ಹಾಸನದ ಮೊಸಳೆ ಹೊಸಹಳ್ಳಿ ಗಣಪತಿ ವಿಸರ್ಜನೆ ವೇಳೆ ಘೋರ ಅಪಘಾತದಲ್ಲಿ ಇಲ್ಲೀವರೆಗೂ 9 ಜನರು ಸಾವನ್ನಪ್ಪಿದ್ದು, ಬಹುತೇಕರು ವಿದ್ಯಾರ್ಥಿಗಳು, ಚಿಕ್ಕ ಚಿಕ್ಕ ವಯಸ್ಸಿನ ಯುವಕರೇ ಸಾವನ್ನಪ್ಪಿರುವುದು ಕಂಡು ಬರುತ್ತಿದೆ. ಸತ್ತವರ ವಿವರವನ್ನು ನೋಡಿದ್ರೆ ಮನ ಕಲಕುವಂತಿದೆ. ಹೆಚ್ಚು ವಿದ್ಯಾರ್ಥಿಗಳೇ ಇದ್ದ ಮೆರವಣಿಗೆಯಲ್ಲಿ ಅವಘಡ ಸಂಭವಿಸಿದೆ. ಮೊಸಳೆ ಹೊಸಹಳ್ಳಿ ಗ್ರಾಮದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಇದ್ದು, ಈ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ರಾಜ್ಯದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬಂದಿದ್ದು, ಗಣೇಶನ ವಿಸರ್ಜನೆ ವೇಳೆ ವಿದ್ಯಾರ್ಥಿಗಳು ಡಿಜೆ ಸೌಂಡ್ಗೆ ಹೆಜ್ಜೆ ಹಾಕುತ್ತಿದ್ದರು ಎನ್ನಲಾಗಿದೆ.


ಹಾಸನದ ಗಣೇಶ ದುರಂತ ಆರ್ಸಿಬಿ ಸಂಭ್ರಮಾಚರಣೆ ಕಾಲ್ತುಳಿತ ಪ್ರಕರಣ ನೆನಪಿಸುವಂತಿದ್ದು, ಗಣೇಶನ ವಿಸರ್ಜನಾ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಭಾಗಿಯಾಗಿದ್ದರು ಎನ್ನಲಾಗಿದೆ. ಇನ್ನೇನು ಡಿಜೆ ಡ್ಯಾನ್ಸ್ ಮುಗಿಯುವ ಹಂತದಲ್ಲಿ ಇದ್ದಾಗ ಈ ಘೋರ ಘಟನೆ ನಡೆದಿದೆ. ಘಟನೆಯಲ್ಲಿ ಈಗಾಗಲೇ ನಾಲ್ವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 29 ಮಂದಿ ಗಾಯಾಳುಗಳಿಗೆ ಚಿಕಿತ್ಸೆ ನಡೆಯುತ್ತಿದ್ದು, ಅದರಲ್ಲೂ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರ ಮೂಲಗಳು ಮಾಹಿತಿ ನೀಡಿವೆ.


ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕಾಗಿ ದೂರದ ಜಿಲ್ಲೆಗಳು, ಊರುಗಳಿಂದ ಬಂದು ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಬಂದು ಗಣೇಶನ ವಿಸರ್ಜನೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದರು. ಇಂಜಿನಿಯರಿಂಗ್ ಹಾಸ್ಟೆಲ್ನಲ್ಲಿ ಇದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ ಯುವಕರು, ಡಿಜೆ ಡ್ಯಾನ್ಸ್ ನಂತರ ಆರ್ಕೆಸ್ಟ್ರಾ ಕಾರ್ಯಕ್ರಮವನ್ನೂ ಆಯೋಜನೆ ಮಾಡಲಾಗಿತ್ತು. ಹೀಗಾಗಿ ಆರ್ಕೇಸ್ಟ್ರಾದಲ್ಲೂ ಭಾಗಿಯಾಗಲು ಯುವಕರು ಸಜ್ಜಾಗಿದ್ದರು. ಅಷ್ಟರಲ್ಲಿ ನಡೆದುಹೋಗಿದೆ ಈ ಘನಘೋರ ಅವಘಡ. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಸ್ಥಳೀಯರು ಜನರನ್ನು ಆಸ್ಪತ್ರೆಗೆ ಶಿಫ್ಟ್ ಮಾಡುವ ಕೆಲಸ ಮಾಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.

ಓದುವ ಕನಸು ಕಟ್ಟಿಕೊಂಡು ದೂರದ ಊರುಗಳಿಂದ ಬಂದಿದ್ದ ಮಕ್ಕಳು ಸಾವನ್ನಪ್ಪಿರುವ ವಿಚಾರ ಅದೆಷ್ಟೋ ಪೋಷಕರಿಗೆ ಗೊತ್ತೇ ಆಗಿಲ್ಲ. ಪೊಲೀಸರು ಕರೆ ಮಾಡಿ ಮಾಹಿತಿ ನೀಡುವ ತನಕ ಯಾವುದೇ ವಿಚಾರವೂ ಗೊತ್ತಿಲ್ಲದೆ ಶಾಕ್ಗೆ ಒಳಗಾಗಿದ್ದಾರೆ. ಡಿಜೆ ಇಲ್ಲದಿದ್ದರೆ ಈ ರೀತಿಯ ಡ್ಯಾನ್ಸ್ ಮಾಡಲು ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಆದರೆ ಪೊಲೀಸರು ಡಿಜೆಗೆ ಅವಕಾಆಶ ಕೊಟ್ಟಿದ್ದರಿಂದ ಈ ಘಟನೆ ನಡೆಯುವುದಕ್ಕೆ ಒಂದು ಕಾರಣ. ಒಂದು ವೇಳೆ ಡಿಜೆ ನೃತ್ಯ ಇರದೆ ಇದ್ದರೆ ಆದಷ್ಟು ಬೇಗವೇ ಗಣೇಶ ವಿಸರ್ಜನೆ ಮಾಡಿ ವಾಪಸ್ ಆಗುತ್ತಿದ್ದರು. ಆದರೆ ರಾಜ್ಯಾದ್ಯಂತ ಬ್ಯಾನ್ ಮಾಡಿದ್ದ ಡಿಜೆಯನ್ನು ಹಾಸನದಲ್ಲಿ ಅನುಮತಿ ನೀಡಿದ್ದು ಅಚ್ಚರಿಗೂ ಕಾರಣವಾಗಿದೆ. ಒಂದು ವೇಳೆ ಡಿಜೆ ಇಲ್ಲದಿದ್ರೆ ಗಣೇಶ ವಿಸರ್ಜನೆ ಬೇಗ ಮುಗಿಯುತ್ತಿತ್ತು ಎಂದು ಸ್ಥಳದಲ್ಲಿದ್ದ ಜನರು ಮಾತನಾಡಿಕೊಳ್ತಿದ್ರು. ಆಸ್ಪತ್ರೆ ಬಳಿ ಗಾಯಾಳುಗಳು ಹಾಗೂ ಮೃತರ ಕುಟುಂಬಸ್ಥರು ಜಮಾಯಿಸಿ ಆಕ್ರಂದನ ಮುಗಿಲು ಮುಟ್ಟಿತ್ತು.


