ತಮಿಳುನಾಡಿನಲ್ಲಿ ಘನಘೋರ ಘಟನೆಯೊಂದು ನಡೆದು ಹೋಗಿದೆ. ತಮಿಳು ನಟ ಕಮ್ ರಾಜಕಾರಣಿ ಆಗಿರುವ ವಿಜಯ್ ರಾಜಕೀಯ ಱಲಿಯಲ್ಲಿ ಕಾಲ್ತುಳಿತ ಸಂಭವಿಸಿದ್ದು, ಬರೋಬ್ಬರಿ 38 ಜನರು ಸಾವನ್ನಪ್ಪಿದ್ದಾರೆ. ತಮಿಳುನಾಡಿನ ಕರೂರಿನಲ್ಲಿ ನಡೆದ ರಾಜಕೀಯ ಱಲಿಯಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು ಎನ್ನಲಾಗಿದ್ದು, ಮೆಘಾ ಪೊಲಿಟಿಕಲ್ ಱಲಿ ಆಯೋಜನೆ ಮಾಡಲಾಗಿತ್ತು. ತಮಿಳಗ ವೆಟ್ರಿ ಕಳಗಮ್ (TVK) ಪಕ್ಷ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿದ್ದು, ತ್ವೆರಿತವಾಗಿ ಆರೋಗ್ಯ ಸೇವೆ ಸಿಗದೆ ಜನರು ನೋಡ ನೋಡುತ್ತಿದ್ದ ಹಾಗೆ ಸಾವಿನ ಮನೆ ಸೇರಿದ್ದಾರೆ.

ನಟ ವಿಜಯ್ ಮಾತನಾಡುವಾಗ ಜನರ ನೂಕು ನುಗ್ಗಲು ಉಂಟಾಗಿದೆ. ಆ ವೇಳೆ ಕೆಲವರು ಅಸ್ವಸ್ಥರಾದ ವಿಚಾರ ಗೊತ್ತಾಗ್ತಿದ್ದ ಹಾಗೆ ನಟ ವಿಜಯ್ ಪೊಲೀಸ್ ಸರ್ ಪ್ಲೀಸ್ ಹೆಲ್ಪ್ ಎಂದಿದ್ದಾರೆ. ಆ ಬಳಿಕ ತಕ್ಷಣ ಮಾತನ್ನು ನಿಲ್ಲಿಸಲಾಗಿದೆ. ಆದರೆ ನಟ ಕಮ್ ರಾಜಕಾರಣಿ ಆಗಿರುವ ವಿಜಯ್ ಕಾರ್ಯಕ್ರಮ ಸ್ಥಳಕ್ಕೆ ಬರೋಬ್ಬರಿ 6 ಗಂಟೆಗಳ ಕಾಲ ತಡವಾಗಿ ಆಗಮಿಸಿದರು. ವಿಜಯ್ ಬಂದ್ ಭಾಷಣ ಶುರು ಮಾಡುತ್ತಿದ್ದ ಹಾಗೆ ಜನರು ವಿಜಯ್ ನೋಡಲು ಮುಗಿಬಿದ್ದ ಕಾರಣಕ್ಕೆ ಈ ಘಟನೆ ನಡೆದಿದೆ ಅಂತಾ ಪ್ರಾಥಮಿಕ ತನಿಖೆಯಿಂದ ಗೊತ್ತಾಗ್ತಿದೆ. ಆದರೆ ಸ್ಥಳದಲ್ಲಿ ಅಷ್ಟೂ ಜನರಿಗೆ ನೀಡಬಹುದಾದ ವೈದ್ಯಕೀಯ ಸೌಲಭ್ಯಗಳು ಇಲ್ಲದ ಕಾರಣಕ್ಕೆ ಸಾವು ಸಂಭವಿಸಿದೆ.

