ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್ನಲ್ಲಿ ಸಾವಿರಾರು ಕಬ್ಬು ಬೆಳೆಗಾರರು ಬೃಹತ್ ಹೋರಾಟ ನಡೆಸುತ್ತಿದ್ದಾರೆ. ಬಾಗಲಕೋಟೆ, ವಿಜಯಪುರದಲ್ಲೂ ಅನ್ನದಾತರ ಆಕ್ರೋಶ ಜೋರಾಗಿದ್ದು, ರಾಜ್ಯಾದ್ಯಂತ ಪ್ರತಿಭಟನೆಗೆ ಕರೆ ಕೊಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಸಂಧಾನ ಮಾಡಿ ರೈತರನ್ನು ಮನವೊಲಿಕೆ ಮಾಡಲು ಕಾನೂನು ಸಚಿವರನ್ನು ಕಳುಹಿಸಿತ್ತು. ಸಿಎಂ ಸಿದ್ದರಾಮಯ್ಯ ಕಚೇರಿಯಿಂದ ಸೂಚನೆ ಬಂದಿದ್ದು, ನಾನು ರೈತರ ಜೊತೆಗೆ ಚರ್ಚೆ ಮಾಡಿ, ಅವರ ಬೇಡಿಕೆಗಳ ಬಗ್ಗೆ ಪರಿಶೀಲನೆ ಮಾಡ್ತೇನೆ ಎಂದು ತೆರಳಿದ್ದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಯಾವುದೇ ನಿರ್ಧಾರ ಕೈಗೊಳ್ಳಲು ಮಾಡಲು ವಿಫಲರಾದರು. ಈ ವಿಚಾರದಲ್ಲಿ ನಾನು ಏಕಾಏಕಿ ನಿರ್ಧಾರ ಮಾಡೋಕೆ ಸಾಧ್ಯವಿಲ್ಲ. ಗುರುವಾರ ಸಿಎಂ ಜೊತೆಗೆ ಚರ್ಚೆ ಮಾಡಲು ರೈತರ ಪರವಾಗಿ 10 ಜನ ಬೆಂಗಳೂರಿಗೆ ಬನ್ನಿ ಎಂದು ಆಹ್ವಾನ ನೀಡಿದ್ದರು.

ಕಾನೂನು ಸಚಿವ ಹೆಚ್.ಕೆ ಪಾಟೀಲ್ ಪ್ರಸ್ತಾವನೆಯನ್ನು ರೈತ ಸಂಘದ ಮುಖಂಡರು ತಿರಸ್ಕರಿಸಿದ್ದಾರೆ. ಈಗಾಗಲೆ ಸರ್ಕಾರಕ್ಕೆ ಸಮಯ ಕೊಟ್ಟಿದ್ದೇ ಜಾಸ್ತಿ ಆಗಿದೆ. ಶುಕ್ರವಾರ ಸಂಜೆಯೊಳಗೆ ಸರ್ಕಾರದ ನಿರ್ಧಾರ ಹೇಳ್ಬೇಕು. ನಾವು ಯಾರ ಜೊತೆಗೂ ಸಭೆ ಮಾಡಲು ಬರಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿದ್ದಾರೆ. ಬೇಡಿಕೆ ಈಡೇರಿದ್ರೆ ಮಾತ್ರ ನಮ್ಮ ಹೋರಾಟ ವಾಪಸ್ ಪಡೆಯುತ್ತೇವೆ ಎಂದು ಹೇಳಿದ್ದಾರೆ. ಇನ್ನೂ ಸಂಧಾನಕ್ಕೆ ಆಹ್ವಾನ ಕೊಟ್ಟ ಬಗ್ಗೆ ರೈತರಿಗೆ ಅಪನಂಬಿಕೆ ಬಂದಿದೆ. ರೈತರ ಹೋರಾಟದ ದಾರಿ ತಪ್ಪಿಸಲು ಸರ್ಕಾರದ ಸಂಚು ಮಾಡಿದೆ ಎನ್ನುವ ರೀತಿಯಲ್ಲಿ ಮಾತನಾಡಿದ್ದಾರೆ. ರೈತ ರಾಜ್ಯ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ಮಾತನಾಡಿ, ಸಂಧಾನ ಸಭೆ ಬಗ್ಗೆ ಮಾತನಾಡಿದ್ದು, ಸಂಧಾನ ಸಕ್ಸಸ್ ಆಗಲ್ಲಾ ಅಂತಾ ನಮಗೆ ಮೊದಲೇ ತಿಳಿದಿತ್ತು. ನಮ್ಮ ಹೋರಾಟದ ದಾರಿ ತಪ್ಪಿಸಲು ನಮ್ಮನ್ನ ಬೆಂಗಳೂರಿಗೆ ಕರೆಯುತ್ತಿದ್ದಾರೆ ಎಂದಿದ್ದಾರೆ.

