ಭಾರತ ದೇಶದ 15ನೇ ಉಪರಾಷ್ಟ್ರಪತಿ ಆಗಿ ನಿರೀಕ್ಷೆಯಂತೆ ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಆಯ್ಕೆ ಆಗಿದ್ದಾರೆ. ಕಾಂಗ್ರೆಸ್ ನೇತೃತ್ವದ INDIA ಮೈತ್ರಿಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ಸೋಲು ಅನುಭವಿಸಿದ್ದಾರೆ. ನಿನ್ನೆ ಬೆಳಗ್ಗೆಯಿಂದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅತಿರಥ ಮಹಾರಥರು ಮತದಾನ ಮಾಡಿದ್ರು. ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಹುತೇಕ ಎಲ್ಲಾ ನಾಯಕರು ಹಕ್ಕು ಚಲಾಯಿಸಿದ್ರು. ವೀಲ್ಚೇರ್ನಲ್ಲಿ ತೆರಳಿದ್ದ ಮಾಜಿ ಪ್ರಧಾನಿ ದೇವೇಗೌಡರು ಕೂಡ ವೋಟ್ ಮಾಡಿದ್ರು.

ಕೇಂದ್ರ ಗೃಹಸಚಿವ ಅಮಿತ್ ಷಾ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ವಾದ್ರಾ, ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸೇರಿ ಲೋಕಸಭೆ,, ರಾಜ್ಯಸಭೆಯ ಅತಿರಥ ಮಹಾರಥರೆಲ್ಲಾ ಮತ ಚಲಾಯಿಸಿದ್ರು. ಸಂಜೆ 7.30ಕ್ಕೆ ಮತ ಎಣಿಕೆ ನಡೆಸಿದ ಚುನಾವಣಾ ಆಯೋಗ ಎನ್ಡಿಎ ಅಭ್ಯರ್ಥಿ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಅನ್ನೋದನ್ನು ಘೋಷಣೆ ಮಾಡಿದ್ರು.

ಬಿಜೆಪಿ ಬೆಂಬಲಿತ ಎನ್ಡಿಎ ಮೈತ್ರಿಕೂಟದ ಸಿ.ಪಿ.ರಾಧಾಕೃಷ್ಣನ್ ಅವರಿಗೆ ಒಟ್ಟು 452 ಮತಗಳನ್ನ ಬಂದಿದ್ದು, ಮುಂದಿನ ಉಪರಾಷ್ಟ್ರಪತಿ ಆಗಲಿದ್ದಾರೆ. INDIA ಕೂಟದಿಂದ ಸ್ಪರ್ಧಿಸಿದ್ದ ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಸುದರ್ಶನ್ ರೆಡ್ಡಿ 300 ಮತಗಳನ್ನ ಪಡೆದು ಸೋಲು ಅನುಭವಿಸಿದ್ದಾರೆ. ರಾಜ್ಯಸಭೆ ಮತ್ತು ಲೋಕಸಭೆ ಸಂಸದರ ಒಟ್ಟು ಸಂಖ್ಯೆ 788. ಅದರಲ್ಲಿ ಎನ್ಡಿಎ ಮೈತ್ರಿಕೂಟದ ಶಕ್ತಿ 427.. ವಿಪಕ್ಷಗಳ ಬಲಾಬಲ 315. ಇನ್ನು ಸ್ವತಂತ್ರ್ಯ ಅಭ್ಯರ್ಥಿಗಳು ಇತರೆ 49 ಸದಸ್ಯರು ಮತ ಹಾಕುವ ಹಕ್ಕು ಹೊಂದಿದ್ರು.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ಒಟ್ಟು 767 ಜನ ಹಕ್ಕು ಚಲಾಯಿಸಿದ್ದಾರೆ. ಅದರಲ್ಲಿ ಎನ್ಡಿಎ ಅಭ್ಯರ್ಥಿಗೆ 427ರ ಬದಲು 452 ಮತ ಸಿಕ್ಕಿದ್ದು ಹೆಚ್ಚುವರಿಯಾಗಿ 25 ವೋಟ್ ಬಂದಿದೆ. ವಿಪಕ್ಷದಲ್ಲಿ 14 ಸಂಸದರು ಎನ್ಡಿಎಗೆ ಮತ ಹಾಕಿದ್ದಾರೆ. ಇನ್ನು ಆಂಧ್ರಪ್ರದೇಶದ ವೈಎಸ್ಆರ್ ಪಕ್ಷದ 11 ಸಂಸದರೂ ಕೂಡ ರಾಧಾಕೃಷ್ಣನ್ಗೆ ಮತ ಹಾಕಿದ್ದಾರೆ. ಎನ್ಡಿಎ ಮೈತ್ರಿಕೂಟದವರು ಸಿ.ಪಿ.ರಾಧಾಕೃಷ್ಣನ್ ಅವ್ರಿಗೆ ಶುಭಾಶಯ ಕೋರಿ ಸಂಭ್ರಮ ಆಚರಿಸ್ತಿದ್ದಾರೆ. ವಿಪಕ್ಷ ನಾಯಕರು ಮಲ್ಲಿಕಾರ್ಜುನ ಖರ್ಗೆ ಅವ್ರ ಮನೆಯಲ್ಲಿ ಸೋಲಿನ ಬಗ್ಗೆ ಚಿಂತಿಸೋ ಜೊತೆಗೆ ಅಡ್ಡಮತದಾನ ಮಾಡಿದ 14 ಸದಸ್ಯರು ಯಾರು ಅನ್ನೋ ಬಗ್ಗೆ ಚರ್ಚೆ ಮಾಡಲಾಗಿದೆ.

