ಬಿಹಾರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಮೈತ್ರಿಕೂಟ ಅಧಿಕಾರ ಹಿಡಿಯುತ್ತದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದು ಚುನಾವಣಾ ಫಲಿತಾಂಶಕ್ಕಾಗಿ ಜನ ಎದುರು ನೋಡುತ್ತಿದ್ದಾರೆ. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಈಗಾಗಲೇ ಬಹುತೇಕ ಸಮೀಕ್ಷೆಗಳು ಬಹಿರಂಗ ಮಾಡಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಯು ಗೆಲುವು ಸಾಧಿಸುವುದು ಪಕ್ಕಾ ಎಂದು ನಿರ್ಧರಿಸಿರುವ ಕಾರ್ಯಕರ್ತರು, ಸಂಭ್ರಮಾಚರಣೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಬಿಹಾರದಲ್ಲಿ ಎನ್ಡಿಎ ಮೈತ್ರಿಕೂಟ 160 ಕ್ಷೇತ್ರಗಳಿಗೂ ಹೆಚ್ಚಿನ ಕ್ಷೇತ್ರದಲ್ಲಿ ಗೆಲುವು ಸಾಧಿಸಲಿದ್ದು, ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು 501 KG ಲಡ್ಡು ತಯಾರಿಸಲಾಗಿದೆ.
RJD ನಾಯಕ ತೇಜಸ್ವಿ ಯಾದವ್ ಮತದಾನದ ಬಳಿಕ ಹೊರಬಿದ್ದ ಮತದಾನೋತ್ತರ ಸಮೀಕ್ಷೆಗಳನ್ನು ರಬ್ಬೀಶ್ ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್ ಹಾಗೂ ಆರ್ಜೆಡಿ ಮೈತ್ರಿಕೂಟ ಮಹಾಘಟಬಂಧನ್ ಭರ್ಜರಿ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದಿದ್ದಾರೆ. ಆದರೆ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಸುಳ್ಳನ್ನು ಹೇಳುವ ಮೂಲಕ ಮತ ವಂಚನೆ ಮಾಡಲು ಪ್ರಯತ್ನಿಸಿದ್ದಾರೆ ಅಷ್ಟೆ ಎಂದಿದ್ದಾರೆ. ಮತ ಎಣಿಕೆಯನ್ನು ನಿಧಾನ ಮಾಡಲು NDA ಪ್ರಯತ್ನ ಮಾಡಲಿದೆ, ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯ ಪ್ರಯತ್ನ ನಡೆಯಲಿದೆ ಎಂದಿದ್ದಾರೆ. ರಾತ್ರಿ RJD ನಾಯಕರ ಜೊತೆಗೆ ಮಹತ್ವದ ಸಭೆ ನಡೆಸಿದ್ದು, ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಹಾರದಲ್ಲಿ ಮತ ಎಣಿಕೆಗೆ ಬರುವ ಅಧಿಕಾರಿಗಳಿಗೆ RJD ನಾಯಕರೊಬ್ಬರು ವಾರ್ನ್ ಮಾಡಿದ್ದಾರೆ. ಒಂದು ವೇಳೆ ಜನರು ನೀಡಿರುವ ಜನಾದೇಶವನ್ನು ತಿರುಚುವ ಪ್ರಯತ್ನ ಮಾಡಿದ್ರೆ ಜನರು ಬೀದಿಗೆ ಇಳಿಯುತ್ತಾರೆ ಎಂದು ಎಚ್ಚರಿಸಿದ್ದಾರೆ. ಈ ಬಾರಿ ಮತಗಳ ತಿರುಚುವಿಕೆ ನಡೆದರೆ ನೇಪಾಳ, ಬಾಂಗ್ಲದೇಶ, ಶ್ರೀಲಂಕಾದಲ್ಲಿ ನಡೆದಂತಹ ಘಟನೆ ಬಿಹಾರದಲ್ಲೂ ನಡೆಯಲಿದೆ ಎಂದಿದ್ದಾರೆ. RJD ನಾಯಕ ಸುನಿಲ್ ಸಿಂಗ್ ಈ ಎಚ್ಚರಿಕೆ ನೀಡಿದ್ದು, ಕಳೆದ ಬಾರಿ 2020ರಲ್ಲಿ ಸಾಕಷ್ಟು RJD ನಾಯಕರು ಇದೇ ರೀತಿಯ ಮತ ತಿರುಚುವಿಕೆಯಿಂದ ಸೋಲುಂಡರು ಎಂದಿದ್ದಾರೆ.

ಬಿಹಾರದ ಜನರು ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ನಿತೀಶ್ ಕುಮಾರ್ ಅವರನ್ನು ಬೆಂಬಲಿಸಲಿದ್ದಾರೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಹೇಳಿದ್ದಾರೆ. ಜೊತೆಗೆ NDA ಮೈತ್ರಿಕೂಟವೇ ಸರ್ಕಾರ ರಚನೆ ಮಾಡುತ್ತದೆ ಅಂತಾನೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಭಿವೃದ್ಧಿಗಾಗಿ ಜನರು ಬಿಜೆಪಿ ಬೆಂಬಲಿಸಿದ್ದು, ಕೆಲವೇ ಗಂಟೆಗಳಲ್ಲಿ ಫಲಿತಾಂಶ ಹೊರಬೀಳಲಿದೆ ಎಂದಿದ್ದಾರೆ. ಆದರೆ ಹರಿಯಾಣ ಚುನಾವಣೆ ವೇಳೆ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸಮೀಕ್ಷೆಗಳೇ ಹೇಳಿದ್ದವು. ಆದರೆ ಸಮೀಕ್ಷೆಯನ್ನು ಮೀರಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಹೀಗಾಗಿ ಸಮೀಕ್ಷೆಗಳನ್ನು ಸಂಫೂರ್ಣವಾಗಿ ನಂಬುವ ಸ್ಥಿತಿಯಲ್ಲಿ ದೇಶದ ಜನರಿಲ್ಲ ಎನ್ನಬಹುದು.


