ಭಾರತದಲ್ಲಿ ವಕ್ಎಫ್ ಬೋರ್ಡ್ ಆಸ್ತಿ ಅಂತ ಯಾವುದೇ ಜಾಗಕ್ಕಾದರೂ ಬೋರ್ಡ್ ಹಾಕಿದ್ರೆ ಆ ಜಾಗ ವಕ್ಎಫ್ ಬೋರ್ಡ್ ಗೆ ಸೇರಿದ್ದು ಆಗ್ತಿತ್ತು. ರೈತರ ಜಮೀನು, ಸರ್ಕಾರಿ ಭೂಮಿ, ಇಲಾಖೆ ಆಸ್ತಿಯೂ ವಕ್ಫ್ ಆಸ್ತಿ ಅಂತ ಘೋಷಣೆ ಮಾಡಲಾಗ್ತಿತ್ತು. ಇದನ್ನು ತಡೆಗಟ್ಟಲು ಮೋದಿ ಸರ್ಕಾರ 2024 ಆಗಸ್ಟ್ನಲ್ಲಿ ವಕ್ಫ್ ತಿದ್ದುಪಡಿ ಮಸೂದೆಯನ್ನು ಮಂಡಿಸಿತ್ತು. ವಿರೋಧ ಪಕ್ಷಗಳ ಆಕ್ಷೇಪದ ನಡುವೆಯೇ 1995ರ ವಕ್ಫ್ ಬೋರ್ಡ್ನ ನಿಯಮಗಳಿಗೆ 44 ತಿದ್ದುಪಡಿ ಮಸೂದೆ ಮಂಡಿಸಿತ್ತು. ಇದನ್ನು ಪ್ರಶ್ನಿಸಿ ವಿಪಕ್ಷಗಳು, ಮುಸ್ಲಿಂ ಸಮುದಾಯ ಸುಪ್ರಿಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ವಕ್ಫ್ ತಿದ್ದುಪಡಿ ಕಾಯ್ದೆಯ ಕೆಲವು ಅಂಶಗಳಿಗೆ ತಡೆ ನೀಡಿದೆ. ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಹಾಗೂ ನ್ಯಾಯಮೂರ್ತಿ ಎ.ಜಿ ಮಾಷೀ ನೇತೃತ್ವದ ಪೀಠ ಮಧ್ಯಂತರ ಆದೇಶವನ್ನು ಪ್ರಕಟಿಸಲಾಗಿದೆ.

ಸುಪ್ರೀಂಕೋರ್ಟ್ ಕೆಲವು ಕಾಯ್ದೆಗೆ ತಡೆ ನೀಡಲು ಸಾರಾಸಗಟಾಗಿ ನಿರಾಕರಿಸಿದೆ. ಆದ್ರೆ ಕೆಲವು ಅಂಶಗಳಿಗೆ ಮಾತ್ರ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿದೆ. ವಕ್ಫ್ಗೆ ಭೂಮಿ ದಾನ ಮಾಡುವ ವ್ಯಕ್ತಿ 5 ವರ್ಷ ಇಸ್ಲಾಂ ಧರ್ಮ ಪಾಲಿಸಿರಬೇಕು ಅನ್ನೋ ತಿದ್ದುಪಡಿ ಅಂಶಕ್ಕೆ ಮಧ್ಯಂತರ ತಡೆ ನೀಡಿದೆ. ವಕ್ಫ್ ಆಸ್ತಿ ಗುರುತಿಸಲು ಸರ್ಕಾರಿ ಅಧಿಕಾರಿಗಳ ನಿಯೋಜಿಸುವ ಅಧಿಕಾರಕ್ಕೂ ಮಧ್ಯಂತರ ತಡೆ ಕೊಟ್ಟಿದೆ. ಸರ್ಕಾರಿ ಆಸ್ತಿ ವಕ್ಫ್ ಆಸ್ತಿ ಅಂತ ಗುರುತಿಸಿದ್ರೆ ಕಂದಾಯ ಇಲಾಖೆ ದಾಖಲೆ ಪರಿಶೀಲಿಸಿ ವಶಕ್ಕೆ ಪಡೆಯಬಹುದು ಅನ್ನೋ ಅಂಶಕ್ಕೆ ತಡೆ ಸಿಕ್ಕಿದೆ. ಆಸ್ತಿ ಅತಿಕ್ರಮಣ ಎಂದು ನಿಯೋಜಿತ ಅಧಿಕಾರಿ ವರದಿ ಸಲ್ಲಿಸುವವರೆಗೆ ವಕ್ಫ್ ಆಸ್ತಿ ಎಂದು ಪರಿಗಣಿಸಲಾಗದು ಅನ್ನೋದಕ್ಕೆ ಮಧ್ಯಂತರ ತಡೆ ಸಿಕ್ಕಿದೆ. ಸರ್ಕಾರಿ ಆಸ್ತಿ ಅಂತ ನಿಯೋಜಿತ ಅಧಿಕಾರಿ ನಿರ್ಧರಿಸಿದ್ರೆ ಕಂದಾಯ ಇಲಾಖೆ ದಾಖಲೆಗಳಲ್ಲಿ ಅಗತ್ಯ ಬದಲಾವಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಅನ್ನೋದಕ್ಕೂ ತಡೆ ನೀಡಿದೆ.
