The Public Spot
ರಾಜಕೀಯ

ಬಳ್ಳಾರಿಯ ಬ್ಯಾನರ್ ಹೋರಾಟಕ್ಕೆ ಬಿಜೆಪಿ ನಾಯಕರ ಸಿದ್ಧತೆ.. ರಾಜ್ಯ ನಾಯಕರಿಗೆ ಮನಸ್ಸಿಲ್ಲ ಯಾಕೆ..?

ಬಳ್ಳಾರಿ ಬ್ಯಾನರ್ ಗಲಾಟೆ ವಿಚಾರವಾಗಿ ಬಳ್ಳಾರಿಯಲ್ಲಿ ಬೃಹತ್‌ ಹೋರಾಟ ಮಾಡುವ ಬಗ್ಗೆ ಬಿಜೆಪಿ ನಾಯಕರು ಯೋಜನೆ ರೂಪಿಸಿದ್ದಾರೆದ. ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಲಾಗಿತ್ತು. ಇದೀಗ ಜನವರಿ 17 ರಂದು ಹೋರಾಟ ಹೇಗಿರಬೇಕು, ಎಲ್ಲಿಂದ ಱಲಿ ಮಾಡಬೇಕು..? ಅನ್ನೋ ಬಗ್ಗೆ ಇಂದಿನ ಸಭೆಯಲ್ಲಿ ನಿರ್ಧಾರ ಮಾಡಲಾಗುತ್ತದೆ. ಬಳ್ಳಾರಿ ಗಲಭೆ ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸಲು ನಿರ್ಧಾರ ಮಾಡಲಾಗಿದೆ. 2010 ರಲ್ಲಿ ಅಕ್ರಮ ಗಣಿಗಾರಿಕೆ ವಿರುದ್ದ ಪಾದಯಾತ್ರೆ ನಡೆಸಿದ್ದ ಸಿದ್ದರಾಮಯ್ಯ, 2013 ರಲ್ಲಿ ಕಾಂಗ್ರೆಸ್ ಸರ್ಕಾರ ಬರಲು ಕಾರವಾಗಿದ್ದರು. ಬಳ್ಳಾರಿ ಪಾದಯಾತ್ರೆ ಮೂಲಕವೇ ಅಧಿಕಾರ ಹಿಡಿದಿದ್ದ ಸಿದ್ದರಾಮಯ್ಯಗೆ ಬಳ್ಳಾರಿ ಬ್ರದರ್ಸ್‌ ಕೌಂಟರ್‌ ಕೊಡಲು ಅವಕಾಶವೇ ಸಿಕ್ಕಿರಲಿಲ್ಲ. ಆದರೀಗ ಬಳ್ಳಾರಿ ಬ್ಯಾನರ್‌ ವಿಚಾರವಾಗಿ ಬೃಹತ್‌ ಹೋರಾಟ ರೂಪಿಸುತ್ತಿದ್ದಾರೆ.

ಬಳ್ಳಾರಿ ಗಲಭೆ ಪ್ರಕರಣದಲ್ಲಿ ಸರ್ಕಾರ ಸಿಐಡಿ ತನಿಖೆಗೆ ವಹಿಸಿದ್ದರೂ ಅದರಿಂದ ನ್ಯಾಯ ಸಿಗುವ ಬಗ್ಗೆ ಅನುಮಾನ ಇದೆ ಎಂದಿರುವ ಬಳ್ಳಾರಿ ಬಿಜೆಪಿ ನಾಯಕರು, ಸಿಬಿಐ ತನಿಖೆ ನಡೆದರೆ ಮಾತ್ರ ನ್ಯಾಯ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಯಾರು ಕಾನೂನು ಕೈಗೆ ಎತ್ತಿಕೊಂಡು ಒಂದು ಸಾವಿಗೆ ಕಾರಣರಾದರೂ ಅವರ ರಕ್ಷಣೆ ಮಾಡಲಾಗ್ತಿದೆ ಎಂದು ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಭರತ್ ರೆಡ್ಡಿ ಜೊತೆಗೆ ಜಿಂದಾಲ್‌ ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಆ ಬಳಿಕ ಬಳ್ಳಾರಿಗೆ ಬಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಕೂಡ ಭರತ್ ರೆಡ್ಡಿ ಪರವಾಗಿಯೇ ಮಾತನಾಡಿದ ಮೇಲೆ ನ್ಯಾಯ ಎಲ್ಲಿಂದ ಸಿಗುತ್ತದೆ..? ತಪ್ಪಿತಸ್ಥರಿಗೆ ಶಿಕ್ಷೆ ಆಗುವುದಿಲ್ಲ ಎನ್ನುವುದು ರೆಡ್ಡಿ ಬ್ರದರ್ಸ್‌ ವಾದ.

