ರಾಜ್ಯ ಬಜೆಟ್ ಅಧಿವೇಶನಕ್ಕೆ ಎರಡು ದಿನ ಬಾಕಿ ಇದೆ. ದಾಖಲೆಯ ಬಜೆಟ್ ಮಂಡನೆಗೆ ಸಿಎಂ ಸಿದ್ದರಾಮಯ್ಯ ತಯಾರಿ ನಡೆಸಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಕುರ್ಚಿ ವಿಚಾರವಾಗಿ ಮಹತ್ವದ ಬೆಳವಣಿಗೆ ನಡೆದಿದೆ. ಕೆಲವು ಸಿಎಂ ಆಪ್ತ ಶಾಸಕರು ವಿದೇಶ ಪ್ರವಾಸದಲ್ಲಿರುವಾಗ ಡಿಸಿಎಂ ಡಿ.ಕೆ ಶಿವಕುಮಾರ್ ಆಪ್ತರು ಡಿನ್ನರ್ ಮೀಟಿಂಗ್ ಮಾಡಿದ್ದರು. ಡಿಕೆ ಶಿವಕುಮಾರ್ ಸಿಎಂ ಆಗಬೇಕು, ಅದಕ್ಕಾಗಿ ಹೈಕಮಾಂಡ್ ನಾಯಕರ ಭೇಟಿಗೂ ಸಿದ್ಧ ಎಂದಿದ್ದರು. ಕುರ್ಚಿ ಕಸರತ್ತು ಜೋರಾಗಿರುವ ಹೊತ್ತಲ್ಲೇ ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಶಾಸಕರು ಮತ್ತು ಪರಿಷತ್ ಸದಸ್ಯರನ್ನು ಡಿನ್ನರ್ಗೆ ಆಹ್ವಾನಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಆಪ್ತರು ವಿದೇಶ ಪ್ರವಾಸ, ಡಿ.ಕೆ ಶಿವಕುಮಾರ್ ಬಣದಿಂದ ಡಿನ್ನರ್ ಮೀಟಿಂಗ್ ಮಾಡಿದಾಗಲೂ ಎಲ್ಲಾ ವಿಚಾರಗಳಿಂದ ಅಂತರ ಕಾಯ್ದುಕೊಂಡಿದ್ದ ಡಿಸಿಎಂ ಡಿ.ಕೆ ಶಿವಕುಮಾರ್, ಶಾಂತ ಚಿತ್ತವಾಗಿ ಮುಖ್ಯಮಂತ್ರಿ ಆಗುವ ಕಸರತ್ತು ನಡೆಸಿದ್ದಾರೆ. ತನ್ನ ಆಪ್ತರಿಗೆ ಸಲಹೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನನಗೆ ಒಳ್ಳೆಯದಾಗಬೇಕಿದ್ರೆ ಶಾಸಕರು ಎಲ್ಲರು ಸುಮ್ಮನಿರಿ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಕೆಪಿಸಿಸಿ ಅಧ್ಯಕ್ಷರಾಗಿ 6 ವರ್ಷ ಪೂರ್ಣ ಆಗಿದ್ದಕ್ಕೆ ಮಾರ್ಚ್ 10ಕ್ಕೆ ನಾನು ಡಿನ್ನರ್ ಏರ್ಪಡಿಸಿದ್ದೇನೆ. ನಮ್ಮ ಶಾಸಕರು, MLC ಗಳನ್ನ ಕರೆಯುತ್ತೇನೆ ಎಂದಿದ್ದಾರೆ.