ಇನ್ನೂ ನಿಯೋಜಿತ ಅಧಿಕಾರಿ ಸಲ್ಲಿಸಿದ ವರದಿ ಆಧರಿಸಿ ದಾಖಲೆಗಳ ಬದಲಾವಣೆ ಮಾಡಬೇಕು ಎಂದು ರಾಜ್ಯ ಸರ್ಕಾರ ಸೂಚಿಸಬೇಕು ಅನ್ನೋದಕ್ಕೂ ಸುಪ್ರೀಂಕೋರ್ಟ್ ತಡೆ ನೀಡಿದೆ. ವಕ್ಫ್ ಬೋರ್ಡ್ನಲ್ಲಿ ಮುಸ್ಲಿಮೇತರರನ್ನು ಸದಸ್ಯರನ್ನಾಗಿ ನೇಮಿಸದಂತೆ ಸಲ್ಲಿಸಿದ್ದ ಅರ್ಜಿಯನ್ನು ಪೀಠ ವಜಾಗೊಳಿಸಿದೆ. ವಕ್ಫ್ ಬೋರ್ಡ್ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಸ್ಲಿಂ ಆಗಿರಬೇಕು ಎಂದು ಸುಪ್ರೀಂಕೋರ್ಟ್ ಸೂಚನೆ ಕೊಟ್ಟಿದೆ. ಕೇಂದ್ರ ವಕ್ಫ್ ಕೌನ್ಸಿಲ್ನಲ್ಲಿ 4 ಮಂದಿಗಿಂತ ಹೆಚ್ಚು ಮುಸ್ಲಿಮೇತರರು ಇರಬಾರದು ಅಂತ ಆದೇಶ ಮಾಡಿದೆ. ರಾಜ್ಯ ವಕ್ಫ್ ಬೋರ್ಡ್ಗಳಲ್ಲಿ ಮುಸ್ಲೀಮೇತರರು 3 ಜನ ಮೀರಬಾರದು ಅಂತಾನೂ ಸುಪ್ರೀಂಕೋರ್ಟ್ ಆದೇಶದಲ್ಲಿ ಉಲ್ಲೇಖಿಸಿದೆ.

ಸುಪ್ರೀಂಕೋರ್ಟ್ನ ಈ ಮಧ್ಯಂತರ ಆದೇಶಕ್ಕೆ 2 ಕಡೆಯವ್ರು ಖುಷಿ ಪಟ್ಟಿದ್ದಾರೆ. ಅರ್ಜಿದಾರರ ಪರ ವಕೀಲ ಅನಾಸ್ ತನ್ವೀರ್ ಸುಪ್ರೀಂಕೋರ್ಟ್ ತೀರ್ಪು ನಮಗೆ ಸಕಾರಾತ್ಮಕ ಎನಿಸಿದೆ. ಈ ಆದೇಶವನ್ನ ಇನ್ನೂ ಸಂಪೂರ್ಣವಾಗಿ ಓದ್ಬೇಕು. ಆದ್ರೆ ಈ ಆದೇಶ ನಮಗೆ ಗೆಲುವು ತಂದಿದೆ ಎಂದಿದ್ದಾರೆ. ಅದೇ ರೀತಿ ವಕೀಲ ವರುಣ್ ಸಿಂಹ ಮಾತನಾಡಿ, ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಆದ್ರೆ ವಕ್ಫ್ ತಿದ್ದುಪಡಿ ಮಸೂದೆಗೆ ತಡೆ ನೀಡಿಲ್ಲ. ಕೇಂದ್ರ ಸರ್ಕಾರದ ಮಸೂದೆಗೆ ತಡೆ ನೀಡಿಲ್ಲ ವಕ್ಫ್ ತಿದ್ದುಪಡಿ ಮಸೂದೆಯಲ್ಲಿ ಹೊಸ ನಿಯಮಾವಳಿಗಳನ್ನೂ ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸಲಹೆ ನೀಡಿದೆ ಎಂದಿದ್ದಾರೆ.


