ಕೇಂದ್ರ ಸಚಿವ ಕುಮಾರಸ್ವಾಮಿ ಕಳೆದ ನಾಲ್ಕೈದು ತಿಂಗಳಿಂದ ರಾಜ್ಯ ಪ್ರವಾಸ ಮಾಡಿಲ್ಲ. ಅದಕ್ಕೆ ಕಾರಣ ಅವರ ಆರೋಗ್ಯ ಸುಧಾರಣೆ ಆಗಬೇಕಿತ್ತು ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮಾಹಿತಿ ನೀಡಿದ್ದಾರೆ. ಈಗ ವೈದ್ಯರು ತಮ್ಮ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು ಎಂದು ಹೇಳಿದ್ದಾರೆ. ನಿಖಿಲ್ ಮೂರು ಬಾರಿ ಚುನಾವಣೆಯಲ್ಲಿ ಸೋತರೂ ಮನೆಯಲ್ಲಿ ಕೂರದೆ ಪಕ್ಷ ಸಂಘಟನೆ ಮಾಡ್ತಿದ್ದಾರೆ. ಸೋಲಿನ ಅನುಭವದ ಮೇಲೆ ರಾಜ್ಯ ಪ್ರವಾಸ ಮಾಡ್ತಿದ್ದಾರೆ. ನಿಖಿಲ್ ಅನುಭವಿ ರಾಜಕಾರಣಿ ರೀತಿ ಕೆಲಸ ಮಾಡ್ತಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಮುಂಬರುವ GBA ಚುನಾವಣೆಯಲ್ಲಿ ಕನಿಷ್ಠ 50-60 ಸ್ಥಾನ ಗೆಲ್ಲಬೇಕು. ಇದಕ್ಕಾಗಿ ಬೆಂಗಳೂರು ಮಟ್ಟದ ಸಭೆ ನಡೆಸಲು ತೀರ್ಮಾನಿಸಿದ್ದೇನೆ. ಚುನಾವಣೆ ಬಂದಾಗ ತಮ್ಮ ಶಕ್ತಿ ಪ್ರದರ್ಶನ ಆಗುತ್ತದೆ. ಬೆಂಗಳೂರು ಸಿಟಿಯಲ್ಲಿ ರಮೇಶ್ಗೌಡ 50 ಸ್ಥಾನ ಗೆಲ್ಲುವ ದೃಢ ಸಂಕಲ್ಪ ಮಾಡಿದ್ದಾರೆ. ಅಕ್ಟೋಬರ್ 12ರಂದು ಭಾನುವಾರ ಬೆಂಗಳೂರು ನಗರದ ಜೆಡಿಎಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ ಹೆಚ್.ಡಿ ದೇವೇಗೌಡರು.
ಇನ್ನು ಸಿಎಂ ಸಿದ್ದರಾಮಯ್ಯ ನೆರೆ ಹಾವಳಿ ಪರಿಶೀಲನೆಗೆ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಐವತ್ತು ಮಂದಿಗೆ ಪ್ರಾಣ ಹಾನಿಯಾಗಿದೆ. ಜಿಲ್ಲಾ ಮಂತ್ರಿಗಳು ಸ್ಥಳಕ್ಕೆ ಭೇಟಿ ನೀಡಿ ಎಷ್ಟೆಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ ಅಂತ ಸಮೀಕ್ಷೆ ಮಾಡಿಸಬೇಕು. ಜಿಲ್ಲಾ ಮಂತ್ರಿಗಳು ನೆರೆ ಹಾವಳಿ ಸ್ಥಳಗಳಿಗೆ ಭೇಟಿ ಕೊಡಬೇಕು. ನೋವಿಗೆ ತುತ್ತಾದ ರೈತರಿಗೆ ಪರಿಹಾರ ಸಿಕ್ಕಿದ್ಯ ಇಲ್ವ ಅಂತ ನೋಡ್ತೀನಿ. ನಾಲ್ಕು ದಿನಗಳ ಬಳಿಕ ಕಲಬುರ್ಗಿಗೆ ನಾನೇ ಹೋಗ್ತೇನೆ. ರಸ್ತೆ ಮೂಲಕ ತೆರಳಿ ಮಳೆಹಾನಿ ಪ್ರದೇಶಗಳ ವೀಕ್ಷಣೆ ಮಾಡ್ತೇನೆ. ಏನು ಪರಿಹಾರ ಕೊಟ್ಟಿದ್ದಾರೆ, ರೈತರಿಗೆ ಸ್ಪಂದಿಸಿದ್ದಾರ ಇಲ್ವ ಅಂತ ಸ್ಥಳಕ್ಕೆ ಭೇಟಿ ಕೊಡ್ತೇನೆ. ಕುಮಾರಸ್ವಾಮಿಯೂ ಪ್ರಧಾನಿಗೆ ಪತ್ರ ಬರೆದಿದ್ದಾರೆ. ನಾನು ಕೂಡ ಪ್ರಧಾನಿ ಮೋದಿಗೆ ಪತ್ರ ಬರೆಯುತ್ತೇನೆ. ಅಗತ್ಯಬಿದ್ರೆ ದೆಹಲಿಗೆ ತೆರಳಿ ಪ್ರಧಾನಿ ಭೇಟಿಯಾಗ್ತೇನೆ ಅಂತಾನೂ ತಿಳಿಸಿದ್ದಾರೆ.

