ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ಅಕ್ಷರಶಃ ನರಕ ಸದೃಶ ಎನ್ನುವಂತಾಗಿದೆ. 19 ವರ್ಷದ ಮಗಳು ಮಾನ್ಯಳನ್ನು ಪೋಷಕರೇ ಕೊಂದು ಮುಗಿಸಿದ್ದಾರೆ. ಕಾರಣ ಪ್ರೀತಿಸಿದ ಹುಡುಗನ ಜೊತೆಗೆ ಮದುವೆ ಆದಳು ಅನ್ನೋ ಕಾರಣಕ್ಕೆ. ಒಂದೇ ಊರಿನವರಾದ ಮಾನ್ಯ ಹಾಗೂ ವಿವೇಕಾನಂದ ಪರಸ್ಪರ ಪ್ರೀತಿಯ ಸಂಕೋಲೆಗೆ ಸಿಲುಕಿದ್ದರು. ಕಾಲೇಜಿಗೆ ಹೋಗಿ ಬರುವಾಗ ಇಬ್ಬರ ನಡುವೆ ಪ್ರೀತಿ ಶುರುವಾಗಿತ್ತು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಯ ಸೆಳೆತಕ್ಕೆ ಸಿಲುಕಿದ್ದರು. ಆದರೆ ಯುವಕ ವಿವೇಕಾನಂದ ಕೆಳ ಜಾತಿಯ ಹುಡುಗ ಅನ್ನೋ ಕಾರಣಕ್ಕೆ ಮಾನ್ಯ ಹೆತ್ತವರು ಮದುವೆಗೆ ನಿರಾಕರಿಸಿದ್ದರು. ಆದರೆ ಯಾವುದೇ ಕಾರಣಕ್ಕೂ ಪ್ರೀತಿ ಒಬ್ಬನ ಜೊತೆಗೆ.. ಮದುವೆ ಇನ್ನೊಬ್ಬನನ ಜೊತೆಗೆ ಅನ್ನೋದನ್ನು ಊಹಿಸಿಕೊಳ್ಳಲಾರೆ ಎಂದಿದ್ದ ಮಾನ್ಯ ಹಠಕ್ಕೆ ಬಿದ್ದು 9 ತಿಂಗಳ ಹಿಂದೆ ರಿಜಿಸ್ಟರ್ ಮದುವೆ ಆಗಿದ್ದಳು.

ಹೆತ್ತವರ ವಿರೋಧದ ನಡುವೆ ಮದುವೆ ಆಗಿದ್ದ ಮಾನ್ಯಾ ಹಾಗೂ ವಿವೇಕಾನಂದರಿಗೆ ಪೋಷಕರಿಂದ ಜೀವ ಭಯ ಕಾಡುತ್ತಿತ್ತು. ಹೆತ್ತವರ ಕಣ್ಣೆದುರಲ್ಲೇ ಹುಟ್ಟೂರಲ್ಲೇ ಇದ್ದರೆ ಸಂಕಷ್ಟ ಅನ್ನೋದನ್ನು ಅರಿತಿದ್ದ ಜೋಡಿ, ಹಾವೇರಿಯಲ್ಲಿ ಬಂದು ಕಣ್ಣಿಗೆ ಕಾಣದಂತೆ ವಾಸವಾಗಿದ್ದರು. ಈ ನಡುವೆ ಮಾನ್ಯ 7 ತಿಂಗಳ ಗರ್ಭಿಣಿ ಕೂಡಾ ಆಗಿದ್ದಳು. ಹೆಣ್ಣು ಹೆತ್ತವರ ಕೋಪ ಕಡಿಮೆ ಆಗಿರುತ್ತದೆ ಎಂದು ಭಾವಿಸಿದ್ದ ಜೋಡಿ, ಡಿಸೆಂಬರ್ 8ರಂದು ಮಾನ್ಯ ಹಾಗೂ ವಿವೇಕಾನಂದ ಹುಟ್ಟೂರಿಗೆ ಬಂದಿದ್ದರು. ಈ ವಿಚಾರ ಮಾನ್ಯ ಹೆತ್ತವರಿಗೆ ಗೊತ್ತಾಗಿತ್ತು. ಆಕ್ರೋಶದ ಕಟ್ಟೆ ಹೊಡೆದಿತ್ತು. ಕೊಂದು ಮುಗಿಸಲು ಪ್ಲ್ಯಾನ್ ಮಾಡ್ಕೊಂಡಿದ್ದ ಇಡೀ ಕುಟುಂಬ ಭಾನುವಾರ ಸಂಜೆ ಹತ್ತಾರು ಮಂದಿ ಏಕಾಏಕಿ ಮಗಳ ಗಂಡನ ಮನೆಗೆ ನುಗ್ಗಿದ್ದರು. ಆಗ ಸಿಕ್ಕಸಿಕ್ಕವರ ಮೇಲೆ ಕೊಡಲಿ, ಗುದ್ದಲಿ, ರಾಡ್ನಿಂದ ದಾಳಿ ಮಾಡಿದ್ದಾರೆ. ಅಡ್ಡ ಬಂದ ಮಗಳು ಮಾನ್ಯ ಮೇಲೂ ಅಟ್ಟಹಾಸ ಮೆರೆದಿದ್ದಾರೆ.. ತುಂಬು ಗರ್ಭಿಣಿಯ ಹೊಟ್ಟೆಗೆ ಕೊಡಲಿ ಏಟು ಬೀಳುತ್ತಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದು, ಸಾವನ್ನಪ್ಪಿದ್ದಾಳೆ.