ಇನ್ನು ರೈತರ ಹೋರಾಟದ ಬಗ್ಗೆ ಸಚಿವರಿಗೆ ಮಾಹಿತಿ ಇರಲಿಲ್ವಾ..? ಜಿಲ್ಲಾಡಳಿತ ಮಾಹಿತಿ ನೀಡಿಲ್ವಾ..? ಅಂತಾ ರೈತರು ಪ್ರಶ್ನಿಸಿದ್ದಾರೆ. ನಮ್ಮ ಬೇಡಿಕೆ ಒಂದೆ ಕಬ್ಬು ಬೆಲೆ ನಿರ್ಧಾರ ಆಗಬೇಕು. ಅದನ್ನು ಸರ್ಕಾರ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಲಿದೆ ಎಂದು ಎಚ್ಚರಿಸಿದ್ದಾರೆ. ಗುರ್ಲಾಪುರ ಕ್ರಾಸ್ನಲ್ಲಿ ಕಬ್ಬು ಬೆಳೆಗಾರರ ಜೊತೆಗಿನ ಸರ್ಕಾರದ ಸಂಧಾನ ವಿಫಲವಾದ ಬಳಿಕ ರೈತರು ಸಚಿವರ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಸಚಿವ ಹೆಚ್.ಕೆ ಪಾಟೀಲ್ ಕಾರಿಗೆ ರೈತರು ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ವೇದಿಕೆಯಿಂದ ವಾಪಸ್ ಆಗುತ್ತಿದ್ದ ವೇಳೆ ಆಕ್ರೋಶಗೊಂಡ ರೈತರು ಸಚಿವರ ಕಾರಿಗೆ ಅಡ್ಡವಾಗಿ ಮಲಗಿ ಪ್ರತಿಭಟಿಸಿದ್ದಾರೆ. ಪೊಲೀಸರು ಹರಸಾಹಸ ಮಾಡಿ ಸಚಿವರನ್ನು ಹೊರಕ್ಕೆ ಕರೆದೊಯ್ದಿದ್ದಾರೆ.

ಇವತ್ತು ಸಿಎಂ ಜೊತೆಗಿನ ಸಭೆಗೆ ರೈತರ ಪ್ರತಿನಿಧಿಗಳು ಬರಲ್ಲ ಅನ್ನೋದು ಕನ್ಫರ್ಮ್ ಆಗಿದೆ. ಈ ನಡುವೆ ಇವತ್ತು ಕ್ಯಾಬಿನೆಟ್ ಸಭೆ ನಡೆಯಲಿದ್ದು, ರೈತರ ಹೋರಾಟದ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಆಗಲಿದೆ. ಆ ಬಳಿಕ ಸರ್ಕಾರದ ನಿರ್ಧಾರ ಪ್ರಕಟ ಆಗುವ ಸಾಧ್ಯತೆಯಿದೆ. ಸಕ್ಕರೆ ಸಚಿವರು ಸರ್ಕಾರಕ್ಕೆ ಲಾಭ ನಷ್ಟದ ಅಂಕಿ ಅಂಶ ಕೊಟ್ಟ ಬಳಿಕ ಅಂತಿಮ ನಿರ್ಧಾರ ಹೊರ ಬೀಳುವ ಸಾಧ್ಯತೆಗಳಿವೆ. ಆದರೆ ರೈತರ ಹೋರಾಟಕ್ಕೆ ಬಿಜೆಪಿ ಶಕ್ತಿ ತುಂಬಿದ್ದು, ಸರ್ಕಾರದ ನಿರ್ಧಾರವನ್ನು ಒಪ್ಪಿಕೊಳ್ತಾರಾ..? ಅಥವಾ ಹೋರಾಟ ಮತ್ತಷ್ಟು ತೀವ್ರತೆ ಪಡೆಯುತ್ತಾ..? ಅನ್ನೋದು ಇವತ್ತು ಸಂಜೆ ಬಳಿಕ ಗೊತ್ತಾಗಲಿದೆ.


