ಉತ್ತರ ಕರ್ನಾಟಕ ಭಾಗದಲ್ಲಿ ಯೂಟ್ಯೂಬರ್ ಆಗಿ ಭಾರೀ ಖ್ಯಾತಿ ಪಡೆದಿರುವ ಮುಕಳೆಪ್ಪ ವಿರುದ್ಧ ಲವ್ ಜಿಹಾದ್ ಕೇಸ್ ದಾಖಲಾಗಿದೆ. ಖ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ವಿರೋಧಿ ಯುವತಿ ಕುಟುಂಬಸ್ಥರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಯೂಟ್ಯೂಬರ್ ಮುಕಲೆಪ್ಪ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಯುವತಿ ಗಾಯತ್ರಿಯನ್ನು ಪೊಲೀಸ್ರು ವಶಕ್ಕೆ ಪಡೆದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಠಾಣೆಯಲ್ಲಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಆ ಬಳಿಕ ಯುವತಿ ಗಾಯತ್ರಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ರವಾನೆ ಮಾಡಲಾಗಿದ್ದು, ಇಂದು ಕೋರ್ಟ್ಗೆ ಹಾಜರು ಮಾಡಲು ಪೊಲೀಸರು ನಿರ್ಧಾರ ಮಾಡಿದ್ದಾರೆ.

‘ನಾನು ಸ್ವಇಚ್ಛೆಯಿಂದಲೇ ಮದುವೆ ಆಗಿದ್ದೇನೆ’
ಮದುವೆ ನಂತರ ನನ್ನ ತಾಯಿಯ ಮನೆಗೂ ಹೋಗಿದ್ದೇನೆ . ನಮ್ಮ ಮದುವೆ ವಿಚಾರ ಎಲ್ಲರಿಗೂ ಗೊತ್ತು, ಅನುಮತಿ ಪಡೆದುಕೊಂಡೆ ಮದುವೆ ಆಗಿದ್ದೇನೆ. ಯಾವುದೇ ಬಲವಂತ, ಅಪಹರಣ ಆಗಿಲ್ಲ ಅಂತಾ ಯುವತಿ ಗಾಯತ್ರಿ ಹೇಳಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಹೇಳಿದ್ದಾರೆ. ಇದೇ ತಿಂಗಳ 20 ರಂದು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳ ಅಪಹರಣ ಆಗಿದೆ ಎಂದು ದೂರು ನೀಡಿದ್ದರು. ನಮ್ಮ ಮಗಳನ್ನ ಬಲವಂತವಾಗಿ ಮದುವೆ ಆಗಿದ್ದಾನೆ. ನಮ್ಮ ಮಗಳನ್ನ ನಮಗೆ ಕೊಡಿಸಿ ಅಂತಾ ದೂರು ನೀಡಿದ್ರು. ಹೀಗಾಗಿ ಪ್ರಕರಣ ದಾಖಲಿಸಿ ಯುವತಿಯನ್ನ ಹುಡುಕಾಟ ಮಾಡಿ ಆರೋಪಿ ಮುಕಳೆಪ್ಪ ಪತ್ತೆಗೆ ಜಾಲ ಬೀಸಿದ್ದೆವು. ಆದರೆ ಯುವತಿ ಗಾಯತ್ರಿ ತಮ್ಮ ವಕೀಲರ ಜೊತೆಗೆ ಠಾಣೆಗೆ ಬಂದಿದ್ದಾರೆ. ನಾನು ಸ್ವಇಚ್ಛೆಯಿಂದ ಜೂನ್ 5ರಂದು ಮದುವೆ ಆಗಿದ್ದೇನೆ ಅಂತ ಹೇಳಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಧಿಕಾರಿಗಳೂ ಸಹ ತನಿಖೆಯಲ್ಲಿ ಭಾಗಿಯಾಗಿದ್ದಾರೆ ಎಂದಿದ್ದಾರೆ.
ಮಹಿಳಾ ಸಾಂತ್ವನ ಕೇಂದ್ರಕ್ಕೆ ಗಾಯತ್ರಿ ಶಿಫ್ಟ್!
ಪೊಲೀಸರು ಹೇಳಿಕೆ ದಾಖಲಿಸಿಕೊಂಡ ಬಳಿಕ ನಿಯಮದಂತೆ ಗಾಯತ್ರಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಶಿಫ್ಟ್ ಮಾಡಲಾಗಿದೆ. ಧಾರವಾಡದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಖ್ವಾಜಾ ಪತ್ನಿ ಗಾಯತ್ರಿಯನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸ್ ಸಿಬ್ಬಂದಿ ಕರೆದೊಯ್ದು ಬಿಟ್ಟಿದ್ದಾರೆ. ಮಹಿಳಾ ಸಾಂತ್ವನ ಕೇಂದ್ರದ ಕಾರ್ಯದರ್ಶಿ ಪ್ರಶಾಂತ ಮಾತನಾಡಿ, ಇದೀಗ ಗಾಯಿತ್ರಿ ಅವರನ್ನು ಕೇಂದ್ರಕ್ಕೆ ಕರೆ ತಂದಿದ್ದಾರೆ. ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ನ್ಯಾಯಾಧೀಶರ ಮುಂದೆ ಹಾಜರು ಮಾಡಲಾಗುತ್ತದೆ. ಆ ಬಳಿಕ ಕೋರ್ಟ್ ಆದೇಶದಂತೆ ಮುಂದಿನ ನಿರ್ಧಾರ ಮಾಡುತ್ತೇವೆ. ಕೋರ್ಟ್ ನಿರ್ದೇಶನ ನೀಡುವ ತನಕ ಗಾಯತ್ರಿ ಇಲ್ಲಿಯೇ ಇರುತ್ತಾರೆ ಎಂದಿದ್ದಾರೆ.

