ಹುಬ್ಬಳ್ಳಿಯಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತು ಕೆಲವರಿಗೆ ನುಂಗಲಾರದ ಬಿಸಿ ತುಪ್ಪ ಎನ್ನುವಂತಾಗಿದೆ. ವಿರೋಧಿಗಳ ವಿರುದ್ಧ ಗುಡುಗಿದ ನಟ ಸುದೀಪ್ ಮಾತು ಸ್ವತಃ ದರ್ಶನ್ಗೆ ಹೇಳಿದ್ದು ಎಂದು ಕೆಲವರು ತುಲನೆ ಮಾಡುತ್ತಿದ್ದಾರೆ. ಮಾರ್ಕ್ ಚಿತ್ರದ ಪ್ರೀ ರಿಲೀಸ್ ಈವೆಂಟ್ನಲ್ಲಿ ಮಾತನಾಡಿದ ಸುದೀಪ್, ಡಿಸೆಂಬರ್ 25 ಕ್ಕೆ ಜೋರಾಗಿ ಬಾಗಿಲು ತಟ್ಟುತ್ತಿದ್ದೇವೆ. ಕೆಲವು ಬಾರಿ ಮಾತು ಹುಬ್ಬಳ್ಳಿಯಲ್ಲಿ ಮಾತನಾಡಿದ್ರೆ ಎಲ್ಲಿ ತಟ್ಟಬೇಕೋ ಅಲ್ಲಿ ತಟ್ಟುತ್ತದೆ. ಹೊರಗಡೆ ಒಂದು ಪಡೆ ಯುದ್ದಕ್ಕೆ ರೆಡಿಯಾಗ್ತಿದೆ. ನಾವು ಯುದ್ದಕ್ಕೆ ಸಿದ್ದ, ನಾವು ನಮ್ಮ ಮಾತಿಗೆ ಬದ್ಧ. ಸೈಲೆಂಟ್ ಆಗಿರೋದು ಒಳ್ಳೆಯದೋ ಕೆಟ್ಟದ್ದೋ ಗೊತ್ತಿಲ್ಲಾ. ನನ್ನ ಸ್ನೇಹಿತರು ಚನ್ನಾಗಿ ಇರಬೇಕು ಅಂತ ಬಾಯಿ ಮುಚಿಕೊಂಡು ಇದ್ದೆ. ಬಾಯಿ ಇಲ್ಲಾ ಅಂತ ಅಲ್ಲಾ. ನನ್ನ ಸಹನೆಯಿಂದ ನಿಮ್ಮ ಮೇಲೆ ಕಲ್ಲಿನ ತೂರಾಟ ನಡೆಯುತ್ತಲೇ ಇರುತ್ತದೆ. ಆದ್ರೆ ತಡೆಯೋ ತನಕ ತಡಿ, ಮಾತಾಡೋ ಟೈಮ್ನಲ್ಲಿ ಮಾತಾಡಿ ಎಂದು ಒಗಟಾಗಿ ಮಾತನಾಡಿದ್ದರು.

ಕಿಚ್ಚನ ಹೇಳಿಕೆಗೆ ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ವಿಜಯಲಕ್ಷ್ಮೀ, ದರ್ಶನ್ ಇಲ್ಲದೆ ಇರುವಾಗ ಕೆಲವರು ಏನೇನೋ ಮಾತನಾಡ್ತಾ ಇದ್ದಾರೆ. ವೇದಿಕೆ ಮೇಲೆ ನಿಂತು ಮಾತನಾಡುವುದು, ಟಿವಿ ಇಂಟರ್ವ್ಯೂಗಳಲ್ಲಿ ಮಾತನಾಡ್ತಾ ಇದ್ದಾರೆ. ಆದರೆ ದರ್ಶನ್ ಅವರು ಹೊರಗಿದ್ದಾಗ, ಈ ಜನ ಬೆಂಗಳೂರಲ್ಲಿ ಇರ್ತಾರಾ..? ಇಲ್ವಾ ಅನ್ನೋದೇ ಗೊತ್ತಾಗಲ್ಲ ಎಂದಿದ್ದರು.ಆ ಬಳಿಕ ನಟ ಧನ್ವಿರ್ ಕೂಡ ಇನ್ಸ್ಟಾ ಪೋಸ್ಟ್ನಲ್ಲಿ ಸುದೀಪ್ಗೆ ಠಕ್ಕರ್ ಕೊಡುವ ಕೆಲಸ ಮಾಡಿದ್ದರು. ಕಾಡಿಗೆ ಒಬ್ರೇ ರಾಜ ಎಂದು ಪೋಸ್ಟ್ ಹಾಕುವ ಮೂಲಕ ಕಿಚ್ಚ ಸುದೀಪ್ ಹೇಳಿಕೆಗೆ ಟಾಂಟ್ ಮಾಡಿದ್ದಾರೆ ಅನ್ನೋ ಚರ್ಚೆಗಳು ಶುರು ಆಗಿವೆ.

