The Public Spot
ರಾಜ್ಯ

ಬಗೆಹರಿಯಿತೇ ಬಾನು ಆಯ್ಕೆ ವಿವಾದ..? ಅರಮನೆ ಸಂದೇಶ ಏನು..?

ನಾಡಹಬ್ಬ ದಸರಾ ಉದ್ಘಾಟನೆಗೆ ಬೂಕರ್‌ ಪ್ರಶಸ್ತಿ ವಿಜೇತ ಸಾಹಿತಿ ಬಾನು ಮುಷ್ತಾಕ್ ಅವರ ಆಯ್ಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಡ್ಯದ ಹಿಂದೂ ಮುಖಂಡರು ವಿರೋಧ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿಗೆ ಮನವಿ ಕೊಟ್ಟಿದ್ದಾರೆ. ಸಾಹಿತಿ ಬಾನು ಮುಷ್ತಾಕ್​ ಉದ್ಘಾಟನೆ ಮಾಡೋದಿದ್ರೆ ಹಿಂದೂ ಸಂಪ್ರದಾಯದಂತೆ ಹಣೆಗೆ ಕುಂಕುಮ ಇಟ್ಟು ಪೂಜೆ ಮಾಡಬೇಕು. ಹಿಂದೂಗಳಂತೆ ಕರ್ಪೂರ, ಗಂಧದ ಕಡ್ಡಿ ಹಚ್ಚಿ ಪೂಜೆ ಮಾಡೋದಾದ್ರೆ ನಮ್ಮ ಅಭ್ಯಂತರವಿಲ್ಲ. ಇದ್ಯಾವುದನ್ನೂ ಮಾಡದಿದ್ರೆ ಬಾನು ಮುಷ್ತಾಕ್​ ಆಯ್ಕೆಯನ್ನ ಬದಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಾಹಿತಿ ಬಾನು ಆಯ್ಕೆಗೆ ಕಾಂಗ್ರೆಸ್‌ ಸಮರ್ಥನೆ!

ಬಾನು ಮುಷ್ತಾಕ್​ ದಸರಾ ಉದ್ಘಾಟನೆಗೆ ವಿರೋಧ ವಿಚಾರದ ಬಗ್ಗೆ ಮಾತನಾಡಿರುವ ಗೃಹ ಸಚಿವ ಪರಮೇಶ್ವರ್, ಈ ಹಿಂದೆ ನಿಸಾರ್ ಅಹಮದ್ ದಸರಾ ಉದ್ಘಾಟನೆ ಮಾಡಿದ್ದಾರೆ. ಮಿರ್ಜಾ ಇಸ್ಮಾಯಿಲ್ ಮೈಸೂರಿನಲ್ಲಿ ದಿವಾನ್ ಆಗಿದ್ರು. ಇದರಲ್ಲಿ ವಿರೋಧ ಮಾಡೋದು ಸರಿಯಲ್ಲ. ಇದು ಧಾರ್ಮಿಕ ವಿಚಾರ ಅಲ್ಲ. ಇದು ನಾಡಹಬ್ಬ ದಸರಾ, ರಾಜ್ಯದಲ್ಲಿ ಆಚರಣೆ ಮಾಡೋದು ಎಂದು ಹೇಳಿದ್ದಾರೆ. ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಮೈಸೂರಿನಲ್ಲಿ ಮಾತನಾಡಿ, ಈ ರೀತಿ ಹೇಳಿಕೆ ಕೊಡುವವರಿಗೆ ತಾಳ್ಮೆ ಇರಲಿ. ಭವಿಷ್ಯದಲ್ಲಿ ಒಳ್ಳೆಯದಾಗಬೇಕಾದರೆ ಬೆಂಕಿ ಹಚ್ಚಿ, ಸುಟ್ಟು ಹೋಗುವುದು ಸರಿಯಲ್ಲ. ವ್ಯಕ್ತಿಯ ಗೌರವ ಹಾಗೂ ಸಾಹಿತ್ಯ ಲೋಕದಲ್ಲಿನ ಅವರ ಸಾಧನೆ ಗುರುತಿಸಿ ಆಹ್ವಾನ ನೀಡಲಾಗಿದೆ. ನನ್ನಲ್ಲಿರುವ ಭಕ್ತಿ ಯಾರಿಗೂ ತೋರಿಸುವುದಲ್ಲ. ನನ್ನ ನಡತೆಯಷ್ಟೇ ಮುಖ್ಯ ಎಂದಿದ್ದಾರೆ

BJP ನಾಯಕರು ವಿರೋಧ ಮಾಡ್ತಿರೋದ್ಯಾಕೆ..?

ಬೆಂಗಳೂರಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೀವ್ರವಾಗಿ ವಿರೋಧಿಸಿದ್ದು, ನಾಡಹಬ್ಬ ದಸರಾಗೆ ಸಾಹಿತಿ ಬಾನು ಮುಸ್ತಾಕ್ ಅತಿಥಿಯಾಗಿದ್ದಾರೆ. ಹಿಂದೂ ಧರ್ಮದ ಮೇಲೆ ನಂಬಿಕೆ ಇಲ್ಲದವರು, ಮೂರ್ತಿ ಪೂಜೆ ಒಪ್ಪದವರು, ದಸರಾಗೆ ಬಂದು ಏನ್ ಮಾಡ್ತಾರೆ..? ಎಂದು ಪ್ರಶ್ನಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ದಸರಾ ಉದ್ಘಾಟನೆ ಆಗುತ್ತದೆ. ಅದನ್ನ ಬಾನು ಅವರು ಮಾಡ್ತಾರಾ..? ಹಿಂದೂಗಳ ಭಾವನೆಗೆ ಧಕ್ಕೆ ತರುವ ಕೆಲಸ ಕಾಂಗ್ರೆಸ್ ಮಾಡ್ತಿದೆ. ಕನ್ನಡ ಹಾಗೂ ಕನ್ನಡದ ಬಾವುಟ ವಿಚಾರದಲ್ಲಿ ಹಿಂದೊಮ್ಮೆ ನಾನು ಎಲ್ಲಿ ನಿಲ್ಲಬೇಕು ಎಂದು ಬಾನು ಮುಸ್ತಾಕ್ ಕೇಳ್ತಾರೆ, ಅರಿಷಿಣ, ಕುಂಕುಮ ಧ್ವಜ ಉಪಯೋಗಿಸ್ತಿರಿ, ಅಲ್ಪ ಸಂಖ್ಯಾತೆಯಾಗಿ ನಾನೆಲ್ಲಿ ನಿಲ್ಲಬೇಕು ಎಂದು ಕೇಳ್ತಾರೆ. ಕನ್ನಡ ಧ್ವಜವನ್ನೇ ಒಪ್ಪದವರು, ಚಾಮುಂಡೇಶ್ವರಿಯನ್ನ ಹೇಗೆ ಒಪ್ತಾರೆ..? ಎಂದು ಪ್ರಶ್ನಿಸಿದ್ದಾರೆ. ಇನ್ನೂ ಬಾನು ಮುಷ್ತಾಕ್ ಅವರಿಂದ ದಸರಾ ಉದ್ಘಾಟನೆಯನ್ನು ನಾವು ಒಪ್ಪಲ್ಲ, ನಮ್ಮ ವಿರೋಧ ಇದೆ ಎಂದು ಎಸ್‌.ಆರ್‌ ವಿಶ್ವನಾಥ್‌ ಹೇಳಿದ್ದಾರೆ. ಸ್ವತಃ ಬಾನು ಮುಷ್ತಾಕ್ ಅವರೇ ದಸರಾ ಉದ್ಘಾಟನೆಯನ್ನು ತಿರಸ್ಕಾರ ಮಾಡಲಿ ಎಂದು ಆಗ್ರಹ ಮಾಡಿದ್ದಾರೆ.

ರಾಜಮನೆತನದಿಂದ ಬಾನು ಬಗ್ಗೆ ಸಂದೇಶ

ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್‌ ಅವರನ್ನು ಆಹ್ವಾನಿಸುವ ಬಗ್ಗೆ ಮಾತನಾಡಿರುವ ಮೈಸೂರು – ಕೊಡಗು ಸಂಸದ ಯದುವೀರ್ ಒಡೆಯರ್, ಬಾನು ಮುಷ್ತಾಕ್ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಆಯ್ಕೆಯಲ್ಲಿ ನನಗೆ ಯಾವುದೇ ಅಭಿಪ್ರಾಯ ಇಲ್ಲ. ಆದ್ರೆ ತಾಯಿ ಚಾಮುಂಡೇಶ್ವರಿ ಗೌರವ ಕೊಟ್ರೆ ನಮ್ಮದೇನು ತಕರಾರು ಇಲ್ಲ. ನಮ್ಮ ಕನ್ನಡದ ಧ್ವಜದ ಬಣ್ಣಗಳ ಕುರಿತು ಅವರ ಹೇಳಿಕೆ ನೋಡಿದ್ದೇನೆ. ಅದು ತಪ್ಪು. ಅದಕ್ಕಾಗಿಯೇ ಕೆಲವರು ವಿರೋಧ ಮಾಡ್ತಿದ್ದಾರೆ. ನಮ್ಮ ಧರ್ಮಕ್ಕೆ ವಿರೋಧಿಸದೆ ಅವರು ಉದ್ಘಾಟನೆ ಮಾಡಲಿ. ನಮ್ಮ ಧಾರ್ಮಿಕ ಭಕ್ತಿಗೆ ಧಕ್ಕೆ ಬರಬಾರದು. ಚಾಮುಂಡೇಶ್ವರಿಗೆ ಗೌರವ ಕೊಡಬೇಕು ಅದಷ್ಟೇ ನಮ್ಮ ಅಭಿಪ್ರಾಯ. ನಮ್ಮ ಪಾರ್ಟಿಯ ನಿಲುವು ನನ್ನ ನಿಲುವು ಒಂದೇ ಆಗಿದೆ. ನಮ್ಮ ಧರ್ಮ ಗೌರವಿಸಿ ಚಾಮುಂಡೇಶ್ವರಿಗೆ ಕೊಡಬೇಕಾದ ಗೌರವವನ್ನು ಮುಷ್ತಾಕ್‌ ಕೊಡಬೇಕು ಎಂದಿದ್ದಾರೆ.