ಬ್ಯಾಲೆಟ್ ಚುನಾವಣೆಗೆ ಕರ್ನಾಟಕ ಸರ್ಕಾರ ನಿರ್ಧಾರ ಮಾಡಿದೆ. ಈ ನಡುವೆ ಉಪರಾಷ್ಟ್ರಪತಿ ಚುನಾವಣೆ ಬ್ಯಾಲೆಟ್ ಪೇಪರ್ನಲ್ಲೇ ನಡೆದಿದ್ದು, ಬ್ಯಾಲೆಟ್ನಲ್ಲೂ ನಾವೇ ಗೆಲ್ತೀವಿ ಅಂತಾ ಬಿಜೆಪಿ ಕಿಚಾಯಿಸಿದೆ. ಒಟ್ಟಾರೆ ಫಲಿತಾಂಶ ಏನೂ ತಲೆಕೆಳಗಾಗುವ ಸಾಧ್ಯತೆಗಳು ಇರಲಿಲ್ಲ. ಕಾಂಗ್ರೆಸ್ ನೇತೃತ್ವದ INDIA ಒಕ್ಕೂಟಕ್ಕೆ ಈ ಮೊದಲೇ ಫಲಿತಾಂಶದ ಬಗ್ಗೆ ತಿಳಿದಿತ್ತು. ಆದರೂ ಒಗ್ಗಟ್ಟು ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದರೆ ಇದೀಗ 15 ಮಂದಿ ಅಡ್ಡಮತದಾನ ಮಾಡಿದವರು ಯಾರು ಅನ್ನೋ ಬಗ್ಗೆ ಆಂತರಿಕವಾಗಿ ತನಿಖೆ ನಡೆಯಬೇಕಿದೆ. ಇಲ್ಲದಿದ್ದರೆ INDIA ಒಕ್ಕೂಟದಲ್ಲೇ ಒಗ್ಗಟ್ಟು ಇಲ್ಲ ಅನ್ನೋದು ಜಗಜ್ಜಾಹೀರು ಆಗಿದೆ ಎನ್ನಬಹುದು.


