ಕಾಂಗ್ರೆಸ್ ಸರ್ಕಾರ ಕಳೆದ ಬಾರಿ ಲಿಂಗಾಯತ ಪ್ರತ್ಯೇಕ ಧರ್ಮ ಎಂದುಕೊಂಡು ಹೋಗಿ ಅಧಿಕಾರ ಕಳೆದುಕೊಂಡರು. ಕಳೆದ ಬಾರಿ ಜಾತಿ ಜನಗಣತಿಗೆ ಆದೇಶ ಮಾಡಿದರೂ ಅಧಿಕಾರದಿಂದ ಇಳಿಯುವ ಮುನ್ನ ವರದಿ ಸಲ್ಲಿಕೆ ಆಗಿರಲಿಲ್ಲ. ಆ ಬಳಿಕ ಬಂದ ಕುಮಾರಸ್ವಾಮಿ ಸರ್ಕಾರ, ನಂತರ ಬಿಜೆಪಿ ಸರ್ಕಾರ ಜಾತಿ ಜನಗಣತಿ ಸ್ವೀಕರಿಸುವ ಗೋಜಿಗೇ ಹೋಗಲಿಲ್ಲ. ಇದೀಗ ಮತ್ತೊಮ್ಮೆ ಎರಡನೇ ಬಾರಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅಳೆದೂ ತೂಗಿ ಜಾತಿ ಜನಗಣತಿ ವರದಿಯನ್ನು ಸ್ವೀಕಾರ ಮಾಡಿತ್ತು. ಆದರೆ ಅದರಲ್ಲಿನ ಅಂಕಿ ಅಂಶಗಳು ಜನರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಆ ಬಳಿಕ ವಿರೋಧ ಜಾಸ್ತಿ ಆಗಿದ್ದರಿಂದ ಆ ವರದಿಯನ್ನು ಕೈಬಿಟ್ಟು ಹೊಸದಾಗಿ ಜಾತಿ ಜನಗಣತಿ ಸಮೀಕ್ಷೆ ಮಾಡಲು 2ನೇ ಬಾರಿಗೆ ಆದೇಶ ಮಾಡಿದ್ದು, ಇಂದಿನಿಂದ ಜಾತಿ ಜನಗಣತಿ ಸಮೀಕ್ಷೆ ಆರಂಭ ಆಗುತ್ತಿದೆ.

ರಾಜ್ಯ ಸರ್ಕಾರ ಹಲವು ಗೊಂದಲಗಳು, ಹೋರಾಟ, ವಿರೋಧಗಳ ನಡುವೆಯೂ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ಹೆಸರಲ್ಲಿ ಜಾತಿ ಜನ ಗಣತಿ ಆರಂಭವಾಗ್ತಿದೆ. ತೀವ್ರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರ ಜಾತಿಗಣತಿ ನಮೂನೆಯಿಂದ ಕ್ರೈಸ್ತ ಧರ್ಮದ ಜೊತೆಗೆ ನಾನಾ ಹಿಂದೂ ಉಪ ಜಾತಿಗಳನ್ನು ತಳುಕು ಹಾಕಿದ್ದ ಪಟ್ಟಿಯನ್ನು ವಾಪಸ್ ಪಡೆದಿದೆ. ಒಕ್ಕಲಿಗ ಕ್ರೈಸ್ತ, ಲಿಂಗಾಯತ ಕ್ರೈಸ್ತ, ಬ್ರಾಹ್ಮಿಣ್ ಕ್ರೈಸ್ತ ಹೀಗೆ ಒಟ್ಟು 33 ಜಾತಿಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯ ಹಿಂದುಳಿದ ಆಯೋಗ ಜಾತಿ ಗಣತಿಯಿಂದ 33 ಜಾತಿಗಳನ್ನು ಪಟ್ಟಿಯಿಂದ ಕೈ ಬಿಟ್ಟಿದೆ. ಒಕ್ಕಲಿಗ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್, ತುಳು ಕ್ರಿಶ್ಚಿಯನ್, ರೆಡ್ಡಿ ಕ್ರಿಶ್ಚಿಯನ್ ಸೇರಿದಂತೆ ಸಾಕಷ್ಟು ಜಾತಿಗಳನ್ನ ನಮೂನೆಯಿಂದ ಹೊರಗಿಡಲಾಗಿದೆ. ಕಾಂತರಾಜ ಸಮೀಕ್ಷೆಯಲ್ಲಿದ್ದ ಜಾತಿಗಳ ಪಟ್ಟಿಯನ್ನ ಸದ್ಯ ಉಳಿಸಿಕೊಳ್ಳಲಾಗಿದೆ. 