ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟದ ಕಹಳೆ ಮತ್ತೆ ಜೋರಾಗಿದೆ. ಟನ್ ಕಬ್ಬಿಗೆ 3,500 ರೂಪಾಯಿ ದರ ನಿಗದಿ ಮಾಡ್ಬೇಕು ಅಂತಾ ಆಗ್ರಹಿಸಿ ಹೋರಾಟ ನಡೆಸಲಾಗ್ತಿದೆ. ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ. ರಸ್ತೆಯಲ್ಲಿ ಕುಳಿತು ಪ್ರತಿಭಟನಾನಿರತ ರೈತರು ಊಟ ಮಾಡಿದ್ದಾರೆ. ಧಾರವಾಡ-ವಿಜಯಪುರ, ಮುಧೋಳ – ಸಂಕೇಶ್ವರ ನಡುವಿನ ರಾಜ್ಯ ಹೆದ್ದಾರಿಯನ್ನ ಬಂದ್ ಮಾಡಿದ್ದಾರೆ.. ಬಸ್ಗಳನ್ನೆಲ್ಲಾ ಅಡ್ಡ ಹಾಕಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಗಲಕೋಟೆಯಲ್ಲಿ ರೈತರ ಹೋರಾಟ ಜೋರಾಗ್ತಿದ್ದಂತೆ ಮುಧೋಳದಲ್ಲಿ ಉಸ್ತುವಾರಿ ಸಚಿವ ತಿಮ್ಮಾಪುರ ನೇತೃತ್ವದಲ್ಲಿ ಸಭೆ ನಡೆಸಲಾಯ್ತು. ಆದರೆ ಸಭೆ ಯಾವುದೇ ನಿರ್ಧಾರಕ್ಕೆ ಬರುವಲ್ಲಿ ವಿಫಲವಾಯ್ತು. ಸಕ್ಕರೆ ಕಾರ್ಖಾನೆಗಳಿಗೆ ನೀಡಿದ್ದ ಗಡುವು ಮುಗಿಯುತ್ತಿದ್ದಂತೆ ಉಗ್ರ ಹೋರಾಟಕ್ಕೆ ರೈತರು ತಯಾರಿ ಮಾಡಿದ್ದರು. ಹೀಗಾಗಿ ಮುಧೋಳ ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಕೊನೆಯ ಸಭೆ ನಡೆಸಲಾಯ್ತು. ಸಭೆಯಲ್ಲಿ ಟನ್ ಕಬ್ಬಿಗೆ 3,500 ನೀಡುವಂತೆ ರೈತರು ಬಿಗಿ ಪಟ್ಟು ಹಿಡಿದು ಕುಳಿತಿದ್ದರು. ಸರ್ಕಾರ ಈಗ ಘೋಷಣೆ ಮಾಡಿರುವ ದರಕ್ಕೆ ಮಾತ್ರ ನಾವು ಬದ್ಧ ಅಂತ ಕಾರ್ಖಾನೆ ಮಾಲೀಕರು ಹೇಳಿದ್ದಾರೆ. ಹೀಗಾಗಿ ಸಭೆಯಿಂದ ರೈತರು ಹೊರಕ್ಕೆ ನಡೆದಿದ್ದಾರೆ.

ಸಭೆ ಬಳಿಕ ಮಾತನಾಡಿದ ಸಚಿವ ಆರ್.ಬಿ.ತಿಮ್ಮಾಪುರ, ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿರುವ ದರಕ್ಕೆ ಒಪ್ಪಿಕೊಂಡು, ಸಹಕಾರ ನೀಡುವಂತೆ ರೈತರಿಗೆ ಮನವಿ ಮಾಡಿದ್ದಾರೆ. ರೈತರು, ಕಾರ್ಖಾನೆ ಮಾಲೀಕರ ನಡುವೆ ಸಂಧಾನಕ್ಕೆ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಬಾಗಲಕೋಟೆಯ ಮುಧೋಳದಲ್ಲಿ ಸಚಿವ ತಿಮ್ಮಾಪುರ ನೇತೃತ್ವದಲ್ಲಿ ಸಂಧಾನ ಸಭೆ ವಿಫಲವಾದ ಬಳಿಕ ರೈತರು ರಾತ್ರಿ ಪ್ರತಿಭಟನೆ ಮುಂದುವರಿಸಿದ್ರು. ₹3,500 ಬೇಡಿಯಕ ಪಟ್ಟು ಸಡಿಲಿಸದ ರೈತರು, ಸಂಗೊಳ್ಳಿ ರಾಯಣ್ಣ ಸರ್ಕಲ್ನಲ್ಲಿ ಹೋರಾಟ ತೀವ್ರಗೊಳಿಸಿದ್ದಾರೆರ. ಸರ್ಕಾರ ಮತ್ತು ಕಾರ್ಖಾನೆ ಮಾಲೀಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ.