ಜನಾರ್ದನ ರೆಡ್ಡಿ ಬ್ರದರ್ಸ್ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯಗೆ ರೆಡ್ಡಿ ಬ್ರದರ್ಸ್‌ ಕೌಂಟರ್‌ ಅಟ್ಯಾಕ್‌ ಅಂತಾನೇ ಬಿಂಬಿತವಾಗಿರುವ ಈ ಹೋರಾಟ, ಜನವರಿ 17 ರಂದು ಬಳ್ಳಾರಿ ಜಿಲ್ಲೆಗೆ ಮಾತ್ರ ಸೀಮಿತವಾಗುತ್ತಾ..? ಅಥವಾ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಬರುವ ಮೂಲಕ ಹೋರಾಟಕ್ಕೆ ಕಿಚ್ಚು ಹೊತ್ತಿಸ್ತಾರಾ..? ಕಾಂಗ್ರೆಸ್‌ ಸರ್ಕಾರದ ವಿರುದ್ಧ ಹೋರಾಟಕ್ಕೆ ಕೇಸರಿ ಪಕ್ಷ ಗ್ರಿನ್ ಸಿಗ್ನಲ್ ನೀಡುತ್ತಾ..? ಅನ್ನೋ ಬಗ್ಗೆಯೂ ಇಂದೇ ಅಂತಿಮ ಆಗುವ ಸಾಧ್ಯತೆಯಿದೆ. ಈಗಾಗಲೇ ಪಕ್ಷದ ಹೈಕಮಾಂಡ್‌ ನಾಯಕರ ಬಳಿ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ನಡೆಸಲು ಅನುಮತಿ ಕೋರಿದ್ದಾರೆ ಎನ್ನಲಾಗ್ತಿದೆ. ಪಕ್ಷದ ಕೋರ್ ಕಮಿಟಿ ಸದಸ್ಯರು ಹೋರಾಟದ ರೂಪುರೇಷೆ ಬಗ್ಗೆ ಇವತ್ತು ತೀರ್ಮಾನ ಮಾಡಲಿದ್ದಾರೆ.

ಆದರೆ ಬಳ್ಳಾರಿಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುವ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಸ್ವತಃ ಬಿಜೆಪಿ ನಾಯಕರಿಗೇ ಇಷ್ಟವಿಲ್ಲ ಎನ್ನಲಾಗ್ತಿದೆ. ಕಾಂಗ್ರೆಸ್‌ ಪಕ್ಷದ ಅಧಿಕಾರ ಇನ್ನೂ ಎರಡೂ ಕಾಲು ವರ್ಷ ಬಾಕಿ ಇದ್ದು, ಚುನಾವಣೆ ಸಾಕಷ್ಟು ದೂರವಿದೆ. ಈಗಲೇ ಬಳ್ಳಾರಿಯಿಂದ ಪಾದಯಾತ್ರೆ ಮಾಡಿದರೆ ಅದರಿಂದ ರಾಜಕೀಯ ಲಾಭ ಆಗಲಾರದು ಅನ್ನೋ ಅಭಿಮತ. ಇದೇ ಕಾರಣಕ್ಕೆ ರಾಜ್ಯ ಬಿಜೆಪಿ‌ ನಾಯಕರು ಈಗಾಗಲೇ ಪಾದಯಾತ್ರೆ ಹಾಗೂ ಹೋರಾಟಕ್ಕೆ ಹಿಂದೇಟು ಹಾಕಿದ್ದಾರೆ. ಜೊತೆಗೆ ಕಾಂಗ್ರೆಸ್ ನಾಯಕರ ಜೊತೆಗೆ ಕೆಲವು ಬಿಜೆಪಿ ನಾಯಕರು ಉದ್ದಿಮೆಗಳಲ್ಲಿ ಪಾರ್ಟ್ನರ್ಸ್ ಆಗಿದ್ದು, ಕಾಂಗ್ರೆಸ್ ಪರವಾಗಿ ನಿಲ್ಲುವುದಕ್ಕೆ ಇದೂ ಒಂದು ಕಾರಣ ಎನ್ನಲಾಗುತ್ತದೆ. ಆದರೂ ರಾಜಕೀಯ ಕಾರಣಕ್ಕೆ ಒಬ್ಬ ಯುವಕನ ಬಲಿ ಪಡೆದವರು ಯಾರೇ ಇದ್ದರೂ ಶಿಕ್ಷೆ ಆಗಬೇಕಿರುವುದು ಧರ್ಮ.

Related posts

ಅಡ್ಡ ಮತದಾನ ಮಾಡಿದ್ದು ವೈಯಕ್ತಿಕ ಲಾಭಕ್ಕೋ..? ನಾಯಕತ್ವದ ಸೇಡಿಗೋ..?

Publicspot

ಮಾಲೂರು ಕ್ಷೇತ್ರದ ಮರು ಮತ ಎಣಿಕೆ.. ಶಾಸಕತ್ವ ಬದಲಾಗೋದು ಪಕ್ಕಾನಾ..?

Publicspot

ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಸರಿಯಾದ ರೀತಿಯಲ್ಲಿ ಸಿದ್ದತೆಗಳನ್ನು ಮಾಡಿ

admin

2 ದಿನದಲ್ಲಿ ಹೊಸ ವರ್ಷ.. ಹೊಸ ಮನೆ ಕೊಡ್ತೀವಿ.. ಸಿಂಗಲ್‌ ರೂಮ್‌ ಮನೆ..

Publicspot

JDS ಪಾದಯಾತ್ರೆ ಅರ್ಧಕ್ಕೆ ತಡೆದ ಪೊಲೀಸರು.. 18ಕ್ಕೆ ಬೃಹತ್​ ಹೋರಾಟ

Publicspot

Okkaliga and Lingayath united; ಜಾತಿ ಗಣತಿ ಆರಂಭಕ್ಕೂ ಮುನ್ನವೆ ಬಲಾಢ್ಯರ ವಿರೋಧ.. ಸಣ್ಣ ಬಿರುಕು..

Publicspot