2012ರಲ್ಲಿ ನಡೆದಿದ್ದ ರೇಪ್ & ಮರ್ಡರ್ ಕೇಸ್ಗೆ ಮರು ಜೀವ ಬಂದಂತಾಗಿದೆ. ತನಿಖೆ ನಡೆಸುವಂತೆ ಸೌಜನ್ಯ ತಾಯಿ ಕುಸುಮಾವತಿ SIT ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. SIT ಅಧಿಕಾರಿಗಳೂ ಕೂಡ ದೂರನ್ನು ಸ್ವೀಕರಿಸಿ, ಈಗಾಗಲೇ ನಡೆಯುತ್ತಿರುವ ಪ್ರಕರಣದಲ್ಲೇ ಸೇರಿಸಿಕೊಳ್ಳುವುದಾಗಿ ಹಿಂಬರಹ ನೀಡಿದ್ದಾರೆ. ಆದರೆ ಸೌಜನ್ಯ ತಾಯಿ ಕುಸುಮಾವತಿ ಸಲ್ಲಿಸಿರುವ ದೂರಿನ ಪ್ರತಿಯಲ್ಲಿ ಬೆಚ್ಚಿ ಬೀಳುವ ಅಂಶಗಳು ಸೇರ್ಪಡೆ ಆಗಿರುವುದು, ಸೌಜನ್ಯ ಕೇಸ್ ಮತ್ತೆ ರೀ ಓಪನ್ ಆಗುವ ಎಲ್ಲಾ ಸಾಧ್ಯತೆಗಳು ಇವೆ ಅನ್ನೋ ವಿಚಾರ ಚಿಗುರೊಡೆಯಲು ಕಾರಣವಾಗಿದೆ.

2012 ಅಕ್ಟೋಬರ್ 9ರಂದು ಶಾಲೆಗೆ ಹೋಗಿ ವಾಪಸ್ ಬರ್ತಿದ್ದ ಅಪ್ರಾಪ್ತ ಹೆಣ್ಣು ಮಗಳು ಸೌಜನ್ಯ ಗೌಡ ಮೇಲೆ ಕಾಮಾಂಧರು ಅಪಹರಣ ಮಾಡಿ ಅತ್ಯಾಚಾರ ಮಾಡಿದ ಬಳಿಕ ಕೊಲೆ ಮಾಡಿ ಬಿಸಾಡಿದ್ದರು. ಆ ಬಳಿಕ ಸಿಬಿಐ ತನಿಖೆಯೂ ನಡೆದಿತ್ತಾಯ್ತು. ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿ ಸಂತೋಷ್ ರಾವ್ ನಿರ್ದೋಷಿ ಅನ್ನೋ ಕಾರಣಕ್ಕೆ ಕೋರ್ಟ್ ಖುಲಾಸೆ ಮಾಡಿತ್ತು. ಇದೀಗ ಮತ್ತೆ ತನಿಖೆ ಮಾಡ್ಬೇಕು ಅನ್ನೋ ಕೂಗು ಕೇಳಿ ಬಂದಿತ್ತು. ಆದರೆ ಹೈಕೋರ್ಟ್ ನಿರಾಕರಿಸಿತ್ತು. ಲಕ್ಷಾಂತರ ಜನರ ಆಗ್ರಹದಂತೆ ಈಗ ಸಮಯ ಕೂಡಿ ಬಂದಿರುವಂತೆ ಕಾಣ್ತಿದೆ.

ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ದೂರು ನೀಡಿ, ಎಸ್ಐಟಿ ರಚನೆಗೆ ಕಾರಣವಾಗಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ನೀಡಿದ್ದ ಹೇಳಿಕೆಯನ್ನು ಆಧರಿಸಿ ಸೌಜನ್ಯ ತಾಯಿ ಕುಸುಮಾವತಿ SIT ಗೆ ದೂರು ನೀಡಿದ್ದಾರೆ. ಚಿನ್ನಯ್ಯನ ಹೇಳಿಕೆ ಆಧರಿಸಿ ವಿಚಾರಣೆ ಮಾಡಿ ನ್ಯಾಯ ಕೊಡಿಸುವಂತೆ ಒತ್ತಾಯ ಮಾಡಿದ್ದಾರೆ. ದೂರಿನಲ್ಲಿ 2012 ಅಕ್ಟೋಬರ್ 9ರಂದು ಭೀಕರ ಹಿಂಸೆ ಮತ್ತು ಮೃಗೀಯವಾಗಿ ಅತ್ಯಾಚಾರಕ್ಕೆ ಒಳಗಾಗಿ ಸೌಜನ್ಯ ಸತ್ತಳು. ಆದರೆ ನಿಜವಾದ ಅಪರಾಧಿಗಳನ್ನು ಹಿಡಿಯಲು ಪೊಲೀಸರಿಗೆ ಈವರೆಗೂ ಸಾಧ್ಯವಾಗಿಲ್ಲ ಎಂದು ಬೇಸರ ಹೊರ ಹಾಕಿದ್ದಾರೆ.