ಸಾವಿನ ಘಟನೆ ಸಂಭವಿಸುತ್ತಿದ್ದಂತೆ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ನಟ ವಿಜಯ್, ಈ ಘಟನೆಯಿಂದ ನನ್ನ ಹೃದಯ ಒಡೆದು ಚೂರು ಚೂರಾಗಿದೆ ಎಂದಿದ್ದಾರೆ. ನನ್ನಿಂದ ವಿವರಿಸಲು ಸಾಧ್ಯವಾಗದಂತ ನೋವು ಆವರಿಸಿಕೊಂಡಿದೆ. ಮೃತರ ಕುಟುಂಬಸ್ಥರಿಗೆ ನನ್ನ ಸಂತಾಪಗಳು, ಗಾಯಗೊಂಡವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ದುರ್ಘಟನೆಗೆ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಘಟನೆ ಬಗ್ಗೆ ಸಂಪೂರ್ಣ ವರದಿ ಕೊಡುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚನೆ ಕೊಟ್ಟಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಸಂತಾಪ ಸಲ್ಲಿಸಿದ್ದಾರೆ. ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಟ್ವೀಟ್ ಮಾಡಿ ಕೂಡಲೇ ಏನೆಲ್ಲಾ ವ್ಯವಸ್ಥೆ ಬೇಕು ಅದನ್ನು ಮಾಡಲು ಮಾಜಿ ಸಚಿವ ಸೆಂಥಿಲ್ ಬಾಲಾಜಿ ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದಿದ್ದಾರೆ.

ಸಾವನ್ನಪ್ಪಿದವರಲ್ಲಿ 8 ಮಕ್ಕಳು 16 ಜನ ಮಹಿಳೆಯರೂ ಸೇರಿ ಸಾವಿನ ಸಂಖ್ಯೆ 38 ಎಂದು ಹೇಳಲಾಗಿದೆ. 60ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳದಿಂದ ಆಸ್ಪತ್ರೆಗೆ ಆ್ಯಂಬುಲೆನ್ಸ್ಗಳು ಸಾಲುಗಟ್ಟಿ ಬಂದಿದ್ರಿಂದ ಸಾವಿನ ಸಂಖ್ಯೆ ನಿಖರವಾಗಿ ಹೇಳಲು ಸಾಧ್ಯವಾಗ್ತಿಲ್ಲ ಅಂತಾ ಕರೂರು ವೂದ್ಯಕೀಯ ಕಾಲೇಜಿನ ಡೀನ್ ಆರ್ ಶಾಂತಿಮಲರ್ ಮಾಹಿತಿ ನೀಡಿದ್ದಾರೆ. ಸುಮಾರು 40 ವೈದ್ಯರನ್ನು ತಿರುಚಿರಾಪಳ್ಳಿ ಹಾಗೂ ಸೇಲಂನಿಂದ ರವಾನೆ ಮಾಡಲಾಗಿದೆ. ಪೊಲೀಸರು 10 ಸಾವಿರ ಜನರನ್ನು ಸೇರಿಸಿ ಱಲಿ ಮಾಡಲು ಅವಕಾಶ ಕೊಟ್ಟಿದ್ದರು. ಆದರೆ ಸ್ಥಳದಲ್ಲಿ 30 ರಿಂದ 35 ಸಾವಿರ ಜನರು ಸೇರಿದ್ದರು ಎನ್ನಲಾಗ್ತಿದೆ. ವಿಜಯ್ ಮಾತನಾಡಲು ಶುರು ಮಾಡ್ತಿದ್ದ ಹಾಗೆ ಜನರು ಸ್ಟೇಜ್ ಕಡೆಗೆ ನುಗ್ಗಲು ಪ್ರಾರಂಭಿಸಿದ್ರು. ಆಗ ಹಾಕಿದ್ದ ಬ್ಯಾರಿಕೇಡ್ಸ್ ಮುರಿದು ಬಿದ್ದು ಈ ಘಟನೆ ಆಗಿದೆ ಎನ್ನಲಾಗ್ತಿದೆ.


