ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಸಮೀರವಾಡಿಯ ಗೋದಾವರಿ ಸಕ್ಕರೆ ಕಾರ್ಖಾನೆ ಬಳಿ ಇದ್ದ ಕಬ್ಬು ತುಂಬಿದ ಟ್ರಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿದೆ. ಗಲಾಟೆಗೂ ಮೊದಲೇ ಕಾರ್ಖಾನೆ ಗೇಟ್ ಒಳಗೆ ನೂರಾರು ಜನ ಜಮಾಯಿಸಿದ್ದರು. ಕಾರ್ಖಾನೆ ಆವರಣದ ಹೊರಗೆ ಹೋರಾಟಗಾರರನ್ನ ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಈ ವೇಳೆ ಕಾರ್ಖಾನೆ ಒಳಗೆ & ಹೊರಗಡೆ ಇದ್ದ ಜನರ ನಡುವೆ ಮಾತಿನ ಚಕಮಕಿ ನಡೆದಿತ್ತು. ಪರಸ್ಪರ ಅವಾಚ್ಯ ಶಬ್ದಗಳಿಂದ ಬೈದಾಡಿಕೊಂಡಿದ್ದರು. ಈ ವೇಳೆ ಕಾರ್ಖಾನೆ ಒಳಗಿದ್ದ ಜನರನ್ನ ನಿಯಂತ್ರಿಸಲು ಪೊಲೀಸರು ಹರಸಾಹಸ ಮಾಡ್ತಿದ್ರು. ಇನ್ನೊಂದು ಕಡೆ ಬ್ಯಾರಿಕೇಡ್ ಹಾಕಿ ಹೋರಾಟಗಾರರನ್ನ ತಡೆದಿದ್ದರು. ಈ ವೇಳೆ ಏಕಾಏಕಿ ಪರಸ್ಪರ ಎರಡು ಗುಂಪುಗಳಿಂದ ಕಲ್ಲು ತೂರಾಟ ನಡೆಸಿದ್ದು, ಆ ಬಳಿಕ ಟ್ರಾಕ್ಟರ್ಗಳಿಗೆ ಬೆಂಕಿ ಹಚ್ಚಲಾಗಿದೆ. ಇದೀಗ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸಮೀರವಾಡಿಯಲ್ಲಿರುವ ಗೋದಾವರಿ ಶುಗರ್ ಫ್ಯಾಕ್ಟರಿ ಬಳಿ ಟ್ರ್ಯಾಕ್ಟರ್ ಗೆ ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆ ರೈತ ಮುಖಂಡರು ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿರುವ ರೈತ ಮುಖಂಡರು, ರೈತರು ಯಾರೂ ಬೆಂಕಿ ಹಚ್ಚಿಲ್ಲ. ನಾವು ಕಾರ್ಖಾನೆ ಬಳಿ ಹೋದಾಗ ಪೊಲೀಸರು ತಡೆದಿದ್ದಾರೆ. ಈ ವೇಳೆ 200ಕ್ಕೂ ಹೆಚ್ಚು ದುಷ್ಕರ್ಮಿಗಳು ಕಾರ್ಖಾನೆ ಒಳಗಡೆ ಇದ್ರು. ಆ ದುಷ್ಕರ್ಮಿಗಳೇ ಬೆಂಕಿ ಹಚ್ಚಿದ್ದು, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದಿದ್ದಾರೆ. ಗೋದಾವರಿ ಶುಗರ್ ಫ್ಯಾಕ್ಟರಿ ಬಳಿ ಟ್ರ್ಯಾಕ್ಟರ್ಗೆ ಬೆಂಕಿ ಪ್ರಕರಣ ಬಳಿಕ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಜಮಖಂಡಿ, ರಬಕವಿ ಬನಹಟ್ಟಿ, ಮುಧೋಳ ತಾಲೂಕಿನಾಗಿದ್ಯಂತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ನಿಷೇಧಾಜ್ಞೆ ಜಾರಿ ಮಾಡಿ ಡಿಸಿ ಸಂಗಪ್ಪ ಆದೇಶ ಹೊರಡಿಸಿದ್ದಾರೆ..