1,413 ಜಾತಿಗಳ ಪಟ್ಟಿಗೆ 148 ಜಾತಿಗಳನ್ನು ಸೇರ್ಪಡೆ ಮಾಡಲಾಗಿದ್ದು, ಅಂತಿಮವಾಗಿ 1,561 ಜಾತಿಗಳನ್ನ ಪಟ್ಟಿ ಮಾಡಲಾಗಿದೆ.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧು ಸೂದನ್ ನಾಯ್ಕ್ ನೇತೃತ್ವದಲ್ಲಿ ಜಾತಿ ಜನಗಣತಿ ಕಾರ್ಯ ನಡೆಯಲಿದೆ. ಇಂದಿನಿಂದ ಸಮೀಕ್ಷಾ ಸಿಬ್ಬಂದಿ ನಿಮ್ಮ ಮನೆ ಮನೆ ಬಾಗಿಲಿಗೆ ಬರಲಿದ್ದಾರೆ. 60 ಪ್ರಶ್ನೆಗಳ ಮೂಲಕ ಮಾಹಿತಿ ಸಂಗ್ರಹ ಮಾಡಲಾಗುತ್ತದೆ. ಎಲ್ಲದಕ್ಕೂ ಉತ್ತರಿಸೋದು ಕಡ್ಡಾಯ. ಮೊದಲು ಧರ್ಮದ ಬಗ್ಗೆ ಕೇಳಲಾಗುವುದು, ನಂತರ ಜಾತಿ, ಉಪಜಾತಿ ಬಗ್ಗೆ ಪ್ರಶ್ನೆ ಕೇಳಲಿದ್ದಾರೆ. ಕುಟುಂಬದ ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ, ಎಲೆಕ್ಷನ್ ಐಡಿ ಅಥವಾ ರೇಷನ್ ಕಾರ್ಡ್ಗೆ ಅವಕಾಶ ಕೊಡಲಾಗಿದೆ. 2 ಕೋಟಿಗಿಂತ ಹೆಚ್ಚು ಮನೆಗಳು ದಾಖಲಾಗಲಿದ್ದು, ಜಿಯೋ ಟ್ಯಾಗ್ ಮೂಲಕ ಸರ್ವೇ ಕಾರ್ಯ ನಡೆಯಲಿದೆ. ಆದರೆ ಜಾತಿ ಜನಗಣತಿ ವಿಚಾರದಲ್ಲಿ ಸರ್ಕಾರದ ವಿರುದ್ಧ ಆಕ್ರೋಶ ಮುಂದುವರಿದಿದ್ದು, ಸಿದ್ದರಾಮಯ್ಯ ಧರ್ಮ ಒಡೆಯುವ ಪ್ರಯೋಗ ಶಾಲೆಯ ಹೆಡ್ ಮಾಸ್ಟರ್, ಉಳಿದ ಮಂತ್ರಿಗಳು ಸಬ್ಜೆಕ್ಟ್ ಮಾಸ್ಟರ್ ಅಂತ ಆರ್.ಅಶೋಕ್ ಕಿಡಿಕಾರಿದ್ದಾರೆ.

ಜಾತಿ ಜನಗಣತಿ ವಿಚಾರವಾಗಿ ಬಿಜೆಪಿ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ನಾಯಕರು ರಾಜಕಾರಣ ಮಾಡ್ತಿದ್ದಾರೆ. ನಮಗೆ ಜನರು ಮುಖ್ಯ, ಅವರು ಈಗ ಸಮಾಜ ಸೇರಿಸಿ ಜಾಗೃತಿ ಮಾಡುವ ಕೆಲಸ ಮಾಡಲಿ. ಟೀಚರ್ಸ್ ಹೋದಾಗ ಸರಿಯಾಗಿ ಜಾತಿ, ಧರ್ಮ ಬರೆಸಲಿ ಎಂದಿದ್ದಾರೆ. ಗೊಂದಲ, ಗದ್ದಲ ವಿರೋಧಗಳ ನಡುವೆಯೂ ಇಂದಿನಿಂದ ಕರ್ನಾಟಕದಲ್ಲಿ ಜಾತಿ ಜನಗಣತಿ ಶುರುವಾಗಲಿದೆ. ಆದರೆ ಇಂದಿನಿಂದ ಶಿಕ್ಷಕರು ಗಣತಿ ಕಾರ್ಯಕ್ಕೆ ನಿಮ್ಮ ಮನೆಗೆ ಬರಬೇಕಿದ್ದರೆ ಭಾನುವಾರದ ನಿನ್ನೆಯೇ ಸಾಕಷ್ಟು ತಯಾರಿ ಹಾಗು ಮೂಲಭೂತ ಸಲಕರಣೆಗಳು, ಸೇರಿದಂತೆ ಅಗತ್ಯತೆಗೆ ತಕ್ಕಂತೆ ಅರ್ಜಿ ನಮೂನೆ, ಪೆನ್ನು ಪೆನ್ಸಿಲ್ ಸೇರಿದಂತೆ ಐಡಿ ಕಾರ್ಡ್ ವಿತರಣೆ ನಡೆಯಬೇಕಿತ್ತು. ಆದರೆ ನಿನ್ನೆ ಭಾನುವಾರ ಆಗಿದ್ರಿಂದ ಇಂದು ಬೆಳಗ್ಗೆ ಕಲೆಕ್ಟ್ ಮಾಡ್ಕೊಂಡು ಆ ನಂತರ ನಿಮ್ಮ ಮನೆ ಬಾಗಿಲು ಬಡಿಯುವ ಸಾಧ್ಯತೆಯಿದೆ.