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಬಗ್ಗೆ ಚಿನ್ನಯ್ಯನಿಗೆ ಮಾಹಿತಿ ಇದ್ದರೂ ಆತ ದೂರಿನಲ್ಲಿ ಉಲ್ಲೇಖ ಮಾಡಿರುವುದಿಲ್ಲ. 2014ರಲ್ಲಿ ಚಿನ್ನಯ್ಯ ಧರ್ಮಸ್ಥಳ ತೊರೆಯಲು ಪ್ರಮುಖ ಕಾರಣವೇ ಸೌಜನ್ಯ ಕೊಲೆ. ಸೌಜನ್ಯಳ ಕೊಲೆಯ ನಂತರ ನಡೆದ ಘಟನೆಗಳೇ ಕಾರಣ ಎಂದು ಕುಸುಮಾವತಿ ದೂರಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ದೌರ್ಜನ್ಯಗಳ ಸಂಬಂಧ ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಮಾಹಿತಿ ಪಡೆದಿದೆ. ಅದರಲ್ಲಿ ಸಾಕಷ್ಟು ಅಂಶಗಳು ಗಾಬರಿ ಹುಟ್ಟಿಸುವಂತಿದೆ. ಹೀಗಾಗಿ SIT ಟೀಂ ತನಿಖೆ ಮಾಡಿ ನ್ಯಾಯ ಕೊಡಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.
ಚಿನ್ನಯ್ಯನ ಅಕ್ಕ ರತ್ನಾ ಎಂಬುವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮುಂದೆ ಕೊಟ್ಟಿರುವ ಹೇಳಿಕೆಯೂ ಆಘಾತಕಾರಿಯಾಗಿದೆ. 2014ರಲ್ಲಿ ಸೌಜನ್ಯ ಸಾವಿನ ವಿಚಾರವಾಗಿ ಚಿನ್ನಯ್ಯನಿಗೆ ದೇವಸ್ಥಾನದಿಂದ ಜೀವ ಬೆದರಿಕೆ ಬಂದಿತ್ತು. ಅತ್ಯಾಚಾರ ಮತ್ತು ಕೊಲೆ ಬಗ್ಗೆ ಯಾರ ಬಳಿಯಾದರೂ ಬಾಯಿ ಬಿಟ್ಟರೆ ಕೊಲ್ಲುವ ಬೆದರಿಕೆ ಹಾಕಲಾಗಿತ್ತು. ಹೀಗಾಗಿ ಜೀವ ಭಯದಿಂದಲೇ ಚಿನ್ನಯ್ಯ ಧರ್ಮಸ್ಥಳ ಬಿಟ್ಟು ದೂರ ಹೋಗಬೇಕಾಯಿತು ಎಂದು ಚಿನ್ನಯ್ಯನ ಅಕ್ಕ ಹೇಳಿದ್ದಾರೆ. ಈ ಬಗ್ಗೆ ತನಿಖೆ ಮಾಡ್ಬೇಕು ಅಂತಾ ದೂರಿನಲ್ಲಿ ಕುಸುಮಾವತಿ ಮನವಿ ಮಾಡಿದ್ದಾರೆ.

ಮಾಸ್ಕ್ ಮ್ಯಾನ್ ಚಿನ್ನಯ್ಯ ಕೂಡ ಯೂಟ್ಯೂಬ್ವೊಂದಕ್ಕೆ ಸಂದರ್ಶನ ನೀಡಿದ್ದು, ಅದರಲ್ಲಿ ಚಿನ್ನಯ್ಯ ನೀಡಿರುವ ಹೇಳಿಕೆಗಳೂ ಭಯಂಕರವಾಗಿವೆ. ಸೌಜನ್ಯ ಕೊಲೆ ಮತ್ತು ಅತ್ಯಾಚಾರಕ್ಕೆ ಕಾರಣವಾದವರ ಹೆಸರನ್ನು ಚಿನ್ನಯ್ಯನಿಗೆ ರವಿ ಪೂಜಾರಿ ಹೇಳಿದ್ದನು. ಅಪರಾಧಿಗಳು ರವಿ ಪೂಜಾರಿಗೆ ಹಣ ಕೊಟ್ಟು, ನಂತರ ಅವನನ್ನು ಕಚೇರಿಯಲ್ಲಿ ಕೊಂದಿದ್ದರು. ಸೌಜನ್ಯ ಕೊಲೆ ಮತ್ತು ಅತ್ಯಾಚಾರದ ಬಗ್ಗೆ ಯಾರಿಗಾದರೂ ಹೇಳ್ತಾನೆ ಎಂಬ ಕಾರಣಕ್ಕೆ ರವಿ ಪೂಜಾರಿಯನ್ನು ಕೊಂದರು. ಸೌಜನ್ಯ ಮೃತದೇಹ ಸಿಕ್ಕ ಸ್ಥಳದಲ್ಲೇ ಹಲವರನ್ನು ಹೂತಿರುವುದಾಗಿಯೂ ಚಿನ್ನಯ್ಯ ಹೇಳಿದ್ದಾನೆ. ಹೀಗಾಗಿ ಚಿನ್ನಯ್ಯನನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ನನ್ನ ಮಗಳು ಸೌಜನ್ಯಳ ಸಾವಿಗೆ ಕರ್ನಾಟಕ ಸರ್ಕಾರ ಮತ್ತು ಎಸ್ಐಟಿ ಅಧಿಕಾರಿಗಳು ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿದ್ದಾರೆ.