ಗೋಧಾವರಿ ಸಕ್ಕರೆ ಕಾರ್ಖಾನೆಯಲ್ಲಿ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿ ಕಲ್ಲು ತೂರಾಟ ಮಾಡಿರುವ ಪ್ರಕರಣದಲ್ಲಿ ಬಾಗಲಕೋಟೆ ಅಡಿಷನಲ್ ಎಸ್ಪಿ ಮಾಹಾಂತೇಶ್ ಜಿದ್ದಿ ಕಾಲಿಗೆ ಗಂಭೀರ ಗಾಯವಾಗಿದೆ. ಕಾರ್ಖಾನೆ ಮುಖ್ಯ ದ್ವಾರದ ಬಳಿ ಬಂದೋಬಸ್ತ್ ಮಾಡುತ್ತಿದ್ದ ವೇಳೆ ಏಕಾಏಕಿ ಕಲ್ಲು ತೂರಾಟ ನಡೆದಿದ್ದು, ಎಎಸ್ಪಿ ಕಾಲಿಗೆ ಕಲ್ಲು ಬಿದ್ದು ಗಾಯವಾಗಿದೆ. ಎಎಸ್ಪಿ ಮಹಾಂತೇಶ ಜಿದ್ದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನೆ ಮಾಡಲಾಗಿದೆ. ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡಿದ್ದಾರೆ. ಬಾಲಕೋಟೆ ಎಸ್ಪಿಗೆ ದೂರವಾಣಿ ಕರೆ ಮಾಡಿರುವ ಸಿಎಂ ಘಟನೆಗೆ ಕಾರಣ ಏನೆಂದು ಮಾಹಿತಿ ಪಡೆದಿದ್ದಾರೆ. ಅರಣ್ಯ ಇಲಾಖೆ ಸಭೆ ನಡುವೆ ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸುವಂತೆ ಸೂಚಿಸಿದ್ದಾರೆ. ಬಾಗಲಕೋಟೆ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರಗೂ ಕರೆ ಮಾಡಿ ಮಾತನಾಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾವೆಲ್ಲ ರೈತರ ಮಕ್ಕಳೇ. ಕಬ್ಬು, ಸಕ್ಕರೆ, ಎಥನಾಲ್ ಬೆಲೆ ನಿಗಧಿ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಸಕ್ಕರೆ ನಿಯಂತ್ರಣ ಕಾಯ್ದೆ ಅನುಗುಣವಾಗಿ ದರ ನಿಗಧಿ ಮಾಡ್ತಾರೆ. ಬಿಜೆಪಿ ರೈತರಿಗೆ ಪ್ರಚೋದನೆ ಮಾಡುವುದು ಖಂಡನೀಯವಾಗಿದೆ. ಬಿಜೆಪಿ ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಇದನ್ನು ನಾನು ಖಂಡಿಸುತ್ತೇನೆ ಎಂದು ಕಿಡಿಕಾರಿದ್ದಾರೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ಇದು ರೈತರು ಮಾಡಿದ ಕೃತ್ಯವಲ್ಲ.. ತಾನೇ ಬೆಳೆದ ಬೆಳೆಗೆ ರೈತ ಎಂದೂ ಹಾನಿ ಮಾಡಲ್ಲ.. ಇದರ ಹಿಂದೆ ಏನಾದ್ರೂ ಷಡ್ಯಂತ್ರ ಇರಬಹುದು. ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ. ಬೆಳಗಾವಿಯಲ್ಲಿ ಇದೇ ಮುಧೋಳ ರೈತರು, ಸರ್ಕಾರದ ಬೆಲೆಯನ್ನು ಒಪ್ಪಿಕೊಂಡು ಬಂದಿದ್ರು.. ನನ್ನ ಮೇಲೆ ಹೂ ಹಾಕಿದ್ರು.. ಅಲ್ಲಿ ಒಪ್ಪಿಕೊಂಡು ಬಂದು, ಇಲ್ಲಿ ಈಗ ಈ ರೀತಿ 3500 ಬೇಕು ಅಂತಾರೆ ಅಂದ್ರೆ ಇದು ಹೇಗೆ..? ತನಿಖೆ ಆಗ್ಬೇಕು ಎಂದಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಕಬ್ಬು ತುಂಬಿದ ಟ್ರ್ಯಾಕ್ಟರ್ಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಬಗ್ಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ಎಕ್ಸ್ನಲ್ಲಿ ಮಾಹಿತಿ ಹಂಚಿಕೊಂಡಿರುವ HD ಕುಮಾರಸ್ವಾಮಿ, ಕಬ್ಬು ಬೆಳೆಗಾರರ ಸಂಕಷ್ಟ ಬಿಗಡಾಯಿಸಿದೆ. ಟ್ರ್ಯಾಕ್ಟರ್ಗಳು ಬೆಂಕಿಗೆ ಆಹುತಿ ಆಗಿರುವುದು ದಿಗ್ಭ್ರಮೆ ಉಂಟು ಮಾಡಿದೆ. ಇದು ಕಾಂಗ್ರೆಸ್ ಸರಕಾರದ ವೈಫಲ್ಯಕ್ಕೆ ಸ್ಪಷ್ಟ ನಿದರ್ಶನವಾಗಿದೆ. ಬೆಳಗಾವಿಯಲ್ಲಿ ರೈತರು ಹೋರಾಟಕ್ಕಿಳಿದಾಗ ಆ ಕ್ಷಣಕ್ಕೆ ಅವರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದೆ. ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ ಅನ್ನುವ ಲಾಭಕೋರ ಧೋರಣೆಯನ್ನು ಸರ್ಕಾರ ಬಿಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಾಗಲಕೋಟೆ ಘಟನೆಗೆ ಸಿಎಂ ಸಿದ್ದರಾಮಯ್ಯರೇ ನೇರ ಹೊಣೆ ಎಂದು ಎಕ್ಸ್ನಲ್ಲಿ ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡಲೇ ಮಧ್ಯ ಪ್ರವೇಶ ಮಾಡಿ ರೈತರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹ ಮಾಡಿದ್ದಾರೆ.