ರೈತ ಮುಖಂಡ ಈರಪ್ಪ ಹಂಚಿನಾಳ ಮಾತನಾಡಿ, ಟನ್ ಕಬ್ಬಿಗೆ 3,500 ರೂಪಾಯಿಗೆ ನಿಗದಿಗೆ ಆಗ್ರಹಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಮಂತ್ರಿ ಅಸಹಾಯಕ ಆಗಿದ್ದಾರೆ. ಕಾರ್ಖಾನೆ ಮಾಲೀಕರಿಗೆ ಸರ್ಕಾರ ಮಂಡಿಯೂರಿದೆ. ಸರ್ಕಾರ ನಿಗದಿ ಮಾಡಿದ ಬೆಲೆ ನಮಗೆ ಒಪ್ಪಿಕೊಳ್ಳೋಕೆ ಆಗಲ್ಲ. ನಮಗೆ 3,500 ರೂಪಾಯಿ ಬೇಡಿಕೆ ಇದೆ. ಉಸ್ತುವಾರಿ ಮಂತ್ರಿ ಇನ್ನೂ ಒಮ್ಮೆ ಮಾಲೀಕರ ಮನವೊಲಿಸಲು ಯತ್ನಿಸಬೇಕು. ದರ ಏರಿಕೆ ಮಾಡದೇ ಇದ್ದಲ್ಲಿ ಹೋರಾಟ ತೀವ್ರತೆ ಪಡೆಯುತ್ತದೆ ಅಂತ ಎಚ್ಚರಿಕೆ ನೀಡಿದ್ದಾರೆ.
ಕಬ್ಬು ಬೆಳೆಗೆ FRP ದರ ನಿಗದಿಯಲ್ಲಿ ಅನ್ಯಾಯ ಆಗ್ತಿದೆಂದು ಆರೋಪಿಸಿ ಹಾವೇರಿ ರೈತರು ಸಿಡಿದೆದ್ದಿದ್ದಾರೆ. ಇಂದು ಮೈಲಾರ ಮಹಾದೇವಪ್ಪ ಸರ್ಕಲ್ನಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದಾರೆ. ಈವರೆಗೂ ಪ್ರತಿ ಟನ್ ಕಬ್ಬಿಗೆ 2,711 ರೂಪಾಯಿ ದರ ನಿಗದಿಯಾಗಿದೆ. ಬೆಳಗಾವಿ ಭಾಗದಲ್ಲಿ ಸಿಗುವ ದರ, ಹಾವೇರಿಯಲ್ಲೂ ಅನ್ವಯಿಸುವಂತೆ ರೈತರು ಆಗ್ರಹಿಸಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ ಒಟ್ಟು ಮೂರು ಸಕ್ಕರೆ ಕಾರ್ಖಾನೆಗಳಿವೆ. FRP ದರದಲ್ಲೇ ಕಾರ್ಖಾನೆ ಮಾಲೀಕರು ವಂಚಿಸ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ಕಲಬುರ್ಗಿಯಲ್ಲೂ ಕಬ್ಬಿನ ಕಿಚ್ಚು ಜೋರಾಗ್ತಿದೆ. ಕಬ್ಬಿಗೆ 3,500 ರೂಪಾಯಿ ಬೆಂಬಲ ಬೆಲೆ ನಿಗದಿಗೆ ಆಗ್ರಹಿಸಿ ಇಂದು ಅಫಜಲ್ಪುರ ಬಂದ್ಗೆ ಕರೆ ನೀಡಲಾಗಿದೆ. ಸ್ವಾಭಿಮಾನಿ ಕಬ್ಬು ಬೆಳೆಗಾರರ ಸಂಘದಿಂದ ಅಫಜಲಪುರ ಬಂದ್ಗೆ ಕರೆ ನೀಡಲಾಗಿದೆ. ರೈತ ಸಂಘಟನೆ ನೀಡಿರುವ ಬಂದ್ ಕರೆಗೆ ವಿವಿಧ ಸಂಘಟನೆಗಳು ಬೆಂಬಲ ನೀಡಿವೆ. ಸಕ್ಕರೆ ಕಾರ್ಖಾನೆ ಮಾಲೀಕರು ಸರ್ಕಾರ ಹೇಳಿದ ಬಳಿಕವೂ ನಾವು ಹಣ ಕೊಡೋಕೆ ಆಗಲ್ಲ ಅಂತಾ ತಿರಸ್ಕಾರ ಮಾಡಿದ್ರು. ಆದರೆ ಈಗ ರೈತರೇ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಜ್ಯದಲ್ಲಿ ಬೆಳಗಾವಿಯಲ್ಲಿ ಹೆಚ್ಚು ಬೆಲೆ ಕೊಡ್ತಾರೆ. ಉಳಿದ ಜಿಲ್ಲೆಗಳಲ್ಲಿ ಈಗ ಘೋಷಣೆ ಆಗಿರುವ ಹಣವನ್ನೂ ಕೊಡಲ್ಲ ಅನ್ನೋ ಆರೋಪವಿದ್ದು, ಎಲ್ಲಾ ಕಡೆಯಲ್ಲೂ ಏಕರೂಪ ದರಕ್ಕೂ ಆಗ್ರಹ ಕೇಳಿ ಬಂದಿದೆ.


