ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಬಂಧಿಗಳಿಂದ ಮದ್ಯಪಾನ ಮಾಡಿ ಡ್ಯಾನ್ಸ್ ಮಾಡಿದ ಪ್ರಕರಣದಲ್ಲಿ ನಾಲ್ವರು ವಿಚಾರಣಾಧೀನ ಬಂಧಿಗಳ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಕಾರ್ತಿಕ್, ಧನಂಜಯ, ಮಂಜುನಾಥ್ ಅಲಿಯಾಸ್ ಕೋಳಿ ಮಂಜ, ಚರಣ್ ರಾವ್ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. 2018 ನವೆಂಬರ್ ನಿಂದ 2025 ನವೆಂಬರ್ ಅವಧಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಿಎನ್ಎಸ್ 42 ಹಾಗೂ ಕಾರಾಗೃಹ ಕಾಯ್ದೆ 2022ರ ಅಡಿ ಪ್ರಕರಣ ದಾಖಲು ಮಾಡಲಾಗಿದೆ. ಬ್ಯಾರಕ್ ನಂಬರ್ 8ರ ಕೊಠಡಿ ಸಂಖ್ಯೆ 7ರಲ್ಲಿ ಮದ್ಯಪಾನ ಮಾಡಿ ಡ್ಯಾನ್ಸ್ ಮಾಡಿದ್ದಾರೆ. ಆ ಬಳಿಕ ವಿಡಿಯೋ ಮಾಡಿದ್ದರು, ಕೊಠಡಿಯಲ್ಲಿ ಡ್ಯಾನ್ಸ್, ನಿಷೇಧಿತ ವಸ್ತುವಿನ ಜೊತೆ ಕಾಣಿಸಿಕೊಂಡಿರುವುದು. ಮೊಬೈಲ್ನಲ್ಲಿ ವಿಡಿಯೋ ಸೆರೆ ಹಿಡಿದವರು, ಮೊಬೈಲ್ ತಂದವರು, ಯಾವಾಗ ಚಿತ್ರೀಕರಿಸಿದರು..? ಸರ್ಕ್ಯುಲೇಟ್ ಮಾಡಿದವರ ವಿರುದ್ಧ ತನಿಖೆ ನಡೆಸುವಂತೆ ಕೋರಿ ದೂರು ನೀಡಲಾಗಿದೆ. ಎಫ್ಐಆರ್ ದಾಖಲಿಸಿಕೊಂಡು ಪರಪ್ಪನ ಅಗ್ರಹಾರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜೈಲಿನಲ್ಲಿ ಮೊಬೈಲ್ ಬಳಸಿದ್ದ ಪ್ರಕರಣದಲ್ಲಿ ಮೂವರ ವಿಚಾರಣೆ ಮಾಡಲಾಗಿದೆ. ಜೈಲು ಅಧಿಕಾರಿಗಳ ವಿಚಾರಣೆ ನಡೆಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಆಂತರಿಕ ತನಿಖೆ ನಡೆಸುವ ಸಲುವಾಗಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಸ್ಮಗ್ಲಿಂಗ್ ಆರೋಪಿ ತರುಣ್ ಕೊಂಡೂರು, ಸೀರಿಯಲ್ ಕಿಲ್ಲರ್ ಉಮೇಶ್ ರೆಡ್ಡಿ, ಮತ್ತೊಬ್ಬ ಆರೋಪಿ ಜುಹಾದ್ ಹಮೀದ್ ಶಕೀಲ್ ಮನ್ನಾನ ವಿಚಾರಣೆ ಮಾಡಲಾಗಿದೆ. ಮೊಬೈಲ್ ಹಾಗೂ ಬಿಂದಾಸ್ ಜೀವನ ಶೈಲಿ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಆಂತರಿಕ ತನಿಖೆ ನಡೆಸಿ ವರದಿ ನೀಡಲಿದ್ದಾರೆ ಜೈಲು ಅಧಿಕಾರಿಗಳು.
ಈ ಆರೋಪಿಗಳಲ್ಲಿ ಕಾರ್ತಿಕ್ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಕೇಸ್ನಲ್ಲಿ ಕಳೆದೊಂದು ವರ್ಷದಿಂದ ಬಂಧಿಯಾಗಿ ಜೈಲಿನಲ್ಲಿದ್ದಾನೆ. ಇನ್ನುಳಿದ ಆರೋಪಿಗಳು ಇತರೆ ಪ್ರಕರಣಗಳಲ್ಲಿ ಬಂಧನವಾಗಿ ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದಾರೆ. ಇದೀಗ ಎಲ್ಲಾ ಆರೋಪಿಗಳ ಕಾಂಟ್ಯಾಕ್ಟ್ ನಂಬರ್ ಹಾಗೂ ವಿಳಾಸವನ್ನು ಕೊಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಆ ಬಳಿಕ ಎಲ್ಲರನ್ನೂ ಕರೆತಂದು ವಿಚಾರಣೆ ಮಾಡಲು ಪರಪ್ಪನ ಅಗ್ರಹಾರ ಪೊಲೀಸರು ನಿರ್ಧಾರ ಮಾಡಿದ್ದಾರೆ. ಒಟ್ಟಾರೆ ಜೈಲಿನಲ್ಲಿ ವ್ಯವಸ್ಥೆ ಮಾಡಿದವರು, ಮೊಬೈಲ್ ಬಳಸಲು ಅವಕಾಶ ಕೊಟ್ಟವರಿಗಿಂತಾ ವಿಡಿಯೋ ಮಾಡಿ ಹರಿಯಬಿಟ್ಟವರ ಕಡೆಗೆ ತನಿಖೆಯ ದಿಕ್ಕು ತಿರುಗಿದೆ.


