮಾಜಿ ಕ್ರಿಕೆಟಿಗರಿಗೇ ಈ ರೀತಿ ಅನ್ನಿಸುತ್ತಿದೆ ಎಂದರೆ ಎಲ್ಲೋ ಒಂದು ಕಡೆ ಕ್ರೀಡಾ ಸ್ಫೂರ್ತಿ ಮರೆತು ಆಟವಾಡಿದ್ದಾರೆ ಎಂದು ಎನಿಸದೆ ಇರಲು ಸಾಧ್ಯವೇ..? ಪಾಕಿಸ್ತಾನ ಆಟಗಾರರು ಏನು ಕ್ರೀಡಾಸ್ಫೂರ್ತಿ ಮೆರೆದಿದ್ದಾರೆ ಅನ್ನೋಕೆ ಆಗಲ್ಲ. ಆದರೂ ನಮ್ಮ ತಪ್ಪಿದೆ. ಆಟಕ್ಕೆ ಹೋಗಿದ್ದೇ ಮೊದಲ ತಪ್ಪು ಅಲ್ಲವೇ..?

Related posts

ಸಿಎಂ ಮನದಾಳದ ಮಾತು ಯತೀಂದ್ರ ಮಾತಲ್ಲಿ ಹೊರ ಬೀಳ್ತಿದ್ಯಾ..?

Publicspot

ಎರಡೂವರೆ ವರ್ಷ ಆಯ್ತು.. ಊಟಕ್ಕೆ ಕರೆದಿರೋ ಸಿಎಂ.. ಬದಲಾವಣೆ ಫಿಕ್ಸಾ..?

Publicspot

TVK Party Vijay Stamped; 41 ಜನರ ಸಾವು ಮತ್ತು ತಮಿಳುನಾಡು ರಾಜಕೀಯ.. ಎಲ್ಲಿದೆ ದೋಷ..?

Publicspot

ಧರ್ಮಸ್ಥಳ ರಹಸ್ಯ ಮತ್ತುಆಡಳಿತ ಮಂಡಳಿ ಆಕ್ರೋಶ.. ರಾಜಕಾರಣದ ನೆರಳು..

Publicspot

ರಾಜ್ಯದಲ್ಲಿ ಶುರುವಾಯ್ತು ಆಶಾ ಮಿಡ್‌ನೈಟ್‌ ಹೋರಾಟ.. ಹೇಗಿದೆ ಕಿಚ್ಚು..?

ಯಶವಂತಿ

ಕಾಂಗ್ರೆಸ್​​ನಲ್ಲಿ ಸ್ಟ್ಯಾಂಡಿಂಗ್​ ಮೀಟಿಂಗ್​.. ಬಗೆಹರಿಯುತ್ತಾ ಸಂಕ್ರಾಂತಿ ಸಂಕಷ್ಟ..!

Publicspot