ಕಾಂಗ್ರೆಸ್ನ ಶಾಸಕರೇ ಗ್ಯಾರೆಂಟಿಗಳಿಂದ ರಾಜ್ಯ ಬರಡಾಗಿದೆ ಅಂತ ಹೇಳಿದ್ದಾರೆ. ಅವರಲ್ಲೇ ಗೊಂದಲ ಇದೆ, ದುಡ್ಡಿಲ್ಲ, ದುಡ್ಡು ಇದೆ ಅಂತ. ರಾಜ್ಯ ಸರ್ಕಾರ ಇಂತಹ ಅತೀವೃಷ್ಟಿ ಬಂದಾಗ ಶಕ್ತಿ ಮೀರಿ ಸಹಾಯ ಮಾಡುವ ಜವಾಬ್ದಾರಿ ಇದೆ. ಇನ್ನೂ ಮೂರ್ನಾಲ್ಕು ದಿನ ಬಿಟ್ಟು ಸ್ಥಳಕ್ಕೆ ಭೇಟಿ ನೀಡಿ ಕಣ್ಣಿಂದ ನೋಡಿ ಬಂದು ಮಾತನಾಡ್ತೇನೆ ಎಂದಿರುವ ಹೆಚ್.ಡಿ.ದೇವೆಗೌಡರು, GBA ಚುನಾವಣೆಯಲ್ಲಿ ಜೆಡಿಎಸ್ – ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, BJP – JDS ಮೈತ್ರಿಗೆ ಯಾವುದೇ ಆತಂಕವಿಲ್ಲ. ಜಿ.ಪಂ, ತಾ.ಪಂ, ಅಸೆಂಬ್ಲಿ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯಲಿದೆ. ಜೆಡಿಎಸ್ – ಬಿಜೆಪಿ ಮೈತ್ರಿಯಲ್ಲಿ ಯಾರೂ ಬದಲಾವಣೆ ಮಾಡಲು ಆಗಲ್ಲ. ನಾನೂ ಪ್ರಧಾನಿ ಮೋದಿ ಚೆನ್ನಾಗಿದ್ದೇವೆ, ಮೈತ್ರಿ ಮುಂದುವರಿಯುತ್ತದೆ ಎಂದಿದ್ದಾರೆ.

ಬಿಡದಿ ಟೌನ್ ಶಿಪ್ ವಿಚಾರದಲ್ಲಿ ಡಿ.ಕೆ ಶಿವಕುಮಾರ್ ಹೇಳಿಕೆಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿರುವ ಗೌಡರು, ಬೇರೆಯವ ಹೆಸರು ತೆಗೆದು ಚರ್ಚೆ ಮಾಡೋದು ಬೇಡ. ಆ ವಿಚಾರ ಮಾತಾಡಲು ಹೋಗಲ್ಲ. ಮೂರು ತಿಂಗಳ ಹಿಂದೆ ಮಾಧ್ಯಮ ನಮ್ಮ ಮನೆಯಲ್ಲೇ ಇತ್ತು. ಇದು ಯಾರ ಪ್ರೇರಣೆಯಿಂದ..? ಎಂದು ಪ್ರಶ್ನಿಸಿರುವ ಗೌಡರು, ಅದರ ಹಿಂದೆ ಯಾರ ಶಕ್ತಿ ಇತ್ತು..? ಅದರ ಬಗ್ಗೆ ಚರ್ಚೆ ಬೇಡ. ನಮ್ದು ಸಣ್ಣ ರಾಜಕೀಯ ಪಕ್ಷ. ಹೆಸರು ಹೇಳದೇ ಡಿ.ಕೆ ಶಿವಕುಮಾರ್ ಅವರನ್ನು ಕುಟುಕಿದ ದೇವೇಗೌಡರು, ಮೊನ್ನೆ ಜವರಾಯಿಗೌಡ ಹಾದಿಯಾಗಿ ಎಲ್ರು ಬಿಡಿದಿಗೆ ಹೋಗಿದ್ರು. ಸಭೆ ನಡೀತು, ಆದರೆ ಏನ್ ಮಾಡೋದು..? ಅವರ ಹತ್ತಿರ ಸರ್ಕಾರ ಇದೆ. ನಾವು ಏನೇ ಹೇಳಿದರು ತಿರಸ್ಕಾರ ಮನೋಭಾವದಿಂದ ನೋಡ್ತಾರೆ. ಚುನಾವಣೆ ಬಂದಾಗ ಜನ ತೀರ್ಪು ಕೊಡಬೇಕು ಎಂದಿದ್ದಾರೆ.