‘ಎರಡೂವರೆ ವರ್ಷ ಪ್ರೀತಿ.. ಮದ್ವೆ ಆಗಿದ್ದೇವೆ’
ನಾವಿಬ್ಬರು ಎರಡೂವರೆ ವರ್ಷದಿಂದ ಪ್ರೀತಿಸಿ ಮದುವೆ ಆಗಿದ್ದೇವೆ. ನನಗೆ ಜೀವ ಬೆದರಿಕೆ ಇದೆ, ರಕ್ಷಣೆ ಬೇಕು ಎಂದು ಗಾಯತ್ರಿ ಪೊಲೀಸ್ ಠಾಣೆ ಮುಂಭಾಗದಲ್ಲೆ ಮನವಿ ಮಾಡಿಕೊಂಡಿದ್ದಾರೆ. ಯೂಟ್ಯೂಬರ್ ಮುಕಳೆಪ್ಪ ಪತ್ನಿ ಗಾಯತ್ರಿ ವಿಚಾರಣೆ ಮುಗಿಸಿ ಬಂದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿ, ನಮ್ಮ ತಂದೆ ತಾಯಿ ಹೇಳಿಕೆ ಎಲ್ಲಾ ಸುಳ್ಳು . ಈಗ ಬರ್ತಿರೋ ಸುದ್ದಿ ಎಲ್ಲಾ ಸುಳ್ಳು. ಅಪಹರಣ, ಜೀವಬೆದರಿಕೆ ಅಂತ ಸುಳ್ಳು ಸುದ್ದಿ ಹೇಳ್ತಿದ್ದಾರೆ. ಹೀಗಾಗಿ ಪೊಲೀಸ್ ಠಾಣೆಗೆ ಬಂದು ಸ್ಪಷ್ಟನೆ ನೀಡಿದ್ದೇನೆ. ಪೊಲೀಸರು ಪದೇ ಪದೇ ಕರೆದು ಕಿರಿಕಿರಿ ಮಾಡ್ತಾ ಇದ್ದಾರೆ. ನಾನು ಪೊಲೀಸರಿಗೂ ಸ್ಪಷ್ಟವಾಗಿ ಹೇಳಿಕೆ ನೀಡಿದ್ದೇನೆ. ಜೂನ್ 5ಕ್ಕೆ ಮದುವೆ ಆಗಿದ್ದೇವೆ. ಮೂರು ತಿಂಗಳು ನಾವೆಲ್ಲಾ ಚನ್ನಾಗಿಯೇ ಇದ್ವಿ. ನಮ್ಮ ಪಾಲಕರನ್ನ ಯಾರು ಮೈಂಡ್ ವಾಶ್ ಮಾಡ್ತಿದ್ದಾರೋ ಗೊತ್ತಿಲ್ಲ. ನಾವು ಮುಂಡಗೋಡಕ್ಕೆ ಚಿತ್ರೀಕರಣಕ್ಕಾಗಿ ಹೋಗ್ತಿದ್ವಿ. ಹಾಗಾಗಿ ಅಲ್ಲೇ ರಿಜಿಸ್ಟರ್ ಮದುವೆ ಆಗಿದ್ದೇವೆ ಎಂದಿದ್ದಾರೆ.

ಮುಂಡಗೋಡದಲ್ಲೂ ಮುಕಳೆಪ್ಪ ವಿರುದ್ಧ ಕೇಸ್!
ಯೂಟ್ಯೂಬರ ಮುಕಳೆಪ್ಪ ಲವ್ ಮ್ಯಾರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ವಾಜಾ ಶಿರಹಟ್ಟಿ ವಿರುದ್ಧ ಮತ್ತೊಂದು ದೂರು ದಾಖಲು ಆಗಿದೆ. ಉತ್ತರಕನ್ನಡ ಜಿಲ್ಲೆ ಮುಂಡಗೋಡ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ ಯುವತಿ ಗಾಯತ್ರಿ ತಾಯಿ ಶಿವಕ್ಕ. ಯೂಟ್ಯೂಬರ್ ಖ್ವಾಜಾ ಶಿರಹಟ್ಟಿ ಸೇರಿದಂತೆ ಏಳು ಜನರ ವಿರುದ್ಧ ದೂರು ದಾಖಲು ಮಾಡಲಾಗಿದೆ. ಸಬ್ ರಿಜಿಸ್ಟರ್ ಕಚೇರಿ ಸಿಬ್ಬಂದಿ ವಿರುದ್ಧವೂ ದೂರು ಕೊಡಲಾಗಿದೆ. ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ವಿವಾಹ ಮಾಡಿದ್ದಾರೆ. ಖ್ವಾಜಾ ಶಿರಹಟ್ಟಿಗೆ ಆತನ ಸ್ನೇಹಿತರು ಮತ್ತು ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಸಹಕಾರ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಯೂಟ್ಯೂಬರ್ ಮುಕಳೆಪ್ಪ ಮಾತ್ರ ಇಲ್ಲೀವರೆಗೂ ಕಣ್ಮರೆ ಆಗಿದ್ದು, ಮುಂದೆ ಈ ಬಗ್ಗೆ ಸ್ಪಷ್ಟನೆ ಕೊಡಬೇಕಿದೆ.


