ರಾಜ್ಯ ಸರ್ಕಾರದಿಂದ ಫೋನ್ ಟ್ಯಾಪಿಂಗ್ ನಡೆಯುತ್ತಿದೆ ಎನ್ನುವ ಮಾಧ್ಯಮಗಳ ವರದಿ ಆಧರಿಸಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಕೇಂದ್ರ ಸಚಿವ ಹೆಚ್. ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದರು. ಮುಖ್ಯಮಂತ್ರಿ ಆಗಿ ಉಳಿದುಕೊಳ್ಳಲು ಎದುರಾಳಿ ಟೀಂನ ಶಾಸಕರ ಮೇಲೆ ಬೇಹುಗಾರಿಕೆ ಮಾಡಲಾಗ್ತಿದೆ ಎನ್ನುವುದು ವಿರೋಧ ಪಕ್ಷಗಳ ನಾಯಕರ ನೇರ ಆರೋಪ ಆಗಿತ್ತು. ಆದರೆ ಕುಮಾರಸ್ವಾಮಿ ಮಾತ್ರ ನಾನು ಸತ್ಯ ಹೇಳ್ತೇನೆ ಕೇಳಿ, ಎಲ್ಲಾ ಸರ್ಕಾರದ ಅವಧಿಯಲ್ಲೂ ಫೋನ್ ಟ್ಯಾಪಿಂಗ್ ನಡೆಯುತ್ತದೆ. ಹಿಂದೆಯೂ.. ಈಗಲೂ.. ಮುಂದೆಯೂ ಎನ್ನುವ ಮೂಲಕ ಯಾರೂ ಸಾಚಾಗಳು ಅಲ್ಲ ಎನ್ನುವ ಬಾಂಬ್ ಸಿಡಿಸಿದ್ದರು.
ಕುಮಾರಸ್ವಾಮಿ ಮಾತಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಸಿಎಂ ಸಿದ್ದರಾಮಯ್ಯ, ಮಾಧ್ಯಮ ಪ್ರಕಟಣೆ ಮೂಲಕ ಕೇಂದ್ರ ಸಚಿವ ಕುಮಾರಸ್ವಾಮಿ ಮಾತಿಗೆ ತಿರುಗೇಟು ನೀಡಿದ್ದರು. ಕುಮಾರಸ್ವಾಮಿ ಈ ಹಿಂಸೆ ನಿರ್ಮಲಾನಂದ ಸ್ವಾಮೀಜಿ ಫೋನ್ ಟ್ಯಾಪಿಂಗ್ ಮಾಡಿಸಿದ್ದರು. ತನಿಖೆ ಮಾಡಿದಾಗ ಸಾಕಷ್ಟು ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಆಗಿರುವ ವಿಚಾರ ತಿಳಿಯಿತು. ಈ ಹಿಂದೆ ಪ್ರಧಾನಿ ಆಗಿದ್ದಾಗ ಪೂಜ್ಯ ತಂದೆಯವರು AICC ಅಧ್ಯಕ್ಷರಾಗಿದ್ದ ಸೀತಾರಾಮ್ ಕೇಸರಿ ಅವರ ಫೋನ್ ಟ್ಯಾಪಿಂಗ್ ಮಾಡಿಸಿದ್ದರು. ಅದೇ ಕಾರಣಕ್ಕೆ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದುಕೊಳ್ತು. ಹೀಗಾಗಿ ಪ್ರಧಾನಿ ಹುದ್ದೆಯಿಂದ ಕೆಳಗೆ ಇಳಿಯಬೇಕಾಯ್ತು. ಕುಮಾರಸ್ವಾಮಿ ಟ್ಯಾಪಿಂಗ್ ಬಗ್ಗೆ ಪೂಜ್ಯ ತಂದೆಯವರಿಂದಲೇ ಕಲಿತಿರಬಹುದು ಎಂದು ಕುಹಕವಾಡಿದ್ದರು.