KPCC ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ 6 ವರ್ಷ ಭರ್ತಿ ಆಗ್ತಿರೋ ಸಂಭ್ರಮಕ್ಕೆ ಔತಣಕೂಟ ಏರ್ಪಡಿಸಿರುವ ಬಗ್ಗೆ ಸಿಎಂ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಮಾತನಾಡಿ, ನನಗಿನ್ನೂ ಆಹ್ವಾನ ಬಂದಿಲ್ಲ. ಬಹುಶಃ ಇನ್ನೂ 10ನೇ ತಾರೀಕು ಅಲ್ವಾ..? ಆಹ್ವಾನ ಬರಬಹುದು ಎಂದಿದ್ದಾರೆ. ಸಿಎಂ ಸ್ಥಾನಕ್ಕೇರಲು ಅಣಿಯಾಗಿರುವ ಡಿ.ಕೆ. ಶಿವಕುಮಾರ್ ತಾಳ್ಮೆಯ ಮಂತ್ರ ಜಪಿಸಿದ್ದಾರೆ. ಶಾಸಕರ ಪರ-ವಿರೋಧ ಮಾತುಗಳ ನಡುವೆ ಕಾಲ ಕೂಡಿ ಬರುತ್ತದೆ ಎನ್ನುವ ಮೂಲಕ ನಾನು ಸಿಎಂ ಸ್ಥಾನದ ಆಕಾಂಕ್ಷಿ ಎನ್ನುವುದನ್ನು ಮತ್ತೊಮ್ಮೆ ಬಹಿರಂಗಪಡಿಸಿದ್ದಾರೆ. ಜೊತೆಗೆ ಬಜೆಟ್ ಅಧಿವೇಶನದ ನಡುವೆ ಡಿನ್ನರ್ ಪಾರ್ಟಿ ಕೊಡುವ ಮೂಲಕ ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುವ ಮೂಲಕ ಗುಂಪುಗಾರಿಕೆಗೆ ಅವಕಾಶ ಇಲ್ಲ ಅನ್ನೋ ಸಂದೇಶ ರವಾನೆ ಮಾಡುವ ಮೂಲಕ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವದ ಸಾಬೀತಿಗೆ ಯತ್ನಿಸಿದ್ದಾರೆ.

ಡಿನ್ನರ್ ಮೀಟ್ನಿಂದ ಯಾವುದೇ ಬದಲಾವಣೆ ಆಗುತ್ತದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ ಈಗಾಗಲೇ ಅಲ್ಲೊಂದಿಷ್ಟು ಮಂದಿ, ಇಲ್ಲೊಂದಿಷ್ಟು ಮಂದಿ ಊಟಕ್ಕೆ ಪ್ರವಾಸಕ್ಕೆ ಅಂತಾ ಹೋಗಿರುವಾಗ ಕಾಂಗ್ರೆಸ್ನಲ್ಲಿ ಬಣ ರಾಜಕೀಯ ಜೋರಾಗಿದೆ ಎನ್ನುವುದು ವಿರೋಧ ಪಕ್ಷಗಳ ಟೀಕೆಗೆ ಅಸ್ತ್ರವಾಗಿದೆ. ಹೀಗಾಗಿ ಬಜೆಟ್ ಅಧಿವೇಶನದ ನಡುವೆ ಡಿನ್ನರ್ ಪಾರ್ಟಿ ಆಯೋಜನೆ ಮಾಡಿ, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಹೈಕಮಾಂಡ್ ಒಲವು ಗಳಿಸುವ ಪ್ರಯತ್ನ ಎನ್ನುವ ಮಾತುಗಳು ಹರಿದಾಡುತ್ತಿವೆ. ಇನ್ನು ಈ ಬಾರಿ ಅಧಿಕಾರ ಸಿಗದಿದ್ರೆ ಮುಖ್ಯಮಂತ್ರಿ ಹುದ್ದೆ ಕನಸು ನನಸಾಗುವುದಿಲ್ಲ. ಏನೇ ಮಾಡಿದರೂ ಈ ಅವಧಿಯಲ್ಲೇ ಸಿಎಂ ಆಗಬೇಕು ಎನ್ನುವುದು ಡಿ.ಕೆ ಶಿವಕುಮಾರ್ ಬೆಂಬಲಿಗರ ಮಾತಾಗಿದೆ. ಅದಕ್ಕಾಗಿ ಒಂದೊಂದೇ ಮೆಟ್ಟಿಲು ಏರುತ್ತಿರುವ ಡಿಸಿಎಂ ಮುಖ್ಯಮಂತ್ರಿ ಕುರ್ಚಿ ಏರ್ತಾರಾ ಅನ್ನೋದೇ ಯಕ್ಷ ಪ್ರಶ್ನೆ ಆಗಿದೆ.


