BJP ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ BL ಸಂತೋಷ್ ಬಗ್ಗೆ ಅವಾಚ್ಯ ಶಬ್ಧ ಬಳಸಿ ನಿಂದನೆ ಮಾಡಿದ್ದ ಆರೋಪದಲ್ಲಿ ಮಹೇಶ್ ಶೆಟ್ಟಿ ತಿಮರೋಡಿಯನ್ನ ಬ್ರಹ್ಮಾವರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿಯ ASP ಸೇರಿದಂತೆ ಗ್ರಾಮಾಂತರ ಠಾಣಾ ಎಸ್ಐ ಗಳು, ಪೊಲೀಸ್ ಸಿಬ್ಬಂದಿ ಒಳಗೊಂಡ ತಂಡ ಆರು ಜೀಪ್ಗಳಲ್ಲಿ ಆಗಮಿಸಿ ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆಯಲು ಪೊಲೀಸರು ಮನೆಗೆ ಬರ್ತಿದ್ದಂತೆ ಉಜಿರೆ ಮನೆ ಬಳಿ ಭಾರೀ ಹೈಡ್ರಾಮಾವೇ ನಡೆದಿದೆ. ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಸಾಕಷ್ಟು ಬೆಂಬಲಿಗರು ಪೊಲೀಸರಿಗೆ ತಡೆಯೊಡ್ಡಿದ್ದರು. ಯಾವ ಕಾರಣಕ್ಕೆ ಬಂಧನ ಮಾಡ್ತಿದ್ದೀರಿ..? ಅರೆಸ್ಟ್ ವಾರೆಂಟ್ ಇದೆಯಾ..? ಅನ್ನೋ ಬಗ್ಗೆಯೂ ಪೊಲೀಸರನ್ನು ಪ್ರಶ್ನೆ ಮಾಡಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಬಂಧನಕ್ಕೆ ಬಂದ ಪೊಲೀಸರಿಗೆ ವಕೀಲರ ತಂಡ ಎದುರಾಗಿದೆ. ಮಹೇಶ್ ಶೆಟ್ಟಿ ತಿಮರೋಡಿ, ನೀಡಿರುವ ಹೇಳಿಕೆ ಜಾಮೀನು ನೀಡುವಂತಹ ಪ್ರಕರಣ ಆಗಿದೆ. ಆದರೆ ಅರೆಸ್ಟ್ ಮಾಡುತ್ತಿರುವುದು ಕಾನೂನು ಬಾಹೀರ ಎಂದು ಪೊಲೀಸರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದ್ದಾರೆ. ಆದರೂ ಪಟ್ಟು ಬಿಡದ ಉಡುಪಿ ಪೊಲೀಸರು ಬಂಧನ ಮಾಡಿ ಕರೆದೊಯ್ದಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ವಶಕ್ಕೆ ಪಡೆದ ಬಳಿಕ ಮನೆ ಬಳಿ ಜಮಾಯಿಸಿದ್ದ ತಿಮರೋಡಿಯ ನೂರಾರು ಬೆಂಬಲಿಗರು ಜೈಕಾರ ಹಾಕಿದ್ದಾರೆ. ಘೋಷಣೆ ಕೂಗುವ ಮೂಲಕ ಮಹೇಶ್ ಶೆಟ್ಟಿ ತಿಮರೋಡಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ತಿಮರೋಡಿ ಹೋರಾಟ ಮಾಡಿದ್ದಕ್ಕೆ ಪೊಲೀಸರು ಬಂಧನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸ್ರು ವಶಕ್ಕೆ ಪಡೆದರೂ ತಿಮರೋಡಿ ಮಾತ್ರ ಪೊಲೀಸರ ಕಾರಿನಲ್ಲಿ ಹೋಗಲಿಲ್ಲ. ಬದಲಿಗೆ ತಮ್ಮದೇ ಸ್ವಂತ ಕಾರಿನಲ್ಲಿ ಪೊಲೀಸರ ಜೊತೆಗೆ ಹೋಗಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಜೊತೆಯಲ್ಲೇ ಗಿರೀಶ್ ಮಟ್ಟಣ್ಣನವರ್ ಹಾಗೂ ಧರ್ಮಸ್ಥಳ ಕೇಸ್ನ 2ನೇ ದೂರುದಾರ ಜಯಂತ್ ಟಿ ಕೂಡ ತೆರಳಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಬಳಿಕ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ, ನನಗೇನಾದರು ಆದರೆ ಪೊಲೀಸರೇ ನೇರ ಕಾರಣ. ಇದಕ್ಕೆಲ್ಲಾ ಬಿಜೆಪಿಯವರು ನೇರವಾದ ಕಾರಣ ಎಂದಿದ್ದಾರೆ. ಧರ್ಮಸ್ಥಳ ವಿರುದ್ಧ ನ್ಯಾಯಕ್ಕಾಗಿ ಹೋರಾಟ ಮಾಡಿದ್ದಕ್ಕೆ ಸುಳ್ಳು ಕೇಸ್ ಹಾಕಿ ನಮ್ಮನ್ನು ಒಳಗೆ ಹಾಕುತ್ತಿದ್ದಾರೆ. ಬಿಜೆಪಿಯವರ ಪಾಪದ ಕೂಸು ಇದು. ಸರ್ವ ನಾಶ ಆಗಿ ಹೋಗ್ತಾರೆ. ಪೊಲೀಸ್ ಸ್ಟೇಷನ್ಗೆ ಹೋಗಿ ಹೇಳಿಕೆ ನೀಡುತ್ತೇನೆ. ವಾರೆಂಟ್ ಇಲ್ಲದೇ ಪೊಲೀಸರು ಬಂದಿದ್ದಾರೆ. ಎಸ್ ಐ ಟಿ ತನಿಖೆ ನಿಲ್ಲಿಸಲು ಮಾಡಿರುವ ಕುತಂತ್ರ. ನನ್ನನ್ನು ಕೊಲೆ ಮಾಡಿ ಬಿಸಾಡಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ವಿಚಾರಣೆ ಹಾಜರಾಗುವಂತೆ ಪೊಲೀಸರು ಒಟ್ಟು 2 ನೋಟಿಸ್ ನೀಡಿದ್ದರು. ಆದರೆ ನೋಟಿಸ್ಗೆ ಹಿಂಬರ ಕೊಟ್ಟಿದ್ದ ಮಹೇಶ್ ಶೆಟ್ಟಿ ತಿಮರೋಡಿ, ನಾನು ಮುಂದಿನ 15 ದಿನಗಳ ಪೊಲೀಸ್ ಠಾಣೆಗೆ ಹಾಜರಾಗಿ ವಿಚಾರಣೆ ಎದುರಿಸ್ತೇನೆ ಎಂದಿದ್ದರು. ಆದರೆ ಇದನ್ನು ಪೊಲೀಸರು ಮಾನ್ಯ ಮಾಡಿರಲಿಲ್ಲ. ಹೀಗಾಗಿ ಪೊಲೀಸ್ ಠಾಣೆಗೆ ಹೋಗಲು ಸಜ್ಜಾಗಿದ್ದ ಮಹೇಶ್ ತಿಮರೋಡಿ, ಬೆಂಬಲಿಗರು ಹಾಗೂ ವಕೀಲರ ಜೊತೆಗೆ ಸಭೆ ಮಾಡುವಾಗಲೇ ಎಂಟ್ರಿ ಕೊಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.


