ಬೆಂಗಳೂರಿನಲ್ಲಿ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಬೈಕ್ ಕಳ್ಳತನದ ಆರೋಪದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆ ಮಾಡಿದಾಗ ಪೊಲೀಸರೇ ಕ್ಷಣ ಕಾಲ ಹೌಹಾರಿದ್ದಾರೆ. ಆಂಧ್ರ ಪ್ರದೇಶದ ಅನಂತಪುರ ಮೂಲದ ಈತ ಪತ್ನಿ ಹಾಗೂ ಮಗುವಿನ ಜೊತೆಗೆ ಬೆಂಗಳೂರಿನಲ್ಲಿ ವಾಸವಾಗಿದ್ದ. ಜೊತೆಗೆ ಡ್ರೈವರ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಆದರೆ ಅಪ್ಪನಿಗೆ ಕ್ಯಾನ್ಸರ್ ಕಾಯಿಲೆ ಈತನನ್ನು ಕಳ್ಳನನ್ನಾಗಿ ಮಾಡಿತು ಎಂದು ಪೊಲೀಸರ ಎದುರು ಹೇಳಿಕೊಂಡಿದ್ದಾನೆ.

ಹೊಸಕೋಟೆಯ ಅನುಗೊಂಡನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಆರೋಪಿ ಫಿರೋಜ್, ಆಂಧ್ರದ ಅನಂತಪುರದಿಂದ ಬಂದು ಹೊಸಕೋಟೆ ಬಳಿ ಪತ್ನಿ ಮಗುವಿನೊಂದಿಗೆ ವಾಸ ಮಾಡುತ್ತಿದ್ದ. ಡ್ರೈವರ್ ಕೆಲಸ ಮಾಡಿಸಿಕೊಂಡು ಬೆಂಗಳೂರಿನಲ್ಲಿ ಜೀವನ ಸಾಗಿಸೋದೆ ಕಷ್ಟ. ಪರಿಸ್ಥಿತಿ ಹೀಗಿರುವಾಗ ತಂದೆ ಮೊಹಮ್ಮದ್ ಪಾಷಗೆ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಪರದಾಡುವಾಗ ಕಣ್ಣಿಗೆ ಕಾಣಿಸಿದ್ದೇ ಕಳ್ಳತನ ಎಂದಿದ್ದಾನೆ.
ಒಮ್ಮೆ ಬೈಕ್ ಕದ್ದು ಮಾರಾಟ ಮಾಡಿ ಸಕ್ಸಸ್ ಆದ ಬಳಿಕ ಅದನ್ನೇ ಕಾಯಕ ಮಾಡಿಕೊಂಡಿದ್ದಾನೆ. ಕಳ್ಳತನ ಮಾಡಿದ್ದ ಬೈಕ್ ಮಂಡ್ಯ ಮತ್ತು ಅಂಧ್ರದಲ್ಲಿ ಮಾರಾಟ ಮಾಡುತ್ತಿದ್ದ. ಕಾಡುಗೋಡಿ ಮೆಟ್ರೋ ನಿಲ್ದಾಣ ಮತ್ತು ವೈಟ್ ಫೀಲ್ಡ್ ಭಾಗದಲ್ಲಿ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ. ಅದರಿಂದ ಬಂದ ಹಣದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಟ್ರೀಟ್ಮೆಂಟ್ ಕೊಡಿಸುತ್ತಿದ್ದ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ. ಅದೂ ಅಲ್ಲದೆ ಸಿಸಿಟಿವಿ ಇಲ್ಲದ ಕಡೆ ಪರಿಶೀಲನೆ ಮಾಡಿಯೇ ಬೈಕ್ ಕಳ್ಳತನ ಮಾಡ್ತಿದ್ದ ಅನ್ನೋದು ಗೊತ್ತಾಗಿದೆ.

ಕಳ್ಳತನ ಮಾಡೋದಿಕ್ಕೆ ಹಾಗೂ ಮಾರಾಟ ಮಾಡೋದಕ್ಕೂ ಸುಲಭ ಅಂತ ಕೇವಲ ಡಿಯೋ ಸ್ಕೂಟರ್ಗಳನ್ನೇ ಹೆಚ್ಚು ಹೆಚ್ಚು ಕಳ್ಳತನ ಮಾಡಿ ಸಾಕಷ್ಟು ಹಣ ಸಂಪಾದನೆ ಮಾಡಿದ್ದ ಆರೋಪಿ ಫಿರೋಜ್ನನ್ನು ವೈಟ್ ಫೀಲ್ಡ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. 24 ವರ್ಷದ ಫಿರೋಜ್ನಿಂದ ಬರೋಬ್ಬರಿ ಇಪ್ಪತ್ತು ಸ್ಕೂಟರ್ಗಳನ್ನ ಜಪ್ತಿ ಮಾಡಲಾಗಿದೆ.
ಇದೇ ಕಾರಣಕ್ಕೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಸಂಪೂರ್ಣವಾಗಿ ಉಚಿತ ಕೊಡುತ್ತಿರುವುದು. ಯಾವುದೇ ವೃತ್ತಿಯಾದರೂ ಜನರು ಬದುಕುತ್ತಾರೆ. ಈ ರೀತಿಯ ಸಮಸ್ಯೆಗಳು ಎದುರಾದಾಗ ಆ ವೃತ್ತಿಯಿಂದ ಚಿಕಿತ್ಸೆ ಕೊಡಿಸಲು ಅಥವಾ ಶಿಕ್ಷಣ ಕೊಡಿಸಲು ಸಾಧ್ಯವಿಲ್ಲ, ಸಮಯ ಬಂದಾಗ ಈ ರೀತಿ ಜನರು ಆಕಸ್ಮಿಕ ಮತ್ತು ಅನಿವಾರ್ಯತೆಯಿಂದ ಕಳ್ಳತನ, ದರೋಡೆ ಪ್ರಕರಣಗಳಿಗೆ ಸಿಲುಕುತ್ತಾರೆ ಎನ್ನಬಹುದು. ಸರ್ಕಾರ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ಉಚಿತ ಎಂದು ಘೋಷಣೆ ಮಾಡಿ, ಎಲ್ಲಾ ಖಾಸಗಿ ಶಾಲೆಗಳು ಹಾಗೂ ಆಸ್ಪತ್ರೆಗಳನ್ನು ಸರ್ಕಾರದ ಒಡೆತನಕ್ಕೆ ತೆಗೆದುಕೊಂಡರೆ ಕಳ್ಳತನ, ದರೋಡೆ ಕೇಸ್ಗಳು ಕಡಿಮೆ ಆಗುವುದರಲ್ಲಿ ಸಂಶಯವಿಲ್ಲ.


