ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ಮಾಡಲಿದ್ದು, ಕೆಂಪುಕೋಟೆ ಸುತ್ತಲು 11 ಸಾವಿರ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ದೆಹಲಿ ಪೊಲೀಸ್ರು, ಭಾರತೀಯ ಸೇನೆ ಹಾಗೂ ಅರೆಸೇನಾ ಪಡೆ ತುಕಡಿಗಳನ್ನ ನಿಯೋಜನೆ ಮಾಡಲಾಗಿದೆ. ಅನುಮಾನಾಸ್ಪದ ಸಂಚಾರ ಮಾಡುವ ಜನರ ಮೇಲೆ ನಿಗಾ ಇಡಲಾಗಿದೆ. ಸಂಚಾರ ದಟ್ಟಣೆ ಕಂಟ್ರೋಲ್ಗೆ 3 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.. ನಿನ್ನೆ ರಾತ್ರಿಯಿಂದಲೇ ರಾಷ್ಟ್ರ ರಾಜಧಾನಿಯೊಳಗೆ ಯಾವುದೇ ವಾಣಿಜ್ಯ ವಾಹನಕ್ಕೆ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.

ಬಸ್, ಮೆಟ್ರೋ, ಏರ್ಪೋರ್ಟ್, ರೈಲ್ವೇ ನಿಲ್ದಾಣಗಳಲ್ಲಿ 24 ಗಂಟೆ ಭದ್ರತೆ ಒದಗಿಸಲು ವಿಶೇಷ ತಂಡ ನಿಯೋಜಿಸಲಾಗಿದೆ.. ಕೆಂಪು ಕೋಟೆ ಸುತ್ತ ಸಿಸಿಟಿವಿ, ಡ್ರೋನ್ ಹದ್ದಿನ ಕಣ್ಣಿಟ್ಟಿದ್ದು, ಭಯೋತ್ಪಾದಕರ ಕೃತ್ಯ ತಡೆಯಲು ಪ್ಯಾರಾಗ್ಲೈಡರ್, ಹ್ಯಾಂಡ್ಗ್ಲೈಡರ್, ಮಾನವ ರಹಿತ ವಿಮಾನ, ಡ್ರೋನ್ಗಳು ನಿಯೋಜಿಸಲಾಗಿದೆ. ಇಂದು ದೆಹಲಿ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರುಗಳು ವಿಶೇಷ ಅತಿಥಿಗಳಾಗಿ ಭಾಗಿಯಾಗ್ತಿದ್ದಾರೆ.

ಬೆಂಗಳೂರಿನಲ್ಲಿ ಇಂದು ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯ ಧ್ವಜಾರೋಹಣ ನೆರವೇರಿಸಲಿದ್ದಾರೆ. ಪೆರೇಡ್ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಸಮಾರಂಭಕ್ಕೆ ಬರುವ ಸಾರ್ವಜನಿಕರಿಗೆ ಇದೇ ಮೊದಲ ಬಾರಿ ಆನ್ಲೈನ್ ಮೂಲಕ ಇ-ಪಾಸ್ ವಿತರಣೆ ಮಾಡಲಾಗಿದೆ. ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ 2 ಸಾವಿರಕ್ಕೂ ಅಧಿಕ ಪೊಲೀಸರನ್ನ ಭದ್ರತೆಗೆ ನಿಯೋಜಿಸಲಾಗಿದೆ.

ಮಾಣಿಕ್ ಷಾ ಪರೇಡ್ ಮೈದಾನದ ಸುತ್ತಮುತ್ತ ಸುಮಾರು 500 ಸಿಸಿ ಕ್ಯಾಮೆರಾಗಳಿದ್ದು, ಹೆಚ್ಚುವರಿಯಾಗಿ 100 ಸಿಸಿಟಿವಿ ಹಾಗೂ 2 ಬ್ಯಾಗೇಜ್ ಸ್ಕ್ಯಾನರ್ಗಳನ್ನ ಅಳವಡಿಸಲಾಗಿದೆ. ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ, ಅಗ್ನಿಶಾಮಕ ವಾಹನಗಳನ್ನ ನಿಯೋಜಿಸಲಾಗಿದೆ. ಸೆಂಟ್ರಲ್ ಸ್ಟ್ರೀಟ್ನ, ಅನಿಲ್ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ, ಕಬ್ಬನ್ ರಸ್ತೆಯ, ಸಿಟಿಓ ವೃತ್ತದಿಂದ ಕೆ.ಆರ್.ರಸ್ತೆ ಹಾಗೂ ಕಬ್ಬನ್ ರಸ್ತೆ ಜಂಕ್ಷನ್ವರೆಗೆ ಎಂ.ಜಿ.ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ ವಾಹನಗಳ ಪಾರ್ಕಿಂಗ್ ನಿಷೇಧಿಸಲಾಗಿದೆ.


