ಮಕ್ಕಳ ಪಾಲಿನ ಜೀವ ಉಳಿಸೋ ಔಷಧವೇ ಮಕ್ಕಳ ಜೀವ ತೆಗೆದಿದೆ ಅನ್ನೋ ಶಂಕೆ ಇಡೀ ದೇಶವನ್ನೆ ಆತಂಕಕ್ಕೆ ಕಾರಣವಾಗಿದೆ. ದೇಶದ ಹಲವು ರಾಜ್ಯಗಳಲ್ಲಿ ಮಕ್ಕಳಿಗೆ ಕೆಮ್ಮು, ಶೀತ, ಕೆಮ್ಮು ಬಂದಾಗ ಬಳಸುವ ಸೀರಪ್ನಿಂದ ಹಲವು ರಾಜ್ಯಗಳಲ್ಲಿ 12 ಮಕ್ಕಳನ್ನ ಬಲಿಪಡೆದಿದೆ. ಮಕ್ಕಳಿಗೆ ನೀಡಿದ ಕೆಮ್ಮಿನ ಔಷಧಿಯ ಅಡ್ಡ ಪರಿಣಾಮದಿಂದಲೇ ಮಕ್ಕಳು ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿದೆ. 9 ಮಕ್ಕಳು ಕಿಡ್ನಿ ವೈಫಲ್ಯವಾಗಿ ಸಾವನ್ನಪ್ಪಿದ್ದಾರೆ. ಕೆಲವರು ಉಸಿರಾಟದ ಸಮಸ್ಯೆಯಿಂದ ಜೀವ ಬಿಟ್ಟಿದ್ದಾರೆ. ಮಧ್ಯಪ್ರದೇಶದ ಛಿಂದ್ವಾರದಲ್ಲಿ 10 ಮಕ್ಕಳು ಮೃತಪಟ್ಟಿದ್ದರೆ, ರಾಜಸ್ಥಾನದಲ್ಲಿ ಎರಡು ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಸಾಂದರ್ಭಿಕ ದೃಶ್ಯ

ಕೆಮ್ಮಿನ ಔಷಧಿಗೆ ಜೀವ ಬಿಟ್ಟಿದ್ದು 5 ವರ್ಷದೊಳಗಿನ ಮಕ್ಕಳು ಮೃತಪಟ್ಟಿದ್ದಾರೆ. ಸಾವನ್ನಪ್ಪಿರುವ ಮಕ್ಕಳಿಗೆ ಮೊದ್ಲು ಸಾಮಾನ್ಯ ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡಿತ್ತು. ಅವರೆಲ್ಲ ಸ್ಥಳೀಯ ಕ್ಲಿನಿಕ್ನಲ್ಲಿ ಚಿಕಿತ್ಸೆ ಪಡೆದಿದ್ದರು. ಸ್ಥಳೀಯ ವೈದ್ಯರು ಕೂಡಾ ಸಾಮಾನ್ಯವಾಗಿ ಎಲ್ಲರಿಗೂ ನೀಡುವಂತೆ ಕೆಮ್ಮಿನ ಸಿರಪ್ಗಳನ್ನು ನೀಡಿದ್ದರು. ಸಿರಪ್ ಸೇವಿಸಿದ ನಂತರ ಮಕ್ಕಳು ಚೇತರಿಸಿಕೊಳ್ತಿದ್ರು. ಆ ಬಳಿಕ ಇದ್ದಕ್ಕಿದ್ದಂತೆ ಮಕ್ಕಳಲ್ಲಿ ಹೊಸ ಹೊಸ ರೋಗ ಲಕ್ಷಣಗಳು ಉಲ್ಬಣಿಸಲು ಶುರುವಾಗಿತ್ತು. ಮೂಗು ಕಟ್ಟುವುದು, ಕೆಮ್ಮಿದ್ರೆ ರಕ್ತ ಬರಲು ಶುರುವಾಯ್ತು. ಮಕ್ಕಳು ಮೂತ್ರ ವಿಸರ್ಜನೆಯಲ್ಲಿ ಹಠಾತ್ ಇಳಿಕೆ ಅಗಿದೆ. ಊಟ ಸೇವಿಸದೇ ಪದೇ ಪದೇ ಮಕ್ಕಳು ಒದ್ದಾಡುವುದು. ಹೊಟ್ಟೆನೋವು, ಕೆಲವು ಮಕ್ಕಳಿಗೆ ವಾಂತಿ, ಲ್ಯಾಬ್ ಟೆಸ್ಟ್ನಲ್ಲಿ ಕರುಳು, ಮೂತ್ರಪಿಂಡ ಸಮಸ್ಯೆ ಪತ್ತೆಯಾಗಿದೆ. ಆದರೆ ಚಿಕಿತ್ಸೆ ಫಲಿಸದೇ 12 ಮಕ್ಕಳು ಇಲ್ಲಿವರೆಗೂ ಸಾವನ್ನಪ್ಪಿದ್ದಾರೆ. 18ಕ್ಕೂ ಹೆಚ್ಚು ಮಕ್ಕಳಲ್ಲಿ ಕಿಡ್ನಿ ಸಮಸ್ಯೆ ಪತ್ತೆಯಾಗಿದ್ದು ಚಿಕಿತ್ಸೆ ಕೊಡಿಸಲಾಗ್ತಿದೆ.