ರಕ್ತದ ಮಡುವಲ್ಲಿ ಬಿದ್ದು ಒದ್ದಾಡ್ತಿದ್ದ ಮಾನ್ಯಳನ್ನ ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ದಾರೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ. ತುಂಬು ಗರ್ಭಿಣಿಯ ಹೊಟ್ಟೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾಳೆ. ಮಾನ್ಯ ಕುಟುಂಬಸ್ಥರ ದಾಳಿ ವೇಳೆ ಮನೆಯಲ್ಲೇ ಇದ್ದ ಗಂಡ ವಿವೇಕಾನಂದ ಹಾಗೂ ಅತ್ತೆ, ಮಾವನಿಗೂ ಗಾಯಗಳಾಗಿವೆ.. ಮರ್ಯದಾ ಹತ್ಯೆ ಬಗ್ಗೆ ಇಡೀ ಹುಬ್ಬಳ್ಳಿಯನ್ನ ಆವರಿಸಿಕೊಂಡ ಕೂಡಲೇ ದಲಿತ ಸಂಘಟನೆಗಳು ಕೆರಳಿ ಕೆಂಡವಾಗಿದ್ವು, ಜಾತಿಗಾಗಿ ಜೀವ ತೆಗೆದವರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಎಲ್ಲಾ ಆರೋಪಿಗಳಿಗೂ ತಕ್ಕ ಶಿಕ್ಷೆ ಆಗ್ಬೇಕು ಅಂತಾ ಪ್ರತಿಭಟನೆ ನಡೆಸಿದ್ದಾರೆ. ಮರ್ಯಾದಾ ಹತ್ಯೆ ಬಗ್ಗೆ ಇಡೀ ರಾಜ್ಯವೇ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ತಲೆಮರೆಸಿಕೊಂಡಿರುವ ಹಂತಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಾನ್ಯ ಮೃತದೇಹವನ್ನ ಗಂಡನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಗಂಡನ ಗೋಳಾಟ ಮುಗಿಲು ಮುಟ್ಟಿತ್ತು. ಜೀವಕ್ಕೆ ಜೀವ ಅಂತಾ ಪ್ರೀತಿಸ್ತಿದ್ದವಳೇ ಪ್ರೀತಿಗಾಗಿ ಜೀವ ಬಿಟ್ಟಳು ಅಂತಾ ಕಣ್ಣೀರಿಟ್ಟಿದ್ದಾನೆ.
ಹುಬ್ಬಳ್ಳಿಯಲ್ಲಿ ನಡೆದಿರುವ ಮರ್ಯಾದ ಹತ್ಯೆ ಬಗ್ಗೆ ರಾಜ್ಯ ಮಹಿಳಾ ಆಯೋಗ ಮಧ್ಯಪ್ರವೇಶ ಮಾಡಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಆಗಬೇಕು. ಆ ಯುವಕನ ಕುಟುಂಬಕ್ಕೆ ಪೊಲೀಸ್ ಭದ್ರತೆ ನೀಡಬೇಕು. ಪೊಲೀಸರು ಘಟನೆ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಪೊಲೀಸ್ ಆಯುಕ್ತರಿಗೆ ಪತ್ರ ರವಾನಿಸಿದ್ದಾರೆ. ಆದರೆ ಕೆಳ ಜಾತಿಯ ಹುಡುಗನ ಮದುವೆ ಆಗಿದ್ದರಿಂದ ನಮ್ಮ ಮಾನ ಹೋಯ್ತು ಎಂದು ಕೊಲೆ ಮಾಡಿದ ಹೆತ್ತವರು, ಇದೀಗ ಮರ್ಯಾದೆಯನ್ನು ಸಂಪಾದನೆ ಮಾಡಿದಂತೆ ಆಗಿದೆಯೇ..? ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಕ್ಕಳನ್ನು ಹೆತ್ತು ಹೊತ್ತು ಬೆಳೆಸಿದ ಮಾತ್ರಕ್ಕೆ ಅವರ ಮೇಲೆ ಹಕ್ಕು ಸಾಧಿಸಲು ಹೋಗಬಾರದು. ವಯಸ್ಕರಾಗುತ್ತಿದ್ದಂತೆ ಅವರಿಗೇ ಆದ ಸ್ವತಂತ್ರ್ಯ ನಿರ್ಧಾರ ತೆಗೆದುಕೊಳ್ಳಲು ಬಿಡಬೇಕು ಎನ್ನುವುದನ್ನು ಅರ್ಥ ಮಾಡಿಕೊಂಡಾಗ ಮಾತ್ರ ಈ ರೀತಿಯ ಘಟನೆಗಳು ಕಡಿಮೆ ಆಗಬಹುದು.