ನಟ ಕಿಚ್ಚ ಸುದೀಪ್ ಯುದ್ಧ ಎಂಬ ಪದ ಬಳಕೆ ಮಾಡಿದ್ದು ಸುದೀಪ್ಗೆ ಹಿನ್ನೆಡೆಯಾಯ್ತಾ..? ಸಿನಿಮಾ ನಟರು, ಸಿನಿಮಾ ಮಾಡಬೇಕು.. ಇವ್ರೇನ್ ಗಡಿ ಕಾಯೋ ಸೈನಿಕರ..? ಅಂತ ಕೆಲವು ಚಿತ್ರರಸಿಕರು ಮಾತನಾಡಿಕೊಳ್ತಿದ್ದಾರೆ. ಚಿತ್ರ ಪೈರಸಿ ಮಾಡೋರ ವಿರುದ್ಧ ಕಾನೂನು ಸಮರ ಸಾರ್ತೀವಿ ಅಂತ ನೇರವಾಗಿಯೇ ಹೇಳಿದ್ರೆ ಇಷ್ಟೆಲ್ಲಾ ವಿವಾದ ಆಗ್ತಿರಲಿಲ್ಲ. ಆದರ ಬದಲು ಯುದ್ಧ ಎಂಬ ಪದ ಬಳಸಿ ತಪ್ಪು ಮಾಡಿದ್ರಾ..? ಎಂದು ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚನ ಪದಬಳಕಗೆ ಕೆಲವರು ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಮಾರ್ಕ್ ರಿಲೀಸ್ಗೆ ಕೇವಲ 3 ದಿನ ಇರುವಾಗ ಇಂತಹ ವಿವಾದ ಬೇಕಿರಲಿಲ್ಲ ಅನ್ನೋ ಚರ್ಚೆಗಳೂ ನಡೆಯುತ್ತಿವೆ.
ಯುದ್ದಕ್ಕೆ ಸಿದ್ದ ಎಂಬ ಕಿಚ್ಚ ಸುದೀಪ್ ಹೇಳಿಕೆ ಬಗ್ಗೆ ಸುದೀಪ್ ಆಪ್ತರೂ ಆಗಿರುವ ಮಾಜಿ ಸಚಿವ ರಾಜುಗೌಡ ಸ್ಪಷ್ಟನೆ ನೀಡಿದ್ದು, ಸುದೀಪ್ ಅಣ್ಣ ಪೈರಸಿ ವಿರುದ್ಧ ಯುದ್ದಕ್ಕೆ ಕರೆ ಕೊಟ್ರು. ಹುಬ್ಬಳಿಯ ಕಾರ್ಯಕ್ರಮಕ್ಕೂ ಮೊದಲು ಸುದೀಪ್ ಅಣ್ಣನಿಗೆ ಒಂದು ಕಾಲ್ ಬಂತು. ನಿಮ್ಮ ಸಿನಿಮಾವನ್ನು ಪೈರಸಿ ಮಾಡೊಕೆ ಪ್ಲಾನ್ ಮಾಡಿದ್ದಾರೆ ಅಂತ. ಆ ಕಾಲ್ ಬಂದ ಹಿನ್ನೆಲೆಯಲ್ಲಿ ಸುದೀಪ್ ಅಣ್ಣ ಯುದ್ದಕ್ಕೆ ಕರೆ ಕೊಟ್ರು. ಸುದೀಪ್ ಅಣ್ಣ ಯಾವುದೇ ಸ್ಟಾರ್ ಬಗ್ಗೆಯಾಗಲಿ, ಯಾವುದೇ ಸಿನಿಮಾ ಬಗ್ಗೆಯಾಗಲಿ ವೇದಿಕೆಯಲ್ಲಿ ಮಾತನಾಡಿಲ್ಲ. ಈ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಬೇಡ ಎಂದಿದ್ದಾರೆ.

ವಿಜಯಲಕ್ಷ್ಮಿ ದರ್ಶನ್ ಅಕ್ಕ ಏನ್ ಮಾತಾಡಿದ್ದಾರೆ ನನಗೆ ಗೊತ್ತಿಲ್ಲ. ಇಷ್ಟು ದಿನ ಸುದೀಪ್ ಅಣ್ಣ ಪೈರಸಿ ಆದರೂ ಸುಮ್ಮನಿರ್ತಿದ್ರು. ಅವರ ಸಿನಿಮಾಗೆ ಪೈರಸಿ ಕಾಟ ಜಾಸ್ತಿ ಆಗಿದೆ. ಅದರೆ ಇನ್ನು ಮುಂದೆ ಆ ರೀತಿ ಆಗೋದು ಬೇಡ ಅಂತ ಸುದೀಪ್ ಅಣ್ಣ ನಿರ್ಧಾರ ಮಾಡಿದ್ದಾರೆ ಎಂದಿದ್ದಾರೆ. ಆದರೆ ಈ ಹಿಂದೆ ಸುದೀಪ್ ಚಿತ್ರವನ್ನು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡ ವ್ಯಕ್ತಿ ಪೈರಸಿ ಮಾಡಿ ಸಿಕ್ಕಿ ಬಿದ್ದಿದ್ದ. ಸುದೀಪ್ ಹೇಳಿಕೆ ಪೈರಸಿ ವಿಚಾರವಾಗಿಯೇ ಹೇಳಿರಬಹುದು. ಯುದ್ಧಕ್ಕೆ ಸಿದ್ಧ ಎನ್ನುವ ಹೇಳಿಕೆ ದರ್ಶನ್ ಹಾಗೂ ಆಪ್ತ ವಲಯಕ್ಕೆ ಮುಟ್ಟಿದ್ಯಾಕೆ..? ದರ್ಶನ್ ಜೈಲಿನ ಒಳಗಿದ್ದಾಗಲೂ ಸುದೀಪ್ ಚೇಡಿಸುವ ಕೆಲಸ ಮಾಡಿಲ್ಲ. ಆಗಿದ್ದರೂ ದರ್ಶನ್ ಪತ್ನಿ ವಿಜಯಲಕ್ಷ್ಮೀ, ನಟ ಧನ್ವೀರ್ ಸಿಡಿದು ಬಿದ್ದಿದ್ಯಾಕೆ ಅನ್ನೋದಕ್ಕೆ ಕಾಲವೇ ಉತ್ತರ ಕೊಡಬೇಕಿದೆ.