ಸಿದ್ದರಾಮಯ್ಯ ಪ್ರತಿಕ್ರಿಯೆ ಬಳಿಕ ಫೋನ್ ಕದ್ದಾಲಿಕೆ ವಿಚಾರವಾಗಿ ಕುಮಾರಸ್ವಾಮಿ ಮತ್ತೆ ತಿರುಗೇಟು ನೀಡಿದ್ದು, ಮಾದ್ಯಮದಲ್ಲಿ ಟೆಲಿಫೋನ್ ಟ್ಯಾಪಿಂಗ್ ನನ್ನ ಬಗ್ಗೆ ಅಭಿಪ್ರಾಯ ಹೇಳಿದ್ದೇನೆ. ಕದ್ದು ಮುಚ್ಚಿ ಮಾತಾಡಲ್ಲ. ಎಲ್ಲಾ ಸರ್ಕಾರದಲ್ಲೂ ಫೋನ್ ಟ್ಯಾಪಿಂಗ್ ನಡೆದಿದೆ. ಸಿದ್ದರಾಮಯ್ಯ ನಾನು ಫೋನ್ ಟ್ಯಾಪಿಂಗ್ ಮಾಡ್ತಿಲ್ಲ, ಪರಿವ್ರತೆ ಅಂತ ಹೇಳಿಕೊಳ್ಳಬಹುದು. ಆದರೆ ನಾನು ಎರಡು ಬಾರಿ ಸಿಎಂ ಆಗಿದ್ದವನು. ನಮ್ಮ ಮಟ್ಟದಲ್ಲಿ ಮಾಡದಿದ್ರೂ, ಇಂಟೆಲಿಜೆನ್ಸ್ ಅಧಿಕಾರಿಗಳು ಮಾಡಿರುವುದು ಹಲವಾರು ಸರ್ಕಾರದಲ್ಲಿ ನಿರಂತರವಾಗಿ ನಡೆದಿದೆ. ಈಗ ಇವರ ಸರ್ಕಾರದಲ್ಲೂ ನಡೆದಿದೆ. ಖುರ್ಚಿಗಾಗಿ ಇಂಟೆಲಿಜೆನ್ಸ್ ಅಧಿಕಾರಿಗಳು ಫೋನ್ ಕದ್ದಾಲಿಕೆ ಮಾಡ್ತಿರೋದಲ್ಲ, ರಾಜ್ಯದಲ್ಲಿ ನಡೆಯುವ ಹಲವಾರು ಪ್ರಕರಣದ ಬಗ್ಗೆ ಪರ್ಮಿಷನ್ ತೆಗೆದುಕೊಂಡು ಮಾಡಲಾಗುತ್ತದೆ ಇದು ಸರ್ವೆ ಸಾಮಾನ್ಯ ಎಂದಿದ್ದಾರೆ.
ಕುಮಾರಸ್ವಾಮಿ ಹೇಳಿಕೆಯನ್ನು ಗೃಹ ಸಚಿವರಾದ ಪರಮೇಶ್ವರ್ ಸಂಪೂರ್ಣವಾಗಿ ನಿರಾಕರಿಸಲಿಲ್ಲ. ಇದೀಗ ಕುಮಾರಸ್ವಾಮಿ ಹೇಳಿದ್ದನ್ನೇ ಪರಮೇಶ್ವರ್ ಕೂಡ ಹೇಳಿದ್ದರು. ಮುಖ್ಯಮಂತ್ರಿ ಅವರ ಅಧೀನದಲ್ಲಿ ಪೊಲಿಟಿಕಲ್ ಇಂಟೆಲಿಜೆನ್ಸ್ ಇದೆ. ಅವರು ಯಾರ ಟೆಲಿಫೋನ್ ಟ್ಯಾಪಿಂಗ್ ಮಾಡಬೇಕು, ಯಾವ ಕಾರಣಕ್ಕೆ ಅನ್ನೋದನ್ನು ತಿಳಿದುಕೊಂಡು ಮಾಡ್ತಾರೆ. ಪ್ರತಿದಿನ ಮುಖ್ಯಮಂತ್ರಿಗಳಿಗೆ ಆ ಬಗ್ಗೆ ಮಾಹಿತಿ ಕೊಡ್ತಾರೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಗಳಿಗೆ ಟೆಲಿಪೋನ್ ಟ್ಯಾಪಿಂಗ್ ಆಗಿಲ್ಲ. ಸರ್ಕಾರದಲ್ಲಿ ಇರುವ ನಮಗೆ ವಿರೋಧ ಪಕ್ಷಗಳಿಗಿಂತಾ ಹೆಚ್ಚಿನ ಮಾಹಿತಿ ಇರುತ್ತದೆ. ಅವರ ಆರೋಪ ಆಧಾರ ರಹಿತ ಎಂದಿದ್ದರು. ಆದರೆ ಪೊಲಿಟಿಕಲ್ ಇಂಟೆಲಿಜೆನ್ಸ್ ಕೆಲಸ ಮಾಡುತ್ತದೆ ಅನ್ನೋದನ್ನು ಒಪ್ಪಿಕೊಂಡಿದ್ದರು. ಇದೀಗ ಕುಮಾರಸ್ವಾಮಿ ಮತ್ತೆ ಅದೇ ಹೇಳಿಕೆಯನ್ನು ಪುನರುಚ್ಛಾರ ಮಾಡಿದ್ದಾರೆ.