ಸಾಹಿತಿ ಬಾನು ಮುಷ್ತಾಕ್‌ ಏನ್‌ ಹೇಳ್ತಾರೆ..?

ಬಾನು ಮುಷ್ತಾಕ್‌ ಅವರ ಹಾಸನದ ಮನೆಗೆ ಆಗಮಿಸಿದ ಕಲಾವಿದೆ ಶಶಿಕಲಾ, ಹಿಂದೂ ಸಂಪ್ರದಾಯದಂತೆ ಬಾಗಿನ ನೀಡಿದ್ದಾರೆ. ಬೆಂಗಳೂರಿನ ಕಲಾವಿದೆ ಅಮ್ಮನ ಮಡಿಲು ಸಂಸ್ಥಾಪಕಿ ಶಶಿಕಲಾ ಬಾಗಿನ ರೂಪದಲ್ಲಿ ಹೂ, ಬಳೆ, ಸೀರೆ, ಅರಿಷಿನ ಕುಂಕುಮ ನೀಡಿ ಶುಭ ಹಾರೈಸಿದ್ದಾರೆ. ಈ ವೇಳೆ ಮಾತನಾಡಿರುವ ಬಾನು ಮುಷ್ತಾಕ್, ದಸರಾ ನಾನು ಗೌರವಿಸುವ ಹಬ್ಬವಾಗಿದೆ. ಪ್ರೀತಿಯಿಂದ ಭಾಗಿಯಾಗುವ ಹಬ್ಬವಾಗಿದೆ. ನಾನು ನನ್ನ ತಂದೆ, ತಾಯಿ ಜೊತೆ ಹಲವು ಬಾರಿ ಜಂಬು ಸವಾರಿ ನೋಡಲು ಹೊಗ್ತಿದ್ದೆ. ದಸರಾ ಉದ್ಘಾಟನೆಗೆ ಆಹ್ವಾನ ಬಂದಿರುವುದು ಸಂತೋಷ ತಂದಿದೆ ಎಂದಿದ್ದಾರೆ.

Related posts

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಮರುಬಳಕೆ ಘಟಕದಿಂದ ವಿದ್ಯುತ್ ಉತ್ಪಾದನೆ, ಉನ್ನತ ಶಿಕ್ಷಣದಲ್ಲಿ ಪರಿಸರ ಪಠ್ಯಕ್ರಮ

admin

RSS Ban War; ಕರ್ನಾಟಕದ ನೆಲದಲ್ಲೇ ನಿಂತು ಸರ್ಕಾರಕ್ಕೆ ಮೋಹನ್‌ ಭಾಗವತ್‌ ತಿರುಗೇಟು..

Publicspot

Banu Musthaq Angree: ಸಾಹಿತಿ ಬಾನು ಮುಷ್ತಾಕ್​ ಕಿಡಿಕಾರಿದ್ದು ಯಾಕೆ..?

Publicspot

Farmers Protest: ರೈತರಿಗೆ ಧಿಕ್ಕಾರ ಕೂಗಲು ಅಷ್ಟೇ ಸಾಧ್ಯ.. ಏನ್​ ಮಾಡ್ತೀರಾ..?

Publicspot

RAIN DAMAGES IN KARNATAKA: ಕರ್ನಾಟಕದಲ್ಲಿ ಮಳೆ ಅಬ್ಬರದ ಎಫೆಕ್ಟ್‌ ಹೇಗಿದೆ..?

Publicspot

ಇವತ್ತೂ ನಾಳೆ ರಾಜ್ಯದಲ್ಲಿ ಮಳೆಯೋ ಮಳೆ.. ಕರಾವಳಿಗೆ ಮಾತ್ರ ರಜೆ..

Publicspot