12 ಮಕ್ಕಳ ಸಾವಿಗೆ ಕೆಮ್ಮಿನ ಸಿರಪ್ ಕಾರಣ ಎಂದು ಶಂಕಿಸಲಾಗ್ತಿದೆ. ವಿಷಕಾರಿ ಡೈಥಿಲೀನ್ ಗ್ಲೈಕೋಲ್ ಬೆರೆಸಿದ ಕಲುಷಿತ ಕೆಮ್ಮಿನ ಸಿರಪ್ನಿಂದಲೆ ಸಾವು ಸಂಭವಿಸಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಮಕ್ಕಳ ಮೂತ್ರಪಿಂಡದ ಬಯಾಪ್ಸಿ ಪರೀಕ್ಷೆಯಲ್ಲಿ ಔಷಧೀಯ ವಿಷಕ್ಕೆ ಸಂಬಂಧಿಸಿದ ವಿಷಕಾರಿ ರಾಸಾಯನಿಕ ಡೈಥಿಲೀನ್ ಗ್ಲೈಕಾಲ್ ಮಾಲಿನ್ಯ ಇರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ಮಕ್ಕಳಿಗೆ ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಸಿರಪ್ಗಳನ್ನು ನೀಡಲಾಗಿತ್ತು. ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಕುಡಿದು ಮಕ್ಕಳು ಸಾವನ್ನಪ್ಪಿದ ಬೆನ್ನಲ್ಲೇ ಅಲರ್ಟ್ ಆಗಿರುವ ಕೇಂದ್ರ ಆರೋಗ್ಯ ಇಲಾಖೆ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಮಕ್ಕಳಿಗೆ ಕೆಮ್ಮು ಔಷಧಿಯನ್ನು ಬಹಳ ಎಚ್ಚರಿಕೆಯಿಂದ ಮತ್ತು ಸೀಮಿತ ಪ್ರಮಾಣದಲ್ಲಿ ನೀಡಬೇಕು ಎಂದಿದೆ. ಕೋಲ್ಡ್ರಿಫ್ ಸೇರಿದಂತೆ ಹಲವು ಕೆಮ್ಮಿನ ಔಷಧಿಗಳನ್ನು ನಿಷಿದ್ಧ ಮಾಡಲಾಗಿದೆ. 2 ರಿಂದ 5 ವರ್ಷದ ಮಕ್ಕಳಿಗೆ ಕೆಮ್ಮಿನ ಔಷಧಿ ಕೊಡಬೇಡಿ, ಕ್ಲೋರ್ಫೈನಿರಮೈನ್ ಮಲೇಟ್ ಔಷಧಿ ನೀಡಬೇಡಿ, ಡೆಕ್ಸ್ಟ್ರೋ ಮೆಥೋರ್ಫಾನ್ ಕೆಮಿಕಲ್ ಶಿಫಾರಸ್ಸು ಬೇಡ. ಮಾಮೂಲಿ ಶೀತ, ಜ್ವರಗಳಿಗೆ ಹೈಡೋಸೆಜ್ ಸಿರಪ್ ಬೇಡ. ಶೀತ, ಕೆಮ್ಮಿದ್ದಾಗ ಮಕ್ಕಳು ಡಿಹೈಡ್ರೇಟ್ ಆಗದಂತೆ ನೋಡಿಕೊಳ್ಳಿ ಎಂದು ತಿಳಿಸಿದ್ದಾರೆ.
ಸಾಂದರ್ಭಿಕ ದೃಶ್ಯ

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 12 ಮಕ್ಕಳ ಸಾವಿಗೆ ಚೆನ್ನೈ ಮೂಲದ ಕಂಪನಿ ತಯಾರಿಸ್ತಿದ್ದ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಕಾರಣ ಎಂಬ ಅನುಮಾನವಿದೆ. ಹೀಗಾಗಿ ತಮಿಳುನಾಡು ಸರ್ಕಾರ ಕೋಲ್ಡ್ರಿಫ್ ಸಿರಫ್ ಮಾರಾಟವನ್ನ ತಕ್ಷಣದಿಂದಲೇ ನಿಷೇಧಿಸಿದೆ. ಕೇರಳದಲ್ಲೂ ಕೋಲ್ಟ್ರಿಫ್ ಔಷಧಿಗೆ ನಿಷೇಧ ಹೇರಲಾಗಿದೆ. ಇನ್ನು ಸಾವಿನ ಸಿರಪ್ನ ಬ್ಯಾಚ್ ನಮ್ಮ ಕರ್ನಾಟಕದಲ್ಲಿ ಲಭ್ಯವಿಲ್ಲ ಅಂತ ಕರ್ನಾಟಕ ರಾಜ್ಯ ಔಷಧ ನಿಯಂತ್ರಣ ಇಲಾಖೆ ಮಾಹಿತಿ ನೀಡಿದ್ದು ಕರ್ನಾಟಕದಲ್ಲಿ ಆತಂಕ ಇಲ್ಲ ಎನ್ನಲಾಗಿದೆ. 12 ಮಕ್ಕಳ ಸಾವಿಗೆ ಕೋಲ್ಡ್ರಿಫ್ ಔಷಧಿನೇ ಕಾರಣ ಅನ್ನೋದು ಸಾಬೀತಾಗಿಲ್ಲ.. ಪ್ರಯೋಗಾಲಯದ ವರದಿ ಬರುವವರೆಗೆ ಸಿರಪ್ ಉತ್ಪಾದನೆಯನ್ನು ಸ್ಥಗಿತಗೊಳಿಸಲು ಕಂಪನಿಗೂ ಆದೇಶಿಸಲಾಗಿದೆ. 5 ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಕಾಣಿಸಿಕೊಂಡ್ರೆ ಹೈಡೋಸೇಜ್ ಔಷಧಿ ಬದಲು ಬೇರೆ ಮಾರ್ಗ ಹುಡುಕುವುದು ಅನಿವಾರ್ಯ ಹಾಗೂ ಅವಶ್ಯಕ ಅನ್ನೋದನ್ನು ಪೋಷಕರು ಅರ್ಥ ಮಾಡಿಕೊಳ್ಳಬೇಕಿದೆ.


